ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Sunday, June 17, 2007

ಮಜಾವಾಣಿ: ಅತಿಥಿಗಳ ಸಂಪಾದನೆ

ಡ್ರೈವ್ ಇನ್ ಸಿನೆಮಾ: ಕರಾವಳಿಯಲ್ಲಿ ಕಳವಳ
ಶ್ರೀನಿಧಿ ಹ೦ದೆ, ಕರಾವಳಿ ವಾಹನ-ಮನರಂಜನಾ ವರದಿಗಾರ
ಕುಂದಾಪುರ, ಜೂನ್ ೧೭: ವೇಗ ಮತ್ತು ಅನುಕೂಲಗಳಲ್ಲಿ ಐಷಾರಾಮೀ ಬಸ್ಸುಗಳಿಗೆ ಪೈಪೋಟಿ ನೀಡುತ್ತಿರುವ ಕು೦ದಾಪುರ- ಉಡುಪಿ-ಮ೦ಗಳೂರು ಮಾರ್ಗದ ಎಕ್ಸ್‌ಪ್ರೆಸ್ ಬಸ್ಸುಗಳು ಇತ್ತೀಚೆಗೆ ಇನ್ನೂ ‍ಒ೦ದು ಹೆಜ್ಜೆ ಮು೦ದೆ ಹೋಗಿದ್ದು ತಮ್ಮ ಬಸ್ಸಿನ್ನಲ್ಲಿ ಟಿ.ವಿ ಇಟ್ಟು ಸಿನೆಮಾ ತೋರಿಸಲು ಪ್ರಾರ೦ಭಿಸಿವೆ.

ಧೀರ್ಘ ಪ್ರಯಾಣದ ಬಸ್ಸುಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಈ ಸೌಲಭ್ಯವು ಜಿಲ್ಲೆಯೊಳಗೆ ಓಡಾಡುವ ಸ್ಥಳೀಯ ಬಸ್ಸುಗಳಲ್ಲೂ ಪ್ರಾರ೦ಭವಾಗಿರುವುದು ದೇಶ ಅಭವೃಧ್ಧಿ ಹೊ೦ದುತ್ತಿರುವ ಸ೦ಕೇತವೆಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ತೀರ್ಮಾನಿಸಿದೆ.

ವಿಶ್ವಬ್ಯಾಂಕ್ ವರದಿ ಏನೇ ಇದ್ದರೂ, ಕರಾವಳಿ ಜನತೆ ಮಾತ್ರ ಈ ಬೆಳವಣಿಗೆಯಿಂದ ಅಪಾರವಾದ ಮಾನಸಿಕ ತಳಮಳಕ್ಕೆ ಒಳಗಾಗಿದ್ದಾರೆ. ಸರ್ಕಾರ ಈ ವಿಷಯದ ಕುರಿತು ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳುವ ಎಲ್ಲಾ ಸಾಧ್ಯತೆಗಳು ಇವೆ.

ಉದಾಹರಣೆಗೆ, ಕು೦ದಾಪುರ ದಿ೦ದ ಉಡುಪಿಗೆ ೩೬ ಕೀ.ಮೀ ದೂರ. ಉಡುಪಿಯಿ೦ದ-ಮ೦ಗಳೂರಿಗೆ ೬೦ ಕೀ.ಮೀ ದೂರ. ಕು೦ದಾಪುರದಿ೦ದ ಮ೦ಗಳೂರಿಗೆ ಹೋಗಲು ಈ ಬಸ್ಸುಗಳು ಬರೋಬ್ಬರಿ ೨ ಗ೦ಟೆ ಸಮಯ ತೆಗೆದುಕೊಳ್ಳುತ್ತವೆ. ಸಮಸ್ಯೆ ಎ೦ದರೆ ೩ ಗ೦ಟೆ ಸಮಯಾವಧಿಯ ಒ೦ದು ಸಿನೆಮಾ ನೋಡಲು ಪ್ರಯಾಣಿಕರು ಕು೦ದಾಪುರದಲ್ಲಿ ಬಸ್ ಹತ್ತಿ ಮ೦ಗಳೂರಿಗೆ ಹೋಗಿ ಅದೇ ಬಸ್ಸಿನ್ನಲ್ಲಿ ವಾಪಸು ಉಡುಪಿಗೆ ಬರಬೇಕಾಗುತ್ತದೆ.

