ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, August 28, 2008

ಬ್ಲಾಗ್‌ಸ್ಪಾಟಿಗೆ ವಿದಾಯ!

ಆತ್ಮೀಯ ಓದುಗ ಮಿತ್ರರಿಗೆ,
ನಮಸ್ಕಾರ.

ಸುಮಾರು ವರ್ಷಗಳ ವಾಸದ ನಂತರ, ಬ್ಲಾಗ್‌ಸ್ಪಾಟಿಗೆ ವಿದಾಯ ಹೇಳಿ, ತನ್ನದೇ ಆದ ನೆಲೆಯೊಂದನ್ನು ಕಂಡುಕೊಳ್ಳುವ ಸಂದರ್ಭ ಮಜಾವಾಣಿಗೆ ಒದಗಿದೆ. ಮಿತ್ರರಾದ ಎಚ್.ಪಿ.ನಾಡಿಗರು ಒಂದು ಅತ್ಯುತ್ತಮ ನೆಲೆಯನ್ನೂ ಒದಗಿಸಿದ್ದಾರೆ.
ಮಜಾವಾಣಿಯ ಹೊಸ ವಿಳಾಸ: ಮಜಾವಾಣಿ.ನೆಟ್

ವಿಶ್ವಾದ್ಯಂತ ಇರುವ ಮೂರೂವರೆ ಮಂದಿ ಮಜಾವಾಣಿ ಓದುಗರು ನಮ್ಮ ಹೊಸ ವಿಳಾಸಕ್ಕೆ ಮತ್ತೆ ಮತ್ತೆ ಭೇಟಿ ಕೊಟ್ಟು, ಸತ್ಯದೊಂದಿಗಿನ ನಮ್ಮ ಭೀಕರ ಯುದ್ಧದಲ್ಲಿ ವೀರ ಸ್ವರ್ಗಕ್ಕೆ ಮೂರು ಗೇಣಿನವರೆಗೆ ನಮ್ಮನ್ನು ಕೊಂಡೊಯ್ಯ ಬೇಕೆಂದು ಪ್ರಾರ್ಥಿಸುತ್ತೇನೆ.

ವಿಶ್ವಾಸದೊಂದಿಗೆ,
ವಿ.ವಿ.
ಮಹಾ ಪ್ರಧಾನ ಮುಖ್ಯ ವ್ಯವಸ್ಥಾಪಕ ಉಪ ಸಂಪಾದಕ

Saturday, August 09, 2008

ಮಜಾವಾಣಿ: ರಾಜ್ಯ ಸುದ್ದಿ

ನೈಸರ್ಗಿಕ ಕಾರಣಗಳಿಂದ ರೈತನ ಸಾವು!
ಮು.ಮಂ. ನೆಮ್ಮದಿಯ ನಿಟ್ಟುಸಿರು

ಬೆಂಗಳೂರು, ಸೆಪ್ಟೆಂಬರ್ ೩೧: ಹಲವು ವರ್ಷಗಳ ನಂತರ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ, ರೈತರೊಬ್ಬರು ನೈಸರ್ಗಿಕ ಕಾರಣಗಳಿಂದ ಸಾವಿಗೆ ಈಡಾಗಿರುವುದು ವರದಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಗುಳೇದ ಗುಡ್ಡ ಗ್ರಾಮದ ಶಿವನಂಜಯ್ಯನವರೇ ಈ ಅದೃಷ್ಟಶಾಲಿ ರೈತರಾಗಿದ್ದು, ಅವರಿಗೆ ೯೮ ವರ್ಷ ವಯಸ್ಸಾಗಿತ್ತು. ವೃತ್ತಿಯಿಂದ ರೈತರಾದರೂ, ನೈಸರ್ಗಿಕ ಕಾರಣಗಳಿಂದ ಅವರು ಸಾವಿಗೀಡಾಗಿರುವುದು ಇಡೀ ಜಿಲ್ಲೆಯಲ್ಲಿ ಆಶ್ಚರ್ಯವನ್ನುಂಟು ಮಾಡಿದ್ದು, ಗುಳೇದ ಗುಡ್ಡದ ಗ್ರಾಮಸ್ತರನ್ನು ಆನಂದತುಂದಿಲರನ್ನಾಗಿಸಿದೆ. ನಮ್ಮ ಪತ್ರಿಕೆಯೊಂದಿಗೆ ಈ ವಿಷಯದ ಕುರಿತು ಮಾತನಾಡಿದ ಮತ್ತೊಬ್ಬ ರೈತ ಚಿಕ್ಕೇಗೌಡ, "ಶಿವನಂಜಯ್ಯ ಹೋಗ್ಬಿಟ್ಟರು ಅಂತ ಗೊತ್ತಾದಾಗ, ಅದೇ ಎಂದಿನಂತೆ ಅಂದುಕೊಂಡೆ. ಆದರೆ, ಅವರು ವಯಸ್ಸಾಗಿ ತೀರಿಕೊಂಡದ್ದು ಅಂತ ಗೊತ್ತಾದಾಗ, ನಿಜವಾಗ್ಲೂ ಆಶ್ಚರ್ಯ ಆಯಿತು. ಈ ಕಾಲದಲ್ಲೂ ಈ ತರ ಸಾವು ಇದೆಯಾ ಅಂತ!" ಎಂದರು.

ಶಿವನಂಜಯ್ಯನವರ ಈ ಸಾವು ಸರ್ಕಾರಿ ವಲಯಗಳಲ್ಲಿ ಕೊಂಚ ಮಟ್ಟಿಗೆ ಆನಂದವನ್ನು ತಂದಿದ್ದು, ಮುಖ್ಯಮಂತ್ರಿಯವರು ಸಹ ರೈತರ ಸಾವಿನ ವಿಚಾರದಲ್ಲಿ ಇದೇ ಮೊದಲ ಬಾರಿಗೆ ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟರೆನ್ನಲಾಗಿದೆ.

ಖರ್ಗೆ ಆಗ್ರಹ: ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರತಿ ವ್ಯಕ್ತಿಯ ಹಿನ್ನೆಲೆಯನ್ನು ಪರಿಶೀಲಿಸಿ, ಆತ ಅಥವಾ ಆಕೆ ರೈತ ಇರಬಹುದೇ ಎಂಬುದನ್ನು ಖಚಿತ ಪಡಿಸಿಕೊಳ್ಳುವಂತೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ನಿಧನರಾದವರು ರೈತರಲ್ಲ ಎಂಬುದು ಖಚಿತವಾಗಿ ನಿರೂಪಿತವಾಗದ ತನಕ, ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲಾ ರೈತರೆಂದೇ ಪರಿಗಣಿಸ ಬೇಕೆಂದ ಖರ್ಗೆಯವರು, ಇದಕ್ಕಾಗಿ ಸೂಕ್ತ ಕಾನೂನುಗಳನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Labels: , ,

Saturday, August 02, 2008

ಮಜಾವಾಣಿ: ವಾಣಿಜ್ಯ-ಕ್ರೀಡೆ-ರಾಜಕೀಯ


ಶಾಸಕರ ಭವನದ ಸಮೀಪ ಡಿಕೆಶಿ'ಸ್ ಕ್ಯಾಸಲ್
(ಮಜಾವಾಣಿ ಎಕ್ಸ್‌ಕ್ಲೂಸಿವ್)
ಬೆಂಗಳೂರು, ಜೂನ್ ೩೧: ವಿಶ್ವಾದ್ಯಂತ ದೂರದರ್ಶನದ ನೋಡುಗರನ್ನು ಆಕರ್ಶಿಸಿರುವ ಟಕೇಶಿ'ಸ್ ಕ್ಯಾಸಲ್ ಈಗ ಬೆಂಗಳೂರಿನಲ್ಲಿ ಆರಂಭವಾಗಿದೆ.
ಜಪಾನ್ ಸಹಯೋಗದಲ್ಲಿ, ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಈ ಕ್ಯಾಸಲ್ ಅನ್ನು ನಿರ್ಮಿಸಿದ್ದು, ಇದಕ್ಕೆ ಡಿಕೆಶಿ'ಸ್ ಕ್ಯಾಸಲ್ ಎಂದು ಹೆಸರಿಡಲಾಗಿದೆ.
ಈ ವಿಷಯದ ಕುರಿತು ನಮ್ಮ ಪತ್ರಿಕೆಯೊಂದಿಗೆ ವಿವರಗಳನ್ನು ಹಂಚಿಕೊಂಡ ಶಿವಕುಮಾರ್, "ಕೆಸರು ಎರಚುವುದು, ಕಾಲೆಳೆಯುವುದು, ಜಾರಿಸಿ ಬೀಳಿಸುವುದು ಇದು ರಾಜಕಾರಣದಲ್ಲಿ ಸರ್ವೇ ಸಾಮಾನ್ಯ. ಆದರೆ ಈ ವಿದ್ಯೆಗಳನ್ನು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ಹೇಗೆ, ಅದರಿಂದ ಲಾಭವೇನಾದರೂ ಇದೆಯೇ ಎಂಬ ಆಲೋಚನೆ ಬಂತು. ಅದರ ಫಲವೇ ಡಿಕೇಶಿ'ಸ್ ಕ್ಯಾಸಲ್. ಶಾಸಕರ ಭವನದ ಸಮೀಪ ೪.೨೦ ಎಕರೆ ವಿಶಾಲ ಜಾಗದಲ್ಲಿ ನಿರ್ಮಿಸಲಾಗಿದೆ. ಪಕ್ಷಭೇದವಿಲ್ಲದೆ ರಾಜಕಾರಣಿಗಳೆಲ್ಲರೂ ಇದರಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಚಾರ" ಎಂದರು.

Labels: , ,

Monday, July 28, 2008

ಮಜಾವಾಣಿ: ಪ್ರಾದೇಶಿಕ ವಾರ್ತೆ

ಇನ್ನು ಮುಂದೆ ಅಣು "ಮುಂಬ್"?!
ಮುಂಬೈ, ಏಪ್ರಿಲ್ ೩೧: ಬಾಂಬೆ ಡೈಯಿಂಗ್, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸೇರಿಸಿ, "ಬಾಂಬೆ" ಎಂದು ಹೆಸರಿರುವ ಪ್ರತಿಯೊಂದು ಸಂಘ ಸಂಸ್ಥೆಯೂ ಅದನ್ನು "ಮುಂಬೈ"ಗೆ ಬದಲಿಸ ಬೇಕೆಂದು ಶಿವಸೇನಾ ಮುಖ್ಯಸ್ತ ಬಾಳ್ ಠಾಕ್ರೆ ಎಚ್ಚರಿಕೆ ನೀಡಿರುವ ಬೆನ್ನಲ್ಲೇ, ಅಣು ಬಾಂಬನ್ನು ಅಣು "ಮುಂಬ್" ಎಂದು ಕರೆಯುವಂತೆ ಕೂಗೆದ್ದಿದೆ.

ಸ್ವಾಭಿಮಾನಿ ಮಹರಾಷ್ಟ್ರ ಸಂಘದ ಕಾರ್ಯಕರ್ತರು ಅಣು ಬಾಂಬಿನ ಮರು ನಾಮಕರಣಕ್ಕೆ ಒತ್ತಾಯಿಸಿ ಗುರುವಾರ ಸಂಜೆ ಮುಂಬೈನಲ್ಲೆ ಭಾರಿ ಪ್ರದರ್ಶನವನ್ನು ಏರ್ಪಡಿಸಿದ್ದರು. ಸಂಘದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಅತುಲ್ ರಾವ್ ಪಾಟೆಕರ್, "ಅಣು ಬಾಂಬ್ ಭಾರತದ ವೈಜ್ಞಾನಿಕ ಪ್ರಗತಿಯ ಸಂಕೇತ. ಈಗಾಗಲೇ ಬಾಂಬೇ ಮುಂಬೈ ಆಗಿರುವುದರಿಂದ, ಬಾಂಬ್ ಸಹ ಮುಂಬ್ ಆಗಲೇ ಬೇಕು. ಇದಕ್ಕಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧ" ಎಂದು ನುಡಿದರು.

(ಪಿ.ಟಿ.ಹೈ.)

Labels:

ಮಜಾವಾಣಿ: ಚಿತ್ರ ವಿಮರ್ಶೆ

ದ ವಿನಿಂಗ್ ಕ್ಯಾಂಡಿಡೇಟ್!

ಮಧ್ಯಾಹ್ನವೋ.. ರಾತ್ರಿಯೋ... ಅಂತೂ ಊಟದ ಸಮಯ. ಬೆಂಗಳೂರು ನಗರ. ಕನ್ನಡಿಗರ ಊರು. ಕರ್ನಾಟಕದ ರಾಜಧಾನಿ. ಮಲ್ಲೇಶ್ವರ ಆದರೂ ಸರಿ, ಜಯನಗರ ನಾಲ್ಕನೆಯ ಬ್ಲಾಕ್ ಆದರೂ ಸರಿ. ಯಾವುದೇ ಸೌತ್ ಇಂಡಿಯನ್ ರೆಸ್ಟಾರಂಟ್ ಆದರೂ ಪರವಾಗಿಲ್ಲ. ನಿಮಗೆ ಇಡ್ಲಿ ಅಥವಾ ದೋಸೆ ಬೇಕಿದ್ದರೆ, ದಯವಿಟ್ಟು ಕ್ಷಮಿಸಿ, ಅವುಗಳ ಟೈಮ್ ಮುಗಿದಿದೆ. ಆದರೆ, ಗೋಬಿ ಮಂಚೂರಿ? ಡ್ರೈ ಬೇಕೋ?! ಗ್ರೇವಿಯಲ್ಲಿ ಬೇಕೋ?!!

ಇದು ಎಲ್ಲರ ಅನುಭವಕ್ಕೂ ಬಂದಿರುವ ವಿಷಯ. ಗೋಬಿ ಮಂಚೂರಿ ನಮ್ಮ ತಟ್ಟೆಗಳನ್ನು ಆಕ್ರಮಿಸಿಕೊಂಡಿದ್ದು ಯಾವಾಗ?! ಈ ಆಕ್ರಮಣದ ಕುರಿತು ಯಾರೂ ತಲೆ ಕೆಡಿಸಿಕೊಂಡಿಲ್ಲ ಯಾಕೆ?!! ನಮ್ಮೆಲ್ಲರ ಬ್ರೇನ್‌ವಾಷ್ ಆಗಿದೆಯೇ?!!! ಇದರ ಹಿಂದೆ ಚೈನಾ-ಅಮೆರಿಕಗಳ ಜಾಗತಿಕ ಪೊಲಿಟಿಕಲ್ ಕಾನ್ಸ್ಪಿರಸಿ ಇದೆಯೇ?!!!!

"ದಿ ಗೋಬಿ ಮಂಚೂರಿಯನ್ ಕ್ಯಾಂಡಿಡೇಟ್" ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಅತ್ಯುತ್ತಮ ಚಲನಚಿತ್ರ ಎಂಬುದರಲ್ಲಿ ಸಂದೇಹವಿಲ್ಲ. ಕನ್ನಡಿಗರ ತಟ್ಟೆಯ ಮೇಲೆ ಪರಕೀಯ ತಿಂಡಿಗಳ ದುರಾಕ್ರಮಣದ ಹಿಂದಿನ ಕರಾಳ ಜಾಗತಿಕ ಕಾನ್ಸ್ಪಿರಸಿಯನ್ನು ಎಳೆ-ಎಳೆಯಾಗಿ ಬಿಡಿಸಿ ಅದನ್ನು ಒಂದು ಥ್ರಿಲರ್‌ನಂತೆ ನಿರೂಪಿಸುವ ನಿರ್ದೇಶಕರ ನಿರೂಪಣಾ ಶೈಲಿ ನಿಜಕ್ಕೂ ಅನನ್ಯ.

ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆ -- ಅದರಲ್ಲೂ ಅಕ್ಕಿಯ ಬೆಲೆ -- ಆಕಾಶಕ್ಕೆ ಏರುತ್ತಿರುವ ಸಂದರ್ಭದಲ್ಲಿ, ಭಾರತದ ಪ್ರಧಾನಿ ಮತ್ತು ಅಮೆರಿಕದ ಅಧ್ಯಕ್ಷ ಒಪ್ಪಂದವೊಂದಕ್ಕೆ ಸಹಿ ಹಾಕುತ್ತಾರೆ. ಆ ಒಪ್ಪಂದದ ಪ್ರಕಾರ, ಭಾರತಕ್ಕೆ ಅಮೆರಿಕದ ಅಕ್ಕಿ ದೊರಕುತ್ತದೆ, ಆದರೆ, ಒಂದು ನಿರ್ಬಂಧದೊಂದಿಗೆ: ಅಮೆರಿಕದ ಅಕ್ಕಿಯನ್ನು ಮಂತ್ರಾಕ್ಷತೆಗೆ ಮಾತ್ರ ಬಳಸಬೇಕು. ಈ ಒಪ್ಪಂದ ಚೈನಾದ ಕೆಂಗಣ್ಣಿಗೆ ಕಾರಣವಾಗುತ್ತದೆ: ಭಾರತೀಯರು ಹೆಚ್ಚು-ಹೆಚ್ಚು ಮಂತ್ರಾಕ್ಷತೆ ಬಳಸಲಾರಂಭಿಸಿದರೆ, ಚೈನಾದ ಗತಿ?!

ಇಡ್ಲಿ, ದೋಸೆ, ಅಕ್ಕಿ ರೊಟ್ಟಿ ಇತ್ಯಾದಿ ಅಕ್ಕಿ ತಿಂಡಿಗಳಿಂದ ಕನ್ನಡಿಗರನ್ನು ದೂರವಿಟ್ಟು ಗೋಬಿ ಮಂಚೂರಿಯ ಗುಲಾಮರನ್ನಾಗಿಸುವ ಚೈನಾದ ಹಲವು ವರ್ಷಗಳ ಹುನ್ನಾರಕ್ಕೆ ಈ ಮಂತ್ರಾಕ್ಷತೆ ಒಪ್ಪಂದ ಅನ್ನದಲ್ಲಿನ ಕಲ್ಲಿನಂತೆ ಎದುರಾಗುತ್ತದೆ. ಈ ಒಪ್ಪಂದವನ್ನು ಹೇಗಾದರೂ ಮುರಿಯಲು ಚೈನಾದ ರಾಜಕೀಯ ನಾಯಕರು ನಿರ್ಧರಿಸುತ್ತಾರೆ. ಭಾರತದಲ್ಲಿ ಈ ಒಪ್ಪಂದದ ಕುರಿತು ಕೋಲಾಹಲವನ್ನು ಸೃಷ್ಟಿಸುತ್ತಾರೆ. ಒಪ್ಪಂದ ಮುರಿದು ಬೀಳುತ್ತದೆಯೇ? ಪ್ರಧಾನ ಮಂತ್ರಿ ಕೆಳಗಿಳಿಯುತ್ತಾರೆಯೇ? ಚೈನಾದ ಕುತಂತ್ರ ಯಶಸ್ವಿಯಾಗುತ್ತದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ, ಚಿತ್ರದ ಕ್ಲೈಮಾಕ್ಸಿನಲ್ಲಿ ಬರುವ ಸಂಸತ್ತಿನ ವಿಶ್ವಾಸ ಮತದ ಸನ್ನಿವೇಶ ಉತ್ತರ ನೀಡುತ್ತದೆ.

ಮಂತ್ರಾಕ್ಷತೆ ಒಪ್ಪಂದವನ್ನು ಶತಾಯ ಗತಾಯ ಮುರಿಯಲು ಪ್ರಯತ್ನಿಸುವ ಗುಂಪಿನ ನಾಯಕಿಯಾಗಿ, ದೆಹಲಿಯ ಚೈನೀಸ್ ರೆಸ್ಟರಂಟ್ ಒಂದರ ಒಡತಿಯ ಪಾತ್ರದಲ್ಲಿ ಬೃಂದಾ ಕ್ಯಾರಟ್ ತಮ್ಮ ಜೀವನದ ಸರ್ವ ಶ್ರೇಷ್ಠ ಅಭಿನಯ ನೀಡಿದ್ದಾರೆ. ಅವರಿಗಾಗಿಯೇ ಬರೆದಂತಿರುವ ಆ ಪಾತ್ರದಲ್ಲಿ, ಬೃಂದಾ ಜೀವಿಸಿದ್ದಾರೆ ಎಂದರೆ ಅದು ಸುಳ್ಳಲ್ಲ. ತಮ್ಮ ರೆಸ್ಟರಂಟಿಗೆ ಬರುವ ಡಿಮ್-ಸಮ್ ಚಟರ್ಜಿಗೆ ಮತ್ತೆ-ಮತ್ತೆ ಗೋಬಿ ಮಂಚೂರಿ ತಿನ್ನಿಸಿ ಅವರನ್ನು ಗೋಬಿ ಮಂಚೂರಿ ವ್ಯಸನಿಯನ್ನಾಗಿಸುವ ದೃಶ್ಯಗಳಲ್ಲಿ, ಬೃಂದಾರವರ ಅಭಿನಯ chillingly realistic!

ಜಾಗತಿಕ ರಾಜಕೀಯ ಚದುರಂಗದಾಟದಲ್ಲಿ, ತನಗೇ ತಿಳಿಯದಂತೆ ಒಂದು pawn ಆಗುವ, ಗೋಬಿ ಮಂಚೂರಿ ವ್ಯಸನಿಯ ಅತ್ಯಂತ ಕ್ಲಿಷ್ಟ ಮತ್ತು pivotal ಪಾತ್ರದಲ್ಲಿ ಡಿಮ್-ಸಮ್ ಚಟರ್ಜಿಯವರ ಅಭಿನಯ ಅತ್ಯಮೋಘ. ಒಂದು ಚಟಕ್ಕೆ ದಾಸನಾಗಿಯೂ, ಅದನ್ನು ಮೀರಿ ಸರಿ ಹೆಜ್ಜೆ ಇಡಬೇಕೆಂದು ಹಂಬಲಿಸುವ ಪಾತ್ರವನ್ನು ಡಿಮ್-ಸಮ್ ಅತ್ಯಂತ ಮನೋಜ್ಞವಾಗಿ, subtle ಆಗಿ ನಿರೂಪಿಸಿದ್ದಾರೆ. ಕ್ಲೈಮಾಕ್ಸಿನ ವಿಶ್ವಾಸಮತ ಯಾಚನೆಯ ದೃಶ್ಯದಲ್ಲಿ, ಅತ್ತ ಮತಯಂತ್ರದ ಬಟನ್ ಇತ್ತ ಗೋಬಿ ಮಂಚೂರಿ ತಟ್ಟೆ ಇವುಗಳಲ್ಲಿ ಯಾವುದನ್ನು ಆರಿಸಿಕೊಳ್ಳಬೇಕೆಂಬ ಮಾನಸಿಕ ತೊಳಲಾಟವನ್ನು ಕೇವಲ ಕಣ್ಣಲ್ಲೇ ತೋರುವ ಪರಿ ಚಿತ್ರದ ಹೈ ಲೈಟ್.

ಇನ್ನುಳಿದಂತೆ, "ಒಪ್ಪಂದದ ಪ್ರಕಾರ ಭಾರತಕ್ಕೆ ಸರಬರಾಜಾಗುವುದು, ಅಕ್ಕಿಯಲ್ಲ, ಕಾಂಡೊಲಿಸಾ ರೈಸ್. ಈ ಒಪ್ಪಂದದಿಂದ ಮಂತ್ರಾಕ್ಷತೆ ಮಾಡಲು ಸಾಧ್ಯವಿಲ್ಲ" ಎಂದು ತನ್ನ ಪತ್ರಿಕೆಯಲ್ಲಿ ಪ್ರಕಟಿಸಿ ಸುದ್ದಿ ಮಾಡುವ ಸಂಪಾದಕನ ಪಾತ್ರದಲ್ಲಿ ಎನ್.ರಾಮ್ ಗಮನ ಸೆಳೆಯುತ್ತಾರೆ.

ಛಾಯಗ್ರಹಣ ಮತ್ತು ಹಿನ್ನೆಲೆ ಸಂಗೀತ, ಚಿತ್ರದ ಗಹನತೆ ಮತ್ತು ಗಾಂಭೀರ್ಯಕ್ಕೆ ಪೂರಕವಾಗಿದ್ದು, ನಿರೂಪಣೆಯ ಹದವನ್ನು ಉಳಿಸಿಕೊಂಡು ಬಂದಿವೆ. ಚಿತ್ರದಲ್ಲಿನ ಏಕ ಮಾತ್ರ ಗೀತೆ ಕಾಯ್ಕಿಣಿಯವರ "ಕಾಡುವೆ ಹೀಗೇಕೆ ಗೋಬಿ ಮಂಚೂರಿ" ಕೇಳಲು ಇಂಪಾಗಿದ್ದು, ಡಿಮ್-ಸಮ್ ಚಟರ್ಜಿಯ ಮಾನಸಿಕ ತೊಳಲಾಟದ ಭಾವ ತೀವ್ರತೆಯನ್ನು ಕಾವ್ಯಾತ್ಮಕವಾಗಿ ಅಭಿವ್ಯಕ್ತಿಸುವಲ್ಲಿ ಸಫಲವಾಗಿದೆ.

Labels: , ,

Saturday, July 26, 2008

ಮಜಾವಾಣಿ ಜಾಹಿರಾತು: ರಾಜಕೀಯ ತಂತ್ರಾಂಶ


ಇದನ್ನೂ ಓದಿ! (ಸೋಮಾರಿತನದ ಪರಮಾವಧಿ!)

Labels: ,

Saturday, May 10, 2008

ಚುನಾವಾಣಿ '08: ಜನ ವಾಣಿ

[ಕರ್ನಾಟಕ ರಾಜ್ಯಕ್ಕೆ ಇದು ಸಂಕ್ರಮಣ ಕಾಲ. ಯಾರಿಂದ ನಾವು ಮೋಸ ಹೋಗಬೇಕೆಂದು ನಿರ್ಧರಿಸ ಬೇಕಾದ ಕಾಲ. ಇಂತಹ ಸಂದರ್ಭದಲ್ಲಿ, ನಮ್ಮ ನಾಡು,ನುಡಿ, ರಾಜಕಾರಣಗಳ ಬಗೆಗೆ ನಮ್ಮ ಜನರ ನಾಡಿ ಹೇಗೆ ಮಿಡಿಯುತ್ತಿದೆ, ಅವರನ್ನು ಕಾಡುತ್ತಿರುವ ವಿಷಯಗಳೇನು ಎಂಬುದನ್ನು ಅವರ ಮಾತುಗಳಲ್ಲೇ ಇಲ್ಲಿ ಹಿಡಿದು ಕೊಡಲಾಗಿದೆ - ಸಂ.]

Labels: , ,

Wednesday, May 07, 2008

ಚುನಾವಾಣಿ '08: ಜಾಹಿರಾತು

Labels: , ,

Tuesday, May 06, 2008

ಚುನಾವಾಣಿ ೨೦೦೮: ಡೀಲಕ್ಸ್ ಮತಗಟ್ಟೆಗಳಲ್ಲಿ ಉಗುರುಗಳಿಗೆ ಬಣ್ಣ

ದೇಶದಲ್ಲಿಯೇ ಪ್ರಥಮ ಬಾರಿಗೆ ಫೈವ್ ಸ್ಟಾರ್ ಮತಗಟ್ಟೆ!

ಬೆಂಗಳೂರು ಮೇ ೧೨: ಸಿರಿವಂತ ಮತದಾರರನ್ನು ಆಕರ್ಷಿಸಲು ಇದೇ ಪ್ರಥಮ ಬಾರಿಗೆ ಡೀಲಕ್ಸ್ ಮತಗಟ್ಟೆಗಳನ್ನು ಚುನಾವಣ ಆಯೋಗ ಲಭ್ಯಗೊಳಿಸಿದೆ.

ಈ ವಿಷಯದ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಮುಖ್ಯ ಚುನಾವಣಾ ಕಮೀಷನರ್ ಎನ್.ಗೋಪಾಲಸ್ವಾಮಿಯವರು, ಇಂತಹ ಮತಗಟ್ಟೆಗಳು ಜಗತ್ತಿನಲ್ಲೇ ಪ್ರಥಮಬಾರಿಗೆ ಬೆಂಗಳೂರಿನ ಗಣ್ಯ ಮತದಾರರಿಗೆ ಲಭ್ಯವಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ ಎಂದರು.

"ಚುನಾವಣೆಯಿಂದ ಚುನಾವಣೆಗೆ ಮತದಾರರ ಸಂಖ್ಯೆ ಹೆಚ್ಚುತ್ತಿದ್ದರೂ, ನಮ್ಮ ಆಯೋಗ ಸಿರಿವಂತ ಮತದಾರರನ್ನು ಆಕರ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಮುರುಕಲು ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆ, ಸಾಲುಗಟ್ಟಿ ನಿಲ್ಲುವ ಸಾಮಾನ್ಯ ಜನ, ಇದೆಲ್ಲಾ ಮಾಸ್ ಮತದಾರರಿಗೆ ಸರಿಹೊಂದಬಹುದಾದರೂ, ಕ್ಲಾಸ್ ಮತದಾರರಿಗೆ ಖಂಡಿತಾ ಇಷ್ಟವಾಗುತ್ತಿರಲಿಲ್ಲ. ಅದಕ್ಕಾಗಿ, ಇದೇ ಪ್ರಥಮ ಬಾರಿಗೆ ಬೆಂಗಳೂರಿನ ಲೀಲಾ ಪ್ಯಾಲೇಸ್ ಮತ್ತು ಟಾಜ್ ವೆಸ್ಟ್ ಎಂಡ್ ಹೋಟೆಲುಗಳಲ್ಲಿ ಫುಲ್ಲೀ ಏರ್ ಕಂಡೀಷನ್ಡ್ ಮತಗಟ್ಟೆಗಳನ್ನು ತೆರೆಯಲಾಗಿದೆ. ಈ ಮತಗಟ್ಟೆಗಳು ಕೇವಲ ಆಹ್ವಾನಿತ ಮತದಾರರಿಗೆ ಮಾತ್ರ ಲಭ್ಯವಿದ್ದು ಮತದಾನದ ಅನುಭವವನ್ನು ಸುಖೀಕರಿಸಲು ಸಂಪೂರ್ಣವಾಗಿ ಸಜ್ಜಾಗಿವೆ" ಎಂದ ಗೋಪಾಲಸ್ವಾಮಿಯವರು, "ಈ ಸೂಪರ್ ಡೀಲಕ್ಸ್ ಮತಗಟ್ಟೆಗಳಲ್ಲಿ ಪ್ಯಾರಿಸ್‌ನಿಂದ ಆಮದು ಮಾಡಿಕೊಂಡಿರುವ ನೇಯ್ಲ್ ಪಾಲಿಶ್‌ ಅನ್ನು ಉಗುರುಗಳಿಗೆ ಹಚ್ಚಲಾಗುವುದು. ಬೆರಳ ಮೇಲೆ ಕಪ್ಪು ಇಂಕಿನ ಅಸಹ್ಯಕರ ಕಲೆಯ ಭಯ ಇಲ್ಲಿಲ್ಲ. ಪ್ರಸಾದ್ ಬಿದ್ದಪ್ಪ ಅಂತಹ ಗಣ್ಯರು ಸಹ ಯಾವುದೇ ಹಿಂಜರಿಕೆ ಇಲ್ಲದೆ ಇನ್ನು ಮುಂದೆ ಇಲ್ಲಿ ಮತ ಚಲಾಯಿಸಬಹುದು" ಎಂದರು.

Labels: ,

Monday, May 05, 2008

ಚುನಾವಾಣಿ ೨೦೦೮: ಜಾಹಿರಾತು

Labels: , , ,

Thursday, April 03, 2008

ಮಜಾವಾಣಿ: ಅಗ್ರ ರಾಷ್ಟ್ರೀಯ ಸುದ್ದಿ

ಮದ್ರಾಸಿನಲ್ಲಿ ಮೈಸೂರು ಪಾಕಿಗೆ ಬಹಿಷ್ಕಾರ!

ಚನ್ನೈ, ಏಪ್ರಿಲ್ ೩೧: ಕಾವೇರಿ ಜಲ ವಿವಾದ ಇತ್ಯರ್ಥವಾಗುವವರೆಗೂ, ತಮಿಳು ನಾಡಿನಲ್ಲಿ ಮೈಸೂರು ಪಾಕ್ ಮಾರಾಟ ಮತ್ತು ಸೇವನೆಯನ್ನು ಬಹಿಷ್ಕರಿಸುವಂತೆ ತಮಿಳು ಪರ ಸಂಘಟನೆಗಳು ಕರೆ ನೀಡಿವೆ.

