ಮಜಾವಾಣಿ: ವಿಶೇಷ ವರದಿ
ಬೆಂಗಳೂರು, ಮಾರ್ಚ್ ೧೧: ನೆತ್ತಿಯನ್ನು ಸುಟ್ಟು ಕರಿಕಲು ಮಾಡುವಂತಹ ರಣ ಬಿಸಿಲು. ಏಪ್ರಿಲ್ ಇನ್ನೂ ಬಂದಿರದಿದ್ದರೂ, ಸೂರ್ಯನ ಕಬಂಧ ಬಾಹುಗಳು ಮಾತ್ರ ಭಸ್ಮಾಸುರನ ಕರಗಳಂತೆ ಇಡೀ ಬೆಂಗಳೂರು ನಗರದ ಮೇಲೆ ಈಗಾಗಲೇ ವ್ಯಾಪಿಸಿವೆ.
ಇಂತಹ ರಣ ಬಿಸಿಲಿನ ಮಟ ಮಟ ಮಧ್ಯಾಹ್ನದಲ್ಲಿ ಗಾಂಧಿ ಪ್ರತಿಮೆಯ ಮುಂದೆ ನಿಂತಿದ್ದವರು ಒಂಬತ್ತು ಮಂದಿ. ಅವರ ಹಿಡಿದಿದ್ದ ಫಲಕಗಳಲ್ಲಿದ್ದದ್ದು ಒಂದೇ ಘೋಷಣೆ: "ಅಂಬಿಗೆ ಬೇಡ ಕಂಬಿ!"; ಬಾಯಲ್ಲಿದ್ದಿದ್ದು ಒಂದೇ ಮಂತ್ರ: "ಫ್ರೀ, ಫ್ರೀ ಅಂಬಿ!".
ಬೆಂಗಳೂರಿಗಾಗಲೀ, ಗಾಂಧಿ ಪ್ರತಿಮೆಗಾಗಲೀ ಇಂತಹ ಪ್ರತಿಭಟನೆ ಹೊಸದೇನೂ ಅಲ್ಲ. ಆದರೆ, ಇಂದಿನ ಪ್ರತಿಭಟನೆಯಲ್ಲಿ ಒಂದು ಹೊಸತನ ಇತ್ತು; ಲವಲವಿಕೆ ಇತ್ತು; ತಾರುಣ್ಯ ಇತ್ತು; ಎಲ್ಲಕ್ಕಿಂತ ಮುಖ್ಯವಾಗಿ ಸೌಂದರ್ಯ ಇತ್ತು.
ಮಂಡ್ಯದ ಸಂಸದ ಅಂಬರೀಷ್ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಬಿಡುಗಡೆ ಮಾಡುವಂತೆ ಆಗ್ರಹಿಸಿ ಖ್ಯಾತ ಫ್ಯಾಶನ್ ಗುರು ಪ್ರಸಾದ್ ಬಿದ್ದಪ್ಪ ಏರ್ಪಡಿಸಿದ್ದ ಪ್ರತಿಭಟನೆ ಅದು. ಭಾಗವಹಿಸುತ್ತಿದ್ದವರು ನಾಡಿನ ಹೆಸರಾಂತ ಚಿತ್ರತಾರೆಯರು, ರೂಪದರ್ಶಿಗಳು.
ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಲವರಿಗೆ ಕೆ.ಎಫ್.ಸಿ. ವಿರುದ್ಧ/ಕೋಳಿಗಳ ಪರ ಪ್ರತಿಭಟನೆ ಮಾಡಿದ ಅನುಭವ ಇತ್ತಾದರೂ, ಭಾರತೀಯ ರಾಜಕೀಯ ಪ್ರಸಂಗದಲ್ಲಿ, ಮನುಷ್ಯನ ಪರವಾಗಿ ಪ್ರತಿಭಟನೆ ಇದೇ ಮೊದಲು.