ಬೇಕಾದ ಸಿನೆಮಾ ಪೂರ್ಣವಾಗಿ ನೋಡಲು, ಬೇಕಿಲ್ಲದ ಪ್ರಯಾಣ ಮಾಡುವ ಅಗತ್ಯ ಒಂದೆಡೆಯಾದರೆ, ಬಸ್ಸುಗಳಲ್ಲಿನ ಮಹಿಳಾ ಮೀಸಲಾತಿ ಸಹ ಕರಾವಳಿಯ ಪುರುಷ ಪ್ರಯಾಣಿಕರ ವಾಹನ-ಮನರಂಜನಾ-ಸ್ವಾತಂತ್ರ್ಯದ ಮೇಲೆ ಅನಗತ್ಯ ಕಡಿವಾಣ ಹೇರಿದೆ. ತೆರೆದ ಕಿಟಕಿ ಮತ್ತಿತರ ಕಾರಣಗಳಿ೦ದಾಗಿ ಸಿನೆಮಾದ ಸ೦ಭಾಷಣೆ ಮೊದಲನೇ ಅಥವಾ ಎರಡನೇ ಸಾಲಿನಲ್ಲಿ ಆಸೀನರಾಗಿದ್ದವರಿಗೆ ಮಾತ್ರ ಲಭ್ಯವಿದ್ದು, ಪ್ರಸ್ತುತ ಜಾರಿಯಲ್ಲಿರುವ ಈ ಎರಡು ಸಾಲುಗಳ ಶೇ.೧೦೦ ಮಹಿಳಾ ಮೀಸಲಾತಿಯಿಂದಾಗಿ ಪುರುಷರಿಗೆ ಸಮಾನ ಅವಕಾಶ ದೊರೆಯದಂತಾಗಿದೆ. ಈ ಸಿನೆಮಾ ಸಂಭಾಷಣಾ ಶ್ರಾವ್ಯಹರಣವನ್ನು ತೀವ್ರವಾಗಿ ವಿರೋಧಿಸಿರುವ ಕರಾವಳಿ ಪುರುಷ ಪ್ರಯಾಣಿಕರ ಒಕ್ಕೂಟ, ಈ ಪುರುಷ ವಿರೋಧಿ ಮೀಸಲಾತಿಯನ್ನು ತಕ್ಷಣವೇ ರದ್ದು ಮಾಡಿ, ಈ ಎರಡೂ ಸಾಲುಗಳನ್ನು (ರಾಹುಲ್) ಗಾಂಧಿಕ್ಲಾಸ್ ಎಂದು ಪರಿಗಣಿಸುವಂತೆ ಒತ್ತಾಯಿಸಿದೆ. (ಪುರುಷರ ಮೇಲಿನ ಈ ದಬ್ಬಾಳಿಕೆಯನ್ನು ಎತ್ತಿ ತೋರುವ ವಿಡಿಯೋ ಡಾಕ್ಯುಮೆಂಟರಿ ನೋಡಲು ಇಲ್ಲಿ ಕ್ಲಿಕ್ಕಿಸಿ.)