"ಕರ್ನಾಟಕದಲ್ಲಿ ತಮಿಳು ಟಿ.ವಿ.ಚಾನಲ್ ಮತ್ತು ಚಲನಚಿತ್ರಗಳ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ, ಕನ್ನಡ ಚಾನಲ್ಲುಗಳೂ ಇಲ್ಲ, ಕನ್ನಡ ಸಿನೆಮಾಗಳಂತೂ ರಿಲೀಸ್ ಆಗೋದೇ ಇಲ್ಲ. ಆದ್ದರಿಂದ ಮೈಸೂರು ಪಾಕನ್ನು ಬಹಿಷ್ಕರಿಸುವ ತುರ್ತು ನಮಗೆದುರಾಗಿದೆ" ಎಂದಿರುವ ನಾಡೋಡಿ ತಮಿಳ್ ಮಕ್ಕಳ್ ಸಂಗಂ ಅಧ್ಯಕ್ಷ ಗೌಂಡಮಿಣಿ ತಿಯಾಗರಾಜನ್ ಅವರು, "ವಸಾಹತುಷಾಹಿಯ ಪ್ರತೀಕವಾದ ಮೈಸೂರು ಪಾಕನ್ನು ಬಹಿಷ್ಕರಿಸಬೇಕು. ಮೈಸೂರು ಪಾಕ್ ತಯಾರಿಕೆ, ಮಾರಾಟ ಮತ್ತು ಸೇವನೆಯನ್ನು ತಕ್ಷಣವೇ ನಿಲ್ಲಿಸಬೇಕು. ಇದು ಪ್ರತಿಯೊಬ್ಬ ತಮಿಳನ ಕರ್ತವ್ಯ" ಎಂದು ಕರೆ ನೀಡಿದ್ದಾರೆ.

ಪುರುಚ್ಚಿ ಪಾಕ್??: ಮಾಜಿ ಮುಖ್ಯಮಂತ್ರಿ ಕುಮಾರಿ ಜಯಲಲಿತಾರವರಂತೆ, ಮೈಸೂರು ಪಾಕ್ ಸಹ ಮದ್ರಾಸಿಗಳ ಮನದಲ್ಲಿ ಮನೆ ಮಾಡಿದ್ದು, ಅದರ ಬಹಿಷ್ಕಾರದ ಬಗೆಗೆ ಅಲ್ಲಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಆಡ್ಯಾರ್ ಆನಂತ ಭವನ್ ಒಳಗೊಂಡಂತೆ ಹಲವಾರು ಸಿಹಿ ಅಂಗಡಿಗಳ ಮಾಲೀಕರು, ಮೈಸೂರು ಪಾಕನ್ನು ಸಂಪೂರ್ಣವಾಗಿ ಬಹಿಷ್ಕರಿಸುವ ಬದಲು ಅದಕ್ಕೆ ಬೇರೊಂದು ಹೆಸರಿಟ್ಟರೆ ಸಾಕು ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಅದಕ್ಕೆ ಪೂರಕವೆಂಬಂತೆ, ತಮಿಳು ನಾಡಿನ ವಿಧಾನ ಸೌಧದ ಕ್ಯಾಂಟೀನಿನಲ್ಲಿ ಮೈಸೂರು ಪಾಕನ್ನು "ಪುರುಚ್ಚಿ ಪಾಕ್" (ಕ್ರಾಂತಿಕಾರಿ ಪಾಕು) ಎಂಬ ಹೆಸರಿನಲ್ಲಿ ಮಾರುತ್ತಿರುವುದು ಕಂಡು ಬಂತು.
(P.T.Hi.)

Labels:

Monday, March 31, 2008

ಮಜಾವಾಣಿ: ರಾಜಕೀಯ ಸುದ್ದಿ

ಎಸ್.ಎಂ.ಕೃಷ್ಣ ಹೃದಯಕ್ಕೆ ಪ್ರತ್ಯೇಕ ಪೋಸ್ಟಲ್ ಕೋಡ್ ನೀಡುವಂತೆ ಆಗ್ರಹ
ಬೆಂಗಳೂರು, ಏಪ್ರಿಲ್ ೧: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಿಯೋಗವೊಂದು ನಗರದ ಪೋಸ್ಟ್ ಮಾಸ್ಟರ ಜನರಲ್ ಅವರನ್ನು ಭೇಟಿ ಮಾಡಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಹೃದಯಕ್ಕೆ ಪ್ರತ್ಯೇಕ ಪೋಸ್ಟಲ್ ಕೋಡ್ ನೀಡುವಂತೆ ಆಗ್ರಹಿಸಿತು.

ತಮ್ಮ ಬೇಡಿಕೆಯನ್ನು ಮಂಡಿಸಿದ ನಂತರ ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಡಿ.ಕೆ.ಶಿ.ಯವರು, "ಜನರೇ ಇಲ್ಲದ ಎಂತೆಂತಹ ಸಣ್ಣ ಸಣ್ಣ ಹಳ್ಳಿಗಳಿಗೂ ಈಗ ಪ್ರತ್ಯೇಕ ಪೋಸ್ಟಲ್ ಕೋಡ್ ಇದೆ. ಹಾಗಿರುವಾಗ ಇಡೀ ಕರ್ನಾಟಕದ ಜನತೆಯನ್ನೇ ತಮ್ಮೆದೆಯಲ್ಲಿ ತುಂಬಿಸಿಕೊಂಡಿರುವ ಕೃಷ್ಣರವರ ವಿಶಾಲ ಹೃದಯಕ್ಕೆ ತನ್ನದೇ ಆದ ಪೋಸ್ಟಲ್ ಕೋಡ್ ಇಲ್ಲದಿರುವುದು ಖಂಡನೀಯ" ಎಂದರು.

Labels:

ಮಜಾವಾಣಿ: ತನಿಖಾ ವರದಿ

ತಮಿಳರ ಕಾವೇರಿ ಆಸೆಯ ಕಾರಣ ಪತ್ತೆ!

ತಲಕಾವೇರಿ, ಏಪ್ರಿಲ್ ೧: ನದಿ ಮೂಲ, ಋಷಿ ಮೂಲ ತಿಳಿಯುವುದು ಹೇಗೆ ಕಷ್ಟವೋ ಹಾಗೆಯೇ ತಮಿಳರ ಕಾವೇರಿ ಮೇಲಿನ ಆಸೆಯ ಮೂಲವನ್ನು ತಿಳಿಯುವುದೂ ಕಷ್ಟ. ತಮಿಳು ನಾಡು-ಕರ್ನಾಟಕದ ನಡುವಿನ ವಿವಾದ ಸುಪ್ರೀಂ ಕೋರ್ಟಿನ ಕಟ್ಟೆ ಹತ್ತಿದ್ದರೂ, ತಮಿಳು ನಾಡಿನವರಿಗೆ ಕಾವೇರಿಯ ಮೇಲೆ ಏಕೆ ಇಷ್ಟೊಂದು ಪ್ರೇಮ ಎನ್ನುವ ಪ್ರಶ್ನೆ ಮಾತ್ರ ಇಂದಿನ ವರೆಗೆ ಪ್ರಶ್ನೆಯಾಗಿಯೇ ಉಳಿದಿತ್ತು.

ಆದರೆ ಇಂದು ನಮ್ಮ ಪತ್ರಿಕೆಯ ಖ್ಯಾತ ತನಿಖಾ ವರದಿಗಾರ ಶ್ರೀನಿಧಿ ಹಂದೆಯವರು, ತಮ್ಮ ಸಚಿತ್ರ ವರದಿಯ ಮೂಲಕ ಈ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಈ ರಹಸ್ಯವನ್ನು ಭೇದಿಸಲು, ಮಹಾನ್ ಸಾಹಸದಿಂದ ಅತ್ಯಂತ ದುರ್ಗಮ ರಸ್ತೆಗಳಲ್ಲಿ ಪ್ರಯಾಣಿಸಿದ ನಮ್ಮ ವರದಿಗಾರರು ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿಯನ್ನು ತಲುಪಿದಾಗ, ಅಲ್ಲಿ, ಕಾವೇರಿಯ ಪವಿತ್ರ ತೀರ್ಥವನ್ನು "ಒರಿಜಿನಲ್ ಚಾಯ್ಸ್" ವಿಸ್ಕಿ ಬಾಟಲಿಗಳಲ್ಲಿ ದೊರಕುತ್ತಿರುವುದು ಪತ್ತೆಯಾಯಿತು. ಇದು ತಮಿಳು ನಾಡಿನ ಕೆಲ ರಾಜಕಾರಣಿಗಳನ್ನು ಕನ್‌ಫ್ಯೂಸ್ ಮಾಡಿದೆ ಎನ್ನಲಾಗಿದೆ. ಇದರಿಂದಾಗಿ, ಕಾವೇರಿ ನದಿಯ ನೀರು ವಿಶೇಷವಾದ "ತೀರ್ಥ" ಸಮಾನವೆಂಬ ಭಾವನೆ ಈ ರಾಜಕಾರಣಿಗಳಲ್ಲಿ ಮನೆ ಮಾಡಿದ್ದು, ಅವರು ಕಾವೇರಿ ನೀರಿನ ವ್ಯಸನಕ್ಕೆ ಒಳಗಾಗಿದ್ದಾರೆಂಬ ವಿಚಾರ ಹೊರ ಬಿದ್ದಿದೆ.
[ಶ್ರೀನಿಧಿ ಹ೦ದೆಯವರು ನಮ್ಮ ಪತ್ರಿಕೆಯ ತನಿಖಾ ವರದಿಗಾರರು ಮಾತ್ರವಲ್ಲದೆ, ವಾಹನ-ಮನರಂಜನಾ ವಿಜ್ಞಾನದಲ್ಲಿ ಅಪಾರ ಪರಿಣಿತಿಯನ್ನೂ ಪಡೆದಿದ್ದಾರೆ. ಇವರ ಹಲವಾರು ಲೇಖನಗಳು ಮತ್ತು ಛಾಯಾಚಿತ್ರಗಳು "ಇ-ನಿಧಿ ಸ್ಪೀಕ್ಸ್" ಅಂತರ್ಜಾಲ ತಾಣದಲ್ಲಿ ಲಭ್ಯವಿದೆ. ಚಿತ್ರಗಳ ಆಧಾರ ಸಹಿತ ಹಾರ್ಡ್ ಹಿಟ್ಟಿಂಗ್ ತನಿಖಾ ವರದಿ ನೀಡಿರುವ ಶ್ರೀ ಹಂದೆಯವರಿಗೆ ನಮ್ಮ ಕೃತಜ್ಞತೆಗಳು.]

Labels: ,

Wednesday, March 12, 2008

ಮಜಾವಾಣಿ: ರಾಜಕೀಯ ಸುದ್ದಿ

"ಯಡ್ಡಿಯಿಂದ ಅಂತಹ ತೊಂದರೆ ಏನೂ ಇಲ್ಲ" - ವಿ.ಸೌ. ನೌಕರ

ಬೆಂಗಳೂರು, ಮಾರ್ಚ್ ೨೧: ಮಾಜಿ ಮುಖ್ಯ ಮಂತ್ರಿ ಯೆಡ್ಯೂರಪ್ಪನವರಿಂದ ತಮಗೆ ಅಂತಹ ತೊಂದರೆ ಏನೂ ಆಗುತ್ತಿಲ್ಲವೆಂದು ವಿಧಾನ ಸೌಧ ನೌಕರರು ಹೇಳಿದ್ದಾರೆ.

ಮುಖ್ಯ ಮಂತ್ರಿ ಪದವಿಗೆ ರಾಜಿನಾಮೆ ನೀಡಿದ ನಂತರವೂ ಯೆಡ್ಯೂರಪ್ಪನವರು ವಿಧಾನ ಸೌಧದಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ಕಛೇರಿಗೆ ಪ್ರತಿದಿನ ಭೇಟಿ ನೀಡುತ್ತಿರುವುದು ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಪಕ್ಷಗಳ ನೇತಾರರ ಕೆಂಗಣ್ಣಿಗೆ ಕಾರಣವಾಗಿರುವುದು ನಿಜವಾದರೂ, ಕಛೇರಿಯಲ್ಲಿ ಕೆಲಸ ಮಾಡುವವರಿಗಂತೂ ಯಾವುದೇ ರೀತಿಯ ಅಭ್ಯಂತರವಿದ್ದಂತಿಲ್ಲ.

ಈ ವಿಚಾರದ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಮುಖ್ಯ ಗುಮಾಸ್ತೆ ಪರಮೇಶಪ್ಪ, ಯೆಡ್ಯೂರಪ್ಪನವರು ರಾಜೀನಾಮೆ ನೀಡಿದ ನಂತರವೂ ಕಛೇರಿಗೆ ಬರುತ್ತಿರುವುದರಿಂದ ಮೊದ ಮೊದಲು ತಮಗೆ ಕಸಿವಿಸಿಯಾಯಿತೆಂದು ಒಪ್ಪಿಕೊಂಡರಾದರೂ, ಅದರಿಂದ ತಮ್ಮ ಕೆಲಸ ಕಾರ್ಯಗಳಿಗೆ ಅಡಚಣೆ ಏನೂ ಆಗಿಲ್ಲ ಎಂದರು.

"ರಾಜೀನಾಮೆ ನೀಡಿದ ಮಾರನೆ ದಿನ ಅವರು ಕಛೇರಿಗೆ ಬಂದಾಗ, ಕನ್ನಡಕನೋ, ಕರ್ಚೀಫೋ ಮರೆತಿರಬಹುದು ಅದಕ್ಕೇ ಬಂದಿದ್ದಾರೆ ಅಂದು ಕೊಂಡೆ, ಆದರೆ ಅದರ ನೆಕ್ಸ್ಟ್ ಡೇ ಕೂಡಾ ಬಂದರು. ಅದರ ನೆಕ್ಸ್ಟ್ ಡೇ.. ಅದರ ನೆಕ್ಸ್ಟ್ ಡೇ.. ಹೀಗೆ ಪ್ರತಿ ದಿನ ತಪ್ಪದೇ ಬರ್ತಾ ಇದ್ದಾರೆ. ಮೊದ ಮೊದಲು ಕೊಂಚ ಕಸಿವಿಸಿ ಆಯ್ತು. ಆದರೆ, ಈಗ ಪೂರ್ತಿ ಅಭ್ಯಾಸ ಆಗಿ ಬಿಟ್ಟಿದೆ. ಪಾಪ, ಅವರು ಯಾರಿಗೂ ಏನೂ ತೊಂದರೆ ಕೊಡಲ್ಲ. ಅವರ ಪಾಡಿಗೆ ಅವರು ಬರ್ತಾರೆ, ಪ್ರತಿ ದಿನ ಸಿ.ಎಂ. ಚೇರ್ ಧೂಳು ಹೊಡೆದು, ಒರೆಸಿ, ಅದನ್ನು ಸವರುತ್ತಾ ನಿಲ್ಲುತ್ತಾರೆ" ಎಂದು ಪರಮೇಶಪ್ಪ ನುಡಿದರೆ, ಅದಕ್ಕೆ ದನಿಗೂಡಿಸಿದ ಅಟೆಂಡರ್ ರಾಮಣ್ಣ "'ಸಾರ್, ಚೇರ್‌ನ ನಾನು ಕ್ಲೀನ್ ಮಾಡ್ತೀನಿ ಬಿಡಿ. ನೀವು ಮನೆಗೆ ಹೋಗಿ ಆರಾಮ್ ತೊಗೊಳ್ಳಿ' ಅಂದೆ, ಆದ್ರೆ, ಆ ಸೀಟಿಗಾಗಿ ನೊಂದ ಜೀವ, ಪಾಪ, ಎಲ್ಲಿ ಕೇಳುತ್ತೆ? ಅವ್ರೇ ಒರೆಸಿ, ಕ್ಲೀನ್ ಮಾಡಿದ್ರೇನೇ ತೃಪ್ತಿ. ಒಂದು ಸಲ ಫೈಲುಗಳನ್ನು ಜೋಡಿಸಿಕೊಂಡು ಹೋಗ್ತಾ ಇರುವಾಗ ಅಡ್ಡ ಬಂದರು. ಫೈಲುಗಳೆಲ್ಲಾ ನೆಲಕ್ಕೆ ಬಿದ್ದವು. 'ಸಾರ್, ಸ್ವಲ್ಪ ಸೈಡ್‌ಗೆ ಹೋಗ್ತೀರಾ' ಅಂದೆ, ಅವತ್ತಿಂದ ಸೈಡಲ್ಲೇ ನಿಂತುಕೊಂಡು ಅವರ ಕೆಲಸ ಮಾಡಿಕೊಳ್ಳುತ್ತಾರೆ." ಎನ್ನುತ್ತಾರೆ.

(ಚಿತ್ರ ಕೃಪೆ: ಚುರುಮುರಿ)

Labels:

Tuesday, March 11, 2008

ಮಜಾವಾಣಿ: ಪಾಶವೀ ಪ್ರೇಮ

"ಎಂಜಲೆಲೆಯಲ್ಲಿ ಆರೋಗ್ಯಕರ ಆಹಾರ ಇರಲಿ" - ಮನೇಕಾ
ನವದೆಹಲಿ, ಮಾರ್ಚ್ ೧೭: ಊಟದ ನಂತರ ಎಂಜಲೆಲೆಗಳ ಜೊತೆಗೆ ಕೊಬ್ಬಿನಂಶ ತುಂಬಿದ ಆನಾರೋಗ್ಯಕರ ಆಹಾರ ಪದಾರ್ಥಗಳನ್ನೂ ಜನರು ಬೀದಿಗೆ ಬಿಸಾಡುತ್ತಿರುವ ಬಗೆಗೆ ಮಾಜಿ ಸಚಿವೆ ಮನೇಕಾ ಗಾಂಧಿ ಕಳವಳ ವ್ಯಕ್ತ ಪಡಿಸಿದ್ದಾರೆ.

ನವದೆಹಲಿಯಲ್ಲಿ ಏರ್ಪಡಿಸಿದ್ದ "ಪ್ರಾಣಿಗಳು ಮತ್ತು ಸಂವಿಧಾನ" ಜಾಗತಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, "ಕೊಬ್ಬು ಮತ್ತು ಸಿಹಿಯ ಪದಾರ್ಥಗಳನ್ನು ತಿನ್ನ ಬೇಕೆಂದಿದ್ದರೆ, ಅದು ನಿಮ್ಮಿಷ್ಟ. ಆದರೆ, ಅವುಗಳನ್ನು ಎಂಜಲೆಲೆಯ ಜೊತೆಗೆ ಬೀದಿಗೆ ಬಿಸಾಡಿದಾಗ ಬೀದಿ ನಾಯಿಗಳ ಆರೋಗ್ಯ ಹದಗೆಡುವುದರಲ್ಲಿ ಸಂದೇಹವೇ ಇಲ್ಲ. ಇತ್ತೀಚೆಗೆ ನಡೆದ ಒಂದು ಸಮೀಕ್ಷೆಯ ಪ್ರಕಾರ, ಬೀದಿ ನಾಯಿಗಳ ತೂಕ ಹೆಚ್ಚಾಗುತ್ತಿದ್ದು, ಅವು ರಕ್ತದೊತ್ತಡ ಮತ್ತು ಡಯಾಬಿಟಿಸ್ ನಂತಹ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಜಿಲೇಬಿ, ಜಾಮೂನ್, ಬೋಂಡಾ ಬೇಕಿದ್ದರೆ ನೀವು ತಿನ್ನಿ, ಆದರೆ ಎಂಜಲೆಲೆಯಲ್ಲಿ ಮಾತ್ರ ಕೊಬ್ಬಿನ ಅಂಶ ಕಡಿಮೆ ಇರುವ, ಫೈಬರ್ ಹೆಚ್ಚಿರುವ ತಾಜಾ ಆಹಾರ ಪದಾರ್ಥಗಳನ್ನೇ ಬಿಸಾಡಿ" ಎಂದು ಕರೆಯಿತ್ತರು.
(ಪಿ.ಟಿ.ಹೈ.) (ಚಿತ್ರ ಕೃಪೆ: ಟ್ರಿಬ್ಯೂನ್)

Labels:

Monday, December 10, 2007

ಮಜಾವಾಣಿ: ರಾಜಕೀಯ ಸುದ್ದಿ

"ರಾಜ್ಯದ ಹಿತ ರಕ್ಷಣೆಗಾಗಿ ಮತ್ತೆ ಮತ್ತೆ ಮೋಸಹೋಗಲು ಸಿದ್ಧ" - ಯಡ್ಡಿ

ಶಿರಾಳ ಕೊಪ್ಪ, ಡಿಸೆಂಬರ್ ೧: ರಾಜ್ಯದ ಜನರ ಹಿತಾಸಕ್ತಿಗಾಗಿ ತಾವು ಮತ್ತೆ ಮತ್ತೆ ಮೋಸಹೋಗಲು ಸಿದ್ಧವಿರುವುದಾಗಿ ಮಾಜಿ ಮುಖ್ಯಮಂತ್ರಿ ಯೆಡ್ಯೂರಪ್ಪ ಘೋಷಿಸಿದ್ದಾರೆ.

ನಗರದ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, "ಮೋಸ ಹೋಗುವುದು ನನಗೆ ಹೊಸದೇನೂ ಅಲ್ಲ. ಚಿಕ್ಕಂದಿನಿಂದ ಅದರ ಅನುಭವವಿದೆ. ಶಾಲೆಯಲ್ಲಿದ್ದಾಗ, ಪೆಪ್ಪರ್ ಮಿಂಟ್ ಆಸೆ ತೋರಿಸಿ ನನ್ನಿಂದ ಎಷ್ಟೋ ಜನ ಬಳಪ, ಪೆನ್ಸಿಲ್ ತೆಗೆದುಕೊಳ್ಳುತ್ತಿದ್ದರು. ಅದೂ ಒಂದಲ್ಲ, ಹತ್ತಾರು ಸಾರಿ. ಈಗ ರಾಜ್ಯದ ಜನರ ಹಿತ ರಕ್ಷಣೆಗಾಗಿ ಮುಖ್ಯಮಂತ್ರಿಯ ಪದವಿಯ ಆಸೆ ತೋರಿಸಿದಲ್ಲಿ ಎಂತಹ ಮೋಸ, ವಿಶ್ವಾಸ ದ್ರೋಹಕ್ಕೆ ಒಳಗಾಗಲೂ ನಾನು ಸಿದ್ಧ" ಎಂದರು.

ವಿಧಾನ ಸಭಾ ಚುನಾವಣೆಯ ನಂತರ ಅಗತ್ಯವಾದಲ್ಲಿ ಮತ್ತೊಮ್ಮೆ ವಿಶ್ವಾಸ ದ್ರೋಹಕ್ಕೆ ಒಳಗಾಗಲು ಬಿ.ಜೆ.ಪಿ. ಪೂರ್ಣ ಸಿದ್ಧತೆಯನ್ನು ನಡೆಸಿದೆ ಎನ್ನಲಾಗಿದ್ದು, ಅದರಿಂದ ದೊರಕಬಹುದಾದ ಅನುಕಂಪದ ಅಲೆಯ ನಿರೀಕ್ಷೆಯಲ್ಲಿದೆ ಎನ್ನಲಾಗಿದೆ.
(ಮಜಾವಾಣಿ ಬ್ಯೂರೋ ವರದಿ)

Labels:

Monday, November 26, 2007

ಮಜಾವಾಣಿ: ಕ್ರೀಡಾ ಪುಟ

"ನನ್ನ ಬಲಗೈ ಬಗೆಗೆ ನನಗೆ ಬೇಸರವಿಲ್ಲ" - ಯುವಿ

ಜಲಂಧರ್, ನವೆಂಬರ್ ೩೧: ಖ್ಯಾತ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಅವರು ತಮ್ಮ ಬಲಗೈ ಬಗೆಗೆ ತಾವು ಯಾವುದೇ ಮಲತಾಯಿ ಧೋರಣೆ ತೋರಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ತಮ್ಮ ಎಡಗೈ ಬ್ಯಾಟಿಂಗ್ ಮತ್ತು ಬೌಲಿಂಗಿನಿಂದ ಕ್ರಿಕೆಟ್ ರಂಗದಲ್ಲಿ ಮಹತ್ತರ ಯಶಸ್ಸನ್ನು ಪಡೆದಿರುವ ಯುವರಾಜ್ ಸಿಂಗ್, ಜಲಂಧರದಲ್ಲಿ ನಡೆಯುತ್ತಿರುವ ಕ್ರೀಡಾ ವರದಿಗಾರರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅನಂತರ ನಡೆದ ಸುದ್ದಿಗೋಷ್ಠಿಯಲ್ಲಿ, ನಮ್ಮ ಪತ್ರಿಕೆಯ ವರದಿಗಾರರ "ನಿಮ್ಮ ಬಲಗೈ ಬಗೆಗೆ ಬೇಸರವಿದೆಯೇ?" ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕ್ರಿಕೆಟ್ಟಿನಲ್ಲಿ ತಾವು ಕಂಡಿರುವ ಯಶಸ್ಸಿಗೆ ತಮ್ಮ ಎಡಗೈ ಸಾಧನೆಯೇ ಮುಖ್ಯ ಕಾರಣ ಎಂಬುದನ್ನು ಒಪ್ಪಿಕೊಂಡರಾದರೂ, "ನನ್ನ ಬಲಗೈ ಬಗೆಗೆ ನನಗೆ ಯಾವುದೇ ಬೇಸರವಿಲ್ಲ. ನಾನು ಎಡಗೈ ಆಟಗಾರ ನಿಜ. ಆದರೆ, ನನ್ನ ಬಲಗೈ ಬಗೆಗೆ ನನಗೆ ಅಭಿಮಾನವಿಲ್ಲದಿಲ್ಲ" ಎಂದರು.
(ಚಿತ್ರ ಕೃಪೆ: ಹಿಂದು)

Labels:

Friday, November 23, 2007

ಮಜಾವಾಣಿ: ತನಿಖಾ ವರದಿ

ಮಾಟ-ಮಂತ್ರ: ಯಡ್ಡಿ ಆರೋಪ ಸಾಬೀತು!

ಬೆಂಗಳೂರು, ನವೆಂಬರ್ ೩೧: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಗೌಡರ ಕುಟುಂಬದ ವಿರುದ್ಧ ಮಾಡಿದ ಆರೋಪ ಮಜಾವಾಣಿ ತನಿಖೆಯಿಂದ ಸಾಬೀತಾಗಿದೆ.

ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದ ನಂತರ ಯಡಿಯೂರಪ್ಪನವರು, ದೇವೇಗೌಡರ ಕುಟುಂಬ ತಮ್ಮನ್ನು "ಮುಗಿಸಲು" ಮಾಟ-ಮಂತ್ರವನ್ನು ಪ್ರಯೋಗಿಸುತ್ತಿದ್ದಾರೆಂದು ಆರೋಪಿಸಿದ್ದರು. ಈ ಆರೋಪ ವಿಚಾರವಾದಿಗಳ, ವಿಜ್ಞಾನಿಗಳ ಕುಹಕಕ್ಕೆ ಕಾರಣವಾಗಿತ್ತು.

ಆದರೆ, ಮಜಾವಾಣಿ ಪತ್ರಿಕೆ ನಡೆಸಿದ ಕೂಲಂಕುಶ ತನಿಖೆಯಿಂದ, ಯಡಿಯೂರಪ್ಪನವರ ಆರೋಪ ಯಾವುದೇ ಅನುಮಾನವಿಲ್ಲದೆ ಸಾಬೀತಾಗಿದ್ದು, ಗೌಡರ ಮಾಟಕ್ಕೆ ಯಡಿಯೂರಪ್ಪನವರ ಮೀಸೆ ಪ್ರಪ್ರಥಮ ಗುರಿಯಾಗಿರುವುದು ಹೊರ ಬಿದ್ದಿದೆ.


ಇತ್ತೀಚೆಗೆ ಯಡಿಯೂರಪ್ಪನವರ ಮೀಸೆ ಸುದ್ದಿ ಮಾಧ್ಯಮಗಳ ಚಿತ್ರಗಳಲ್ಲಿ ಇದ್ದಕ್ಕಿದ್ದಂತೆ ಅರೆ(!) ಮಾಯವಾಗುತ್ತಿದ್ದು, ಹಲವಾರು ಊಹಾಪೋಹಗಳಿಗೆ ಕಾರಣವಾಗಿತ್ತು. ಕೆಲವರು "ಯಡಿಯೂರಪ್ಪನವರ ಮೀಸೆ ಮೀಡಿಯಾ ಷೈ" ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು.

ಆದರೆ, ಗೌಡರು ತಮ್ಮ ಖಾಸಗಿ ಮಲಯಾಳಿ ಮಾಂತ್ರಿಕನಿಗೆ ಯಡಿಯೂರಪ್ಪನವರ ಮೀಸೆ ಮುಗಿಸುವಂತೆ ಸೂಚಿಸುತ್ತಿರುವ ಚಿತ್ರ ನಮ್ಮ ಪತ್ರಿಕೆಗೆ ದೊರೆತಿದ್ದು, ಇದರಿಂದ ಎಲ್ಲಾ ಊಹಾಪೋಹಗಳಿಗೆ ಮತ್ತು ವಿಚಾರವಾದಿಗಳ ಕುಹಕಕ್ಕೆ ತೆರೆ ಬೀಳುವಂತಾಗಿದೆ.

(ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್, ಹಿಂದೂ, ಕನ್ನಡ ಪ್ರಭ ಮತ್ತು ಟ್ರಿಬ್ಯೂನ್)

Labels: ,

Wednesday, November 21, 2007

ಮಜಾವಾಣಿ: ಸಂಪಾದಕೀಯ

"ಇಂಡಿಯನ್ಸ್ ನಂ. ೧" ಎನ್ನುವುದು ಶಿಕ್ಷಾರ್ಹ ಅಪರಾಧವೇ?!
ಅರೆ ನಗ್ನ ಸಲ್ಮಾನ್ ಖಾನ್ ಕುಣಿದು ಕುಪ್ಪಳಿಸುತ್ತಾ "ಈಸ್ಟ್ ಆರ್ ವೆಸ್ಟ್, ಇಂಡಿಯಾ ಈಸ್ ದ ಬೆಸ್ಟ್" ಎಂದರೆ ತಪ್ಪಲ್ಲ; ತಪ್ಪಲ್ಲ ಮಾತ್ರವಲ್ಲಾ, ಅದು ಹೆಚ್ಚುಗಾರಿಕೆ; ಹಣದ ಹೊಳೆಯೇ ಹರಿಸುವ ಹೆಚ್ಚುಗಾರಿಕೆ. ಆದರೆ, ಹೈಸ್ಕೂಲಿನ ಹುಡುಗಿಯರು "Indians No. 1" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ಮಾತ್ರ ಶಿಕ್ಷಾರ್ಹ ಅಪರಾಧ!

ಆರು ಮಂದಿ ಹೈಸ್ಕೂಲು ಹುಡುಗಿಯರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಫಲದ ಬೆಲೆಯನ್ನು ಕಂಡುಕೊಳ್ಳುತ್ತಿದ್ದಾರೆ. ಅವರನ್ನು ಸ್ಕೂಲಿನಿಂದ ಹೊರಗಿಡಲಾಗಿದೆ. ಶಾಲೆಯ ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಿಂದ ಅವರನ್ನು ದೂರವಿಡಲಾಗಿದೆ. ಇದರಿಂದ ಅವರ ಅಂತಿಮ ಅಂಕಿಪಟ್ಟಿಯ ಮೇಲೆ ಪ್ರತಿಕೂಲ ಪರಿಣಾಮವಾಗುವ ಸಾಧ್ಯತೆ ಸಹ ಇದೆ. ಇಷ್ಟೆಲ್ಲಾ ಶಿಕ್ಷೆಗೆ ಕಾರಣ: ಇಂಡಿಯನ್ಸ್ ಅದ್ವಿತೀಯರೆಂದು ಬಿಡಿ ಬಿಡಿಸಿ ಪ್ರಕಟಿಸಿದ್ದು!

ಇದೆಂತಹ ಹುಚ್ಚುತನ ಎಂದು ನಿಮಗನಿಸಿದರೆ, ಅದು ನಿಮ್ಮೊಬ್ಬರ ಅನಿಸಿಕೆಯಲ್ಲ. ಆ ಆರು ಹುಡುಗಿಯರಲ್ಲಿ ಒಬ್ಬಳು ಕೆಚ್ಚೆದೆಯಿಂದ ಸಾರಿದ್ದನ್ನು, ನೀವು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದೀರಿ, ಅಷ್ಟೇ. ಅಷ್ಟೆಲ್ಲಾ ಶಿಕ್ಷೆಗೊಳಗಾದರೂ, ಎದೆಗುಂದದ ಈ ಧೀಮಂತ ಹುಡುಗಿ ಯಾವುದೇ ಮುಲಾಜಿಲ್ಲದೆ ನುಡಿಯುತ್ತಾಳೆ: ಇದು "ridiculous".

