"ನಾವು ಪ್ರಪಂಚವನ್ನು ಬಿಸಿ ಮಾಡಿಲ್ಲ" - ಮೂರ್ತಿ, ಪ್ರೇಮ್ಜಿ, ಮಿತ್ತಲ್
ಡಾವೋಸ್, ಜನವರಿ ೩೦, ೨೦೦೬: ಗ್ಲೋಬಲ್ ವಾರ್ಮಿಂಗ್ ವಿಷಯದಲ್ಲಿ ತಾವು ತಪ್ಪಿಸ್ಥರಲ್ಲವೆಂದಿರುವ ನಾರಾಯಣ ಮೂರ್ತಿ, ಪ್ರೇಮ್ಜಿ ಮತ್ತು ಲಕ್ಷ್ಮಿ ಮಿತ್ತಲ್ ಅವರು, "ನಾವು ಪ್ರಪಂಚವನ್ನು ಬಿಸಿ ಮಾಡಿಯೇ ಇಲ್ಲ" ಎಂದಿದ್ದಾರೆ.
ಡಾವೋಸ್ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಮಾತನಾಡುತ್ತಿದ್ದ ಇವರು, ಮಿತ್ತಲ್ ಅವರ ಮನೆಯಲ್ಲಿ ಒಂದು ಅತ್ಯಾಧುನಿಕ, ಬೃಹತ್ ಒಲೆ ಇರುವುದನ್ನು ಒಪ್ಪಿಕೊಂಡರಾದರೂ, ಅದರಿಂದ ಇಡೀ ಜಗತ್ತಿನ ತಾಪ ಹೆಚ್ಚಾಗುವ ಸಂಭವ ಅತಿ ಕಡಿಮೆ ಎಂದರು.

ನಂತರ, ನಮ್ಮ ವರದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಪ್ರೇಮ್ಜಿಯವರು, "ನಾನು ಪ್ರಪಂಚ ತಣ್ಣಗೆ ಮಾಡೋಕ್ಕೆ ತುಂಬಾ ಟ್ರೈ ಮಾಡ್ತಾ ಇದ್ದೀನಿ. ಬೆಂಗಳೂರಿಂದ ಕಾರಲ್ಲಿ ದೂರ ಹೋದಾಗೆಲ್ಲಾ ಎ.ಸಿ. ಹಾಕಿದ್ರೂ ಕಿಟಕಿ ತೆಗಿ ಅಂತ ಡ್ರೈವರ್ಗೆ ಹೇಳ್ತೀನಿ. ಬೆಂಗಳೂರಲ್ಲಿ ತುಂಬಾ ಡಸ್ಟ್ ಇರತ್ತೆ. ಇಲ್ದೆ ಇದ್ರೆ ಅಲ್ಲೂ ವಿಂಡೋಸ್ ಕೆಳಗಿಳಿಸಿ ಟೆಂಪರೇಚರ್ ಕಡಿಮೆ ಮಾಡಬಹುದಿತ್ತು" ಎಂದರು.

ಅಲ್ಲಿಯೇ ನಿಂತಿದ್ದ ನಾರಾಯಣ ಮೂರ್ತಿಯವರು, "ನಾನು ಕಾಫಿ ಕೂಡ ಬಿಸಿ ಮಾಡಲ್ಲ, ಪ್ರಪಂಚ ಬಿಸಿ ಮಾಡ್ತೀನಾ?!" ಎಂದು ಪ್ರಶ್ನಿಸಿದರು.
ವಾಸ್ತವ ಹೀಗಿದ್ದರೂ, ಅರುಂಧತಿ ರಾಯ್, ಮೇಧಾ ಪಾಟ್ಕರ್ ಅಂತಹವರು ಗ್ಲೋಬಲ್ ವಾರ್ಮಿಂಗ್ ವಿಚಾರದಲ್ಲಿ ಉದ್ಯಮಿಗಳ ಮೇಲೆ ಆರೋಪ ಹೊರಿಸುವುದನ್ನು ನೋಡಿದರೆ, ರಾಯ್, ಪಾಟ್ಕರ್ ಮುಂತಾದ ಪರಿಸರವಾದಿಗಳೇ ತಮ್ಮ ಬಿಡುವಿನ ಸಮಯದಲ್ಲಿ ಯಾರಿಗೂ ತಿಳಿಯದಂತೆ ಪ್ರಪಂಚವನ್ನು ಬಿಸಿ ಮಾಡುತ್ತಿರುವ ಸಾಧ್ಯತೆಗಳಿವೆ.
Labels: ವಾಣಿಜ್ಯ