ಕಳೆದ ವಾರವಷ್ಟೇ ಪ್ಯಾರಿಸಿನಲ್ಲಿ ಖರೀದಿಸಿದ್ದ ಅರ್ಮಾನಿ ತಿಳಿ ಬಾದಾಮಿ ಬಣ್ಣದ ಖಾದಿ ಪ್ಯಾಂಟ್ ಮತ್ತು ಷರ್ಟ್ ಧರಿಸಿ, ಕಪ್ಪು ಕನ್ನಡಕ ತೊಟ್ಟು, ಒಂದು ಕೈಯಲ್ಲಿ ಫಲಕ, ಇನ್ನೊಂದರಲ್ಲಿ ಐಸ್ ಕೋಲ್ಡ್ ಪೆರಿಯೇ ನೀರಿನ ಬಾಟಲ್ ಹಿಡಿದಿದ್ದ ಜಾನ್ ಅಬ್ರಹಾಮ್ "ದಿಸ್ ಈಸ್ ರಿಯಲಿ ನ್ಯೂ ಟು ಮಿ. ಆದರೆ, ಅನ್ಯಾಯದ ವಿರುದ್ಧ ಹೋರಾಡಲೇ ಬೇಕು. ಇಂದು ಅಂಬಿಗೆ ಆಗಿರುವ ಅನ್ಯಾಯ, ನಾಳೆ ನಮಗೂ ಆಗಬಹುದು. ಕಾಮನ್ ಪೀಪಲ್ ಥಿಂಕ್ ದಟ್ ನಮ್ಮಂತಹ ಸುಂದರ ಜನರು ಡೋಂಟ್ ಕೇರ್ ಅಬೌಟ್ ಹ್ಯೂಮನ್ ಬೀಯಿಂಗ್ಸ್. ಆದರೆ, ದಟ್ಸ್ ನಾಟ್ ಟ್ರೂ. ನನಗೆ ಕೋಳಿಗಳಷ್ಟೇ ಮನುಷ್ಯರೂ ಇಷ್ಟ. ಕೋಳಿಗಳ ಬಿಡುಗಡೆ ಎಷ್ಟು ಮುಖ್ಯವೋ, ಅಂಬಿಯ ಬಿಡುಗಡೆ ಸಹ ಅಷ್ಟೇ ಮುಖ್ಯ!" ಎಂದಾಗ ಅವರ ಕಣ್ಣುಗಳಲ್ಲಿ ಅಂಬಿಯವರ ಪರಿಸ್ಥಿತಿಯ ಬಗೆಗೆ ಕಾಳಜಿ, ನೋವು ತುಂಬಿ ಬಂದಿತ್ತು.
ಆದರೆ, ಪ್ರತಿಭಟನೆಯ ಆಯೋಜಕ ಪ್ರಸಾದ್ ಬಿದ್ದಪ್ಪ ಮನುಷ್ಯರ ಬಿಡುಗಡೆಯ ವಿಚಾರದಲ್ಲಿ ಸಂಪೂರ್ಣ ಅನನುಭವಿಯೇನಲ್ಲ. ದುಬೈನಲ್ಲಿ ಸ್ವತಃ ಬಿಡುಗಡೆ ಮಾಡಿಸಿಕೊಂಡವರು, ಬೆಂಗಳೂರಿನಲ್ಲಿ ಸ್ವಂತ ಮಗನ ಬಿಡುಗಡೆ ಮಾಡಿಸಿದವರು. ಅವರ ಅಭಿಮಾನಿಗಳಿಗೆ ಕನ್ನಡ ಬಂದಿದ್ದರೆ, ಅವರನ್ನು "ಬಿಡುಗಡೆ ಬಿಡ್ಡಪ್ಪ" ಎನ್ನುತ್ತಿದ್ದರೋ ಏನೋ.
ಆಗಷ್ಟೇ ನಡು ನೆತ್ತಿಗೇರಿದ್ದ ಸುಡು ಸೂರ್ಯನಿಂದ ರಕ್ಷಿಸಲು ತಮ್ಮ ಸಹಾಯಕ ಹಿಡಿದಿದ್ದ ತಿಳಿಗೆಂಪು ಛತ್ರಿಯ ಕೆಳಗೆ ಅದಕ್ಕೆ ಮ್ಯಾಚಿಂಗ್ ವಸ್ತ್ರ ತೊಟ್ಟು ಮಾವಿ ಬೇಬ್ ಮಾಯಿಷ್ಚರೈಸರ್ ಯುಕ್ತ ಎಸ್.ಪಿ.ಎಫ್. ೪೦ ಸನ್ ಬ್ಲಾಕ್ ಲೋಶನ್ ಹಚ್ಚುತ್ತಿದ್ದ ಬಿಡ್ಡಪ್ಪ, ಕೇಂದ್ರ ಸಚಿವ ಸಂಪುಟದಿಂದ ಅಂಬಿಯನ್ನು ಬಿಡುಗಡೆ ಮಾಡಿಸಲು -- ತಮ್ಮ ಸುಮ ಕೋಮಲ ತ್ವಚೆಯನ್ನೂ ಒಳಗೊಂಡು -- ಯಾವುದೇ ತ್ಯಾಗಕ್ಕೂ ಸಿದ್ಧರಿರುವಂತೆ ಕಂಡು ಬಂದರು.