"ಇಂಡಿಯನ್ಸ್ ನಂ ೧" ಎಂಬ ಜನಜನಿತವಾದ ಸತ್ಯವನ್ನು ಬಿಡಿಬಿಡಿಸಿ ಪ್ರಕಟಿಸುವುದು ತಪ್ಪೆನ್ನುವ ಅಧಿಕಾರಶಾಹಿಯ ದಬ್ಬಾಳಿಕೆಯನ್ನು ಧೀರ ಬಾಲಕಿಯೊಬ್ಬಳು ದಿಟ್ಟತನದಿಂದ "ರಿಡಿಕ್ಯುಲಸ್" ಎನ್ನುತ್ತಿದ್ದರೆ, ಆ ಬಾಲಕಿಯರ ತಂದೆ ತಾಯಿಯರು ಮಾತ್ರ ತುಟಿ-ಪಿಟಿಕ್ ಎನ್ನುತ್ತಿಲ್ಲ. ಈ ಪ್ರಸಂಗದ ಕುರಿತು ಪ್ರಕಟವಾಗಿರುವ ವರದಿಯೊಂದನ್ನು ಓದಿದರೆ, ಆ ಧೀರ ಬಾಲಕಿಯ ತಂದೆಯನ್ನು ಬಿಟ್ಟರೆ, ಇತರ ಪೋಷಕರಾರೂ ಮಾತನಾಡಿದಂತಿಲ್ಲ. ಆ ಬಾಲಕಿಯ ತಂದೆ ಸಹ, ಅಧಿಕಾರಶಾಹಿಯ ವರ್ತನೆಯನ್ನು "ಹುಚ್ಚುತನ" ಎನ್ನುವುದಿಲ್ಲ, ಬದಲಿಗೆ, ಶಿಕ್ಷೆಯನ್ನು "ಅನ್ಯಾಯ" ಎಂದಷ್ಟೇ ಹೇಳುತ್ತಾರೆ. ಅದಕ್ಕಿಂತ ಮುಖ್ಯವಾಗಿ, ಅವರಿಗೆ ಬೇಕಿರುವುದು ತಮ್ಮ ಪ್ರಶ್ನೆಗೆ ಉತ್ತರವಷ್ಟೇ. ಪ್ರಶ್ನೆಯಾದರೂ ಏನು? "ಶಾಲಾಧಿಕಾರಿಗಳು ಈ ಬಾಲಕಿಯರನ್ನು ಶಾಲಾ ಶಿಕ್ಷಣದಿಂದ ದೂರವಿರಿಸಿರುವುದು ಏಕೆ?"

ಭಾರತೀಯ ಮಾಧ್ಯಮ ಮತ್ತು ಸರ್ಕಾರದ ನಿರ್ಲಕ್ಷ್ಯ

ನಿಮ್ಮ ಪ್ರಕಾರ ಅಧಿಕಾರಶಾಹಿಯ ಈ ದುರ್ವರ್ತನೆ "ಹುಚ್ಚುತನ". ಆ ಧೀರ ಬಾಲಕಿಯ ಪ್ರಕಾರ ಅದು "ರಿಡಿಕ್ಯುಲಸ್". ಆಕೆಯ ತಂದೆಯ ಪ್ರಕಾರ, "ಅನ್ಯಾಯ". ಅದೂ ಅಲ್ಲದೇ, ಸರ್ವರನ್ನೂ ಕಾಡುತ್ತಿರುವ ಪ್ರಶ್ನೆ ಬೇರೇ. ಇಂತಹ ಪರಿಸ್ಥಿತಿಯಲ್ಲಿ, ಭಾರತೀಯ ಸುದ್ದಿ ಮಾಧ್ಯಮಗಳಾಗಲೀ, ಸರ್ಕಾರವಾಗಲೀ ಈ ಬಾಲಕಿಯರ ದಾರುಣ ಪರಿಸ್ಥಿತಿಯ ಬಗೆಗೆ ಕೊಂಚವಾದರೂ ಕಾಳಜಿ ತೋರಿಸಿಲ್ಲ. ಭಾರತೀಯರ ಅದ್ವಿತೀಯ ಸಾಧನೆಗಳ ಬಗೆಗೆ, ರಾಷ್ಟ್ರಾಭಿಮಾನದ ಬಗೆಗೆ ರೀಮುಗಟ್ಟಲೆ ಬರೆಯುವ ಪತ್ರಿಕೆಗಳು, "ಇಂಡಿಯನ್ಸ್ ನಂ. ೧" ಎಂದು ಸಂಕೋಚವಿಲ್ಲದೇ ಸಾರಿದ ಈ ಸಾಹಸಿ ಬಾಲಕಿಯರ ಪರವಾಗಿ ಒಂದಾದರೂ ಸಂಪಾದಕೀಯವನ್ನು ಬರೆದಿಲ್ಲ, ಅಧಿಕಾರಶಾಹಿಯ ದೌರ್ಜನ್ಯವನ್ನು ಖಂಡಿಸುವ ಒಂದಾದರೂ ಕಾಲಂ ಪ್ರಕಟಿಸಿಲ್ಲ. ಇಂತಹ ನರರಹಿತ ನಿರಭಿಮಾನಿ ಪತ್ರಿಕೆಗಳಿಗೆ ಧಿಕ್ಕಾರವಿರಲಿ.

ಭಾರತೀಯ ಸುದ್ದಿ ಮಾಧ್ಯಮಗಳು, ಈ ಪ್ರಸಂಗದ ಕುರಿತು ದಿವ್ಯ ನಿರ್ಲಕ್ಷ್ಯ ತೋರಿದರೆ, ನಮ್ಮ ಘನ ಸರ್ಕಾರಕ್ಕೆ ಈ ಪ್ರಸಂಗದ ಕುರಿತು ಅರಿವು ಸಹ ಇದ್ದಂತಿಲ್ಲ. ಈ ದಾರುಣ ಪ್ರಸಂಗದ ಕುರಿತು ಸರ್ಕಾರದ ಅಭಿಪ್ರಾಯವನ್ನು ತಿಳಿಯಲು ನಮ್ಮ ಪತ್ರಿಕೆಯ ಕಾರ್ಯಾಲಯದ ಹತ್ತಿರವಿರುವ ಸರ್ಕಾರಿ ಪ್ರತಿನಿಧಿಗಳೇ ಆದ, ಪಶುವೈದ್ಯ್ಕಕೀಯ ಅಧಿಕಾರಿಗಳನ್ನು ಸಂದರ್ಶಿಸಿದಾಗ ದೊರೆತಿದ್ದು: ತಬ್ಬಿಬ್ಬು ಮತ್ತು "ಇದು ನಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ. ಜೊತೆಗೆ, ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಷಯ, ನಮ್ಮದು ರಾಜ್ಯ ಸರ್ಕಾರದ ಇಲಾಖೆ" ಎನ್ನುವ ಹಾರಿಕೆಯ ಉತ್ತರ.

ರಾಷ್ಟ್ರಪ್ರೇಮದ ಕುರಿತು ಉದ್ದುದ್ದದ ಭಾಷಣಗಳನ್ನು ಬಿಗಿಯುವ ನಮ್ಮ ರಾಜಕಾರಣಿಗಳು, ಯಾವುದೇ ನಾಚಿಕೆ-ಸಂಕೋಚಗಳಿಲ್ಲದೆ, "Indians No. 1" ಎಂದು ಪ್ರಚುರ ಪಡಿಸಿ ಶಿಕ್ಷೆಗೊಳಗಾಗಿರುವ ಈ ಬಾಲಕಿಯರ ದಾರುಣ ಕಥಾನಕವನ್ನು ಇನ್ನಾದರೂ ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸುವರೇ?

Labels: ,

Monday, November 05, 2007

ಮಜವಾಣಿ ಅತಿಥಿಗಳ ಸಂಪಾದನೆ: ಕರಾವಳಿ ಸುದ್ದಿ

ಬಸ್ ಸಂಚಾರ ಕ್ಷೇತ್ರದಲ್ಲಿ ಮಹಾನ್ ಕ್ರಾಂತಿ!
ಮಜಾವಾಣಿ ವರದಿಯ ಅಭೂತಪೂರ್ವ ಫಲಶೃತಿ!!

ಶ್ರೀನಿಧಿ ಹಂದೆ

ಕರಾವಳಿ, ನವೆಂಬರ್ ೧: ಮಜವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಪ್ರಚಂಡ ವರದಿಯ ಪರಿಣಾಮವಾಗಿ ಕರಾವಾಳಿ ಪ್ರದೇಶದಲ್ಲಿನ ಬಸ್ ಸಂಚಾರ ವ್ಯವಸ್ಥೆಯಲ್ಲಿ ಮಹಾನ್ ಕ್ರಾಂತಿ ಉಂಟಾಗಿರುವ ಅಭೂತಪೂರ್ವ ವರದಿ ಇಂದು ವರದಿಯಾಗಿದೆ.

ನಮ್ಮ ಪತ್ರಿಕೆಯ ಕರಾವಳಿ ವರದಿಗಾರ ಮತ್ತು ಬಸ್ ಪ್ರಯಾಣ ತಜ್ಞ ಶ್ರೀನಿಧಿ ಹಂದೆಯವರು ವಾಮ ಪಂಥೀಯ ಪ್ರಯಾಣಿಕರ ಬಗೆಗೆ ಬಲ ಪಂಥೀಯ ಬಸ್ ಮಾಲೀಕರು ತೋರುತ್ತಿದ್ದ ಅನಾದರ ಮತ್ತು ಮಲತಾಯಿ ಧೋರಣೆಯನ್ನು ತಮ್ಮ ತನಿಖಾ ವರದಿಯಲ್ಲಿ ಚಿತ್ರ ಸಹಿತವಾಗಿ ಬಯಲಿಗೆಳೆದಿದ್ದರು. ಆ ವರದಿಯ ಫಲಶೃತಿಯ ಪರಿಣಾಮವಾಗಿ, ಕೆಲವೇ ತಿಂಗಳ ಹಿಂದೆ ಕೇವಲ ಕೋಮುವಾದಿ, ಬಂಡವಾಳಶಾಹಿ, ವಸಾಹತುಶಾಹಿ ಬಲಪಂಥೀಯ ಪ್ರಯಾಣಿಕರಿಗೆ ಮಾತ್ರ ಲಭ್ಯವಿದ್ದ ಸೌಲಭ್ಯ ಇಂದು ಬಸ್ಸಿನಲ್ಲಿ ಎಡ ಪಕ್ಕದಲ್ಲಿ ಕೂರುವ ಅಹಿಂಸಾವಾದಿ, ಬಡ ಬುದ್ಧಿಜೀವಿ ವರ್ಗಗಳಿಗೂ ಲಭ್ಯವಾಗಿದೆ. ಬಸ್ ಪ್ರಯಾಣದಂತಹ ದ್ವಿಪಂಥೀಯ ವ್ಯವಸ್ಥೆಯಲ್ಲಿಯೂ ಒಂದು ವರ್ಗದ ಪ್ರಯಾಣಿಕರ ಆಸೆ, ಆಕಾಂಕ್ಷೆಗಳಿಗೆ ತಣ್ಣೀರೆರೆಯುತ್ತಿದ್ದ ಬಂಡವಾಳಶಾಹಿ ಬಸ್ ಮಾಲೀಕರ ಬಲಪಂಥೀಯ ಹುನ್ನಾರವನ್ನು ಬಯಲಿಗೆಳೆದ ಹಂದೆಯವರ ಲೇಖನವನ್ನು ಪ್ರಕಟಿಸುವ ಮೂಲಕ ಮಜಾವಾಣಿ ಪತ್ರಿಕೋದ್ಯಮದ ಪಾವಿತ್ರ್ಯತೆಯನ್ನು ನಿರ್ಭೀತವಾಗಿ ಎತ್ತಿಹಿಡಿದಿದೆ; ಬಸ್ ಮಾಲಿಕರ ಒಡೆತನದಲ್ಲಿ ನಡೆಯುತ್ತಿದ್ದ ಯಾವುದೇ ಪತ್ರಿಕೆಯೂ ಮಾಡದ ಸಾಧನೆಯನ್ನು ಮಾಡಿದೆ.

ಕೇವಲ ಕೆಲವೇ ತಿಂಗಳ ಹಿಂದೆ, ಕರಾವಳಿಯಲ್ಲಿ ಸಂಚರಿಸುತ್ತಿದ್ದ ಬಸ್ಸುಗಳಲ್ಲಿ, ಒಂದು ಮಾತ್ರ ಟಿ.ವಿ. ಇರುತ್ತಿದ್ದು ಬಸ್ಸಿನ ಎಡಭಾಗದಲ್ಲಿ ಕೂರುವ ಪ್ರಯಾಣಿಕರು ನೋಡಲಾಗದ ಯಾತನೆಯನ್ನು ಅನುಭವಿಸುತ್ತಿದ್ದರು. ಈ ಬಲಪಂಥೀಯ ವ್ಯವಸ್ಥೆಯ ಕೊರತೆಯನ್ನು ಸಚಿತ್ರವಾಗಿ ಹೊರಗೆಡವಿದ್ದ ಮಜಾವಾಣಿ ಲೇಖನದಲ್ಲಿ, ಸ್ಟ್ಯಾಂಡಿಂಗ್ ಸೀಟುಗಳಿದ್ದಾಗ ಎಡಭಾಗದ ಪ್ರಯಾಣಿಕರು ಅನುಭಸುತ್ತಿದ್ದ ದಯನೀಯ ಸ್ಥಿತಿಯನ್ನು ವಿಷದವಾಗಿ ವಿವರಿಸಲಾಗಿದ್ದು, ಬಸ್ಸಿನ "ಎಡಭಾಗದಲ್ಲೂ ಟಿ.ವಿ.ಯನ್ನು ಅಳವಡಿಸಬೇಕು" ಎಂದು ಆಗ್ರಹಿಸಲಾಗಿತ್ತು.

ಆ ವರದಿಯ ಪರಿಣಾಮವಾಗಿ, ಇಂದು ಕರಾವಳಿಯಲ್ಲಿ ಸಂಚರಿಸುವ ಹಲವಾರು ಬಸ್ಸುಗಳಲ್ಲಿ ಎರಡೆರಡು ಟಿ.ವಿ.ಗಳನ್ನು ಅಳವಡಿಸಲಾಗಿದೆ ಎನ್ನಲಾಗಿದೆ.

ಕೆಲಸ ಮಾಡದ ಮೂರ್ಖರ ಪೆಟ್ಟಿಗೆಗಳು: ಎರಡೆರಡು ಟಿ.ವಿ.ಗಳನ್ನು ಅಳವಡಿಸಿದ್ದರೂ, ಅವು ಕೆಲವೊಮ್ಮೆ ಕೆಲಸ ಮಾಡದಿರುವುದು ನಮ್ಮ ವರದಿಗಾರರ ಗಮನಕ್ಕೆ ಬಂದಿದ್ದು, "ಮಜಾವಾಣಿ ವರದಿಯಲ್ಲಿ ಎರಡೆರಡು ಟಿ.ವಿ. ಅಳವಡಿಸಬೇಕೆಂದಿತ್ತೇ ಹೊರತು, ಅವು ಕೆಲಸ ಮಾಡಬೇಕು ಎಂದೇನೂ ಇರಲಿಲ್ಲ" ಎಂದು ಬಸ್ ಮಾಲೀಕರು ಆರ್.ಟಿ.ಓ. ಅಧಿಕಾರಿಗಳಿಗೆ ಬರೆದಿರುವ ಗುಪ್ತ ಪತ್ರದಲ್ಲಿ ತಮ್ಮ ಧೋರಣೆಯನ್ನು ಬಹಿರಂಗ ಪಡಿಸಿರುವ ವಿಷಯವೂ ಸಹ ಬೆಳಕಿಗೆ ಬಂದಿದೆ.

ಚಾಲಕರ ಅಸಮಾಧಾನ: ಈ ಮಧ್ಯೆ, ಬಸ್ ಚಾಲಕರು ಟಿ.ವಿ. ಇಟ್ಟಿರುವ ಜಾಗಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಟಿ.ವಿ.ಗಳನ್ನು ಚಾಲಕರ ಬೆನ್ನ ಹಿಂದೆ ಪ್ರತಿಷ್ಠಾಪಿಸಿರುವ ಬಸ್ ಮಾಲೀಕರ ವ್ಯವಸ್ಥೆಯನ್ನು "ಚಾಲಕರ ಬೆನ್ನ ಹಿಂದೆ ಚೂರಿ ಹಾಕುವ...ಅಲ್ಲಲ್ಲ.. ಟಿ.ವಿ. ತೋರಿಸುವ ಬಂಡವಾಳಶಾಹಿ ಹುನ್ನಾರ" ಎಂದು ಈ ಚಾಲಕರು ದೂರುತ್ತಿದ್ದಾರೆ.

ಬೆನ್ನ ಹಿಂದಿನ ಬದಲು, ಚಾಲಕನ ಮುಂದೆ ಟಿ.ವಿ. ಸ್ಥಾಪಿಸಿದ್ದರೆ, ಬಸ್ ಚಾಲಕರು ನಿದ್ರಿಸುತ್ತಾ ಬಸ್ ಚಲಾಯಿಸುವ ಬದಲು ಗಮ್ಮತ್ತಿನಿಂದ ಟಿ.ವಿ. ನೋಡುತ್ತಾ ಚಲಾಯಿಸಬಹುದಿತ್ತು. ಈ ಚಾಲಕ ವಿರೋಧಿ ಧೋರಣೆಯನ್ನು ಬಸ್ ಮಾಲೀಕರು ತಕ್ಷಣವೇ ಸರಿಪಡಿಸದಿದ್ದರೆ, ಬಸ್ ಚಾಲಕರು ಇಂಟರ್‌ವಲ್‌ನಲ್ಲಿ ಮಾತ್ರ ಬಸ್ ಚಾಲಿಸುವ ಪರಿಸ್ಥಿತಿ ಉಂಟಾಗಬಹುದೆಂದು ಸಂಚಾರ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಬಸ್ಸುಗಳಲ್ಲಿ ಎರಡೆರಡು ಟಿ.ವಿ.ಗಳನ್ನು ಅಳವಡಿಸಿರುವುದು ಉತ್ತಮ ಬೆಳವಣಿಗೆಯಾದರೂ, ಪ್ರಯಾಣಿಕರ ನೇತ್ರ ಶಿಕ್ಷಣಕ್ಕೆ ಪೂರಕವಾಗಿರುವ ಚಲನ ಚಿತ್ರಗಳನ್ನು ತೋರಿಸದಿರುವುದು ಕಳವಳಕ್ಕೆ ಕಾರಣವಾಗಿದೆ. ಉದಾಹರಣೆಗೆ, ಉಡುಪಿಯ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸುಮತಿ ನಾಡಿಗ್ ಪ್ರಕಾರ, ಇಂತಹ ಚಲನಚಿತ್ರಗಳಿಂದಾಗಿ ಅವರು ಕಾಲೇಜನ್ನು ಸಮಯಕ್ಕೆ ಸರಿಯಾಗಿ ತಲುಪಲಾಗುತ್ತಿಲ್ಲ. "ಕಳೆದ ಐದು ನಿಮಿಷಗಳಲ್ಲಿ ಹತ್ತು ಬಸ್ಸುಗಳು ಮಂಗಳೂರಿಗೆ ಹೋದವು. ಆದರೆ ಒಂದರಲ್ಲೂ ನನಗೆ ಬೇಕಿದ್ದ ಸಲ್ಮಾನ್ ಖಾನ್ ಫಿಲಂ ಹಾಕಿರಲಿಲ್ಲ. ಹೀಗಾದರೆ, ನಾನು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತಲುಪುವುದಾದರೂ ಹೇಗೆ?!" ಎನ್ನುತ್ತಾರೆ ಅವರು.

ಹಿಂದುಳಿದವರನ್ನು ಕೇಳುವವರು ಯಾರು? ಇತ್ತ ಸುಮತಿ ನಾಡಿಗರಂತಹ ಮುಂದಿರುವ ವರ್ಗದ ಜನರು ಇದೇ ನಟನ ಚಲನಚಿತ್ರ ಬೇಕೆಂದು ಕೇಳುತ್ತಿದ್ದರೆ, ಅತ್ತ ಹಿಂದುಳಿದವರ ಆಕ್ರಂದನ ಯಾರಿಗೂ ಕೇಳಿಸಿದಂತಿಲ್ಲ. ಬಲಪಂಥೀಯ ಬಸ್ ಮಾಲೀಕರು, ಎಂದಿನಂತೆ ಹಿಂದುಳಿದವರ ಅವಶ್ಯಕತೆಗಳ ಬಗೆಗೆ ತೋರುತ್ತಿರುವುದು ಕೇವಲ ದಿವ್ಯ ನಿರ್ಲಕ್ಷ್ಯ ಮಾತ್ರ. ಇಲ್ಲದಿದ್ದಲ್ಲಿ, ಎರಡೂ ಟಿ.ವಿ.ಗಳನ್ನು ಬಸ್ಸಿನ ಮುಂಭಾಗದಲ್ಲಿಯೇ ಅಳವಡಿಸುವ ಅವಶ್ಯಕತೆಯಾದರೂ ಏನಿತ್ತು? ನಮ್ಮ ವರದಿಗಾರರ ಪ್ರಕಾರ, ಬಸ್ ಸಂಚಾರ ರಂಗದಲ್ಲಿ ಮತ್ತೊಂದು ಕ್ರಾಂತಿಯಾಗಬೇಕಿದ್ದು ಮತ್ತಿನ್ನೆರಡು ಟಿ.ವಿಗಳನ್ನು ಹಿಂದಿನ ಸೀಟಿನವರಿಗಾಗಿ ಅಳವಡಿಸಬೇಕಾಗಿದೆ.
ಈ ಮಧ್ಯೆ ಕುಂದಾಪುರ ಮಂಗಳೂರು ಮಾರ್ಗದ ರಾ. ಹೇ. ೧೭ ಸರ್ವಕಾಲಿಕ ಕಳಪೆ ಸ್ಥಿತಿ ತಲುಪಿದ್ದು ವಾಹನ ಪ್ರಯಾಣಕ್ಕೆ ಅಯೋಗ್ಯವಾಗಿದೆ. ಹೀಗಾಗಿ ಸಿನೆಮಾ ನಾಯಕಿಯ ಥಳುಕು ಬಳುಕು ನೋಡಿಕೊಂಡು ಪ್ರಯಾಣಿಸಬೇಕಾಗಿದ್ದ ನಾವು ಬಸ್ಸಿನ ಬಿಡಿಭಾಗಗಳ ಕಲುಕಾಟ ಸಹಿಸಿಕೊಂಡು ಸಾಗುವಂತಾಗಿದೆ ಎಂದು ಪ್ರಯಾಣಿಕರು ಅಲವತ್ತುಕೊಂದಿದ್ದಾರೆ.

[ಶ್ರೀನಿಧಿ ಹ೦ದೆಯವರು ಹಲವಾರು ವಿಧದ ಬಸ್‌ಗಳಲ್ಲಿ ಪ್ರಯಾಣಿಸಿರುವ ಅನುಭವ ಹೊಂದಿದ್ದು, ವಾಹನ-ಮನರಂಜನಾ ವಿಜ್ಞಾನದಲ್ಲಿ ಅಪಾರ ಪರಿಣಿತಿಯನ್ನು ಪಡೆದಿದ್ದಾರೆ. ಇವರ ಹಲವಾರು ಲೇಖನಗಳು ಮತ್ತು ಛಾಯಾಚಿತ್ರಗಳು "ಇ-ನಿಧಿ ಸ್ಪೀಕ್ಸ್" ಅಂತರ್ಜಾಲ ತಾಣದಲ್ಲಿ ಲಭ್ಯವಿದೆ. ವಿಡಿಯೋ ಮತ್ತು ಚಿತ್ರಗಳ ಆಧಾರ ಸಹಿತ ವರದಿ ನೀಡಿರುವ ಶ್ರೀ ಹಂದೆಯವರಿಗೆ ನಮ್ಮ ಕೃತಜ್ಞತೆಗಳು.]

Labels: ,

Tuesday, October 23, 2007

ಚಿಂತನ-ಮಂಥನ

ಗುಪ್ತರ ಕಾಲವನ್ನು "ಸುವರ್ಣಯುಗ" ಎನ್ನುತ್ತಾರೆ ಎಂದು ಕೇಳಿದಾಗಲೆಲ್ಲಾ ನನಗೆ ಮೌರ್ಯರ ಬಗೆಗೆ ಕನಿಕರವೆನ್ನಿಸುತ್ತದೆ

Labels:

Sunday, October 07, 2007

ಮಜಾವಾಣಿ: ಜಿಲ್ಲಾ ಸುದ್ದಿ - ಬೆಳಗಾವಿ

'ಸಂಕೇಶ್ವರ ಮಾತು ಕೇಳಿ ಕೆಟ್ಟೆ' - ಕಾರ್ಪೊರೇಟರ್
ಬೆಳಗಾವಿ ಅ. 13: ಖ್ಯಾತ ಉದ್ಯಮಿ ಮತ್ತು ಜಾ.ಜ.ದಳದ ಹಿರಿಯ ನಾಯಕ ವಿಜಯ್ ಸಂಕೇಶ್ವರ ಅವರ ಮಾತನ್ನು ಕೃತಿಗಿಳಿಸಿದ ಕಾರ್ಪೊರೇಟರ್ ಒಬ್ಬರು ಈಗ ಪೇಚಾಡುತ್ತಿದ್ದಾರೆ.

"ಸಾರ್ವಜನಿಕ ಜೀವನದಲ್ಲಿ ಇರುವವರು ಕಿಸೆಯಲ್ಲಿ ಯಾವಾಗಲೂ ರಾಜಿನಾಮೆ ಪತ್ರ ಇಟ್ಟುಕೊಂಡಿರಬೇಕು" ಎಂದಿರುವ ಸಂಕೇಶ್ವರ ಅವರ ಮಾತನ್ನು ಕಾರ್ಯರೂಪಕ್ಕೆ ತಂದಿದ್ದ ಈ ಕಾರ್ಪೊರೇಟರ್, ತಮ್ಮ ರಾಜಿನಾಮೆ ಪತ್ರವನ್ನು ಯಾವಗಲೂ ಕಿಸೆಯಲ್ಲಿಯೇ ಇಟ್ಟುಕೊಂಡು ಓಡಾಡುತ್ತಿದ್ದರು. ಮೂರು ದಿನಗಳ ಹಿಂದೆ ಬೆಂಗಳೂರಿಗೆ ಭೇಟಿ ಇತ್ತಾಗಲೂ ಅವರ ಪ್ಯಾಂಟಿನ ಕಿಸೆಯಲ್ಲಿ ಈ ರಾಜಿನಾಮೆ ಪತ್ರ ಇತ್ತು.

ಬೆಂಗಳೂರಿನ ಕಲಾಸಿ ಪಾಳ್ಯ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು, ಆಟೋ ಹಿಡಿದು ಶಾಸಕರ ಭವನಕ್ಕೆ ಬಂದಿಳಿದಾಗ, ಅವರ ಕಿಸೆಯಲ್ಲಿ ರಾಜಿನಾಮೆ ಪತ್ರವೂ ಇರಲಿಲ್ಲ, ಹಣದ ಪರ್ಸೂ ಇರಲಿಲ್ಲ. ಹೆಸರು ಹೇಳ ಬಯಸದ ಈ ಕಾರ್ಪೊರೇಟರ್ ತೊಂದರೆ ಅಲ್ಲಿಗೇ ಮುಗಿಯಲಿಲ್ಲ. ಕಿಸೆಗಳ್ಳತನ ಮಾಡಿದ ಕಳ್ಳ, ಇವರ ರಾಜಿನಾಮೆ ಪತ್ರವನ್ನು ಕೂರಿಯರ್ ಮೂಲಕ ನಗರ ಸಭೆಗೆ ಕಳುಹಿಸಿದ.

ಇಂದು ಬೆಳಿಗ್ಗೆ, ಈ ಕಾರ್ಪೊರೇಟರ್ ನಗರಕ್ಕೆ ಬಂದಿಳಿದಾಗ ಆಶ್ಚರ್ಯ ಕಾದಿತ್ತು. ರಾಜಿನಾಮೆ ಅಂಗೀಕಾರವಾಗಿತ್ತು. ಈಗಷ್ಟೇ ಚುನಾವಣೆಯಲ್ಲಿ ಗೆದ್ದಿದ್ದ ಈ ಕಾರ್ಪೊರೇಟರ್ ಈಗ ರಾಜಿನಾಮೆಯನ್ನು ಹಿಂತೆಗೆದುಕೊಳ್ಳಲು ಹೆಣಗಾಡುತ್ತಿದ್ದಾರೆ. "ಗೆದ್ ಆರಾಮಿದ್ದೆನ್ರಿ. ಆ ಸಂಕೇಶ್ವರ ಹೇಳಿದ್ದ ಮಾತ್ ಕೇಳಿ ಹೀಗಾತು ನೋಡ್ರಿ" ಎಂದು ಕಂಡಕಂಡವರಲ್ಲೆಲ್ಲಾ ಮೊರೆ ಇಡುತ್ತಿದ್ದಾರೆ.

Labels:

Saturday, October 06, 2007

ಮಜಾವಾಣಿ: ಜನ ವಾಣಿ

[ಕೊಟ್ಟ ಮಾತಿಗೆ ತಪ್ಪುವುದರ ವಿರುದ್ಧ ಸುದ್ದಿ ಮಾಧ್ಯಮಗಳು ಮಲತಾಯಿ ಧೋರಣೆ ತಳೆದಿರುವುದು ಮೇಲ್ನೋಟಕ್ಕೇ ಗೋಚರಿಸುವ ಅಸಹ್ಯ ಸತ್ಯ. ನಮ್ಮ ರಾಜ್ಯದ ರಾಜಕೀಯ ಸಂದರ್ಭದಲ್ಲಿ ಇದೊಂದು ಸಂಕ್ರಮಣ ಕಾಲ; ನಮ್ಮ ಅಸ್ಮಿತೆಯ ಅಸ್ತಿತ್ವದ ಬೇರುಗಳನ್ನೇ ಹುಡುಕ ಬೇಕಾದ ಅನಿವಾರ್ಯತೆ ಉಂಟಾಗಿರುವ ಕಾಲ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ನೈತಿಕ ಮೌಲ್ಯದ ಪರ ವಹಿಸದೆ ಜನಾಭಿಪ್ರಾಯವನ್ನು ನಿಷ್ಪಕ್ಷಪಾತದಿಂದ ಬಿಂಬಿಸುವ ಪತ್ರಿಕೆಯೆಂದರೆ ಮಜಾವಾಣಿ ಒಂದೇ. - ಸಂ.

ವಿ.ಸೂ.: ಅವಧಿ, ಇಸ್ಮಾಯಿಲ್, ಜೋಗಿ ಮನೆ, ಅ.ರಶೀದರ ಗಮನಕ್ಕೆ. "ಸಂಕ್ರಮಣ", "ಅಸ್ಮಿತೆ" ಇವು ನಿಮಗಾಗಿಯೇ ಬಳಸಿರುವ ಪದಗಳು. ಮುಂದಿನ ಬಾರಿ "ಅವಿನಾಭಾವ"ವನ್ನೂ ಬಳಸುತ್ತೇವೆ. ಪ್ರಾಮಿಸ್. ಅರ್ಥ ತಿಳಿಯದಿದ್ದರೂ ಈ ಪದಗಳನ್ನು ಬಳಸಿ ನಿಮ್ಮ ಗಮನ ಸೆಳೆಯುವ ನಮ್ಮ ಈ ಪ್ರಯತ್ನವನ್ನು ಆರ್ತನಾದವೆಂದೇ ತಿಳಿಯಬೇಕೆಂದು ಕೋರುತ್ತೇವೆ.]

Labels: ,

Thursday, October 04, 2007

ಮಜಾವಾಣಿ: ಜಾಹಿರಾತು



Labels:

Tuesday, September 25, 2007

ಮಜಾವಾಣಿ: ಅಗ್ರ ರಾಷ್ಟ್ರೀಯ ಸುದ್ದಿ

ಹೇಮಮಾಲಿನಿ ಕೆನ್ನೆಯಿಂದ ಸರ್ಕಾರಕ್ಕೆ ಪೇಚು!
ನವದೆಹಲಿ, ಸೆ. ೧೩: ಖ್ಯಾತ ಚಿತ್ರತಾರೆ ಮತ್ತು ಸಂಸದೀಯ ನೃತ್ಯ ಪಟು ಹೇಮ ಮಾಲಿನಿಯವರ ಕೆನ್ನೆಗಳು ಕೇಂದ್ರ ಸರ್ಕಾರಕ್ಕೆ ಪೇಚುಂಟು ಮಾಡಿರುವ ಸಂಗತಿ ವರದಿಯಾಗಿದೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ತೊಡಗಿರುವ ಎಲ್. ಅಂಡ್ ಟಿ. ಸಂಸ್ಥೆ ಹೇಮ ಮಾಲಿನಿಯವರ ಕೆನ್ನೆಗಳನ್ನು ಸವರಿ ಪರೀಕ್ಷಿಸಲು ಬೇಡಿದ್ದ ಅನುಮತಿಯನ್ನು ಆಕೆ ನಿರಾಕರಿಸಿರುವುದು ಸರ್ಕಾರವನ್ನು ಪೇಚಿಗೆ ಸಿಕ್ಕಿಸಿದೆ. ಕೇಂದ್ರ ಕಾಮಗಾರಿ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಎಲ್. ಅಂಡ್ ಟಿ.ಗೆ ನೀಡಿದ್ದ ಕರಾರು ಪತ್ರದಲ್ಲಿ, ರಸ್ತೆಯ ಗುಣ ಮಟ್ಟದ ಮಾಪನಕ್ಕಾಗಿ ಹೇಮ ಮಾಲಿನಿಯವರ ಕೆನ್ನೆಗಳನ್ನು ಪ್ರಸ್ತಾಪಿಸಿರುವುದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.