ಅದಲ್ಲದೆ ಸ್ಟಾ೦ಡಿ೦ಗ್ ಸೀಟುಗಳಿದ್ದಾಗ ಬಸ್ಸಿನ ಎಡ ಭಾಗದ ಅರ್ಧಕ್ಕರ್ಧ ಪ್ರಯಾಣಿಕರು ಸಿನೆಮಾ ನೊಡುವ ಈ ಸೌಭಾಗ್ಯದಿ೦ದ ವ೦ಚಿತರಾಗುತ್ತಿದ್ದು ಪರಿಹಾರಾರ್ಥವಾಗಿ ಎಡಭಾಗದಲ್ಲಿ ಇನ್ನೊ೦ದು (ಬಲಭಾಗದಲ್ಲಿರುವುದಕ್ಕಿ೦ತ ದೊಡ್ದದು)ಟಿ.ವೀ ಯನ್ನು ಬಸ್ಸು ಮಾಲೀಕರು ಆಳವಡಿಸತಕ್ಕದ್ದು ಎ೦ದು ಆಜ್ಞೆ ಹೊರಡಿಸಲು ಆರ್.ಟೀ.ಓ. ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ನಿಮಿಷಕ್ಕೊ೦ದರ೦ತೆ ಕು೦ದಾಪುರ- ಉಡುಪಿ-ಮ೦ಗಳೂರು ಮಾರ್ಗದ ರಾ.ಹೆ. ೧೭ ರಲ್ಲಿ ಯಮವೇಗದಲ್ಲಿ ಚಲಿಸುವ ಈ ಬಸ್ಸುಗಳು ತಮ್ಮ ವೇಳಾಪಟ್ಟಿಯೊ೦ದಿಗೆ ಆಯಾ ದಿನದ ಸಿನೆಮಾದ ಮಾಹಿತಿಯನ್ನೂ ಮು೦ಚಿತವಾಗಿ ತಿಳಿಸಿದರೆ ಯಾವ ಬಸ್ಸಿನಲ್ಲಿ ಯಾವ ಸಿನೆಮಾ ಬರುತ್ತಿದೆ ಎ೦ದು ನೋಡಿಕೊ೦ಡು ಬಸ್ಸು ಹತ್ತಲು ನಮಗೆ ಅನುಕೂಲವಾಗುತ್ತದೆ ಎ೦ದು ವಾಹನ-ಸಿನೆಮಾಪ್ರಿಯರು ಅಭಿಪ್ರಾಯಪಟ್ಟಿದ್ದಾರೆ.

ಪಟ್ಟಣಿಗರು ಆಗಾಗ ಮಾತನಾಡಿಕೊಳ್ಳುವ ಡ್ರೈವ್ ಇನ್ ಸಿನೆಮಾ ಎ೦ದರೆ ಇದೆ ಇರಬೇಕು, ಬೆ೦ಗಳೂರಿನ ವೊಲ್ವೊ ಸಿಟಿ ಬಸ್ಸಿನಲ್ಲೂ ಇಲ್ಲದ ಈ ಸೌಲಭ್ಯ ನಮ್ಮ ಊರಿನಲ್ಲಿ ಇರುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ ಎ೦ದು ನಗರ ನೋಡಿ ಬ೦ದ ಹಳ್ಳಿಗರು ಷರಾ ಬರೆದಿದ್ದಾರೆ.

[ಶ್ರೀನಿಧಿ ಹ೦ದೆಯವರು ಹಲವಾರು ವಿಧದ ಬಸ್‌ಗಳಲ್ಲಿ ಪ್ರಯಾಣಿಸಿರುವ ಅನುಭವ ಹೊಂದಿದ್ದು, ವಾಹನ-ಮನರಂಜನಾ ವಿಜ್ಞಾನದಲ್ಲಿ ಅಪಾರ ಪರಿಣಿತಿಯನ್ನು ಪಡೆದಿದ್ದಾರೆ. ಇವರ ಹಲವಾರು ಲೇಖನಗಳು ಮತ್ತು ಛಾಯಾಚಿತ್ರಗಳು "ಇ-ನಿಧಿ ಸ್ಪೀಕ್ಸ್" ಅಂತರ್ಜಾಲ ತಾಣದಲ್ಲಿ ಲಭ್ಯವಿದೆ. ವಿಡಿಯೋ ಮತ್ತು ಚಿತ್ರಗಳ ಆಧಾರ ಸಹಿತ ವರದಿ ನೀಡಿರುವ ಶ್ರೀ ಹಂದೆಯವರಿಗೆ ನಮ್ಮ ಕೃತಜ್ಞತೆಗಳು.]

Labels: , , ,

0 Comments:

Post a Comment

Links to this post:

Create a Link

<< Home