ನಮ್ಮ ಪತ್ರಿಕೆಯ ವರದಿಗಾರನನ್ನು ಕಂಡಾಗ ಕ್ಷಣ ಮಾತ್ರವಷ್ಟೇ ಮುಗುಳ್ನಕ್ಕ ಅವರ ಕಂಗಳಲ್ಲಿ ಅಂಬಿಯವರ ಗಂಭೀರ ಪರಿಸ್ಥಿತಿಯ ಕುರಿತು ಕಾಳಜಿ, ಖಿನ್ನತೆ, ಹತಾಶೆ ಮನೆ ಮಾಡಿದ್ದವು.
ಆದರೆ, ಮಾನವ ಆಶಾ ಜೀವಿ. ಎಂತಹ ಖಿನ್ನತೆ, ನಿರಾಶೆಯ ಕತ್ತಲಲ್ಲೂ ಆಶಾ ಕಿರಣವನ್ನು ಹುಡುಕುವುದು ಪ್ರತಿ ಮಾನವನೂ ಬೆಳೆಯುವಾಗ ಕಲಿಯುವ ಹುಟ್ಟುಗುಣ. ಹತಾಷೆಯಲ್ಲೂ ಆಶೆ, ಮಾನವೀಯತೆಯ ಪ್ರತೀಕ. ಬಿಡ್ಡಪ್ಪ ಸಹ ಈ ಮಾನವೀಯತೆಯಿಂದ ಹೊರತಲ್ಲ. ಪ್ರತಿ ಸಾರಿ ಅವರು "ಫ್ರೀ ಫ್ರೀ" ಎಂದಾಗಲೆಲ್ಲಾ, ಅವರ ಬಾಯಿಂದ ಹೊರ ಹೊರ ಹೊಮ್ಮಿದ್ದು ಇದೇ ಮಾನವೀಯತೆ!
ಮಂಡ್ಯದ ಗಂಡು ಎಂದೇ ಹೆಸರಾಗಿರುವ ಅಂಬಿ ಕೇಂದ್ರ ಸಚಿವ ಸಂಪುಟಕ್ಕೆ ಸೇರಿ ಹೆಚ್ಚೇನೂ ಸಮಯವಾಗಿಲ್ಲ; ಕೆಲವು ತಿಂಗಳುಗಳಾಗಿರಬಹುದು ಅಷ್ಟೇ. ವಾರ್ತಾ ಸಚಿವರಾಗಿ ನೇಮಕವಾದರೂ, ದೂರದರ್ಶನದಲ್ಲಿರಲಿ, ಕನಿಷ್ಠ ಆಲ್ ಇಂಡಿಯಾ ರೇಡಿಯೋದಲ್ಲಿ ಸಹ ಒಮ್ಮೆಯೂ ವಾರ್ತೆಯನ್ನೋದುವ ಸುಖ ಅನುಭವಿಸಿದವರಲ್ಲ. ಸಚಿವ ಪೀಠವನ್ನು ಸರಿಯಾಗಿ ಅಲಂಕರಿಸುವ ಮೊದಲೇ, ಅಂಬಿಯ ರಾಜಕೀಯ ಜೀವನದಲ್ಲಿ ಕಾವೇರಿ ಟ್ರಿಬ್ಯುನಲ್ ತೀರ್ಪು ಬರಸಿಡಿಲಿನಂತೆ ಎರಗಿದ್ದು ಪರಿಸ್ಥಿತಿಯ ವಿಪರ್ಯಾಸ. ಯಾವುದೇ ಗ್ರೀಕ್ ನಾಟಕಕಾರನೂ ಕಲ್ಪಿಸಲಾಗದ ಜೀವನದ ಕ್ರೌರ್ಯ, ದುರಂತ.