ಕೇಂದ್ರ ಕಾಮಗಾರಿ ಇಲಾಖೆಯ ಪ್ರಕಾರ ರಸ್ತೆಯ ಗುಣ ಮಟ್ಟ -- ನುಣುಪು, ಧೃಡತೆ ಮತ್ತು ಬಿಗಿತ -- ಹೇಮ ಮಾಲಿನಿಯವರ ಕೆನ್ನೆಗಳ ಗುಣ ಮಟ್ಟಕ್ಕೆ ಸಮನಾಗಿ ಇರಬೇಕು. ಇಲ್ಲದಿದ್ದಲ್ಲಿ, ಕಾಮಗಾರಿ ಕಂಟ್ರಾಕ್ಟುದಾರರು ಶೇ.೨೫ರಷ್ಟು ಹಣವನ್ನು ವಾಪಸು ನೀಡಬೇಕು.

ಕೇಂದ್ರ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಬಿಹಾರದ ರಸ್ತೆಗಳನ್ನು ಹೇಮಮಾಲಿನಿಯವರ ಕೆನ್ನೆಗಳಿಗೆ ಹೋಲಿಸಿರುವ ಸಂಗತಿ ವರದಿಯಾದಂದಿನಿಂದ, ಕೇಂದ್ರ ಕಾಮಗಾರಿ ಇಲಾಖೆಯಲ್ಲದೆ, ಹಲವಾರು ರಾಜ್ಯಗಳ ಕಾಮಗಾರಿ ಇಲಾಖೆಗಳೂ ಸಹ ರಸ್ತೆ ಕಂಟ್ರಾಕ್ಟುದಾರರಿಂದ ತಮ್ಮ ರಸ್ತೆಗಳಲ್ಲಿ ಹೇಮಾರವರ ಕೆನ್ನೆಗಳ ಗುಣಮಟ್ಟವನ್ನೇ ನಿರೀಕ್ಷಿಸುತ್ತಿದ್ದು, ಹೇಮ ಮಾಲಿನಿಯವರ ಕೆನ್ನೆ ಸವರಿ ಪರೀಕ್ಷಿಸಲು ವಿಪರೀತ ಬೇಡಿಕೆ ಉಂಟಾಗಿದೆ.

Labels: , , ,

Thursday, September 20, 2007

ಮಜಾವಾಣಿ: ಪುಸ್ತಕ ಪರಿಚಯ

ಇತ್ತೀಚೆಗೆ ಬಿಡುಗಡೆಯಾದ ಎರಡು ಪುಸ್ತಕಗಳ ಕಿರು ಪರಿಚಯ ಇಲ್ಲಿದೆ. ಎರಡೂ ಪುಸ್ತಕಗಳು ಕಿರಿಯರಿಗಾಗಿಯೇ ಬರೆದಂತಹವು.

ಕಿರಿಯರಿಗಾಗಿ ಕಾಮಾ ಸೂತ್ರ: ಈ ಪುಸ್ತಕದ ಲೇಖಕ ಗೋಪಾಲ ಕೃಷ್ಣ ಮಜಾವಾಣಿ ಪತ್ರಿಕೆಯ ವೈಜ್ಞಾನಿಕ ವರದಿಗಾರರು ಮತ್ತು ಪ್ರತಿಷ್ಠಿತ ಮಜಾವಾಣಿ ವೈಜ್ಞಾನಿಕ ಪ್ರಬಂಧ ಪ್ರಶಸ್ತಿ ವಿಜೇತರು.


ಕಿರಿಯರಿಗಾಗಿಯೇ ಬರೆದಂತಹ ತಮ್ಮ ಈ ಚೊಚ್ಚಲ ಕೃತಿಯಲ್ಲಿ, ಲೇಖಕ ಗೋಪಾಲ ಕೃಷ್ಣ ಕನ್ನಡ ವ್ಯಾಕರಣ ಶಾಸ್ತ್ರವನ್ನು ಚಿಕ್ಕ ಮಕ್ಕಳಿಗೂ ಬಹಳ ಚೆನ್ನಾಗಿ ಅರ್ಥವಾಗುವಂತೆ ಬರೆದಿದ್ದಾರೆ. ಲಿಂಗ ಪ್ರಭೇಧಗಳು ಮತ್ತು ಅವುಗಳ ಬಳಕೆ, ಕನ್ನಡದ ವಿವಿಧ ಸಂಧಿಗಳು ಮತ್ತು ಅವು ಒಡ್ಡುವ ಸಮಸ್ಯೆಗಳು, ಸಮೋಸಗಳು, ವ್ಯಾಕರಣದಿಂದ ಹರಡಬಹುದಾದಂತಹ ರೋಗಗಳು ಮತ್ತು ಅವನ್ನು ಬಗೆಹರಿಸುವ ವಿಧಾನ, ಹೀಗೆ ವ್ಯಾಕರಣದ ಪ್ರತಿ ಅಂಶವನ್ನೂ ಲೇಖಕರು ಉದಾಹರಣೆಗಳ ಸಮೇತ ವಿವರಿಸಿದ್ದಾರೆ.


ಒಟ್ಟಿನಲ್ಲಿ, ಮಕ್ಕಳಿರಲಿ, ಇಲ್ಲದಿರಲಿ ಪ್ರತಿಯೊಂದು ಮನೆಯಲ್ಲೂ ಇರಲೇಬೇಕಾದಂತಹ ಅಪರೂಪದ ಪುಸ್ತಕ ಇದು.
ಪ್ರಕಾಶಕರು: ಮಜಾವಾಣಿ ಪ್ರಕಾಶನ. ಬೆಲೆ: ಕೇವಲ ೮೮ ರೂಪಾಯಿಗಳು.

ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ ಫಾರ್ ಕಿಡ್ಸ್: ನೀವು ಈಗಾಗಲೇ ಸ್ಟೀಫನ್ ಹಾಕಿಂಗ್ ಅವರ "ಎ ಬ್ರೀಫ್ ಹಿಸ್ಟರಿ ಆಫ್ ಟೈಮ್" ಕೈಲಿ ಹಿಡಿದುಕೊಂಡು ಓಡಾಡುತ್ತಲೋ, ಎಲ್ಲರಿಗೂ ಕಾಣುವಂತೆ ಮೇಜಿನ ಮೇಲಿಟ್ಟೋ ಪಾಂಡಿತ್ಯ ಪ್ರದರ್ಶಿಸಿದ್ದೀರಿ. ಈಗ ನಿಮ್ಮ ಮಕ್ಕಳ ಸರದಿ.

ತಮ್ಮ ಮೂಲ ಕೃತಿಯಲ್ಲಿ ಹಾಕಿಂಗ್ ಅಷ್ಟಾಗಿ ಗಣಿತವನ್ನು ಬಳಸಿರಲಿಲ್ಲ. ಆದರೆ, ಕಿರಿಯರ ಆತ್ಮ ಗೌರವವನ್ನು ಹೆಚ್ಚಿಸಲೆಂದೇ ಬರೆದಿರುವ ಈ ಪುಸ್ತಕದಲ್ಲಿ ಹಲವಾರು ಸಂಕೀರ್ಣ ಸಮೀಕರಣಗಳನ್ನು ಬಳಸಿದ್ದು ಓದುಗರಿಗೆ ಅರ್ಥವಾಗದಂತೆ ಬರೆಯುವಲ್ಲಿ ಮತ್ತಷ್ಟು ಯಶ ಕಂಡಿದ್ದಾರೆ. ನಿಮ್ಮ ಮಕ್ಕಳ ಬುದ್ಧಿವಂತಿಕೆಯನ್ನು ಸಾವಿರದ ಐನೂರು ರೂಪಾಯಿಗಳಿಗೆ subtle and sophisticated ಆಗಿ ಪ್ರದರ್ಶಿಸುವಲ್ಲಿ ಈ ಪುಸ್ತಕಕ್ಕಿಂತ ಉತ್ತಮ ವಿಧಾನ ಇನ್ನೊಂದಿಲ್ಲ.

ಒಟ್ಟಿನಲ್ಲಿ, ಒಮ್ಮೆಲೆ ನಿಮ್ಮ ಮಕ್ಕಳ ಆತ್ಮ ಗೌರವ ಮತ್ತು ಪುಸ್ತಕ ಕಪಾಟಿನ ಪಾಂಡಿತ್ಯ ಎರಡನ್ನೂ ಹೆಚ್ಚಿಸುವ ಅಪೂರ್ವ ಗ್ರಂಥವಿದು.
ಎಳೆಯ ಮಕ್ಕಳಿಗಾಗಿ ಒದ್ದೆಯಾಗದಂತಹ ಪ್ಲಾಸ್ಟಿಕ್ ಹಾಳೆಗಳಲ್ಲಿ ಮುದ್ರಿಸಿರುವ "ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ ಫಾರ್ ಇನ್‍ಫಾಂಟ್ಸ್" ಸಹ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.

ಪ್ರಕಾಶಕರು: ಪೆಂಗ್ವಿನ್. ಬೆಲೆ: ೧೫೦೦.೦೦ ರೂಪಾಯಿಗಳು.

Labels: ,

Wednesday, September 19, 2007

ಮಂಗಗಳೂ ಮನುಷ್ಯರೇ ಅಲ್ಲವೇ?

ನೈಸರ್ಗಿಕ ವಿಕಸನದಲ್ಲಿ ಹಿಂದುಳಿದ ಮಾತ್ರಕ್ಕೆ ಮನುಷ್ಯತ್ವವೇ ಇಲ್ಲವೇ?
ಬಾಲ-ಭಾರತೀಯರ ವಿರುದ್ಧದ ಭೇಧ-ಭಾವ ನಿಲ್ಲಲಿ!
Click here to take a look at some amazing pictures of evolutionally-challenged humans.
[BTW, this happens to be MV's 100th post!]

Labels:

Tuesday, September 04, 2007

ಮಜಾವಾಣಿ: ಕ್ರೈಮ್ ಸುದ್ದಿ

ಷೇವ್ ಮಾಡಿದ ಮಂಗಗಳ ಮಾರಾಟ
ನಕಲಿ-ಶಿಶು ಮಾರಾಟಗಾರರ ಬಂಧನ
ಮುಂಬೈ, ಸೆ. ೪: ಕಾಳಸಂತೆಯಲ್ಲಿ ನಕಲಿ ಶಿಶುಗಳನ್ನು ಮಾರಾಟ ಮಾಡುತ್ತಿದ್ದ ತಂಡವೊಂದನ್ನು ಮುಂಬೈ ಪೋಲಿಸರು ಭೇಧಿಸಿದ್ದು, ಇಬ್ಬರು ಮಹಿಳೆಯರೂ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೃತೀಯ ರಾಷ್ಟ್ರಗಳ ಮಕ್ಕಳಿಗೆ ಅಪಾರ ಬೇಡಿಕೆ ಇದ್ದು, ಪ್ರಖ್ಯಾತ ಹಾಲಿವುಡ್ ತಾರೆಯರೂ ಸೇರಿದಂತೆ ಪಾಶ್ಚಾತ್ಯ ದೇಶಗಳ ಹಲವಾರು ಸಿರಿವಂತರು ಬಡ ದೇಶಗಳಿಂದ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ. ಈ ಬೇಡಿಕೆಯಿಂದಾಗಿ ಮಕ್ಕಳ ಕಾಳಸಂತೆಯಲ್ಲಿ, ನಕಲಿ-ಶಿಶುಗಳನ್ನು ಮಾರಾಟಮಾಡುವ ತಂಡಗಳು ಸಹ ಕಾರ್ಯಪ್ರವೃತ್ತವಾಗಿವೆ ಎನ್ನಲಾಗಿದೆ.

ಷೇವ್ ಮಾಡಿದ ಚಿಂಪಾಂಜಿಗಳು: ಪೋಲಿಸ್ ವರದಿಗಳ ಪ್ರಕಾರ, ಈ ತಂಡಗಳು, ವಿಶ್ವದ ಎಲ್ಲೆಡೆಯಿಂದ ಚಿಂಪಾಂಜಿ ಮರಿಗಳನ್ನು ತಂದು, ಪೂರ್ಣವಾಗಿ ಷೇವ್ ಮಾಡಿ ತೃತೀಯ ಜಗತ್ತಿನ ಶಿಶುಗಳೆಂದು ಪಾಶ್ಚಾತ್ಯರಿಗೆ ಅವುಗಳನ್ನು ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ಮುಂಬೈ ತಂಡದವರ ಬಳಿ ಅತ್ಯಾಧುನಿಕ ಷೇವಿಂಗ್ ಸಲಕರಣೆಗಳು ದೊರಕಿರುವುದು ಈ ವರದಿಗಳನ್ನು ಮತ್ತಷ್ಟು ಪುಷ್ಟಿಗೊಳಿಸಿವೆ.

ನಟಿಯ ಗೋಳಾಟ: ನಕಲಿ-ಶಿಶು ಮಾರಾಟದ ವಿಚಾರ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದ್ದು, ಪ್ರಖ್ಯಾತ ಹಾಲಿವುಡ್ ತಾರೆಯರೂ ಸೇರಿದಂತೆ ಹಲವರು ತಮ್ಮ ಮಕ್ಕಳನ್ನು ಪಶುವೈದ್ಯರ ಬಳಿ ಪರೀಕ್ಷೆಗೆ ಕೊಂಡೊಯ್ಯುತ್ತಿದ್ದಾರೆಂದು ತಿಳಿದು ಬಂದಿದೆ.

ಈ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ, ಹೆಸರು ಹೇಳಲು ಬಯಸದ ಖ್ಯಾತ ಗಾಯಕಿ ಮತ್ತು ಹಾಲಿವುಡ್ ಚಿತ್ರತಾರೆಯೊಬ್ಬರು, ತಾವು ವಂಚನೆಗೆ ಈಡಾಗಿರುವುದನ್ನು ಒಪ್ಪಿಕೊಂಡರು. "ನಾನು ಆರು ವರ್ಷಗಳಿಂದ ಬೆಳೆಸುತ್ತಿರುವ ಮಗು, ಮಗು ಅಲ್ಲ, ಚಿಂಪಾಂಜಿ ಮರಿ ಎಂದು ಗೊತ್ತಾದಾಗ ನನಗೆ ದಿಕ್ಕೇ ತೋಚಲಿಲ್ಲ. ಪಶುವೈದ್ಯರ ತಪಾಸಣಾ ವರದಿ ಓದುವವರೆಗೆ, ನನಗೆ ಕಿಂಚಿತ್ತೂ ಅನುಮಾನ ಬಂದಿರಲಿಲ್ಲ. ಶಾಲೆಯಲ್ಲಿ ಮೊದಲನೆ ತರಗತಿಯಲ್ಲಿ ಫೇಲ್ ಆದಾಗ ಕೂಡ ಪ್ರಾಯಶಃ ಲರ್ನಿಂಗ್ ಡಿಸೆಬಿಲಿಟಿ ಇರಬಹುದು ಅಂದು ಕೊಂಡಿದ್ದೆ, ನನ್ನ ಕನಸಿನಲ್ಲೂ ನನ್ನ ಮಗು ಚಿಂಪಾಂಜಿಯಿರಬಹುದೆಂಬ ಆಲೋಚನೆ ಬಂದಿರಲಿಲ್ಲ" ಎಂದು ತಮ್ಮ ವೇದನೆ ವ್ಯಕ್ತ ಪಡಿಸಿದ ಅವರು, "ನಾನು ಆರು ವರ್ಷದಿಂದ ಸಾಕಿ ಸಲುಹಿದ ಮಗುವಿಗೆ ಈಗ ’ಮಗು, ನಿಮ್ಮಪ್ಪ, ಅಮ್ಮ ಮನುಷ್ಯರಲ್ಲ. ಚಿಂಪಾಂಜಿಗಳು’ ಎಂದು ಯಾವ ಬಾಯಲ್ಲಿ ಹೇಳಲಿ. ಇನ್ನು ಮುಂದೆ ತೃತೀಯ ಜಗತ್ತಿನ ಶಿಶು ಮಾರಾಟಗಾರರನ್ನು ನಂಬುವುದಾದರೂ ಹೇಗೆ?!" ಎಂದು ಗೋಳಿಟ್ಟರು.

ಸರ್ಕಾರದ ಪ್ರಯತ್ನ: ಪಾಶ್ಚಾತ್ಯರು ಕಾಳಸಂತೆಯಲ್ಲಿ ವಂಚನೆಗೊಳಗಾಗುವುದನ್ನು ತಡೆಗಟ್ಟಲು ಸರ್ಕಾರ ಯೋಜನೆಯೊಂದನ್ನು ರೂಪಿಸುತ್ತಿದೆ ಎನ್ನಲಾಗಿದೆ. ಆ ಯೋಜನೆಯ ಅಂಗವಾಗಿ, ಮಕ್ಕಳ ಪಾಸ್‍ಪೋರ್‍ಟಿನಲ್ಲಿ ಹೆಸರು, ಲಿಂಗ, ಜನ್ಮ ದಿನಾಂಕದೊಂದಿಗೆ ಚಿಂಪಾಂಜಿ ಮರಿಯೋ ಅಲ್ಲವೋ ಎಂಬುದನ್ನೂ ನಮೂದಿಸಲಾಗುವುದು ಮತ್ತು ಚಿಂಪಾಂಜಿಗಳೆಂದು ನಮೂದಿತವಾಗಿರುವ ಮಕ್ಕಳು ವಿಶೇಷ ಅನುಮತಿ ಪತ್ರವಿಲ್ಲದೆ ವಿದೇಶ ಪ್ರಯಾಣ ಬೆಳೆಸುವಂತಿಲ್ಲ.
(Inspired by something that I read)

Labels:

Monday, September 03, 2007

ಮಜಾವಾಣಿ: ಜಾಹಿರಾತು



Labels:

ಮಜಾವಾಣಿ: ವಾಣಿಜ್ಯ - ರಾಜಕಾರಣ

ಬೂ - ಹೊಸ ಸುಗಂಧ ಮಾರುಕಟ್ಟೆಗೆ
ಬೆಂಗಳೂರು, ಏಪ್ರಿಲ್ ೧: ಸುಪ್ರಸಿದ್ಧ ಫ್ರೆಂಚ್ ಸಂಸ್ಥೆ ಷನೆಲ್ ಸಹಕಾರದೊಂದಿಗೆ ತಯಾರಿಸಿರುವ "ಬೂ" ಎಂಬ ಸುಗಂಧವನ್ನು ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಈ ಸುಗಂಧ ಕನಕಪುರ ಕ್ಷೇತ್ರದ ಅಸಲೀ ಮಣ್ಣಿನಿಂದ ತಯಾರಿಸಲ್ಪಟ್ಟಿದ್ದು ೧೦೦% ನೈಸರ್ಗಿಕವಾಗಿದೆ. ರಾಜಕಾರಣ, ಸಾಹಿತ್ಯ, ರಿಯಲ್ ಎಸ್ಟೇಟ್ ವ್ಯಾಪಾರ, ಚಿತ್ರರಂಗವೂ ಸೇರಿದಂತೆ ಹಲವಾರು ರಂಗಗಳಲ್ಲಿ ಇತ್ತೀಚೆಗೆ ಮಣ್ಣಿನ ವಾಸನೆಗೆ ಅಪಾರ ಬೇಡಿಕೆಯಿದ್ದು, ಈ ಹೊಸ ಸುಗಂಧ ಮಾರುಕಟ್ಟೆಯಲ್ಲಿ ಯಶಸ್ವಿಯಾಗುವ ಎಲ್ಲ ಲಕ್ಷಣಗಳೂ ಇವೆ ಎನ್ನಲಾಗಿದೆ. "ಬೂ" ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯ ಮಂತ್ರಿಯವರು, "ಚುನಾವಣೆ ಸಮಯ ಹತ್ತಿರವಿರುವುದರಿಂದ ಮಣ್ಣಿನ ವಾಸನೆಯ ಅನಿವಾರ್ಯತೆ ಸಹ ಹೆಚ್ಚಾಗಿದೆ. ಸದ್ಯಕ್ಕೆ ಕನಕಪುರದ ಮಣ್ಣಿನ ವಾಸನೆ ಮಾತ್ರ ಬಿಡುಗಡೆ ಮಾಡಿದ್ದು, ಮುಂದೆ ಸಾತನೂರು, ಹಾಸನ, ರಾಮನಗರಗಳ ಮಣ್ಣಿನ ವಾಸನೆಯನ್ನು ಸಹ ಮಾರುಕಟ್ಟೆಗೆ ತರುವ ಆಲೋಚನೆ ಇದೆ" ಎಂದರು.

ಅಮಿತಾಬ್, ಕಾಯ್ಕಿಣಿ ಸ್ವಾಗತ: "ಬೂ" ಪರಿಮಳವನ್ನು ಖ್ಯಾತ ನಟ ಅಮಿತಾಬ್ ಬಚನ್ ಮತ್ತು ಕನ್ನಡದ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಸ್ವಾಗತಿಸಿದ್ದಾರೆ ಎನ್ನಲಾಗಿದೆ.

ಮಣ್ಣಿನ ಯಾವುದೇ ವಾಸನೆಯಿಲ್ಲದ ಅಮಿತಾಬ್ ಇತ್ತೀಚೆಗೆ ರೈತರ ಜಮೀನನ್ನು ಖರೀದಿಸಿ ನ್ಯಾಯಲಯದ ಕೆಂಗಣ್ಣಿಗೆ ಗುರಿಯಾಗಿದ್ದನ್ನು ಇಲ್ಲಿ ಗಮನಿಸಬಹುದು. ಆದರೆ, ಈಗ "ಬೂ" ಪರಿಮಳ ಮಾರುಕಟ್ಟೆಗೆ ಬಂದಿರುವುದರಿಂದ, ಅಮಿತಾಬ್ ಈ ಸುಗಂಧವನ್ನು ಬಳಸಿ ಮತ್ತೊಮ್ಮೆ ಜಮೀನನ್ನು ಖರೀದಿಸುವ ಯೋಚನೆಯಲ್ಲಿದ್ದಾರೆ ಎನ್ನಲಾಗಿದೆ.

ಹಾಗೆಯೇ, ತಮ್ಮ ಸಾಹಿತ್ಯ ಕೃಷಿಯನ್ನು ನಗರೀಕರಣ ಪ್ರಜ್ಞೆಗೆ ಸೀಮಿತಗೊಳಿಸಿರುವ ಕನ್ನಡದ ಪ್ರಸಿದ್ಧ ಸಾಹಿತಿ ಜಯಂತ ಕಾಯ್ಕಿಣಿ ಸಹ ಈ ಸುಗಂಧವನ್ನು ಬಳಸಿ ಮಣ್ಣಿನ ವಾಸನೆಯ ಅನುಭವ ಪಡೆದು, ತಮ್ಮ ಸಾಹಿತ್ಯದ ಫರಿದಿಯನ್ನು ವಿಸ್ತರಿಸಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

Labels:

Tuesday, August 21, 2007

ಮಜಾವಾಣಿ: ವಿಜ್ಞಾನ - ರಾಜಕಾರಣ

'ಜನಸಂಖ್ಯಾ ಸ್ಫೋಟಕ್ಕೆ ಪುನರ್ಜನ್ಮವೇ ಕಾರಣ'

ಕೊಲ್ಕತಾ, ಆಗಸ್ಟ್ ೨೧: ಭಾರತದಲ್ಲಿನ ಜನಸಂಖ್ಯಾ ಸಮಸ್ಯೆಗೆ ಪುನರ್ಜನ್ಮವೇ ಕಾರಣ ಎಂದು ಸಿ.ಪಿ.ಎಂ. ನಾಯಕಿ ಬೃಂದಾ ಕಾರಟ್ ವಿಶ್ಲೇಷಿಸಿದ್ದಾರೆ.

ಕೋಲ್ಕೊತಾದಲ್ಲಿ ನಡೆಯುತ್ತಿರುವ ಪುನರ್ಜನ್ಮ: ಒಂದು ಸಾಮಾಜಿಕ ಸಮಸ್ಯೆ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಅವರು, "ಪುನರ್ಜನ್ಮ ಪೀಡಿತ ರಾಷ್ಟ್ರಗಳಾದ ಭಾರತ, ಚೈನಾಗಳಲ್ಲೇ ಜನಸಂಖ್ಯಾ ಸಮಸ್ಯೆ ತಲೆದೋರಿರುವುದು ಕೇವಲ ಕಾಕತಾಳೀಯವಲ್ಲ. ಪುನರ್ಜನ್ಮರಹಿತ ರಾಷ್ಟ್ರಗಳಲ್ಲಿ ಒಮ್ಮೆ ಸತ್ತವರು ಮರು ಹುಟ್ಟುವ ಪ್ರಮೇಯವೇ ಇರುವುದಿಲ್ಲ. ಪ್ರಥಮ ಜನ್ಮಿಗಳೊಡನೆ, ಪುನರ್ಜನ್ಮಿಗಳೂ ಪದೇ ಪದೇ ಹುಟ್ಟುತ್ತಿರುವುದರಿಂದ ಭಾರತದಲ್ಲಿ ಈ ಸಮಸ್ಯೆ ಎದುರಾಗಿದೆ. ಪುನರ್ಜನ್ಮವನ್ನು ಸರ್ಕಾರ ತಕ್ಷಣವೇ ನಿಷೇಧಿಸಿದರೆ, ಕೆಲವೇ ವರ್ಷಗಳಲ್ಲಿ ಭಾರತ ಸಹ ಸೋವಿಯತ್ ರಷ್ಯಾದಂತೆ ಪ್ರಗತಿ ಪರ ದೇಶವಾಗುವುದರಲ್ಲಿ ಸಂದೇಹವಿಲ್ಲ." ಎಂದಿದ್ದಾರೆ.

ಸರ್ಕಾರದ ಕ್ರಮ?: ಪುನರ್ಜನ್ಮವನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಅರ್ಜುನ್ ಸಿಂಗ್ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪುನರ್ಜನ್ಮದ ಮೇಲೆ ಸಂಪೂರ್ಣ ನಿಷೇಧ ಚೈನಾದಂತಹ ಕಮ್ಯೂನಿಸ್ಟ್ ರಾಷ್ಟ್ರಗಳಿಗೆ ಸೂಕ್ತವೆನ್ನಿಸಬಹುದಾದರೂ, ಭಾರತದಂತಹ ಪ್ರಜಾಸತ್ತಾತ್ಮಕ ರಾಷ್ಟ್ರಗಳಲ್ಲಿ ಸತ್ತ ಆತ್ಮಗಳ ಸ್ವಾತಂತ್ರ್ಯ ಹರಣ ನಿಷಿದ್ಧ. ಜೊತೆಗೆ, ಆತುರದಲ್ಲಿ ಇಂತಹ ನಿಷೇಧ ತಂದಲ್ಲಿ, ಪ್ರೇತಾತ್ಮಗಳ ಸಂಖ್ಯೆಯಲ್ಲಿ ಒಮ್ಮೆಲೆ ವಿಪರೀತ ಹೆಚ್ಚಳವಾಗುವ ಅಪಾಯ ಸಹ ಇದ್ದು, ಅದರ ಬದಲು, ಆಧ್ಯಾತ್ಮಿಕ ಗುರುಗಳು, ಮಠಾಧೀಶರನ್ನೊಳಗೊಂಡ ತಜ್ಞರ ಸಮಿತಿಯನ್ನೊಂದು ರಚಿಸಿ, ಪುನರ್ಜನ್ಮವಿಲ್ಲದ ಮೋಕ್ಷ ಮಾರ್ಗ ತೋರುವ "ನಾನೊಬ್ಬ-ನನಗೊಂದು" ಆಂದೋಲನವನ್ನು ಜಾರಿಗೆ ತರುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

Labels:

Thursday, August 16, 2007

ಮಜಾವಾಣಿ: ರಾಜಕೀಯ - ಕೃಷಿ

ಸೆಪ್ಟೆಂಬರ್ ನಂತರ ಮತ್ತೆ ಜೂನ್ - ಮು.ಮಂ.

ಬೆಂಗಳೂರು, ಆಗಸ್ಟ್ ೧೬: ಈ ವರ್ಷದ ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ ಸಾಕಷ್ಟು ಮಳೆ ಆಗದ್ದರಿಂದ ಜೂನ್ ತಿಂಗಳನ್ನು ಸೆಪ್ಟೆಂಬರ್ ನಂತರ ಮತ್ತೆ ಮರುಕಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸುತ್ತಿದೆ ಎಂದು ತಿಳಿದು ಬಂದಿದೆ.

ಹವಾಮಾನ ವೀಕ್ಷಾಣಾಲಯದ ತಜ್ಞರ ಪ್ರಕಾರ ಜೂನ್ ತಿಂಗಳಿನಲ್ಲಿ ಮುಂಗಾರು ಮಳೆಯ ಪ್ರಮಾಣ ಎಂದಿಗಿಂತ ೧೫ ಮಿ.ಮಿ. ಕಡಿಮೆ ಬಿದ್ದಿದ್ದು ಮಳೆಯನ್ನೇ ಅವಲಂಬಿಸಿರುವ ಕೃಷಿಕರಿಗೆ ಅಪಾರ ನಷ್ಟ ಉಂಟಾಗುವ ಸಂದರ್ಭ ಎದುರಾಗಿದೆ. ರೈತರ ಆತ್ಮಹತ್ಯೆಯ ವಿರುದ್ಧ ಸಮರ ಸಾರಿರುವ ಮುಖ್ಯ ಮಂತ್ರಿ ಕುಮಾರ ಸ್ವಾಮಿ, ಈ ಎರಡನೆಯ ಜೂನಿನಲ್ಲಿ ಎಲ್ಲೆಡೆ ತಾವೇ ಸ್ವತಃ ಖುದ್ದಾಗಿ ನಿಂತು ಸಾಕಷ್ಟು ಮಳೆ ಹುಯ್ಯಿಸುವ ಭರವಸೆ ಇತ್ತಿದ್ದಾರೆ. ಇದಕ್ಕಾಗಿ, ಈ ವರ್ಷದ ದ್ವಿತೀಯ ಜೂನಿನಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮದಲ್ಲೂ ವಾಸ್ತವ್ಯಮಾಡಲಿದ್ದು, ವಾಸ್ತವ್ಯ ಮಾಡುವ ಪ್ರತಿ ಗ್ರಾಮದಲ್ಲೂ ಕನಿಷ್ಠ ೨೫ ಮಿ.ಮಿ. ಮಳೆ ಹುಯ್ಯಿಸುವ ಪಣ ತೊಟ್ಟಿದ್ದಾರೆ.

ಯಡ್ಡಿಗೆ ಆತಂಕ: ಸೆಪ್ಟೆಂಬರ್ ನಂತರ ಜೂನ್ ತಿಂಗಳನ್ನು ಮತ್ತೆ ಮರುಕಳಿಸುತ್ತಿರುವುದು ಉಪ ಮುಖ್ಯಮಂತ್ರಿ ಯಡೆಯೂರಪ್ಪನವರಿಗೆ ಆತಂಕ ಉಂಟುಮಾಡಿದೆ ಎನ್ನಲಾಗಿದೆ. ಈ ಕುರಿತು ತಮ್ಮ ಖೇದವನ್ನು ಅವರು ತಮ್ಮ ಆತ್ಮೀಯರೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾಗಿದ್ದು, "ನಾನೇನೂ ರೈತ ವಿರೋಧಿ ಅಲ್ಲ. ಮುಂಗಾರು ಮಳೆ ವಿರೋಧಿಯೂ ಅಲ್ಲ. ಜೂನ್ ತಿಂಗಳನ್ನು ಮರುಕಳಿಸುವುದಕ್ಕೆ ನನ್ನ ವಿರೋಧ ಏನೂ ಇಲ್ಲ. ಆದರೆ, ಇದರಲ್ಲಿ ಆತುರ ಯಾಕೆ? ಸೆಪ್ಟೆಂಬರ್ ಆದ ತಕ್ಷಣ ಜೂನ್ ವಾಪಸ್ ತರುತ್ತಿರುವುದು ಯಾಕೋ ಸಂಶಯಾಸ್ಪದವಾಗಿದೆ" ಎಂದಿದ್ದಾರೆ ಎನ್ನಲಾಗಿದೆ.

Labels: ,

Saturday, August 04, 2007

ಮಜಾವಾಣಿ: ವಾಣಿಜ್ಯ - ಸಂಸ್ಕೃತಿ

"ಪಿಕ್ಚರ್ ಪೈರಸಿಗೆ ಪ್ರೋತ್ಸಾಹ ಧನ ನೀಡಿ"

ಬೆಂಗಳೂರು, ಆಗಸ್ಟ್ ೪: ಎಂ.ಜಿ.ರಸ್ತೆಯಿಂದ ಹಿಡಿದು ಮಲ್ಲೇಶ್ವರದ ಹದಿನೆಂಟನೆಯ ಕ್ರಾಸಿನವರೆಗೆ ನಗರದ ಹಲವಾರು ಮುಖ್ಯ ರಸ್ತೆಗಳಲ್ಲಿ ಪೈರೇಟೆಡ್ ಡಿ.ವಿ.ಡಿ.ಗಳು ಅತಿ ಕಡಿಮೆ ಧರದಲ್ಲಿ ಲಭ್ಯವಿರುವುದು ಎಲ್ಲರಿಗೂ ತಿಳಿದ ವಿಷಯ. ಇಂಗ್ಲೀಷ್, ಹಿಂದಿ, ತೆಲುಗು ಕೊನೆಗೆ ತಮಿಳಿನ ಹೊಚ್ಚ ಹೊಸ ಚಲನ ಚಿತ್ರಗಳ ಪೈರೇಟೆಡ್ ಡಿ.ವಿ.ಡಿ.ಗಳು ಇಲ್ಲಿ ಲಭ್ಯ. ಆದರೆ ಕನ್ನಡ ಡಿ.ವಿ.ಡಿ. ಬಗ್ಗೆ ವಿಚಾರಿಸಿ ನೋಡಿ, ನಿಮಗೆ ಸಿಗುವುದು ಹೆಚ್ಚೆಂದರೆ ತಾತ್ಸಾರದ ನಗೆ ಮಾತ್ರ!

ಈ ವಿಷಯದ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಕನ್ನಡ ಪರ ಚಳುವಳಿಗಾರರು, "ಒಂದು ಭಾಷೆಯ ಸಂಸ್ಕೃತಿಯನ್ನುಳಿಸುವಲ್ಲಿ ಚಲನ ಚಿತ್ರಗಳ ಪಾತ್ರವೂ ಮಹತ್ವದ್ದಾಗಿದ್ದು, ಅತಿ ಕಡಿಮೆ ದರದಲ್ಲಿ ಹೊಚ್ಚ ಹೊಸ ಚಲನ ಚಿತ್ರಗಳ ಉತ್ತಮ ನಕಲುಗಳನ್ನು ನೋಡುಗರಿಗೆ ದಕ್ಕಿಸುವ ಡಿ.ವಿ.ಡಿ. ಪೈರೇಟಿಂಗ್ ನಮ್ಮಲ್ಲಿನ್ನೂ ಅಷ್ಟಾಗಿ ಕಾಣದಿರುವುದು ನಿಜಕ್ಕೂ ಆತಂಕದ ವಿಷಯ. ಇಂಗ್ಲೀಷಿನ ಹ್ಯಾರಿ ಪಾಟರ್, ತಮಿಳಿನ ಶಿವಾಜಿ ಚಲನ ಚಿತ್ರಗಳ ಪೈರೇಟೆಡ್ ಡಿ.ವಿ.ಡಿ.ಗಳು ಎಲ್ಲೆಲ್ಲೂ ಲಭ್ಯವಿರುವಾಗ, ಕನ್ನಡದ ಸೂಪರ್ ಹಿಟ್ ಮುಂಗಾರು ಮಳೆಯ ಪೈರೇಟೆಡ್ ಡಿ.ವಿ.ಡಿ. ಎಲ್ಲೂ ಕಾಣದಿದ್ದರೆ, ಕನ್ನಡ ಸಂಸ್ಕೃತಿಯನ್ನು ಉಳಿಸುವುದಾದರೂ ಹೇಗೆ?!" ಎಂದು ಪ್ರಶ್ನಿಸಿದ್ದಾರೆ.

ಕನ್ನಡ ಡಿ.ವಿ.ಡಿ. ಪೈರೇಟಿಂಗ್ ಉದ್ಯಮವನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರ ಮೂರು ಅಂಶಗಳ ಯೋಜನೆಯನ್ನು ಕಾರ್ಯಗತ ಮಾಡುವಂತೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ:
  • ಕನ್ನಡ ಚಲನ ಚಿತ್ರಗಳ ಥಿಯೇಟರ್ ಬಿಡುಗಡೆ ದಿನದಂದೆ ಅವುಗಳ ಡಿ.ವಿ.ಡಿ. ನಕಲುಗಳು ಮಾರುಕಟ್ಟೆಯಲ್ಲಿ ಲಭ್ಯವಿರುವಂತೆ ಸರ್ಕಾರ ಆಜ್ಞಾಪಿಸಬೇಕು
  • ಇತರೆ ಭಾಷೆಗಳ ನಕಲಿ ಡಿ.ವಿ.ಡಿ.ಗಳು ಆ ಚಲನ ಚಿತ್ರಗಳನ್ನು ಥಿಯೇಟರಿನಲ್ಲಿ ಬಿಡುಗಡೆಯಾದ ಎರಡು ವಾರಗಳ ನಂತರವೇ ಮಾರುಕಟ್ಟೆಗೆ ಬಿಡಬೇಕು.
  • ಕನ್ನಡದ ಪೈರೇಟೆಡ್ ಡಿ.ವಿ.ಡಿ. ಮಾರಾಟ ಮಾಡುವ ವರ್ತಕರಿಗೆ, ಪ್ರತಿ ಡಿ.ವಿ.ಡಿ.ಗೆ ೧೦ ರೂ. ಪ್ರೋತ್ಸಾಹ ಧನ ನೀಡ ಬೇಕು.

ಹಿಂದುಳಿದಿರುವ ಪೈರೇಟಿಂಗ್ ಉದ್ಯಮ: ಪಾಟಿಯಾಲದ ಗ್ಯಾನಿ ಜೈಲ್ ಸಿಂಗ್ ವಿಶ್ವ ವಿದ್ಯಾಲಯದ, ಬೂಟಾ ಸಿಂಗ್ ಸ್ಕೂಲ್ ಆಫ್ ಬ್ಯ್ಸುಸಿನೆಸ್ಸಿನ ವಾಣಿಜ್ಯ ಪ್ರಾಧ್ಯಾಪಕ ಡಾ.ಬೇಜಾನ್ ಸಿಂಗ್ ದಾರೂವಾಲ ಅವರ ಪ್ರಕಾರ, ಪೈರೇಟಿಂಗ್ ಉದ್ಯಮದಲ್ಲಿ ಕನ್ನಡ ಅತ್ಯಂತ ಹಿಂದುಳಿದಿದ್ದು, ಡಿ.ವಿ.ಡಿ. ಪೈರೇಟಿಂಗ್ ಕೇವಲ ಒಂದು ಉದಾಹರಣೆ ಅಷ್ಟೆ. "ಕರ್ನಾಟಕ ಸರ್ಕಾರ ಡಿ.ವಿ.ಡಿ. ಪೈರೇಟಿಂಗ್ ಮಾತ್ರ ಪ್ರೋತ್ಸಾಹಿಸಿದರೆ ಸಾಲದು. ಇಡೀ ಪೈರೇಟಿಂಗ್ ಉದ್ಯಮವನ್ನೇ ಪ್ರೋತ್ಸಾಹಿಸಬೇಕು. ಇದು ಚಲನ ಚಿತ್ರಕ್ಕೆ ಮಾತ್ರ ಸಂಬಂಧಿಸಿದ ವಿಷಯ ಅಲ್ಲ. ಇಡೀ ವ್ಯವಸ್ಥೆಯ ವಿಚಾರ. ಉದಾಹರಣೆಗೆ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಜೆ.ಕೆ.ರೌಲಿಂಗ್‌ಳ ಹ್ಯಾರಿ ಪಾಟರ್ ಪುಸ್ತಕದ ನಕಲಿ ಕಾಪಿಗಳು ಮಾರಾಟವಾಗುತ್ತಿವೆ. ಆದರೆ, ಎಸ್.ಎಲ್.ಭೈರಪ್ಪನವರ ಆವರಣದ ನಕಲಿ ಕಾಪಿಗಳು ಎಲ್ಲೂ ಕಾಣಸಿಗುವುದೇ ಇಲ್ಲ." ಎಂದ ಡಾ.ದಾರೂವಾಲಾ "ಕರ್ನಾಟಕ ಸರ್ಕಾರ ಡಿ.ವಿ.ಡಿ.ಗೆ ಪ್ರೋತ್ಸಾಹಧನ ನೀಡುವ ವಿಚಾರ ಬಿಟ್ಟು, ಇಡೀ ಪೈರೇಟಿಂಗ್ ಉದ್ಯಮವನ್ನೇ ಅಭಿವೃದ್ದಿ ಪಡಿಸುವ ಬಗೆಗೆ ಗಮನ ಹರಿಸಬೇಕು. ಈ ಉದ್ಯಮದಲ್ಲಿ ಅಪಾರ ಅನುಭವ ಮತ್ತು ಯಶಸ್ಸು ಪಡೆದಿರುವ ಚೈನಾ ದೇಶದ ನಿಪುಣರನ್ನು ಸಂಪರ್ಕಿಸಿ ಪೈರೇಟಿಂಗ್ ಟೆಕ್ನಾಲಜಿ ಪಾರ್ಕ್ ಸ್ಥಾಪಿಸುವುದು ಒಳಿತು" ಎಂದರು.

Labels: , ,

Thursday, July 12, 2007

ಮಜಾವಾಣಿ: ಶಿಕ್ಷಣ ವಾಣಿ

ನಿರಕ್ಷರತೆ ತಗ್ಗಿಸಲು ಅಂಡರ್‌ವೇರ್ ಬಳಕೆ ಹೆಚ್ಚಿಸಲು ಕರೆ

ನವ ದೆಹಲಿ, ಜುಲೈ ೧೨: ದೇಶದಲ್ಲಿನ ನಿರಕ್ಷರತೆಯನ್ನು ತಗ್ಗಿಸುವಲ್ಲಿ ಒಳ-ಉಡುಪುಗಳ ಪಾತ್ರ ಅತ್ಯಂತ ಮಹತ್ವದ್ದೆಂದು ಸಾರಿರುವ ಕೇಂದ್ರ ಶಿಕ್ಷಣ ಸಚಿವಾಲಯ, ದೇಶದಲ್ಲಿ ಹೆಚ್ಚು ಹೆಚ್ಚು ಜನರು ಒಳ-ಉಡುಪುಗಳನ್ನು ಧರಿಸುವಂತೆ ಕರೆ ನೀಡಿದೆ.

ಭಾರತದಲ್ಲಿ ಶೇ.೪೦ರಷ್ಟು ಜನರು ನಿರಕ್ಷರಸ್ತರಿದ್ದು, ಒಂದು ಅಂದಾಜಿನ ಪ್ರಕಾರ ಶೇ.೨೫ರಷ್ಟು ಮಂದಿ ಯಾವುದೇ ಒಳ ಉಡುಗೆ ತೊಡುವುದಿಲ್ಲವೆಂದು ತಿಳಿದು ಬಂದಿದೆ. ಅಕ್ಷರಸ್ತರ ಸಂಖ್ಯೆಯನ್ನು ಹೆಚ್ಚು ಮಾಡಲು ಸೂಕ್ತ ಪುಸ್ತಕಗಳ ಅವಶ್ಯಕತೆಯಿದ್ದು ಈ ಪುಸ್ತಕಗಳ ಮುದ್ರಣಕ್ಕೆ ಹೆಚ್ಚು ಹೆಚ್ಚು ಕಾಗದವನ್ನು ತಯಾರಿಸುವ ಅನಿವಾರ್ಯತೆ ಎದುರಾಗಿದೆ.

ಒಳ-ಉಡುಪುಗಳೂ ಸೇರಿದಂತೆ ಹಳೆಯ ವಸ್ತ್ರಗಳು ಕಾಗದದ ತಯಾರಿಕೆಯಲ್ಲಿ ಕಚ್ಚಾವಸ್ತುಗಳಾಗಿದ್ದು, ಈ ಒಳ-ಉಡುಪುಗಳ ಹೆಚ್ಚಿನ ಬಳಕೆಯಿಂದ ಕಾಗದದ ತಯಾರಿಕೆಯಲ್ಲಿ, ಪುಸ್ತಕದ ಮುದ್ರಣದಲ್ಲಿ ಮತ್ತು ಅಂತಿಮವಾಗಿ ನಿರಕ್ಷರತೆಯನ್ನು ತಗ್ಗಿಸುವಲ್ಲಿ ಪ್ರಗತಿಯನ್ನು ಸಾಧಿಸಬಹುದೆಂದು ಕೇಂದ್ರ ಶಿಕ್ಷಣ ಸಚಿವಾಲಯ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ನಿರಕ್ಷರತೆ ಮತ್ತು ಒಳ-ಉಡುಪುಗಳ ನಡುವೆ ಅತ್ಯಂತ ಮಹತ್ವದ ಸಂಬಂಧವಿದ್ದು, ಇತ್ತೀಚೆಗೆ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಈ ವಿಷಯ ಬೆಳಕಿಗೆ ಬಂದಿತ್ತು.

Labels: ,

Wednesday, July 11, 2007

ಮಜಾವಾಣಿ: ವಿವಾದ - ವಿನೋದ

ಮಜಾವಾಣಿ ಜಾತಿಯ ಬಗೆಗೆ ಭುಗಿಲೆದ್ದ ವಿವಾದ

ಬೆಂಗಳೂರು, ಜುಲೈ ೧೧:
ಬಸವಣ್ಣನವರ ಜಾತಿಯ ಕುರಿತು ಡಾ.ಬಂಜಗೆರೆ ಜಯಪ್ರಕಾಶರ ವಿವಾದಾಸ್ಪದ ಪುಸ್ತಕದ ಬೆನ್ನಲ್ಲೇ ಮತ್ತೊಂದು ಜಾತಿ ವಿವಾದ ಭುಗಿಲೆದ್ದಿದೆ.

ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಒಂದು ಸಂಶೋಧನಾ ಲೇಖನದಲ್ಲಿ, ಇಡೀ ಬ್ರಹ್ಮಾಂಡದ ಅತ್ಯಂತ ಗೌರವಾನ್ವಿತ ಮತ್ತು ಪವಿತ್ರ ಪತ್ರಿಕೆಗೆಳಲ್ಲಿ ಒಂದಾಗಿರುವ ಮಜಾವಾಣಿಯ ಜಾತಿಯ ಬಗೆಗೆ ಅನುಮಾನ, ಅಪಪ್ರಚಾರ ಮತ್ತು ಅವಹೇಳನವನ್ನು ಮಾಡಲಾಗಿದೆ. ಇದರಿಂದ ವಿಶ್ವಾದ್ಯಂತ ಇರುವ ಮಜಾವಾಣಿ ಓದುಗರ ಬಳಗ ಬಹಳವಾಗಿ ನೊಂದಿದ್ದು, ಜಗತ್ತಿನಾದ್ಯಂತ ತೀವ್ರ ಪ್ರತಿಭಟನೆ ವ್ಯಕ್ತಪಡಿಸುವ ಸಾಧ್ಯತೆಗಳಿವೆ.

ಈ ವಿಷಯದ ಕುರಿತು ಕೆಂಡ ಕಾರಿರುವ ಮಜಾವಾಣಿ ಸಂಪಾದಕರು, "ಡಾ.ಪ್ರತಿಭಾ ನಂದಕುಮಾರ್ ಮಜಾವಾಣಿ ಜಾತಿಯ ಬಗೆಗೆ ಈ ಸಂಶೋಧನಾ ಲೇಖನ ಬರೆಯುವ ಮುನ್ನ ಕನಿಷ್ಠ ಒಮ್ಮೆಯಾದರೂ ನಮ್ಮನ್ನು ಸಂಪರ್ಕಿಸಿಲ್ಲ. ಪತ್ರಿಕೆಗೆ ಮತ್ತು ಪತ್ರಿಕೆಯ ಓದುಗರಿಗೆ ಅವಹೇಳನ ಮಾಡಲೆಂದೇ ಈ ಲೇಖನ ಬರೆಯಲಾಗಿದೆ. ಸರ್ಕಾರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಈ ಸಂಚಿಕೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಪ್ರೊ.ನಂದಕುಮಾರ್ ಅವರನ್ನು ಕೂಡಲೇ ಬಂಧಿಸಬೇಕು." ಎಂದಿದ್ದಾರೆ.

ಪ್ರತಿಭಾ ನಂದಕುಮಾರ್ ತಮ್ಮ ಲೇಖನದಲ್ಲಿ ಲಂಕೇಶ್ ಪತ್ರಿಕೆ ಮತ್ತು ಮಜಾವಾಣಿ ಎರಡನ್ನೂ ಸೇರಿಸಿ ಒಂದೇ ವಾಕ್ಯ ಬರೆದಿರುವುದು ಇಷ್ಟೆಲ್ಲಾ ವಿವಾದಕ್ಕೆ ಕಾರಣವಾಗಿದೆ. ಮಜಾವಾಣಿ ಪತ್ರಿಕೆ ಮೊದಲಿನಿಂದಲೂ ಜಾಣತನದ ಕಟ್ಟಾ ವಿರೋಧಿಯಾಗಿದ್ದು, "ಕನ್ನಡದ ಅತ್ಯಂತ ನಿರ್ಜಾಣ ಪತ್ರಿಕೆ" ಎಂದೇ ಹೆಸರಾಗಿದೆ. ವಾಸ್ತವ ಹೀಗಿದ್ದೂ, "ಜಾಣ ಜಾಣೆಯರ ಪತ್ರಿಕೆ" ಮತ್ತು "ನಿರ್ಜಾಣ ಪತ್ರಿಕೆ" ಎರಡನ್ನೂ ಬೇಕೆಂದೇ ಒಂದೇ ವಾಕ್ಯದಲ್ಲಿ ಬಳಸಿ ಒಂದು ಪವಿತ್ರ ಪತ್ರಿಕೆಯ ಜಾತಿಯ ಬಗೆಗೆ ನಂದಕುಮಾರ್ ಸಂದೇಹ ಕಲ್ಪಿಸಿರುವುದು ರಾಜ್ಯದ ಹಲವಾರು ನಿರ್ಜಾಣ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಗಾಂಪ ಮಠದ ಗುರುಗಳಿಂದ ಹಲ್ಲೆ: ಮಜಾವಾಣಿ ಜಾತಿಯ ಬಗೆಗಿನ ಲೇಖನದ ಕುರಿತು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಚರ್ಚೆಯ ಬದಲು ಹೊಡೆದಾಟ ನಡೆದಿರುವ ಸುದ್ದಿ ಹೊರ ಬಿದ್ದಿದೆ. ಸಂಕಿರಣಕ್ಕೆ ವಿಶೇಷ ಆಗಮಿತರಾಗಿದ್ದ ಪವಿತ್ರ ಮಜಾವಾಣಿಯ ಪರಮ ಭಕ್ತರಾದ ಗಾಂಪೇಶಾನಂದ ಸ್ವಾಮಿಗಳು ಸಂಕಿರಣದಲ್ಲಿ ಭಾಗವಹಿಸಿದ್ದ ಇತರರ ಮೇಲೆ ಏಕ ವಚನದಲ್ಲಿ ಕೂಗುತ್ತಾ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ.

Labels:

Friday, July 06, 2007

ಮಜಾವಾಣಿ: ಆರೋಗ್ಯ ವಾಣಿ

ಅನಾರೋಗ್ಯಕರ ಹಾಡುಗಳ ನಿಷೇಧ?!

ಬೆಂಗಳೂರು, ಜುಲೈ ೮: ಮಕ್ಕಳಿಂದ ಹಾಡನ್ನು ಹಾಡಿಸುವಾಗ ಸೂಕ್ತ ಎಚ್ಚರಿಕೆ ತೆಗೆದುಕೊಳ್ಳುವಂತೆ ಆರೋಗ್ಯ ಸಚಿವ ಆರ್.ಅಶೋಕ್ ಪೋಷಕರಿಗೆ ಕರೆ ಇತ್ತಿದ್ದಾರೆ.

ಮಕ್ಕಳ ಆರೋಗ್ಯದ ಕುರಿತು ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಭಾಷಣ ಮಾಡುತ್ತಿದ್ದ ಸಚಿವರು, "ಮಕ್ಕಳ ಮೂಗು ಇನ್ನೂ ಚಿಕ್ಕದಾಗಿರುವುದರಿಂದ ಅವರ ಉಸಿರಾಟದ ಕಡೆಗೆ ಗಮನ ನೀಡುವುದು ಅತ್ಯವಶ್ಯ. ಮಕ್ಕಳಿಂದ ಹಾಡುಗಳನ್ನು ಹಾಡಿಸುವಾಗ ಇದನ್ನು ಎಲ್ಲಾ ಪೋಷಕರೂ ಗಮನದಲ್ಲಿಟ್ಟುಕೊಂಡಿರಬೇಕು" ಎಂದರು.
ಇತ್ತೀಚೆಗೆ ಖ್ಯಾತ ಹಿಂದಿ ಗಾಯಕ ಹಿಮೇಶ್ ರೇಶಮ್ಮಿಯಾ ಹಾಡಿರುವ ಹಾಡುಗಳನ್ನು ಹಾಡಲು ಪ್ರಯತ್ನಿಸಿದ ಹಲವು ಮಕ್ಕಳು ಉಸಿರು ಕಟ್ಟಿ ಆಸ್ಪತ್ರೆಗೆ ದಾಖಲಾಗಿರುವ ಪ್ರಸಂಗಗಳನ್ನು ಪ್ರಸ್ತಾಪಿಸಿದ ಸಚಿವರು, ರೇಶಮ್ಮಿಯಾ ಹಾಡುಗಳನ್ನು ಮಕ್ಕಳು ಹಾಡುವುದನ್ನು ನಿಷೇಧಿಸಲು ಸರ್ಕಾರ ಆಲೋಚಿಸುತ್ತಿರುವುದಾಗಿ ತಿಳಿಸಿದರು.

ಮಕ್ಕಳ ವೈದ್ಯರ ಬಗೆಗೆ ಆತಂಕ:
ಮಕ್ಕಳು ಬೆಳೆದು ದೊಡ್ಡವರಾದರೂ ಮಕ್ಕಳ ವೈದ್ಯರ ವೈದ್ಯಕೀಯ ಅಭ್ಯಾಸದಲ್ಲಿ ಬೆಳವಣಿಗೆ ಇಲ್ಲದಿರುವುದರ ಬಗೆಗೆ ಸಚಿವ ಅಶೋಕ್ ತಮ್ಮ ಆತಂಕ ವ್ಯಕ್ತ ಪಡಿಸಿದ್ದಾರೆ. ಮಜಾವಾಣಿಯಲ್ಲಿ ಪ್ರಕಟವಾಗಿರುವ ತನಿಖೆ/ಸಮೀಕ್ಷೆ ಒಂದರ ಪ್ರಕಾರ, ಮಕ್ಕಳು ಬೆಳೆದು ದೊಡ್ಡವರಾದರೂ, ಬಹುತೇಕ ಮಕ್ಕಳ ವೈದ್ಯರು ಮಾತ್ರ ಮಕ್ಕಳ ಚಿಕಿತ್ಸೆಯ ಅಭ್ಯಾಸದಲ್ಲಿಯೇ ತೊಡಗಿರುತ್ತಾರೆ. "ಇದು ಅತ್ಯಂತ ಕಳವಳಕಾರಿ ವಿಷಯ" ಎಂದ ಸಚಿವರು, ಈ ವಿಚಾರವನ್ನು ಹೊರಗೆಳೆದ ಮಜಾವಾಣಿ ಪತ್ರಿಕೆಯ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು.

Labels:

Tuesday, July 03, 2007

ಮಜಾವಾಣಿ: ಅತಿಥಿಗಳ ಸಂಪಾದನೆ

ಕಿಂಗ್ ಫಿಷರ್ ಏರ್ ಲೈನ್ಸ್ ನಲ್ಲಿ ನಮಗೂ ಪಾಲು ಕೊಡಿ: ಅ.ಭಾ.ಮ.ಪ್ರೀ.ಸಂ.(ಅ.ರಿ.)

ಕಿಂಗ್ ಫಿಷರ್ ಏರ್ ಲೈನ್ಸ್ ನ ಮಾಲಿಕ ಡಾ|| ವಿಜಯ್ ಮಲ್ಯ ಅವರು ಏರ್ ಡೆಕ್ಕನ್ ಕಂಪನಿಯನ್ನು ಕೊಂಡ ವಿಷಯವನ್ನು ಕೇಳಿದ ಅ.ಭಾ.ಮ.ಪ್ರೀ.ಸಂ.(ಅ.ರಿ.) (ಅಖಿಲ ಭಾರತ ಮದ್ಯಪಾನ ಪ್ರೀಯರ ಸಂಘ. ಅನ್ ರಿಜಿಸ್ಟರ್ಡ್) ದ ಅಧ್ಯಕ್ಷರೂ ಹಾಗೂ ಕುಡಿತವನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿರುವ ಶ್ರೀ ಮಧುಸೇವನ್ ಅವರು ನಿನ್ನೆ ರಾತ್ರಿ ಗಿರಿನಗರದಲ್ಲಿರುವ ಬಾರೊಂದರಲ್ಲಿ ನಡೆದ ಪತ್ರಿಕಾ(ಪಾನ)ಗೋಷ್ಠಿಯಲ್ಲಿ ಈ ಬೇಡಿಕೆಯನ್ನು ಮಂಡಿಸಿದರು.

ಅವರು ಹೇಳಿದ್ದು - ನಮ್ಮ ಸಂಘದ ಎಲ್ಲಾ ಸದಸ್ಯರೂ ಕೇವಲ ಮಲ್ಯ ಅವರ ಕಂಪನಿಯ ಮದ್ಯವನ್ನೇ ಕುಡಿಯುವುವವರು. ಮಲ್ಯ ಅವರ ಲಾಭದಲ್ಲಿ ಬಹುಪಾಲು ನಮ್ಮ ಸದಸ್ಯರುಗಳ ಕಾಣಿಕೆ ಇದೆ. ನಾವು ಕುಡಿಯುವುದು ಕೇವಲ ಚಟಕ್ಕಾಗಿ ಅಲ್ಲ. ಅದರ ಹಿಂದೆ ಈ ಒಂದು ವ್ಯಾವಹಾರಿಕ ಉದ್ದೇಶವೂ ಇದೆ. ಲೆಕ್ಕದ ಪ್ರಕಾರ ಸಂಘಕ್ಕೆ 30% ಪಾಲು ಬರಬೇಕು. ಮಲ್ಯ ಅವರು ಇದನ್ನು ಗುರುತಿಸಿ ನಮ್ಮ ಬೇಡಿಕೆಯನ್ನು ಈಡೇರಿಸಬೇಕು.

ಮುಂದುವರಿಸಿದ ಮಧುಸೇವನ್ ಅವರು ಹೇಳಿದ್ದು - ಇದಕ್ಕೆ ಮಲ್ಯ ಅವರು ಒಪ್ಪದಿದ್ದರೆ ನಾವು ಅವರಿಗೆ ಪ್ರತಿಸ್ಪರ್ಧಿಯಾಗಲು ಹಿಂಜರಿಯುವುದಿಲ್ಲ. ಗೋಪಿನಾಥ್ ಅವರ ಹತ್ತಿರ ಒಪ್ಪಂದ ಮಾಡಿಕೊಂಡು "ಓಲ್ಡ್ ಮಾಂಕ್ ಏರ್ ಲೈನ್ಸ್" ಅನ್ನು ಪ್ರಾರಂಭಿಸುತ್ತೇವೆ. ಮಲ್ಯ ಅವರಿಗೆ ಒಂದು ತಿಂಗಳು ಸಮಯವನ್ನು ಕೊಟ್ಟಿದ್ದೇವೆ. ಈ ಸಮಯದಲ್ಲಿ ಉತ್ತರ ಬರದಿದ್ದಲ್ಲಿ ನಾವು ಹೊಸ ಕಂಪನಿಯ ವಿವರಗಳನ್ನು ಇದೇ ಸ್ಥಳದಲ್ಲಿ ಪ್ರಕಟಿಸುತ್ತೇವೆ.

(ಮಜಾವಾಣಿಯ ಈ ಸಂಚಿಕೆ ಅತಿಥಿ ಸಂಪಾದಕ/ವರದಿಗಾರರಿಂದ ಮೂಡಿ ಬಂದಿದೆ. ಹಳ್ಳಿಯ ನಡುವೆ ಹರ್ಷ ಚಿತ್ತರಾಗಿದ್ದರೂ ಅನಾಮಿಕರಾಗಿಯೇ ಇರ ಬಯಸುವ ಶ್ರೀಯುತರಿಗೆ ನಮ್ಮ ಅನಂತ ಧನ್ಯವಾದಗಳು)

Labels: , ,

Thursday, June 28, 2007

ಮಜಾವಾಣಿ: ಆರೋಗ್ಯ ವಾಣಿ

ರೋಗಿಗಳೇ ಎಚ್ಚರದಿಂದಿರಿ!

ನವ ದೆಹಲಿ, ಜೂನ್ ೨೮: ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಎಚ್ಚರಿದಿಂದಿರುವಂತೆ ಕೇಂದ್ರ ಆರೋಗ್ಯ ಇಲಾಖೆ ಎಲ್ಲಾ ರೋಗಿಗಳಿಗೂ ಎಚ್ಚರಿಕೆಯ ಸೂಚನೆ ನೀಡಿದೆ.

ಶಸ್ತ್ರ ಚಿಕಿತ್ಸೆಯ ಮುನ್ನ ಅರಿವಳಿಕೆ ನೀಡಿದಾಗ ಜ್ಞಾನ ತಪ್ಪಿದವರಂತೆ ನಟಿಸಿ, ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರನ್ನು ಗಮನಿಸುತ್ತಿರಬೇಕೆಂದು ಆರೋಗ್ಯ ಇಲಾಖೆ ರೋಗಿಗಳಿಗೆ ಕರೆ ನೀಡಿದೆ. ಅದರಲ್ಲೂ ತಮಿಳು ನಾಡಿನಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗುವ ರೋಗಿಗಳು ವಿಶೇಷ ಎಚ್ಚರವಹಿಸಬೇಕೆಂದಿರುವ ಇಲಾಖೆ, ಅಲ್ಲಿನ ರೋಗಿಗಳು ಜ್ಞಾನ ತಪ್ಪಿದವರಂತೆ ನಟಿಸುವುದು ಮಾತ್ರವಲ್ಲದೇ, ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಕನಿಷ್ಠ ಒಂದು ಗೊನೆ ಬಾಳೆಯ ಹಣ್ಣನ್ನು ಪಕ್ಕದಲ್ಲಿ ಇಟ್ಟುಕೊಂಡಿರುವಂತೆ ಎಚ್ಚರಿಸಿದೆ.

ಗಿನೆಸ್ ದಾಖಲೆಗಾಗಿ ಕಳೆದ ವರ್ಷ ತಮಿಳು ನಾಡಿನ ವೈದ್ಯರೊಬ್ಬರು ೨೪ಗಂಟೆಯಲ್ಲಿ ೫೦ ಹರ್ನಿಯಾ ಸರ್ಜರಿ ಮಾಡಿದ್ದು ಹಳೆಯ ಸಂಗತಿಯಾದರೆ, ಇತ್ತೀಚೆಗೆ ಅಲ್ಲಿನ ವೈದ್ಯ ದಂಪತಿಗಳು ತಮ್ಮ ಹದಿನೈದು ವರ್ಷದ ಶಿಶುವಿನಿಂದ ಸಿಸೇರಿಯನ್ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಇನ್ನೊಬ್ಬ ವೈದ್ಯರು ತಾವು ಸಾಕಿರುವ ಮಂಗನಿಂದ ಮಿದುಳು ಸರ್ಜರಿ ಮಾಡಿಸಲು ಸಿದ್ಧತೆ ನಡೆಸುತ್ತಿದ್ದಾರೆನ್ನಲಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಆತಂಕ ವ್ಯಕ್ತ ಪಡಿಸಿದೆ.

Labels: , ,

Monday, June 25, 2007

ಮಜಾವಾಣಿ: ಪಾಶವೀ ಪ್ರೇಮ

ಸಕ್ರಿಯ ಕಪ್ಪೆ ಎಸೆತದಿಂದ ದೇವೇ ಗೌಡ ನಿವೃತ್ತಿ

ಬೆಂಗಳೂರು, ಜೂನ್ ೨೫: ಇನ್ನು ಮುಂದೆ ತಾವು ಕಪ್ಪೆ ಎಸೆಯುವುದನ್ನು ನಿಲ್ಲಿಸುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಘೋಷಿಸಿದ್ದಾರೆ.