ಅಂಬಿ ತಮ್ಮ ಕುರ್ಚಿಯ ಮೇಲೆ ಸರಿಯಾಗಿ ಕೂರುವ ಮುನ್ನವೇ, ರಾಜಿನಾಮೆ ನೀಡಬೇಕಾಗಿ ಬಂದಿದ್ದು ಪರಿಸ್ಥಿತಿಯ ಪ್ರಹಸನವೆಂದೋ ವಿಧಿಯ ವಿಲಾಸವೆಂದೋ ಸುಮ್ಮನಾಗಬಹುದಾದರೂ, ನಂತರದ ಅಮಾನವೀಯ ದೌರ್ಜನ್ಯ ಬಿಡ್ಡಪ್ಪನವರ ಮೃದು ಹೃದಯದಲ್ಲೂ ಕ್ರಾಂತಿಯ ಕಿಡಿ ಮೂಡಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಕೇಂದ್ರ ಸರ್ಕಾರದಂತಹ ಮಾನವ ನಿರ್ಮಿತ ವ್ಯವಸ್ಥೆ, ತನ್ನ ಮಾನವೀಯತೆಯನ್ನು ಮರೆತು, ಮಂಡ್ಯದ ಮುಗ್ಧನೊಬ್ಬನಿಗೆ ಸಚಿವ ಸಂಪುಟದಿಂದ ಬಿಡುಗಡೆಯನ್ನೂ ನೀಡದಂತಹ ರಕ್ಕಸ ಶಕ್ತಿಯಾಗಿ ಮಾರ್ಪಾಡಾದಾಗ ಏಳುವ ನೈತಿಕ ಪ್ರಶ್ನೆಗಳು, ಗೊಂದಲಗಳು ಹತ್ತು ಹಲವು.
ಉದಾಹರಣೆಗೆ, ಅಂಬಿ ಬಿಡುಗಡೆಗಾಗಿ ಬಿಡ್ಡಪ್ಪ ತಮ್ಮ ಸಹಾಯಕ ಹಿಡಿದ ತಿಳಿಗೆಂಪು ಛತ್ರಿಯ ಕೆಳಗೆ ನಿರಾಯುಧನಾಗಿ, ಅಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿರುವಾಗ, ಅವರು ವಿರೋಧಿಸುತ್ತಿರುವ ವ್ಯವಸ್ಥೆ ಲಕ್ಷಾಂತರ ಮಂದಿ ಸೈನಿಕರೇ ಅಲ್ಲದೇ, ಅಣ್ವಸ್ತ್ರವನ್ನೂ ಹೊಂದಿರುವುದು ನೈತಿಕವಾಗಿ ಎಷ್ಟು ಸರಿ?!
ವ್ಯವಸ್ಥೆಯ ಕುರಿತು ಇಂತಹ ಎಕ್ಸಿಸ್ಟೆಂಷಿಯಲ್ ಸಂಧಿಗ್ದಗಳು ಎದುರಾದಾಗ, ನಮ್ಮ ಪತ್ರಿಕೆ ಮೊರೆ ಹೋಗಲಿಚ್ಛಿಸುವುದು ಇಡೀ ದೇಶದ ಆತ್ಮ ಸಾಕ್ಷಿಯ ಪ್ರತೀಕವಾಗಿರುವ ಲಾಲೂ ಪ್ರಸಾದ್ ಯಾದವ್ ಅವರಲ್ಲಿಗೆ.
ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಪ್ಲಾಟ್ಫಾರಂ ಎರಡರ ಮೇಲೆ ನಿಂತಿದ್ದ, ಸುಮಾರು ಮಟ್ಟಿಗೆ ಲಾಲೂ ಹೋಲಿಕೆಯಿದ್ದ ವ್ಯಕ್ತಿಯೊಬ್ಬರನ್ನು ಈ ವರದಿಗಾರ ಪ್ರಶ್ನಿಸಿದ.
"ಲಾಲೂಜೀ.. ಮಂಡ್ಯಾ ಕೆ ಗಂಡು ಕೆ ಇಸ್ತೀಫಾ ಕೆ ಬಾರೆ ಮೇ ಆಪ್ಕಾ ಕ್ಯಾ ರಾಯ್ ಹೈ?"
"ಮಂಡ್ಯಾ ಕೆ.... ಕ್ಯಾ....?" ನಕಲಿ ಲಾಲೂರವರ ಅಸಲೀ ಉತ್ತರ ಮಾರ್ಮಿಕವಾಗಿತ್ತು; ಪ್ರಶ್ನೆಯ ರೂಪದಲ್ಲಿತ್ತು.
ಜೀವನದ ಹಲವು ಪ್ರಶ್ನೆಗಳಂತೆ ನಮ್ಮ ಈ ಪ್ರಶ್ನೆಯೂ ಪ್ರಶ್ನೆಯಾಗೆಯೇ ಉಳಿದಿತ್ತು.
Labels: ರಾಜಕೀಯ