ನಮ್ಮ ಪತ್ರಿಕೆಯ ಅತ್ಯಂತ ಸಮೀಪ ಸ್ಪರ್ಧಿಯಾದ ವಿಜಯ ಕರ್ನಾಟಕ ಪತ್ರಿಕೆ ಗೌಡರ ಕಪ್ಪೆ ಎಸೆಯುವ ಹವ್ಯಾಸದ ಕುರಿತು ವರದಿಮಾಡಿದ್ದು, ಅದನ್ನು ಒಂದು ರಾಜಕೀಯ ತಂತ್ರವೆಂಬಂತೆ ವರದಿ ಮಾಡಿತ್ತು. ಆದರೆ, ಇದನ್ನು ಅಲ್ಲಗೆಳೆದ ಗೌಡರು, "ಇದೊಂದು ಹವ್ಯಾಸ ಅಷ್ಟೇ. ಇದಕ್ಕೆ ರಾಜಕೀಯದ ಬಣ್ಣ ಬೇಡ. ಇತ್ತೀಚೆಗೆ ಕಪ್ಪೆಗಳನ್ನು ಹಿಡಿದಿಡಿಯುವುದೂ ಕಷ್ಟವಾಗುತ್ತಿದೆ. ಜೊತೆಗೆ ಹಾವುಗಳ ಕಾಟ ಬೇರೆ. ಹೀಗಾಗಿ, ಇನ್ನು ಮುಂದೆ ಕಪ್ಪೆ ಎಸೆಯುವುದನ್ನು ನಿಲ್ಲಿಸುತ್ತೇನೆ" ಎಂದಿದ್ದಾರೆ.

Labels: ,

Thursday, June 21, 2007

ಮಜಾವಾಣಿ: ಪುಸ್ತಕ ವಿಮರ್ಶೆ

ಆಭರಣ: ಇಷ್ಟಪಟ್ಟವರಿಗೆ ಮಾತ್ರ ಇಷ್ಟವಾಗುವ ಕಾದಂಬರಿ
[ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರ ನೂತನ ಕಾದಂಬರಿ ವಿವಾದಾಸ್ಪದ ಕೃತಿಯಾಗಿದ್ದು ಕರ್ನಾಟಕದಾದ್ಯಂತ ಅತೀವ ಚರ್ಚೆಗೆ ಕಾರಣವಾಗಿದೆ. ಬಲ ಪಂಥೀಯರು ಈ ಕಾದಂಬರಿಯನ್ನು ಮೆಚ್ಚಿ ಕೊಂಡಾಡುತ್ತಿದ್ದರೆ, ಎಡ ಪಂಥೀಯರು ಮೆಚ್ಚದೆ ಕೆಂಡವಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಈ ವಿವಾದಾಸ್ಪದ ಕೃತಿಯ ಸಾಹಿತ್ಯಕ ಮೌಲ್ಯವನ್ನು ವಸ್ತುನಿಷ್ಠವಾಗಿ ಮತ್ತು ವೈಜ್ಞಾನಿಕವಾಗಿ ತುಲನೆ ಮಾಡುವುದು ಮಜಾವಾಣಿಯಂತಹ ದ್ವಿಪಂಥೀಯ ಪತ್ರಿಕೆಗೆ ಮಾತ್ರ ಸಾಧ್ಯ. ಸಾಧ್ಯತೆಯೊಂದಿಗೇ ಬರುವ ಗುರುತರವಾದ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿರುವ ನಮ್ಮ ಪತ್ರಿಕೆ, ಭೈರಪ್ಪನವರ ಈ ಪುಸ್ತಕವನ್ನು ವಿಮರ್ಶಿಸುವ ಹೊಣೆಯನ್ನು ಗೋಪಾಲ ಕೃಷ್ಣ ಅವರ ವಿಶಾಲವಾದ ಹಣೆಗೆ ಬರೆಯಿತು.

ಮಜಾವಾಣಿ ಓದುಗರಿಗೆ ಪರಿಚಯವಿರುವಂತೆ, ಗೋಪಾಲ ಕೃಷ್ಣ ನಮ್ಮ ಪತ್ರಿಕೆಯ ವೈಜ್ಞಾನಿಕ ವರದಿಗಾರರು
ಮತ್ತು ಕಳೆದ ಬಾರಿಯ ಮಜಾವಾಣಿ ವೈಜ್ಞಾನಿಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಪ್ರಥಮ ಬಹುಮಾನ ಪಡೆದಂತವರು. - ಸಂಪಾದಕ]

ಎಸ್.ಎಲ್.ಭೈರಪ್ಪನವರ ಹೊಸ ಪುಸ್ತಕದ ಹೆಸರಿನಲ್ಲಿಯೇ ತಪ್ಪಿದೆ. ಪುಸ್ತಕದ ಹೆಸರು "ಆಭರಣ" ಎಂದಿರ ಬೇಕಾದದ್ದು "ಆವರಣ" ಎಂದು ಮುದ್ರಿತವಾಗಿದೆ. ಈ ಪುಸ್ತಕ ಹಲವಾರು ಆವೃತ್ತಿಗಳನ್ನು ಈಗಾಗಲೇ ಕಂಡಿದೆ. ಆದರೂ ಈ ಮುದ್ರಣ ದೋಷವನ್ನು ಲೇಖಕರಾಗಲಿ, ಪ್ರಕಾಶಕರಾಗಲಿ, ಮುದ್ರಕರಾಗಲಿ ಕಡೆಗೆ ಓದುಗರಾಗಲಿ ಗಮನಿಸಿಯೇ ಇಲ್ಲ. ಕನ್ನಡ ಸಾಹಿತ್ಯ ಈ ಮಟ್ಟಕ್ಕೆ ಇಳಿದಿರುವುದು ಖಂಡಿತಾ ಖಂಡನೀಯ.

ಈ ಪುಸ್ತಕದ ಕುರಿತು ಮಾತನಾಡುತ್ತಾ ಯು.ಆರ್.ಅನಂತ ಮೂರ್ತಿ "ಭೈರಪ್ಪ ಒಬ್ಬ ಡಿಬೇಟರ್" ಎಂದಿದ್ದಾರೆ. ಅದು ನಿಜ. ಮುದ್ರಣ ದೋಷದಿಂದ "ಆಭರಣ" "ಆವರಣ" ಆಗಿದೆ ಎಂದು ಒಪ್ಪಿಕೊಂಡು ತಿದ್ದುವ ಬದಲು, "ಆವರಣ"ವೇ ಸರಿಯೆಂದು ಭೈರಪ್ಪ ವಾದಿಸುತ್ತಾರೆ. ಅದಕ್ಕೋಸ್ಕ್ರರ ತೆಲುಗು ಚಿತ್ರ ನಾಯಕ ನಾಗಾರ್ಜುನ ಹೇಳಿದ್ದನ್ನು ಮತ್ತೆ ಮತ್ತೆ ಹೇಳುತ್ತಾರೆ. (ಪುಟ vii ಮತ್ತು viii) ಇದು ತುಂಬಾ ತಪ್ಪು. ಎಲ್ಲರ ಪುಸ್ತಕದಲ್ಲೂ ಮುದ್ರಣ ದೋಷ ಇರುತ್ತದೆ. ಅದನ್ನು ಒಪ್ಪಿಕೊಳ್ಳುವ ದೊಡ್ಡ ಮನಸ್ಸು ಲೇಖಕರಿಗೆ ಇರಬೇಕು. ತಿದ್ದುಪುಡಿ ಪ್ರಕಟಿಸುವುದನ್ನು ಬಿಟ್ಟು ತಪ್ಪನ್ನು ಸಮರ್ಥಿಸಿಕೊಳ್ಳಲು ತೆಲುಗು ಫಿಲಂ ಸ್ಟಾರ್ ಹೆಸರು ಹೇಳುವುದು ಸರಿಯಲ್ಲ.

ಆಭರಣದ ಕಥೆಯ ಹಂದರ ಬಹಳ ಸರಳ. ಕಥಾನಾಯಕಿ ಆಭರಣ ಪ್ರೇಮಿ. ಅದನ್ನು ಆಕೆಯ ಹೆಸರೇ ತಿಳಿಸುತ್ತದೆ. ಅವಳ ಹೆಸರು ಸರಸ್ವತಿಯಲ್ಲ, ಕಡೆಗೆ ಪಾರ್ವತಿಯೂ ಅಲ್ಲ. ಲಕ್ಷ್ಮಿ! ಅವಳ ಗಂಡನ ಹೆಸರು ಅಮೀರ (ಹಿಂದಿಯಲ್ಲಿ ಶ್ರೀಮಂತ)!! ಸಹಜವಾಗಿಯೇ ಈ ಆಭರಣ ಪ್ರೇಮಿ ಶ್ರೀಮಂತನನ್ನು ಮದುವೆಯಾಗಿರುತ್ತಾಳೆ. ಹೆಸರಿನಿಂದಲೇ ಗುಣವನ್ನು ನಿರೂಪಿಸುವ ಭೈರಪ್ಪನವರ ಕಥನ ತಂತ್ರ ಅನನ್ಯ. (ಆದರೆ, ಇಲ್ಲೂ ಸಹ ಭೈರಪ್ಪನವರ ಫಿಲಂ ಸ್ಟಾರ್ ವ್ಯಸನ ಕಾಣುತ್ತದೆ. ಬೇಕೆಂದೇ ಅಮೀರ್ ಖಾನ್ ಹೆಸರು ಪ್ರಸ್ತಾಪಿಸುತ್ತಾರೆ.)

ಒಮ್ಮೆ ಇಬ್ಬರೂ ಹಂಪಿಗೆ -- ರತ್ನ, ವಜ್ರ, ವೈಢೂರ್ಯ ಖಚಿತ ಆಭರಣಗಳನ್ನು ರಸ್ತೆ ಬದಿಯಲ್ಲಿ ಮಾರುತ್ತಿದ್ದ ಹಂಪಿಗೆ -- ಬರುತ್ತಾರೆ. ಹಂಪಿ ರಸ್ತೆಗಳಲ್ಲಿ ಒಂದೂ ಆಭರಣ ಕಾಣುವುದಿಲ್ಲ. ಅವನ್ನೆಲ್ಲಾ ಯಾರೋ ಒಬ್ಬ ಮುಸ್ಲಿಂ ರಾಜ ದೋಚಿಕೊಂಡು ಹೋಗಿರುವುದು ಅವಳಿಗೆ ತಿಳಿಯುತ್ತದೆ. ಅಮೀರನೂ ಮುಸ್ಲಿಮನೇ ಆದ್ದರಿಂದ ಅವನ ಬಳಿ ಆ ಆಭರಣಗಳು ಇರಬಹುದೆಂದು ಲಕ್ಷ್ಮಿ ಯೋಚಿಸುತ್ತಾಳೆ. ಆದರೆ, ಅವನ ಬಳಿ ಆ ಆಭರಣಗಳು ಇರುತ್ತವೆಯೋ ಇಲ್ಲವೋ, ಅವನಂತೂ ಆಕೆಗೆ ಅವನ್ನು ಕೊಡುವುದಿಲ್ಲ. ಕಾಣೆಯಾಗಿರುವ ಆಭರಣಗಳು ಅವಳನ್ನು ಕಾಡುತ್ತವೆ. ಮನಸ್ಸು ಬೇಸರಿಸುತ್ತದೆ.

ಅಷ್ಟರಲ್ಲಿ, ಲಕ್ಷ್ಮಿಯ ಅಪ್ಪ ಸಾಯುತ್ತಾರೆ. ಲಕ್ಷ್ಮಿ ಅಪ್ಪನ ಮನೆಗೆ ಬರುತ್ತಾಳೆ. ಅಲ್ಲೂ ಯಾವುದೇ ಆಭರಣಗಳಿರುವುದಿಲ್ಲ. ಬದಲಿಗೆ, ರಾಶಿ, ರಾಶಿ ಪುಸ್ತಕಗಳು. ಇಲ್ಲಿ ಭೈರಪ್ಪನವರು ಕತೆಗೆ ಒಂದು ತಿರುವು ನೀಡುತ್ತಾರೆ. ಅಲ್ಲಿರುವ ಪುಸ್ತಕಗಳೆಲ್ಲಾ ಮುಸ್ಲಿಮರ ದಾಳಿಯ ಕುರಿತು ಮತ್ತು ನಾಪತ್ತೆಯಾಗಿರುವ ಆಭರಣಗಳ ಸುಳಿವು ನೀಡ ಬಹುದಾದಂತಹ ಪುಸ್ತಕಗಳು!! ಸಹಜವಾಗಿಯೇ ಲಕ್ಷ್ಮಿ ಈ ಪುಸ್ತಕಗಳನ್ನೆಲ್ಲಾ ಕೂಲಂಕುಶವಾಗಿ ಓದುತ್ತಾಳೆ. ಆ ಪುಸ್ತಕಗಳಲ್ಲಿ ಸಿಕ್ಕ ಸುಳಿವಿನಿಂದ ಆಕೆ ಗಯಾ, ಪ್ರಯಾಗ, ಕಾಶಿ, ಅಲಹಾಬಾದ್ ಹೀಗೆ ಉತ್ತರ ಭಾರತದ ಹಲವಾರು ಸ್ಥಳಗಳಿಗೆ ಆಭರಣದ ಅನ್ವೇಷಣೆಗಾಗಿ ಹೋಗುತ್ತಾಳೆ.

ಅನ್ವೇಷಣೆ ಮುಗಿಸಿ ಆಕೆ ವಾಪಸು ಬರುತ್ತಿದ್ದ ಹಾಗೆ, ಈ ಆಭರಣಗಳ ವಿಷಯ ಪೋಲೀಸರಿಗೆ ತಿಳಿಯುತ್ತದೆ. ಅವರು, ಲಕ್ಷ್ಮಿಯನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಳ್ಳಲು ನಿರ್ಧರಿಸುತ್ತಾರೆ. ಅಷ್ಟರಲ್ಲಿಯೇ ಈ ವಿಚಾರ ತಿಳಿದುಕೊಳ್ಳುವ ಅಮೀರ, ಎರಡನೆಯ ಹೀರೋಯಿನ್ ಸಹವಾಸ ಬಿಟ್ಟು ಲಕ್ಷ್ಮಿಯ ಸಹಾಯಕ್ಕೆ ಬರುತ್ತಾನೆ. ಒಟ್ಟಿನಲ್ಲಿ, ಆಭರಣಕ್ಕಾಗಿ ಬೇರಾಗುವ ಲಕ್ಷ್ಮಿ ಮತ್ತು ಅಮೀರರು ಕಡೆಗೆ ಆಭರಣದಿಂದಲೇ ಒಂದಾಗುತ್ತಾರೆ. ಇತಿಹಾಸ ಒಂದು ಚಕ್ರ ಎಂಬುದನ್ನು ಭೈರಪ್ಪನವರು ಯಶಸ್ವಿಯಾಗಿ ನಿರೂಪಿಸಿದ್ದಾರೆ.

ಈ ಮೂಲ ಗಂಭೀರ ಕಥೆಗೆ ಕೊಂಚ ಮಟ್ಟಿಗೆ ಕಾಮಿಕ್ ರಿಲೀಫ್ ತರಲು, ಭೈರಪ್ಪನವರು ಪ್ರೊ.ಶಾಸ್ತ್ರಿ ಎಂಬ ಕಾಮಿಕ್ ವಿಲನ್ ಪಾತ್ರ ಸೃಷ್ಟಿಸಿದ್ದಾರೆ. ಈತನಿಗೂ ಆಭರಣಗಳ ಮೇಲೆ ಆಸಕ್ತಿ. ಲಕ್ಷ್ಮಿ ಉತ್ತರ ಭಾರತದಲ್ಲಿ ಅನ್ವೇಷಣಾ ಪ್ರಯಾಣದಲ್ಲಿದ್ದಾಗ ಈತನೂ ಅಲ್ಲಿರುತ್ತಾನೆ. ಮಹಾ ದುಷ್ಟ ವ್ಯಕ್ತಿ. ಘೋ ಮುಖ ವ್ಯಾಘ್ರ. ಕಥೆಯಲ್ಲಿ ಲಕ್ಷ್ಮಿಯ ಅಪ್ಪ ಮತ್ತು ಶಾಸ್ತ್ರಿಯ ಅಪ್ಪ ವಯಸ್ಸಾಗಿ ತೀರಿಕೊಳ್ಳುತ್ತಾರೆ. ಆದರೆ, ಈತ ಎಂತಹ ದುಷ್ಟನೆಂದರೆ, ಭೈರಪ್ಪನವರಿಗೂ ತಿಳಿಯದಂತೆ ಈತನೇ ಅವರಿಬ್ಬರ ಕೊಲೆ ಮಾಡಿರುವ ಸಾಧ್ಯತೆಗಳು ಸಹ ಇವೆ.

ಕಥೆಯ ಒಳಗೆ ಇನ್ನೊಂದು ಕಥೆಯಿದೆ. ಇದರಲ್ಲಿ ಒಬ್ಬ ಯುವ ರಾಜಕುಮಾರ ಮತ್ತು ಆತನ ಪತ್ನಿ ಇರುತ್ತಾರೆ. (ರಾಜಕುಮಾರ ಮತ್ತು ಆತನ ಪತ್ನಿ ಎಂದಮೇಲೆ ಆಭರಣಗಳೂ ಇದ್ದೇ ಇರುತ್ತವೆ. ಹೇಳಬೇಕಾದ್ದೇ ಇಲ್ಲ. ಮುದ್ರಣ ದೋಷ ಒಪ್ಪಿಕೊಳ್ಳಲು ಇಷ್ಟವಿಲ್ಲದ ಭೈರಪ್ಪನವರು ಹೇಳುವುದೂ ಇಲ್ಲ.) ಆತನ ರಾಜ್ಯದ ಮೇಲೆ ಆಭರಣಗಳ ಆಸೆಯಿಂದ ಮುಸ್ಲಿಮ್ ದಂಡುಕೋರನೊಬ್ಬ ದಂಡೆತ್ತಿ ಬರುತ್ತಾನೆ. ಆಭರಣಗಳ ಜೊತೆಗೇ, ರಾಜಕುಮಾರನ ಪುರುಷತ್ವವನ್ನೂ -- ಅಂದರೆ ಪ್ರತಿ ಪುರುಷನ ಅತ್ಯಮೂಲ್ಯ ಆಭರಣವನ್ನೇ -- ದೋಚುತ್ತಾನೆ. ರಾಜಕುಮಾರ ಮತ್ತು ಆತನ ಪತ್ನಿ ಬೇರಾಗುತ್ತಾರೆ. ಇಬ್ಬರೂ ಬೇರೆ ಬೇರೆ ಅಂತಃಪುರಗಳಲ್ಲಿ ಗುಲಾಮರಾಗುತ್ತಾರೆ. ಹಲವು ವರ್ಷಗಳೇ ಕಳೆಯುತ್ತವೆ. ಒಮ್ಮೆ, ರಾಜಕುಮಾರ ಗುಲಾಮನಾಗಿರುವ ಅಂತಃಪುರದ ಒಡತಿ, ಆತನ ಪತ್ನಿ ಗುಲಾಮಳಾಗಿರುವ ಅಂತಃಪುರದ ಒಡತಿಗೆ ಒಂದು ಆಭರಣವನ್ನು, ರಾಜಕುಮಾರನ ಮೂಲಕ ಕಳುಹಿಸುತ್ತಾಳೆ. ರಾಜಕುಮಾರ ಮತ್ತು ಆತನ ಪತ್ನಿ ಮತ್ತೆ ಭೇಟಿಯಾಗುತ್ತಾರೆ. ಕಡೆಗೆ ಒಂದಾಗುತ್ತಾರೆ.

ಹೊರ ಕಥೆಯಂತೆಯೇ, ಒಳ ಕಥೆಯಲ್ಲೂ ಆಭರಣದಿಂದ ಬೇರಾದ ಪತಿ-ಪತ್ನಿಯರು, ಆಭರಣದ ಮೂಲಕವೇ ಒಂದಾಗುತ್ತಾರೆ. ಆದರೆ ಭೈರಪ್ಪನವರು ಮಾತ್ರ ಒಂದು ಸಣ್ಣ ಮುದ್ರಣ ದೋಷವನ್ನು ಒಪ್ಪಿಕೊಳ್ಳಬಾರದೆಂಬ ಛಲದಿಂದ, ಆಭರಣದ ವಿಚಾರವನ್ನು ಮಿನಿಮೈಸ್ ಮಾಡಲು ಇಡೀ ಕಾದಂಬರಿ ಪೂರ್ತಿ ಹೆಣಗುತ್ತಾರೆ. "ಆಭರಣ" ಪದವನ್ನು ಪೂರ್ಣವಾಗಿ ಅವಾಯಿಡ್ ಮಾಡಲು ಹರ ಸಾಹಸ ಪಡುತ್ತಾರೆ. ಏನೇನೋ ಹೇಳುತ್ತಾರೆ. ಹಿಂದು, ಮುಸ್ಲಿಂ, ಕುರಾನ್, ದೇವಸ್ಥಾನ ಇತ್ಯಾದಿ, ಇತ್ಯಾದಿ - ಆಭರಣ ಬಿಟ್ಟು ಉಳಿದೆಲ್ಲವನ್ನೂ! ಆದರೂ ಕೊನೆಗೆ ಪೂರ್ತಿ ಸೋಲುತ್ತಾರೆ. ಕಾದಂಬರಿಯ ನಿಜವಾದ ಹೆಸರು ಆಭರಣ ಎಂದು ಯಾವುದೇ ಅನುಮಾನವಿಲ್ಲದೆ ನಿರೂಪಿತವಾಗುತ್ತದೆ. ಭೈರಪ್ಪ ಒಬ್ಬ "ಡಿಬೇಟರ್" ಇರಬಹುದು ಆದರೆ ಖಂಡಿತಾ "ಒಳ್ಳೇ ಡಿಬೇಟರ್" ಅಲ್ಲ.

ಆಭರಣ ಒಂದು ಪಂಗಡದ ಮನ ನೋಯಿಸುವಂತಹ ಪುಸ್ತಕವೇ? ಸಂಶಯವೇ ಇಲ್ಲ. ಇಡೀ ಪುಸ್ತಕದಲ್ಲಿ ಉತ್ತರ ಭಾರತೀಯರ ಬಗೆಗೆ ಅಸಡ್ಡೆ, ಉಪೇಕ್ಷೆ ಎದ್ದು ಕಾಣುತ್ತದೆ. ಉದಾಹರಣೆ:

ಸೈಕಲ್ ರಿಕ್ಷಾದಲ್ಲಿ ಕುಳಿತು ವಿಶ್ವವಿದ್ಯಾಲಯದ ಅತಿಥಿಗೃಹಕ್ಕೆ ಹೋಗಿ ಕೇಳಿದಾಗ ಮ್ಯಾನೇಜರ್, 'ಹೌದು ಬೆಂಗಳೂರಿನ ಪ್ರೊಫೆಸರ್ ಸಾಸ್ತ್ರೀಜಿ ಸ್ವೀಟ್ ನಂಬರ್ ಎರಡರಲ್ಲಿ ಇದಾರೆ. ಈಗ ವರ್ಕ್‌ಸಾಪಿನಲ್ಲಿದಾರೆ, ಸೋಸಿಯಲ್ ಸೈನ್ಸ್ ಬ್ಲಾಕ್' ಎಂದ. (ಪುಟ ೨೧೪)


ಉತ್ತರ ಭಾರತೀಯರು ಯಾವಾಗಲೂ ಪಾನ್ ಜಗಿಯುತ್ತಾ, ಎಲ್ಲೆಂದರಲ್ಲಿ ಉಗಿಯುವವರು. ಒರಟರು. ಜಗಳಗಂಟರು. ಸುಳ್ಳು ಹೇಳುವವರು. ಮೋಸ ಮಾಡುವವರು. ಲಾಲೂ, ಮುಲಾಯಮ್, ತರಹದವರು. ಇದು ಎಲ್ಲರೂ ಒಪ್ಪುವ ನಿಜ. ಆದರೂ ಅವರನ್ನು ಇನ್ನೂ ಸೈಕಲ್ ರಿಕ್ಷಾ ಬಳಸುವ ಹಿಂದುಳಿದವರು, "ಶ"ಕಾರ ಉಚ್ಚರಿಸಲಾರದವರು ಎಂಬಂತೆ ಭೈರಪ್ಪನವರು ಚಿತ್ರಿಸುವುದು ನಿಜಕ್ಕೂ ಖಂಡನೀಯ. ಉತ್ತರ ಭಾರತದ ವಿಶ್ವವಿದ್ಯಾಲಯದ ಬಗೆಗೆ ಅಷ್ಟೊಂದು ಅಸಡ್ಡೆಯಿಂದ ಬರೆಯುವ ಭೈರಪ್ಪನವರು, ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೈಕಲ್ ರಿಕ್ಷಾದಲ್ಲಿ ಹೋದಂತೆ ಬರೆಯ ಬಲ್ಲರಾ?
ಕಥನ ತಂತ್ರ: ಕಥೆಯೊಳಗೆ ಮತ್ತೆ ಅದೇ ಕಥೆಯನ್ನು ಹೇಳುವ ಕಥನ ತಂತ್ರದ ಮೂಲಕ ಇತಿಹಾಸದ ಚಕ್ರದೊಳಗೂ ಒಳ ಚಕ್ರ ಇರುತ್ತದೆ ಎಂಬುದನ್ನು ಭೈರಪ್ಪನವರು ಹೇಳುತ್ತಾರೆ. ಇದು ಒಂದು ರೀತಿಯಲ್ಲಿ ರೀ ಇನ್ವೆಂಟಿಂಗ್ ದ ವೀಲ್ ಅಲ್ಲವೇ? ಚಕ್ರದೊಳಗೆ ಇರುವುದು ಒಂದೇ ಚಕ್ರವೇ? ಒಳ ಚಕ್ರದಲ್ಲೂ ಇನ್ನೊಂದು ಚಕ್ರವಿರಲು ಸಾಧ್ಯವಿಲ್ಲವೇ? ಸರಳ ನಿರೂಪಣೆ, ವಾದಗಳಿಗೇ ಮೊರೆ ಹೋಗುವ ಭೈರಪ್ಪ ಇಂತಹ ಅತಿ ಮುಖ್ಯ ಮತ್ತು ಸಂಕೀರ್ಣ ಪ್ರಶ್ನೆಗಳನ್ನು ಕೇಳುವುದೇ ಇಲ್ಲ.

ಇನ್ನು ಕಾದಂಬರಿಯ ಸಾರ್ಥಕತೆಯ ಪ್ರಶ್ನೆ. ಒಂದು ಕಾದಂಬರಿ ಓದಿ ಇಷ್ಟಪಟ್ಟವರಿಗೆ ಮಾತ್ರ ಇಷ್ಟವಾದರೆ ಸಾರ್ಥಕವೇ? ಅಸಹ್ಯವಾದವರಿಗೂ ಇಷ್ಟವಾಗುವಂತೆ ಬರೆಯಲು ಸಾಧ್ಯವೇ ಇಲ್ಲವೇ? ಕನಿಷ್ಠ, ಇಷ್ಟವಾದವರಿಗೂ ಅಸಹ್ಯವಾಗುವಂತೆ ಬರೆಯಬಹುದಿತ್ತಲ್ಲವೇ?
[ಮಜಾವಾಣಿಯಿಂದ ಕಲಿಯಬಾರದೇ? - ಸಂಪಾದಕ]

ಆದರೆ, ಇವೆಲ್ಲಕ್ಕಿಂತಲೂ ಮುಖ್ಯವಾಗಿ, ಕಾದಂಬರಿ ಓದಿದ ನಂತರವೂ ಒಂದು ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ: ಲಕ್ಷ್ಮಿ ಪುಸ್ತಕಗಳ ಮಧ್ಯೆ ಅಡಗಿಸಿಟ್ಟಿದ್ದ ಆಭರಣಗಳು ಏನಾದವು?

Labels: , , ,

ಮಜಾವಾಣಿ: ಸಾಹಿತ್ಯ - ಮನರಂಜನೆ

ಸಾಹಿತಿಗಳ ವಿವಾದಕ್ಕೆ ಸಬ್ಸಿಡಿ ಇಲ್ಲ - ಸಿ.ಎಂ.

ಬೆಂಗಳೂರು, ಜೂನ್ ೨೦: ನಿನ್ನೆಯಷ್ಟೇ ಸಾಹಿತಿಗಳ ಮೇಲೆ ಮನರಂಜನಾ ತೆರಿಗೆ ಇಲ್ಲ ಎಂದಿದ್ದ ಮುಖ್ಯ ಮಂತ್ರಿ ಕುಮಾರಸ್ವಾಮಿ, ಇಂದು ಸಾಹಿತಿಗಳ ವಿವಾದಕ್ಕೆ ಸರ್ಕಾರ ಯಾವುದೇ ಸಬ್ಸಿಡಿ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ.

ರೀಮೇಕ್ ಚಲನಚಿತ್ರಗಳಿಗೂ ಸರ್ಕಾರದ ಸಬ್ಸಿಡಿ ಬೇಡಿರುವ ಕನ್ನಡ ಚಿತ್ರರಂಗದ ಗಣ್ಯರೊಂದಿಗೆ ಭೇಟಿ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಮುಖ್ಯ ಮಂತ್ರಿಗಳು, ಸಾಹಿತಿಗಳ ವಿವಾದ ಸ್ವಮೇಕ್ ಎಂದು ಒಪ್ಪಿಕೊಂಡರಾದರೂ, "ಸಾಹಿತಿಗಳ ಜಗಳಕ್ಕೆ ಯಾರ್ರೀ ಕೊಡ್ತಾರೆ ಸಬ್ಸಿಡಿ? ಏನು ತಮಾಷೆನಾ?" ಎಂದು ಈ ವಿಷಯ ಪ್ರಶ್ನಿಸಿದ ನಮ್ಮ ವರದಿಗಾರರ ಮೇಲೆ ರೇಗಿದರು.
ಯೋಚನೆ ಮಾಡಬೇಕಾದ ವಿಚಾರ: ಸಾಹಿತಿಗಳ ವಿವಾದಕ್ಕೆ ಸಬ್ಸಿಡಿ ನೀಡುವ ಬಗ್ಗೆ ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಖ್ಯಾತ ಸಾಹಿತ್ಯ ವಿವಾದ ತಜ್ಞ ರವಿ ಬೆಳಗೆರೆಯವರು, "ಮೊದಲನೆಯದಾಗಿ ವಿವಾದ ೧೦೦% ಸ್ವಮೇಕ್. entertainment value ಅಂತೂ ಇದ್ದೇ ಇದೆ. ಜೊತೆಗೆ ಮೆಸೇಜ್ ಸಹ ಇದೆ. ಮೊನ್ನೆ ನಮ್ಮ ಸ್ಕೂಲ್ ಮುಂದೆ ಹುಡುಗ್ರು ಜಗಳ ಆಡ್ತಿದ್ರು. ಆಫೀಸ್‌‍ಗೆ ಕರೆಸಿ, ಏನ್ರೋ ಒಳ್ಳೆ ಕನ್ನಡ ಸಾಹಿತಿಗಳ ತರ ಕಚ್ಚಾಡ್ತೀರಲ್ಲ ಅಂದೆ. ಅಷ್ಟೇ ಸಾಕು, ಜಗಳ ಪೂರ್ತಿ ನಿಲ್ಲಿಸಿದರು. ಸಬ್ಸಿಡಿ ಕೊಡಬೇಕು ಅನ್ನೋದು ಯೋಚನೆ ಮಾಡಬೇಕಾದ ವಿಚಾರ" ಎಂದರು.

Labels: , ,

Wednesday, June 20, 2007

ಮಜಾವಾಣಿ: ಸಾಹಿತ್ಯ - ಮನರಂಜನೆ

ಸಾಹಿತಿಗಳ ಮೇಲೆ ಮನರಂಜನಾ ತೆರಿಗೆ ಇಲ್ಲ - ಮು.ಮಂ.

ಬೆಂಗಳೂರು, ಜೂನ್ ೧೯: ಕನ್ನಡ ಸಾಹಿತಿಗಳ ಮೇಲೆ ಮನರಂಜನಾ ತೆರಿಗೆ ವಿಧಿಸುವ ಸಂಭವವನ್ನು ಮುಖ್ಯ ಮಂತ್ರಿ ಕುಮಾರಸ್ವಾಮಿ ಅಲ್ಲಗೆಳೆದಿದ್ದಾರೆ.

ಈ ವಿಷಯದ ಕುರಿತು ಪತ್ರಕರ್ತರೊಡನೆ ಮಾತನಾಡಿದ ಕುಮಾರಸ್ವಾಮಿಯವರು, "ಮನರಂಜನೆ ಒದಗಿಸುವವರ ಮೇಲೆಲ್ಲಾ ಮನರಂಜನಾ ತೆರಿಗೆ ವಿಧಿಸಲು ಸಾಧ್ಯವಿಲ್ಲ. ಅದರಲ್ಲೂ ನಿರುದ್ದೇಶವಾಗಿ ಬಿಟ್ಟಿ ಮನರಂಜನೆ ಒದಗಿಸುತ್ತಿರುವವರ ಮೇಲೆ ಯಾವುದೇ ತೆರಿಗೆ ವಿಧಿಸುವುದು ಕಾನೂನಿನ ಪ್ರಕಾರ ಸಾಧ್ಯವೇ ಇಲ್ಲ" ಎಂದಿದ್ದಾರೆ.

ಇತ್ತೀಚೆಗೆ ಕನ್ನಡದ ಹೆಸರಾಂತ ಸಾಹಿತಿಗಳು ಪ್ರತಿದಿನ ಉಚಿತ ಮನರಂಜನೆ ನೀಡುತ್ತಿದ್ದು, ಸಾರ್ವಜನಿಕರಲ್ಲಿ ಅವರ ಮೇಲೆ ಸರ್ಕಾರ ಮನರಂಜನಾ ಶುಲ್ಕ ವಿಧಿಸಬಹುದೆಂಬ ಶಂಕೆ ಮೂಡಿತ್ತು.

Labels: , ,

Sunday, June 17, 2007

ಮಜಾವಾಣಿ: ಅತಿಥಿಗಳ ಸಂಪಾದನೆ

ಡ್ರೈವ್ ಇನ್ ಸಿನೆಮಾ: ಕರಾವಳಿಯಲ್ಲಿ ಕಳವಳ
ಶ್ರೀನಿಧಿ ಹ೦ದೆ, ಕರಾವಳಿ ವಾಹನ-ಮನರಂಜನಾ ವರದಿಗಾರ
ಕುಂದಾಪುರ, ಜೂನ್ ೧೭: ವೇಗ ಮತ್ತು ಅನುಕೂಲಗಳಲ್ಲಿ ಐಷಾರಾಮೀ ಬಸ್ಸುಗಳಿಗೆ ಪೈಪೋಟಿ ನೀಡುತ್ತಿರುವ ಕು೦ದಾಪುರ- ಉಡುಪಿ-ಮ೦ಗಳೂರು ಮಾರ್ಗದ ಎಕ್ಸ್‌ಪ್ರೆಸ್ ಬಸ್ಸುಗಳು ಇತ್ತೀಚೆಗೆ ಇನ್ನೂ ‍ಒ೦ದು ಹೆಜ್ಜೆ ಮು೦ದೆ ಹೋಗಿದ್ದು ತಮ್ಮ ಬಸ್ಸಿನ್ನಲ್ಲಿ ಟಿ.ವಿ ಇಟ್ಟು ಸಿನೆಮಾ ತೋರಿಸಲು ಪ್ರಾರ೦ಭಿಸಿವೆ.

ಧೀರ್ಘ ಪ್ರಯಾಣದ ಬಸ್ಸುಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಈ ಸೌಲಭ್ಯವು ಜಿಲ್ಲೆಯೊಳಗೆ ಓಡಾಡುವ ಸ್ಥಳೀಯ ಬಸ್ಸುಗಳಲ್ಲೂ ಪ್ರಾರ೦ಭವಾಗಿರುವುದು ದೇಶ ಅಭವೃಧ್ಧಿ ಹೊ೦ದುತ್ತಿರುವ ಸ೦ಕೇತವೆಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ತೀರ್ಮಾನಿಸಿದೆ.

ವಿಶ್ವಬ್ಯಾಂಕ್ ವರದಿ ಏನೇ ಇದ್ದರೂ, ಕರಾವಳಿ ಜನತೆ ಮಾತ್ರ ಈ ಬೆಳವಣಿಗೆಯಿಂದ ಅಪಾರವಾದ ಮಾನಸಿಕ ತಳಮಳಕ್ಕೆ ಒಳಗಾಗಿದ್ದಾರೆ. ಸರ್ಕಾರ ಈ ವಿಷಯದ ಕುರಿತು ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳುವ ಎಲ್ಲಾ ಸಾಧ್ಯತೆಗಳು ಇವೆ.

ಉದಾಹರಣೆಗೆ, ಕು೦ದಾಪುರ ದಿ೦ದ ಉಡುಪಿಗೆ ೩೬ ಕೀ.ಮೀ ದೂರ. ಉಡುಪಿಯಿ೦ದ-ಮ೦ಗಳೂರಿಗೆ ೬೦ ಕೀ.ಮೀ ದೂರ. ಕು೦ದಾಪುರದಿ೦ದ ಮ೦ಗಳೂರಿಗೆ ಹೋಗಲು ಈ ಬಸ್ಸುಗಳು ಬರೋಬ್ಬರಿ ೨ ಗ೦ಟೆ ಸಮಯ ತೆಗೆದುಕೊಳ್ಳುತ್ತವೆ. ಸಮಸ್ಯೆ ಎ೦ದರೆ ೩ ಗ೦ಟೆ ಸಮಯಾವಧಿಯ ಒ೦ದು ಸಿನೆಮಾ ನೋಡಲು ಪ್ರಯಾಣಿಕರು ಕು೦ದಾಪುರದಲ್ಲಿ ಬಸ್ ಹತ್ತಿ ಮ೦ಗಳೂರಿಗೆ ಹೋಗಿ ಅದೇ ಬಸ್ಸಿನ್ನಲ್ಲಿ ವಾಪಸು ಉಡುಪಿಗೆ ಬರಬೇಕಾಗುತ್ತದೆ.

ಬೇಕಾದ ಸಿನೆಮಾ ಪೂರ್ಣವಾಗಿ ನೋಡಲು, ಬೇಕಿಲ್ಲದ ಪ್ರಯಾಣ ಮಾಡುವ ಅಗತ್ಯ ಒಂದೆಡೆಯಾದರೆ, ಬಸ್ಸುಗಳಲ್ಲಿನ ಮಹಿಳಾ ಮೀಸಲಾತಿ ಸಹ ಕರಾವಳಿಯ ಪುರುಷ ಪ್ರಯಾಣಿಕರ ವಾಹನ-ಮನರಂಜನಾ-ಸ್ವಾತಂತ್ರ್ಯದ ಮೇಲೆ ಅನಗತ್ಯ ಕಡಿವಾಣ ಹೇರಿದೆ. ತೆರೆದ ಕಿಟಕಿ ಮತ್ತಿತರ ಕಾರಣಗಳಿ೦ದಾಗಿ ಸಿನೆಮಾದ ಸ೦ಭಾಷಣೆ ಮೊದಲನೇ ಅಥವಾ ಎರಡನೇ ಸಾಲಿನಲ್ಲಿ ಆಸೀನರಾಗಿದ್ದವರಿಗೆ ಮಾತ್ರ ಲಭ್ಯವಿದ್ದು, ಪ್ರಸ್ತುತ ಜಾರಿಯಲ್ಲಿರುವ ಈ ಎರಡು ಸಾಲುಗಳ ಶೇ.೧೦೦ ಮಹಿಳಾ ಮೀಸಲಾತಿಯಿಂದಾಗಿ ಪುರುಷರಿಗೆ ಸಮಾನ ಅವಕಾಶ ದೊರೆಯದಂತಾಗಿದೆ. ಈ ಸಿನೆಮಾ ಸಂಭಾಷಣಾ ಶ್ರಾವ್ಯಹರಣವನ್ನು ತೀವ್ರವಾಗಿ ವಿರೋಧಿಸಿರುವ ಕರಾವಳಿ ಪುರುಷ ಪ್ರಯಾಣಿಕರ ಒಕ್ಕೂಟ, ಈ ಪುರುಷ ವಿರೋಧಿ ಮೀಸಲಾತಿಯನ್ನು ತಕ್ಷಣವೇ ರದ್ದು ಮಾಡಿ, ಈ ಎರಡೂ ಸಾಲುಗಳನ್ನು (ರಾಹುಲ್) ಗಾಂಧಿಕ್ಲಾಸ್ ಎಂದು ಪರಿಗಣಿಸುವಂತೆ ಒತ್ತಾಯಿಸಿದೆ. (ಪುರುಷರ ಮೇಲಿನ ಈ ದಬ್ಬಾಳಿಕೆಯನ್ನು ಎತ್ತಿ ತೋರುವ ವಿಡಿಯೋ ಡಾಕ್ಯುಮೆಂಟರಿ ನೋಡಲು ಇಲ್ಲಿ ಕ್ಲಿಕ್ಕಿಸಿ.)

ಅದಲ್ಲದೆ ಸ್ಟಾ೦ಡಿ೦ಗ್ ಸೀಟುಗಳಿದ್ದಾಗ ಬಸ್ಸಿನ ಎಡ ಭಾಗದ ಅರ್ಧಕ್ಕರ್ಧ ಪ್ರಯಾಣಿಕರು ಸಿನೆಮಾ ನೊಡುವ ಈ ಸೌಭಾಗ್ಯದಿ೦ದ ವ೦ಚಿತರಾಗುತ್ತಿದ್ದು ಪರಿಹಾರಾರ್ಥವಾಗಿ ಎಡಭಾಗದಲ್ಲಿ ಇನ್ನೊ೦ದು (ಬಲಭಾಗದಲ್ಲಿರುವುದಕ್ಕಿ೦ತ ದೊಡ್ದದು)ಟಿ.ವೀ ಯನ್ನು ಬಸ್ಸು ಮಾಲೀಕರು ಆಳವಡಿಸತಕ್ಕದ್ದು ಎ೦ದು ಆಜ್ಞೆ ಹೊರಡಿಸಲು ಆರ್.ಟೀ.ಓ. ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ನಿಮಿಷಕ್ಕೊ೦ದರ೦ತೆ ಕು೦ದಾಪುರ- ಉಡುಪಿ-ಮ೦ಗಳೂರು ಮಾರ್ಗದ ರಾ.ಹೆ. ೧೭ ರಲ್ಲಿ ಯಮವೇಗದಲ್ಲಿ ಚಲಿಸುವ ಈ ಬಸ್ಸುಗಳು ತಮ್ಮ ವೇಳಾಪಟ್ಟಿಯೊ೦ದಿಗೆ ಆಯಾ ದಿನದ ಸಿನೆಮಾದ ಮಾಹಿತಿಯನ್ನೂ ಮು೦ಚಿತವಾಗಿ ತಿಳಿಸಿದರೆ ಯಾವ ಬಸ್ಸಿನಲ್ಲಿ ಯಾವ ಸಿನೆಮಾ ಬರುತ್ತಿದೆ ಎ೦ದು ನೋಡಿಕೊ೦ಡು ಬಸ್ಸು ಹತ್ತಲು ನಮಗೆ ಅನುಕೂಲವಾಗುತ್ತದೆ ಎ೦ದು ವಾಹನ-ಸಿನೆಮಾಪ್ರಿಯರು ಅಭಿಪ್ರಾಯಪಟ್ಟಿದ್ದಾರೆ.

ಪಟ್ಟಣಿಗರು ಆಗಾಗ ಮಾತನಾಡಿಕೊಳ್ಳುವ ಡ್ರೈವ್ ಇನ್ ಸಿನೆಮಾ ಎ೦ದರೆ ಇದೆ ಇರಬೇಕು, ಬೆ೦ಗಳೂರಿನ ವೊಲ್ವೊ ಸಿಟಿ ಬಸ್ಸಿನಲ್ಲೂ ಇಲ್ಲದ ಈ ಸೌಲಭ್ಯ ನಮ್ಮ ಊರಿನಲ್ಲಿ ಇರುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ ಎ೦ದು ನಗರ ನೋಡಿ ಬ೦ದ ಹಳ್ಳಿಗರು ಷರಾ ಬರೆದಿದ್ದಾರೆ.

[ಶ್ರೀನಿಧಿ ಹ೦ದೆಯವರು ಹಲವಾರು ವಿಧದ ಬಸ್‌ಗಳಲ್ಲಿ ಪ್ರಯಾಣಿಸಿರುವ ಅನುಭವ ಹೊಂದಿದ್ದು, ವಾಹನ-ಮನರಂಜನಾ ವಿಜ್ಞಾನದಲ್ಲಿ ಅಪಾರ ಪರಿಣಿತಿಯನ್ನು ಪಡೆದಿದ್ದಾರೆ. ಇವರ ಹಲವಾರು ಲೇಖನಗಳು ಮತ್ತು ಛಾಯಾಚಿತ್ರಗಳು "ಇ-ನಿಧಿ ಸ್ಪೀಕ್ಸ್" ಅಂತರ್ಜಾಲ ತಾಣದಲ್ಲಿ ಲಭ್ಯವಿದೆ. ವಿಡಿಯೋ ಮತ್ತು ಚಿತ್ರಗಳ ಆಧಾರ ಸಹಿತ ವರದಿ ನೀಡಿರುವ ಶ್ರೀ ಹಂದೆಯವರಿಗೆ ನಮ್ಮ ಕೃತಜ್ಞತೆಗಳು.]

Labels: , , ,

Saturday, June 16, 2007

ಮಜಾವಾಣಿ: ತನಿಖಾ ವರದಿ

ಅಮೆರಿಕದ ಸೇನೆಗೆ ಭಾರತದ ಚಡ್ಡಿ?
ವಾಷಿಂಗ್‌ಟನ್ ಡಿ.ಸಿ., ಜೂನ್ 16: ಇರಾಕಿನಲ್ಲಿ ಅಮೆರಿಕದ ಸೇನೆ ಅನುಭವಿಸುತ್ತಿರುವ ಸೋಲಿಗೆ, ಅಲ್ಲಿನ ಸೆಖೆಯಲ್ಲೂ ಅಮೆರಿಕದ ಸೈನಿಕರು ಪೂರ್ಣ ಪ್ಯಾಂಟ್ ಧರಿಸುತ್ತಿರುವುದೇ ಕಾರಣವೆಂದು ಅರಿತಿರುವ ಅಮೆರಿಕದ ಅಧ್ಯಕ್ಷ ಬುಶ್, ತಕ್ಷಣವೇ ಅಮೆರಿಕನ್ ಸೈನಿಕರಿಗೆ ಖಾಕಿ ಚಡ್ಡಿಗಳನ್ನು ನೀಡುವಂತೆ ಆಜ್ಞೆ ಮಾಡಿದ್ದಾರೆ. ಈ ಖಾಕಿ ಚಡ್ಡಿಗಳನ್ನು ಸರಬರಾಜು ಮಾಡಲು ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯನ್ನು ಅಮೆರಿಕದ ರಕ್ಷಣಾ ಸಚಿವಾಲಯ ಆಯ್ಕೆ ಮಾಡಿದ್ದು, ಇನ್ಫೋಸಿಸ್ ಸದ್ಯದಲ್ಲಿಯೇ 5೦೦,೦೦೦ ಖಾಕಿ ಚಡ್ಡಿಗಳನ್ನು ಪೆಂಟಗನ್ನಿಗೆ ರವಾನಿಸಲಿದೆ.


ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿಯವರು ಮತ್ತು ಅಮೆರಿಕದ ಅಧ್ಯಕ್ಷ ಜಾರ್ಜ್ ಬುಶ್ ಈ ಕುರಿತು ಅತಿ ಗುಪ್ತ ಒಪ್ಪಂದವೊಂದನ್ನು ಮಾಡಿಕೊಂಡಿರುವರೆನ್ನಲಾಗಿದ್ದು, ಇನ್ಫೋಸಿಸ್ ಸಂಸ್ಥೆ ಇದೇ ಮೊದಲ ಬಾರಿಗೆ ಸಾಫ್ಟ್‌ವೇರಿನಿಂದ ಮಿಲಿಟರಿ ಉಡುಪುಗಳ ವಹಿವಾಟಿಗೆ ಕೈಹಾಕಿದೆ.

ಇತ್ತೀಚೆಗೆ ನ್ಯೂಯಾರ್ಕಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸುವಾಗ, ನಾರಾಯಣಮೂರ್ತಿಯವರು ಎಸ್.ಎಲ್.ಭೈರಪ್ಪನವರ ಆವರಣ ಕಾದಂಬರಿಯನ್ನು ಓದುತ್ತಿದ್ದುದು ಈ ರಹಸ್ಯ ಒಪ್ಪಂದ ಬೆಳಕಿಗೆ ಬರಲು ಕಾರಣವಾಗಿದೆ. ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿ.ಐ.ಎ. ಈ ಪುಸ್ತಕವನ್ನು ತನ್ನ ಸೀಕ್ರೆಟ್ ಕೋಡ್ ಬುಕ್ಕಾಗಿ ಬಳಸುತ್ತಿರುವ ಎಲ್ಲ ಸಾಧ್ಯತೆಗಳಿದ್ದು, ಭಾರತದ ಉದ್ಯಮಿಗಳು ಅದನ್ನು ಓದುತ್ತಿರುವುದು ಬುಷ್ ಜೊತೆಗಿನ ಒಳ ಒಪ್ಪಂದಕ್ಕೆ ಸಾಕ್ಷಿಯಾಗಿದೆ.

ಖ್ಯಾತ ಸಾಹಿತಿ, ಚಿಂತಕ ಮತ್ತು ನಮ್ಮ ಪತ್ರಿಕೆಯ ಮಿಲಿಟರಿ-ಬಂಡವಾಳಷಾಹಿ ತಜ್ಞ ಡಾ.ಯು.ಆರ್.ಅನಂತಮೂರ್ತಿಯವರು ಈ ಅತ್ಯಂತ ಗೋಪ್ಯ ರಹಸ್ಯ ಹೊರಬೀಳಲು ಕಾರಣರಾಗಿದ್ದು, ಆವರಣದ ಕುರಿತಾದ ತಮ್ಮ ಭಾಷಣದಲ್ಲಿ ಉದ್ಯಮಿಗಳ ಮತ್ತು ಬುಷ್ ನಡುವಿನ ಈ ಒಳ ಒಪ್ಪಂದವನ್ನು ಸಾಕ್ಷ್ಯಾಧಾರಸಮೇತ ಬಯಲಿಗೆಳೆದಿದ್ದಾರೆ.

Labels: , , , ,

Sunday, June 03, 2007

ಮಜಾವಾಣಿ: ವಾಣಿಜ್ಯ - ಇತಿಹಾಸ


ಇನ್ನು ಮುಂದೆ ಇತಿಹಾಸದ ಪುನರಾವೃತ್ತಿ ಇಲ್ಲ!
ಬೆಂಗಳೂರು, ಜೂನ್ ೧೧: ಇತಿಹಾಸದ ಪುನರಾವೃತ್ತಿಗಾಗಿ ಕಾಯುತ್ತಿರುವವರಿಗೆ ಒಂದು ಎಚ್ಚರಿಕೆ: ಇತಿಹಾಸ ಮತ್ತೆ ಮತ್ತೆ ಮರುಕಳಿಸುವುದನ್ನು ನಿಲ್ಲಿಸಲಾಗಿದ್ದು, ಇನ್ನು ಮುಂದೆ ಅದರ ಪುನರಾವರ್ತನೆಯಾಗುವುದಿಲ್ಲ.

ಭಾರತೀಯ ಕಾಲಮಾನ ಕ್ರಿ.ಶ. ೨೦೦೭ ಭಾನುವಾರ ಜೂನ್ ೩ ಮಧ್ಯಾಹ್ನ ಮೂರು ಗಂಟೆ ನಲವತ್ತು ಮೂರು ನಿಮಿಷ ೪೭ ಸೆಕೆಂಡಿಗೆ ಸರಿಯಾಗಿ ಇತಿಹಾಸದ ಪುನರಾಗಮನವನ್ನು ಯಶಸ್ವಿಯಾಗಿ ತಡೆ ಹಿಡಿಯಲಾಗಿದ್ದು, ಆ ನಂತರದ ಇತಿಹಾಸ ಹಳೆಯ ಇತಿಹಾಸದಂತೆ ಕಾಣುವುದು ಸಾಧ್ಯವೇ ಇಲ್ಲ. ಹಾಗೇನಾದರೂ ಒಂದು ವೇಳೆ, ಇತಿಹಾಸ ಮತ್ತೆ ಮರುಕಳಿಸುತ್ತಿರುವಂತೆ ಕಂಡು ಬಂದರೆ, ಅದು ಹಳೆಯ ಅಥವಾ ನಕಲಿ ಆವೃತ್ತಿಯಾಗಿರುವ ಸಂಭವವಿದ್ದು ಸಾರ್ವಜನಿಕರು ತಕ್ಷಣವೇ ಹತ್ತಿರದ ಸೂಕ್ತ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಘೋಷಿಸಲಾಗಿದೆ.

Labels:

ಮಜಾವಾಣಿ: ಶಿಕ್ಷಣ ವಾಣಿ

ವಿಜ್ಞಾನಿಗಳ ಚಿತ್ರದಿಂದ ಪ್ರಯೋಜನವಿಲ್ಲ!
ಪಾಟಿಯಾಲ, ಫೆಬ್ ೧೨: ವಿಜ್ಞಾನಿಗಳ ಭಾವಚಿತ್ರ ನೋಡುವುದರಿಂದಲೇ ವಿಜ್ಞಾನದ ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಪಾಟಿಯಾಲಾದ ಗ್ಯಾನಿ ಜೈಲ್ ಸಿಂಗ್ ವಿಶ್ವ ವಿದ್ಯಾಲಯದ ವೈಜ್ಞಾನಿಕ ಶಿಕ್ಷಣ ಪರಿಣಿತರು ಮೂರು ವರ್ಷಗಳ ಸುಧೀರ್ಘ ಅಧ್ಯಯನದ ಮೂಲಕ ಈ ವಿಚಾರವನ್ನು ಬೆಳಕಿಗೆ ತಂದಿದ್ದಾರೆ.
ಗ್ಯಾನಿ ಜೈಲ್ ಸಿಂಗ್ ವಿ.ವಿ.ಯ ೨೭೯ ಮಂದಿ ಬಿ.ಎಸ್.ಸಿ. ವಿದ್ಯಾರ್ಥಿಗಳು ಈ ಅಧ್ಯಯನದಲ್ಲಿ ಭಾಗವಹಿಸಿದ್ದರು. ವಿಶ್ವ ವಿದ್ಯಾಲಯದ ಹಾಸ್ಟೆಲಿನಲ್ಲಿ ವಸತಿ ಪಡೆದಿರುವ ಈ ವಿದ್ಯಾರ್ಥಿಗಳ ಕೊಠಡಿಗಳಲ್ಲಿ ಐನ್‍ಸ್ಟೈನ್, ಜಗದೀಶ್ ಚಂದ್ರ ಬೋಸ್, ಸಿ.ವಿ.ರಾಮನ್ ಮುಂತಾದ ಮಹಾನ್ ವಿಜ್ಞಾನಿಗಳ ಭಾವಚಿತ್ರಗಳನ್ನು ಪ್ರತಿ ಗೋಡೆಯ ಮೇಲೆಯೂ ತೂಗುಹಾಕಲಾಗಿತ್ತು ಮತ್ತು ಮೂರು ವರ್ಷಗಳ ಕಾಲ ಈ ವಿದ್ಯಾರ್ಥಿಗಳಿಗೆ ವಿಜ್ಞಾನದ ಯಾವುದೇ ವಿಷಯದ ಕುರಿತೂ ಕಾಲೇಜಿನಲ್ಲಿ ಬೋಧನೆ ಮಾಡಲಿಲ್ಲ. ಪ್ರತಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ವಿದ್ಯಾರ್ಥಿಗಳ ವಿಜ್ಞಾನದ ಬಗೆಗಿನ ಅರಿವನ್ನು ಪರೀಕ್ಷಿಸಲಾಯಿತು. ಆಶ್ಚರ್ಯವೆಂಬಂತೇ, ಪ್ರತಿ ವರ್ಷವೂ ವಿಜ್ಞಾನದ ಅರಿವು ಕಡಿಮೆಯಾಯಿತೇ ಹೊರತು ಹೆಚ್ಚಾಗಲೇ ಇಲ್ಲ.
ಕ್ರಿಯೆಟಿವಿಟಿ ಮೇಲೆ ಪರಿಣಾಮ?: ವಿಜ್ಞಾನಿಗಳ ಭಾವಚಿತ್ರದಿಂದ ವಿಜ್ಞಾನದ ಕಲಿಕೆಯ ಮೇಲೆ ಅಂತಹ ಪ್ರಗತಿ ಕಾಣಲಿಲ್ಲವಾದರೂ, ವಿದ್ಯಾರ್ಥಿಗಳ ಕ್ರಿಯೆಟಿವಿಟಿ ಮೇಲೆ ಕೊಂಚ ಮಟ್ಟಿನ ಪರಿಣಾಮ ಬೀರಿದಂತಿದೆ. ಈ ಮಹತ್ವದ ಅಧ್ಯಯನದ ಕುರಿತು ವಿವರಗಳನ್ನು ನೀಡಿದ ಗ್ಯಾನಿ ಜೈಲ್ ಸಿಂಗ್ ವಿಶ್ವ ವಿದ್ಯಾಲಯದ ಡೀನ್ ಡಾ.ಬೇಜಾನ್ ಸಿಂಗ್ ದಾರೂವಾಲರವರು, "ಕೊಠಡಿಗಳಲ್ಲಿ ತೂಗುಹಾಕಿದ್ದ ವಿಜ್ಞಾನಿಗಳ ಚಿತ್ರಗಳಲ್ಲಿ ಹಲವಾರು ಬದಲಾವಣೆ ಕಂಡು ಬಂದವು. ಉದಾಹರಣೆಗೆ, ಹಲವು ಕೊಠಡಿಗಳಲ್ಲಿ ಐನ್‍ಸ್ಟೈನ್‌ಗೆ ಗಡ್ಡ, ಬಾಯಲ್ಲಿ ಸಿಗರೇಟ್ ಮತ್ತು ಕಣ್ಣು ಸುತ್ತಲೂ ಕಪ್ಪು ಕನ್ನಡಕ ಕಂಡು ಬಂದವು. ಕೆಲವು ಚಿತ್ರಗಳಲ್ಲಂತೂ ಈ ಬದಲಾವಣೆಗಳು ಬಹಳ ಸಹಜವಾಗಿ ಚಿತ್ರಿತವಾಗಿವೆ. ಅಧ್ಯಯನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹೆಚ್ಚು ಕ್ರಿಯೇಟೀವ್ ಆದಂತಿದೆ. ಇದು ವಿಜ್ಞಾನಿಗಳ ಚಿತ್ರದಿಂದ ಉಂಟಾದ ಪರಿಣಾಮವೋ ಅಲ್ಲವೋ ಎಂಬುದರ ಸತ್ಯಾಸತ್ಯತೆಯನ್ನು ತಿಳಿಯಲು ಮತ್ತಷ್ಟು ಅಧ್ಯಯನ ನಡೆಸಬೇಕಾಗಿದೆ" ಎಂದರು.
ವಿದ್ಯಾರ್ಥಿಗಳ ಸಂತಸ: ಈ ಅಧ್ಯಯನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಅಂತಿಮ ಬಿ.ಎಸ್.ಸಿ. ವಿದ್ಯಾರ್ಥಿನಿ ಅಮೃತಾ ಸಿಂಗ್, "ಇದೊಂದು ಹೆಮ್ಮೆಯ ವಿಷಯ. ಶುರೂಲಿ ಇಟ್ ವಾಸ್ ಅ ಬಿಟ್ ಡಿಫಿಕಲ್ಟ್. ಐ ಆಮ್ ಲೈಕ್ ದ ಬಿಗ್ಗೆಸ್ಟ್ ಫ್ಯಾನ್ ಆಫ್ ಅಭಿಷೇಕ್. ಅಭಿಷೇಕ್ ಪೋಸ್ಟರ್ ಬದಲು ಐರನ್‍ಸ್ಟೈಲ್ ಪೋಸ್ಟರ್ ಇದ್ದಿದ್ದು ನಂಗಂತೂ ನೋಡಕ್ಕೇ ಆಗ್ತಾ ಇರ್ಲಿಲ್ಲ. ಬಟ್ ಲೇಟರ್ ಆನ್, ಆ ತಾತಾನೂ ಒಂ ತರಾ ಕ್ಯೂಟ್ ಅನ್ಸಕ್ಕೆ ಶುರು ಆಯಿತು. ಅದೂ ಅಲ್ದೇ ಎಲ್ರೂ ರಿಲೇಟಿವ್ಸ್ ಅಂತ ಕಂಡು ಹಿಡಿದು ವರ್ಲ್ಡ್ ಪೀಸ್‌ಗೋಸ್ಕರ ನೊಬೆಲ್ ಪ್ರೈಜ್ ಕೂಡ ತಗೊಂಡವನು ಅವನು. ಒಟ್ನಲ್ಲಿ ಇಟ್ ವಾಸ್ ಅ ಗ್ರೇಟ್ ಎಕ್ಸ್‌ಪೀರಿಯೆನ್ಸ್" ಎಂದರು.

Labels:

ಮಜಾವಾಣಿ: ಅತಿಥಿಗಳ ಸಂಪಾದನೆ

ಹೆಲ್ಮೆಟ್ ಕಡ್ಡಾಯದಿಂದ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳ!!
ಮಜಾವಾಣಿ ವಿಶೇಷ ವರದಿ
ಬೆಂಗಳೂರು ಮೇ 12: ಹೆಲ್ಮೆಟ್ ಕಡ್ಡಾಯದಿಂದ ಕಂಗಾಲಾಗಿರುವ ಅ. ಭಾ. ರೋ. ರೋ. ಸಂ. (ಅ.ರಿ.) (ಅಖಿಲ ಭಾರತ ರೋಡ್ ರೋಮಿಯೋಗಳ ಸಂಘ. ಅನ್ ರಿಜಿಸ್ಟರ್ಡ್.) ದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮನ್ಮಥಕುಮಾರ್ ಅವರು ನಿನ್ನೆ ಪತ್ರಿಕಾಗೊಷ್ಠಿಯಲ್ಲಿ ಈ ಕಳವಳಕಾರಿ ವಿಚಾರವನ್ನು ನಮ್ಮ ಬಾತ್ಮೀದಾರರಿಗೆ ತಿಳಿಸಿದರು. ಇದಕ್ಕೆ ಕಾರಣವನ್ನು ಪತ್ತೆ ಮಾಡಲು ಮಜಾವಾಣಿ ವರದಿಗಾರ ಹೊರಟಾಗ ಕೆಲವೊಂದು ಆಘಾತಕಾರಿ ವಿಷಯಗಳು ತಿಳಿಯಲ್ಪಟ್ಟಿವೆ.

ಹೆಲ್ಮೆಟ್ ಕಡ್ಡಾಯದ ದೆಸೆಯಿಂದ ಕಾಲೇಜು ಹುಡುಗಿಯರು ಹೆಲ್ಮೆಟ್ ಅನ್ನು ಯಾವಾಗಲೂ ಧರಿಸಿರುವುದರಿಂದ, ಅ. ಭಾ. ರೋ. ರೋ. ಸಂ. (ಅ.ರಿ.) ಸದಸ್ಯರುಗಳಿಗೆ ಆ ಹುಡುಗಿಯರ ಮುಖ ನೋಡಲು ಕಷ್ಟವಾಗುತ್ತಿದ್ದು, ಇದರಿಂದ ಅವರುಗಳು ತುಂಬಾ ನಿರಾಶರಾಗಿದ್ದಾರೆ ಎಂದು ತಿಳಿದುಬಂದಿದೆ. ಹಾಗೂ ಕೆಲವರು ಕಷ್ಟ ಪಟ್ಟು ಇಣುಕಿ ನೋಡಲು ಹೋಗಿ ಅಪಘಾತಕ್ಕೀಡಾಗಿದ್ದಾರೆ ಎಂಬ ವಿಚಾರವೂ ತಿಳಿದುಬಂದಿದೆ.

ಮುಂದುವರಿಸಿದ ಮನ್ಮಥಕುಮಾರ್ ಅವರು ಹೇಳಿದ್ದು "ಸರ್ಕಾರ ಹೆಲ್ಮೆಟ್ ಕಡ್ಡಾಯವನ್ನು ತೆಗೆಯದಿದ್ದರೆ ನಮ್ಮ ಸದಸ್ಯರಿಗೆ ಈಗಾಗಲೇ ಹಲವಾರು ಕಷ್ಟಗಳು ಕಾಡುತ್ತಿದ್ದು, ಹೆಲ್ಮೆಟ್ ಕಡ್ಡಾಯ ಈಗ ಪ್ರಾಣಾಂತಿಕ ಹೊಡೆತ ನೀಡಿದೆ. ನಮ್ಮ ಹಲವಾರು ಸದಸ್ಯರುಗಳಿಗೆ ದಿವಸಕ್ಕೆ 4-5 ಹುಡುಗಿಯರ ಮುಖ ನೋಡದಿದ್ದರೆ ಊಟ ಸೇರುವುದುಲ್ಲ. ನಿದ್ದೆ ಬರುವುದಿಲ್ಲ. ಹೀಗಿರುವಾಗ ಹೆಲ್ಮೆಟ್ ಕಡ್ಡಾಯದಿಂದ 1 ಹುಡುಗಿಯ ಮುಖ ನೋಡಲೂ ಕಷ್ಟವಾಗುತ್ತಿದೆ, ಅವರೆಲ್ಲಾ ಈಗ ಆಸ್ಪತ್ರೆ ಸೇರುವ ಪರಿಸ್ಥಿತಿಯಾಗಿದೆ. ಅದರಿಂದ ಸರ್ಕಾರ ಈ ಕಾನೂನನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಬೇಕು.ಇಲ್ಲದ್ದಿದ್ದರೆ ರಾಜ್ಯಾದ್ಯಂತ ಉಗ್ರ ಚಳುವಳಿಯನ್ನು ಪ್ರಾರಂಭಿಸುತ್ತೇವೆ!".

ಮಜಾವಾಣಿಯ ಸಾಮಾಜಿಕ ಕಳಕಳಿಯಿರುವ ಈ ವರದಿಗಾರ ಈ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸಿ ಅದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿದ್ದಾನೆ. ಹೆಣ್ಣುಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಮಾಡಿದರೂ ಈ ಚಿತ್ರದಂತಿರುವ ಹೆಲ್ಮೆಟ್ ಅನ್ನು ಮಾತ್ರ ಧರಿಸಬೇಕೆಂದು ಕಾನೂನು ಮಾಡಬೇಕು ಎಂದು ಈ ಮೂಲಕ ಮಜಾವಾಣಿಯು ಸರ್ಕಾರವನ್ನು ಒತ್ತಾಯಿಸುತ್ತದೆ. ಇದಕ್ಕೆ ಅ. ಭಾ. ರೋ. ರೋ. ಸಂ. (ಅ.ರಿ.) ದ ಬೆಂಬಲವೂ ಇದೆ ಎಂದು ತಿಳಿದುಬಂದಿದೆ.

(ಮಜಾವಾಣಿಯ ಈ ಸಂಚಿಕೆ ಅತಿಥಿ ಸಂಪಾದಕ/ವರದಿಗಾರರಿಂದ ಮೂಡಿ ಬಂದಿದೆ. ಹಳ್ಳಿಯ ನಡುವೆ ಹರ್ಷ ಚಿತ್ತರಾಗಿದ್ದರೂ ಅನಾಮಿಕರಾಗಿಯೇ ಇರ ಬಯಸುವ ಶ್ರೀಯುತರಿಗೆ ನಮ್ಮ ಅನಂತ ಧನ್ಯವಾದಗಳು)

Labels: , ,

Monday, April 23, 2007

ಮಜಾವಾಣಿ: ವ್ಯಾಪಾರ - ತಂತ್ರಜ್ಞಾನ






ಪಾಮ್ ಪ್ರಿಂಟರ್: ಎಚ್.ಪಿ. ಸಂಸ್ಥೆಯ ನೂತನ ಪ್ರಿಂಟರ್ ಸದ್ಯದಲ್ಲೇ ಮಾರುಕಟ್ಟೆಗೆ
ಬೆಂಗಳೂರು ಏಪ್ರಿಲ್ ೨೪:
ಈಗಾಗಲೇ ಹಲವಾರು ವಿಧದ ಕಂಪ್ಯೂಟರ್ ಪ್ರಿಂಟರುಗಳನ್ನು ಮಾರುಕಟ್ಟೆಗೆ ತಂದಿರುವ ಎಚ್.ಪಿ. ಸಂಸ್ಥೆ, ಸದ್ಯದಲ್ಲಿಯೇ ವಿನೂತನ ಪಾಮ್ ಪ್ರಿಂಟರುಗಳನ್ನು ಮಾರುಕಟ್ಟೆಗೆ ತರಲಿದೆ.
ನಿನ್ನೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಎಚ್.ಪಿ. ಸಂಸ್ಥೆಯ ತಂತ್ರಜ್ಞಾನ ಮುಖ್ಯಸ್ಥ ಎರಿಕ್ ವಾನ್ ಡಾನಿಕೆನ್ "ಭಾರತೀಯ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೂ ತಲುಪಿಸುವಲ್ಲಿ ಈ ಪ್ರಿಂಟರುಗಳು ಮಹತ್ವದ ಪಾತ್ರ ವಹಿಸಲಿವೆ. ಭಾರತೀಯ ಲೇಖಕರು, ಸಾಹಿತಿಗಳು ಈ ಪ್ರಿಂಟರ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಬೇಕು" ಎಂದು ಕರೆ ಇತ್ತರು.
ಕರ್ನಾಟಕ ಗಣಕ ಸಂಗ್ರಾಮ ಪರಿಷದ್ ನೆರವಿನೊಂದಿಗೆ ನಿರೂಪಿಸಲಾದ ಅಪ್ಪಟ ಭಾರತೀಯ ತಂತ್ರಜ್ಞಾನದಿಂದ ಈ ಪ್ರಿಂಟರ್ ಅನ್ನು ನಿರ್ಮಿಸಲಾಗಿದ್ದು, ತಾಳೆ ಗರಿಯ ಮೇಲೆ ಮುದ್ರಿಸಬಲ್ಲ ಜಗತ್ತಿನ ಪ್ರಪ್ರಥಮ ಪ್ರಿಂಟರ್ ಇದಾಗಿದೆ.
ಬರಗೂರು ಹರ್ಷ: ಪಾಮ್ ಪ್ರಿಂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪನವರು, ಈ ಪ್ರಿಂಟರ್ ಕುರಿತು ತಮ್ಮ ಹರ್ಷ ವ್ಯಕ್ತಪಡಿಸಿದರು. "ಇದೊಂದು ಅತ್ಯಂತ ಆರೋಗ್ಯಕರ ಬೆಳವಣಿಗೆ" ಎಂದ ಅವರು, "ಇಲ್ಲಿಯವರೆಗೆ ತಾಳೆಗರಿಗಳು ಬಹುಮಟ್ಟಿಗೆ ಶೋಷಕ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿತ್ತು. ಈ ಪ್ರಿಂಟರ್‌ನಿಂದಾಗಿ, ಬಂಡಾಯ ಸಾಹಿತ್ಯದಂತಹ ಪ್ರೋಗ್ರೆಸ್ಸಿವ್ ಸಾಹಿತ್ಯ ಸಹ ತಾಳೆಗರಿಯಲ್ಲಿ ಲಭ್ಯವಾಗಲಿದೆ. ನನ್ನ 'ಶಬರಿ' ಕಾದಂಬರಿಯನ್ನು ತಾಳೆಗರಿಯ ಮೇಲೆ ಮುದ್ರಿತ ಲಿಮಿಟೆಡ್ ಡೀಲಕ್ಸ್ ಎಡಿಷನ್ನಿನಲ್ಲಿ ಸದ್ಯದಲ್ಲಿಯೇ ಬಿಡುಗಡೆ ಮಾಡಲಿದ್ದೇನೆ" ಎಂದರು.

Labels:

Monday, March 12, 2007

ಮಜಾವಾಣಿ: ವಿಶೇಷ ವರದಿ

"ಫ್ರೀ ಫ್ರೀ ಅಂಬಿ!"

ಬೆಂಗಳೂರು, ಮಾರ್ಚ್ ೧೧: ನೆತ್ತಿಯನ್ನು ಸುಟ್ಟು ಕರಿಕಲು ಮಾಡುವಂತಹ ರಣ ಬಿಸಿಲು. ಏಪ್ರಿಲ್ ಇನ್ನೂ ಬಂದಿರದಿದ್ದರೂ, ಸೂರ್ಯನ ಕಬಂಧ ಬಾಹುಗಳು ಮಾತ್ರ ಭಸ್ಮಾಸುರನ ಕರಗಳಂತೆ ಇಡೀ ಬೆಂಗಳೂರು ನಗರದ ಮೇಲೆ ಈಗಾಗಲೇ ವ್ಯಾಪಿಸಿವೆ.

ಇಂತಹ ರಣ ಬಿಸಿಲಿನ ಮಟ ಮಟ ಮಧ್ಯಾಹ್ನದಲ್ಲಿ ಗಾಂಧಿ ಪ್ರತಿಮೆಯ ಮುಂದೆ ನಿಂತಿದ್ದವರು ಒಂಬತ್ತು ಮಂದಿ. ಅವರ ಹಿಡಿದಿದ್ದ ಫಲಕಗಳಲ್ಲಿದ್ದದ್ದು ಒಂದೇ ಘೋಷಣೆ: "ಅಂಬಿಗೆ ಬೇಡ ಕಂಬಿ!"; ಬಾಯಲ್ಲಿದ್ದಿದ್ದು ಒಂದೇ ಮಂತ್ರ: "ಫ್ರೀ, ಫ್ರೀ ಅಂಬಿ!".

ಬೆಂಗಳೂರಿಗಾಗಲೀ, ಗಾಂಧಿ ಪ್ರತಿಮೆಗಾಗಲೀ ಇಂತಹ ಪ್ರತಿಭಟನೆ ಹೊಸದೇನೂ ಅಲ್ಲ. ಆದರೆ, ಇಂದಿನ ಪ್ರತಿಭಟನೆಯಲ್ಲಿ ಒಂದು ಹೊಸತನ ಇತ್ತು; ಲವಲವಿಕೆ ಇತ್ತು; ತಾರುಣ್ಯ ಇತ್ತು; ಎಲ್ಲಕ್ಕಿಂತ ಮುಖ್ಯವಾಗಿ ಸೌಂದರ್ಯ ಇತ್ತು.

ಮಂಡ್ಯದ ಸಂಸದ ಅಂಬರೀಷ್ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಬಿಡುಗಡೆ ಮಾಡುವಂತೆ ಆಗ್ರಹಿಸಿ ಖ್ಯಾತ ಫ್ಯಾಶನ್ ಗುರು ಪ್ರಸಾದ್ ಬಿದ್ದಪ್ಪ ಏರ್ಪಡಿಸಿದ್ದ ಪ್ರತಿಭಟನೆ ಅದು. ಭಾಗವಹಿಸುತ್ತಿದ್ದವರು ನಾಡಿನ ಹೆಸರಾಂತ ಚಿತ್ರತಾರೆಯರು, ರೂಪದರ್ಶಿಗಳು.
ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಲವರಿಗೆ ಕೆ.ಎಫ್.ಸಿ. ವಿರುದ್ಧ/ಕೋಳಿಗಳ ಪರ ಪ್ರತಿಭಟನೆ ಮಾಡಿದ ಅನುಭವ ಇತ್ತಾದರೂ, ಭಾರತೀಯ ರಾಜಕೀಯ ಪ್ರಸಂಗದಲ್ಲಿ, ಮನುಷ್ಯನ ಪರವಾಗಿ ಪ್ರತಿಭಟನೆ ಇದೇ ಮೊದಲು.

ಕಳೆದ ವಾರವಷ್ಟೇ ಪ್ಯಾರಿಸಿನಲ್ಲಿ ಖರೀದಿಸಿದ್ದ ಅರ್ಮಾನಿ ತಿಳಿ ಬಾದಾಮಿ ಬಣ್ಣದ ಖಾದಿ ಪ್ಯಾಂಟ್ ಮತ್ತು ಷರ್ಟ್ ಧರಿಸಿ, ಕಪ್ಪು ಕನ್ನಡಕ ತೊಟ್ಟು, ಒಂದು ಕೈಯಲ್ಲಿ ಫಲಕ, ಇನ್ನೊಂದರಲ್ಲಿ ಐಸ್ ಕೋಲ್ಡ್ ಪೆರಿಯೇ ನೀರಿನ ಬಾಟಲ್ ಹಿಡಿದಿದ್ದ ಜಾನ್ ಅಬ್ರಹಾಮ್ "ದಿಸ್ ಈಸ್ ರಿಯಲಿ ನ್ಯೂ ಟು ಮಿ. ಆದರೆ, ಅನ್ಯಾಯದ ವಿರುದ್ಧ ಹೋರಾಡಲೇ ಬೇಕು. ಇಂದು ಅಂಬಿಗೆ ಆಗಿರುವ ಅನ್ಯಾಯ, ನಾಳೆ ನಮಗೂ ಆಗಬಹುದು. ಕಾಮನ್ ಪೀಪಲ್ ಥಿಂಕ್ ದಟ್ ನಮ್ಮಂತಹ ಸುಂದರ ಜನರು ಡೋಂಟ್ ಕೇರ್ ಅಬೌಟ್ ಹ್ಯೂಮನ್ ಬೀಯಿಂಗ್ಸ್. ಆದರೆ, ದಟ್ಸ್ ನಾಟ್ ಟ್ರೂ. ನನಗೆ ಕೋಳಿಗಳಷ್ಟೇ ಮನುಷ್ಯರೂ ಇಷ್ಟ. ಕೋಳಿಗಳ ಬಿಡುಗಡೆ ಎಷ್ಟು ಮುಖ್ಯವೋ, ಅಂಬಿಯ ಬಿಡುಗಡೆ ಸಹ ಅಷ್ಟೇ ಮುಖ್ಯ!" ಎಂದಾಗ ಅವರ ಕಣ್ಣುಗಳಲ್ಲಿ ಅಂಬಿಯವರ ಪರಿಸ್ಥಿತಿಯ ಬಗೆಗೆ ಕಾಳಜಿ, ನೋವು ತುಂಬಿ ಬಂದಿತ್ತು.

ಆದರೆ, ಪ್ರತಿಭಟನೆಯ ಆಯೋಜಕ ಪ್ರಸಾದ್ ಬಿದ್ದಪ್ಪ ಮನುಷ್ಯರ ಬಿಡುಗಡೆಯ ವಿಚಾರದಲ್ಲಿ ಸಂಪೂರ್ಣ ಅನನುಭವಿಯೇನಲ್ಲ. ದುಬೈನಲ್ಲಿ ಸ್ವತಃ ಬಿಡುಗಡೆ ಮಾಡಿಸಿಕೊಂಡವರು, ಬೆಂಗಳೂರಿನಲ್ಲಿ ಸ್ವಂತ ಮಗನ ಬಿಡುಗಡೆ ಮಾಡಿಸಿದವರು. ಅವರ ಅಭಿಮಾನಿಗಳಿಗೆ ಕನ್ನಡ ಬಂದಿದ್ದರೆ, ಅವರನ್ನು "ಬಿಡುಗಡೆ ಬಿಡ್ಡಪ್ಪ" ಎನ್ನುತ್ತಿದ್ದರೋ ಏನೋ.

ಆಗಷ್ಟೇ ನಡು ನೆತ್ತಿಗೇರಿದ್ದ ಸುಡು ಸೂರ್ಯನಿಂದ ರಕ್ಷಿಸಲು ತಮ್ಮ ಸಹಾಯಕ ಹಿಡಿದಿದ್ದ ತಿಳಿಗೆಂಪು ಛತ್ರಿಯ ಕೆಳಗೆ ಅದಕ್ಕೆ ಮ್ಯಾಚಿಂಗ್ ವಸ್ತ್ರ ತೊಟ್ಟು ಮಾವಿ ಬೇಬ್ ಮಾಯಿಷ್ಚರೈಸರ್ ಯುಕ್ತ ಎಸ್.ಪಿ.ಎಫ್. ೪೦ ಸನ್ ಬ್ಲಾಕ್ ಲೋಶನ್ ಹಚ್ಚುತ್ತಿದ್ದ ಬಿಡ್ಡಪ್ಪ, ಕೇಂದ್ರ ಸಚಿವ ಸಂಪುಟದಿಂದ ಅಂಬಿಯನ್ನು ಬಿಡುಗಡೆ ಮಾಡಿಸಲು -- ತಮ್ಮ ಸುಮ ಕೋಮಲ ತ್ವಚೆಯನ್ನೂ ಒಳಗೊಂಡು -- ಯಾವುದೇ ತ್ಯಾಗಕ್ಕೂ ಸಿದ್ಧರಿರುವಂತೆ ಕಂಡು ಬಂದರು.

ನಮ್ಮ ಪತ್ರಿಕೆಯ ವರದಿಗಾರನನ್ನು ಕಂಡಾಗ ಕ್ಷಣ ಮಾತ್ರವಷ್ಟೇ ಮುಗುಳ್ನಕ್ಕ ಅವರ ಕಂಗಳಲ್ಲಿ ಅಂಬಿಯವರ ಗಂಭೀರ ಪರಿಸ್ಥಿತಿಯ ಕುರಿತು ಕಾಳಜಿ, ಖಿನ್ನತೆ, ಹತಾಶೆ ಮನೆ ಮಾಡಿದ್ದವು.

ಆದರೆ, ಮಾನವ ಆಶಾ ಜೀವಿ. ಎಂತಹ ಖಿನ್ನತೆ, ನಿರಾಶೆಯ ಕತ್ತಲಲ್ಲೂ ಆಶಾ ಕಿರಣವನ್ನು ಹುಡುಕುವುದು ಪ್ರತಿ ಮಾನವನೂ ಬೆಳೆಯುವಾಗ ಕಲಿಯುವ ಹುಟ್ಟುಗುಣ. ಹತಾಷೆಯಲ್ಲೂ ಆಶೆ, ಮಾನವೀಯತೆಯ ಪ್ರತೀಕ. ಬಿಡ್ಡಪ್ಪ ಸಹ ಈ ಮಾನವೀಯತೆಯಿಂದ ಹೊರತಲ್ಲ. ಪ್ರತಿ ಸಾರಿ ಅವರು "ಫ್ರೀ ಫ್ರೀ" ಎಂದಾಗಲೆಲ್ಲಾ, ಅವರ ಬಾಯಿಂದ ಹೊರ ಹೊರ ಹೊಮ್ಮಿದ್ದು ಇದೇ ಮಾನವೀಯತೆ!

ಮಂಡ್ಯದ ಗಂಡು ಎಂದೇ ಹೆಸರಾಗಿರುವ ಅಂಬಿ ಕೇಂದ್ರ ಸಚಿವ ಸಂಪುಟಕ್ಕೆ ಸೇರಿ ಹೆಚ್ಚೇನೂ ಸಮಯವಾಗಿಲ್ಲ; ಕೆಲವು ತಿಂಗಳುಗಳಾಗಿರಬಹುದು ಅಷ್ಟೇ. ವಾರ್ತಾ ಸಚಿವರಾಗಿ ನೇಮಕವಾದರೂ, ದೂರದರ್ಶನದಲ್ಲಿರಲಿ, ಕನಿಷ್ಠ ಆಲ್ ಇಂಡಿಯಾ ರೇಡಿಯೋದಲ್ಲಿ ಸಹ ಒಮ್ಮೆಯೂ ವಾರ್ತೆಯನ್ನೋದುವ ಸುಖ ಅನುಭವಿಸಿದವರಲ್ಲ. ಸಚಿವ ಪೀಠವನ್ನು ಸರಿಯಾಗಿ ಅಲಂಕರಿಸುವ ಮೊದಲೇ, ಅಂಬಿಯ ರಾಜಕೀಯ ಜೀವನದಲ್ಲಿ ಕಾವೇರಿ ಟ್ರಿಬ್ಯುನಲ್ ತೀರ್ಪು ಬರಸಿಡಿಲಿನಂತೆ ಎರಗಿದ್ದು ಪರಿಸ್ಥಿತಿಯ ವಿಪರ್ಯಾಸ. ಯಾವುದೇ ಗ್ರೀಕ್ ನಾಟಕಕಾರನೂ ಕಲ್ಪಿಸಲಾಗದ ಜೀವನದ ಕ್ರೌರ್ಯ, ದುರಂತ.

ಅಂಬಿ ತಮ್ಮ ಕುರ್ಚಿಯ ಮೇಲೆ ಸರಿಯಾಗಿ ಕೂರುವ ಮುನ್ನವೇ, ರಾಜಿನಾಮೆ ನೀಡಬೇಕಾಗಿ ಬಂದಿದ್ದು ಪರಿಸ್ಥಿತಿಯ ಪ್ರಹಸನವೆಂದೋ ವಿಧಿಯ ವಿಲಾಸವೆಂದೋ ಸುಮ್ಮನಾಗಬಹುದಾದರೂ, ನಂತರದ ಅಮಾನವೀಯ ದೌರ್ಜನ್ಯ ಬಿಡ್ಡಪ್ಪನವರ ಮೃದು ಹೃದಯದಲ್ಲೂ ಕ್ರಾಂತಿಯ ಕಿಡಿ ಮೂಡಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಕೇಂದ್ರ ಸರ್ಕಾರದಂತಹ ಮಾನವ ನಿರ್ಮಿತ ವ್ಯವಸ್ಥೆ, ತನ್ನ ಮಾನವೀಯತೆಯನ್ನು ಮರೆತು, ಮಂಡ್ಯದ ಮುಗ್ಧನೊಬ್ಬನಿಗೆ ಸಚಿವ ಸಂಪುಟದಿಂದ ಬಿಡುಗಡೆಯನ್ನೂ ನೀಡದಂತಹ ರಕ್ಕಸ ಶಕ್ತಿಯಾಗಿ ಮಾರ್ಪಾಡಾದಾಗ ಏಳುವ ನೈತಿಕ ಪ್ರಶ್ನೆಗಳು, ಗೊಂದಲಗಳು ಹತ್ತು ಹಲವು.

ಉದಾಹರಣೆಗೆ, ಅಂಬಿ ಬಿಡುಗಡೆಗಾಗಿ ಬಿಡ್ಡಪ್ಪ ತಮ್ಮ ಸಹಾಯಕ ಹಿಡಿದ ತಿಳಿಗೆಂಪು ಛತ್ರಿಯ ಕೆಳಗೆ ನಿರಾಯುಧನಾಗಿ, ಅಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿರುವಾಗ, ಅವರು ವಿರೋಧಿಸುತ್ತಿರುವ ವ್ಯವಸ್ಥೆ ಲಕ್ಷಾಂತರ ಮಂದಿ ಸೈನಿಕರೇ ಅಲ್ಲದೇ, ಅಣ್ವಸ್ತ್ರವನ್ನೂ ಹೊಂದಿರುವುದು ನೈತಿಕವಾಗಿ ಎಷ್ಟು ಸರಿ?!

ವ್ಯವಸ್ಥೆಯ ಕುರಿತು ಇಂತಹ ಎಕ್ಸಿಸ್ಟೆಂಷಿಯಲ್ ಸಂಧಿಗ್ದಗಳು ಎದುರಾದಾಗ, ನಮ್ಮ ಪತ್ರಿಕೆ ಮೊರೆ ಹೋಗಲಿಚ್ಛಿಸುವುದು ಇಡೀ ದೇಶದ ಆತ್ಮ ಸಾಕ್ಷಿಯ ಪ್ರತೀಕವಾಗಿರುವ ಲಾಲೂ ಪ್ರಸಾದ್ ಯಾದವ್ ಅವರಲ್ಲಿಗೆ.

ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರಂ ಎರಡರ ಮೇಲೆ ನಿಂತಿದ್ದ, ಸುಮಾರು ಮಟ್ಟಿಗೆ ಲಾಲೂ ಹೋಲಿಕೆಯಿದ್ದ ವ್ಯಕ್ತಿಯೊಬ್ಬರನ್ನು ಈ ವರದಿಗಾರ ಪ್ರಶ್ನಿಸಿದ.

"ಲಾಲೂಜೀ.. ಮಂಡ್ಯಾ ಕೆ ಗಂಡು ಕೆ ಇಸ್ತೀಫಾ ಕೆ ಬಾರೆ ಮೇ ಆಪ್ಕಾ ಕ್ಯಾ ರಾಯ್ ಹೈ?"
"ಮಂಡ್ಯಾ ಕೆ.... ಕ್ಯಾ....?"
ನಕಲಿ ಲಾಲೂರವರ ಅಸಲೀ ಉತ್ತರ ಮಾರ್ಮಿಕವಾಗಿತ್ತು; ಪ್ರಶ್ನೆಯ ರೂಪದಲ್ಲಿತ್ತು.

ಜೀವನದ ಹಲವು ಪ್ರಶ್ನೆಗಳಂತೆ ನಮ್ಮ ಈ ಪ್ರಶ್ನೆಯೂ ಪ್ರಶ್ನೆಯಾಗೆಯೇ ಉಳಿದಿತ್ತು.

Labels:

Friday, March 09, 2007

ಮಜಾವಾಣಿ: ಶಿಕ್ಷಣ ವಾಣಿ

"ಈ ಪ್ರಪಂಚದಲ್ಲಿ ಸಾವೊಂದೇ ನಿಶ್ಚಿತ"
(ಮಜಾವಾಣಿ ಬ್ಯೂರೋ ವರದಿ)

ದೊಂಬಲೂರು, ಫೆಬ್ ೧೧: "ಈ ಪ್ರಪಂಚದಲ್ಲಿ ಸಾವು ಎಲ್ಲರಿಗೂ ನಿಶ್ಚಿತ. ನೀವೀಗ ಎಷ್ಟೋ ಕನಸುಗಳನ್ನು ಕಾಣುತ್ತಿರಬಹುದು. ಮಹಾನ್ ವಿಜ್ಞಾನಿಯಾಗುವ ಕನಸು, ಖ್ಯಾತ ಚಿತ್ರ ತಾರೆಯಾಗುವ ಕನಸು, ವಿಶ್ವ ಕಪ್‌ ಫೈನಲ್ಲಿನಲ್ಲಿ ವಿನ್ನಿಂಗ್ ರನ್ ಹೊಡೆಯುವ ಕನಸು. ನಿಮ್ಮಲ್ಲಿ ಬಹುಪಾಲು ಮಂದಿಗೆ ಇಂತಹ ಕನಸುಗಳು ಕನಸುಗಳಾಗೇ ಉಳಿಯುತ್ತವೆ. ಆದರೆ ಒಂದು ಮಾತ್ರ ಖಂಡಿತ. ಒಂದಲ್ಲ ಒಂದು ದಿನ ನೀವು ಸಾಯುವುದು ನಿಶ್ಚಿತ" ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಧರ್ಮರಾಜಯ್ಯನವರು ಹೇಳಿದ್ದಾರೆ.

ದೊಂಬಲೂರಿನ ಹೋಲಿ ಬ್ಲಾಸಂ ಇಂಗ್ಲೀಷ್ ಪ್ರಾಥಮಿಕ ಶಾಲೆಯ ಶಾಲಾ ದಿನದ ಕಾರ್ಯಕ್ರಮದಲ್ಲಿ ಮಕ್ಕಳನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, "ಸಾವು ಮಾತ್ರ ಎಲ್ಲರಿಗೂ ಗ್ಯಾರಂಟಿ. ಅದೃಷ್ಟ ಇದ್ದವರು ಹೆಚ್ಚು ನೋವನ್ನು ಅನುಭವಿಸದೆ ಅಂತ್ಯ ಕಾಣುತ್ತಾರೆ" ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ದೊಂಬಲೂರು ಸಹಕಾರಿ ಬ್ಯಾಂಕಿನ ಕಾರ್ಯದರ್ಶಿ ಮಲ್ಲಣ್ಣ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಹೋಲಿ ಬ್ಲಾಸಂ ಶಾಲೆಯ ಶಿಕ್ಷಕಿ ಮರಗತಂ ಸ್ವಾಗತ ಭಾಷಣ ಮಾಡಿದರು. ಶಾಲೆಯ ಮುಖ್ಯ ಶಿಕ್ಷಕ ವೇಲಾಯುಧನ್ ವಂದನಾರ್ಪಣೆ ಮಾಡಿದರು.

Labels: ,

ಮಜವಾಣಿ: ಜಲ ಕ್ರೀಡೆ

ಕಾವೇರಿ ಮರು ನಾಮಕರಣಕ್ಕೆ ಪೂರ್ಣ ಸಿದ್ಧತೆ!

ಬೆಂಗಳೂರು ಫೆಬ್ ೧೦: ಕರ್ನಾಟಕ ಮತ್ತು ತಮಿಳು ನಾಡಿನ ನಡುವಿನ ಜಲ ವಿವಾದದ ಕೇಂದ್ರ ಬಿಂದುವಾಗಿರುವ ಕಾವೇರಿ ನದಿಗೆ ಕರ್ನಾಟಕ ಸರ್ಕಾರ ಮರು ನಾಮಕರಣಮಾಡಲು ಸಕಲ ಸಿದ್ಧತೆಗಳನ್ನು ನಡೆಸುತ್ತಿರುವ ವಿಚಾರ ನಮ್ಮ ಪತ್ರಿಕೆಗೆ ತಿಳಿದು ಬಂದಿದೆ. ಈ ವಿಚಾರದ ಕುರಿತು ಮುಖ್ಯಮಂತ್ರಿ ಕುಮಾರ ಸ್ವಾಮಿಯವರನ್ನು ನಮ್ಮ ವರದಿಗಾರರು ಪ್ರಶ್ನಿಸಿದಾಗ ಅವರು ಯಾವುದೇ ಉತ್ತರವನ್ನು ನೀಡಲು ಒಪ್ಪಲಿಲ್ಲ.

ಆದರೆ, ಖ್ಯಾತ ಜಲ ವಿವಾದ ಕಾನೂನು ತಜ್ಞ ಮತ್ತು ಪಾಟಿಯಾಲಾದ ಗ್ಯಾನಿ ಜೈಲ್ ಸಿಂಗ್ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ಡಾ. ಜಲ್ಜಿತ್ ಸಿಂಗ್ ಬಾರನ್‌ಲಾ ಅವರು ಕೆಲವು ದಿನಗಳ ಹಿಂದೆ ನಮ್ಮ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕಾವೇರಿಗೆ ಮರು ನಾಮಕರಣ ಮಾಡುವ ವಿಚಾರವನ್ನು ಪ್ರಸ್ತಾಪಿಸಿದ್ದುದು ಇಲ್ಲಿ ನೆನಪು ಮಾಡಿಕೊಳ್ಳಬಹುದು.
ಡಾ.ಬಾರನ್‌ಲಾ ಅವರ ಪ್ರಕಾರ, ಕರ್ನಾಟಕದಲ್ಲಿ ಕಾವೇರಿ ಎಂಬ ನದಿಯೇ ಇಲ್ಲದಿದ್ದಾಗ ಅದರ ನೀರನ್ನು ತಮಿಳು ನಾಡಿನೊಂದಿಗೆ ಹಂಚಿಕೊಳ್ಳುವ ಪ್ರಶ್ನೆಯೇ ಉದ್ಭಸಿವುದಿಲ್ಲ. ತಮಿಳು ನಾಡು ಈ ಮರು ನಾಮಕರಣವನ್ನು ಪ್ರಶ್ನಿಸಿ ನ್ಯಾಯಲಯಕ್ಕೆ ಹೋದರೂ ಸದ್ಯಕ್ಕೆ ಅಂತಹ ತೊಂದರೆಯೇನೂ ಇಲ್ಲ. ಅಂತಿಮ ತೀರ್ಪಿಗೆ ಹಲವಾರು ದಶಕಗಳೇ ಬೇಕು, ಅಷ್ಟೇ ಅಲ್ಲ, ಅಲ್ಲಿಯ ವರೆಗೆ ನೀರು ಹಂಚಿಕೆಯ ವಿವಾದ ನದಿ ಹೆಸರಿನ ವಿವಾದವಾಗಿ ಬದಲಾಗಿರುತ್ತದೆ.

Labels:

Friday, March 02, 2007

ಮಜಾವಾಣಿ: ಕ್ರೈಮ್ ಸ್ಟೋರಿ


ಈಜುಡುಗೆ ತೊಟ್ಟು ನಡುಬೀದಿಯಲ್ಲಿ ನಿಂತಿದ್ದ ಸಂಪಾದಕನ ಬಂಧನ!
ಬೆಂಗಳೂರು ಫೆಬ್. ೨೩: ಈಜುಡುಗೆ ತೊಟ್ಟು ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೋಲೀಸರು ಬಂಧಿಸಿದ್ದಾರೆ.

ಈಜುಡುಗೆ ತೊಟ್ಟು ನಗರದ ಎಂ.ಜಿ. ರೋಡ್, ಬ್ರಿಗೇಡ್ ರೋಡ್, ಸಂಪಂಗಿ ರಾಮ ದೇವಸ್ತಾನದ ಬೀದಿ ಮುಂತಾದ ಪ್ರಮುಖ ರಸ್ತೆಗಳಲ್ಲಿ ನಿಂತು, ಕಂಡ ಕಂಡವರಿಗೆಲ್ಲಾ ಮುಗಳ್ನಗೆಯನ್ನು ಬೀರುತ್ತಿದ್ದ ವ್ಯಕ್ತಿಯ ಬಗೆಗೆ ಕಳೆದ ಕೆಲವು ದಿನಗಳಿಂದ ನಗರದೆಲ್ಲೆಡೆ ಭಯ ಮಿಶ್ರಿತ ಕುತೂಹಲ ಮನೆ ಮಾಡಿತ್ತು. ಹಲವರು ಈತನೊಬ್ಬ ವಿದೇಶಿ ಬೇಹುಗಾರನಿರಬೇಕೆಂಬ ಸಂದೇಹ ವ್ಯಕ್ತಪಡಿಸಿದ್ದರೆ, ಇನ್ನೂ ಹಲವರು "ಕರ್ನಾಟಕದಲ್ಲಿ ನೀರಿಗೇನೂ ಕೊರತೆ ಇಲ್ಲ. ಬೀದಿ-ಬೀದಿಗಳಲ್ಲೂ ಸ್ವಿಮ್ಮಿಂಗ್ ಪೂಲ್ ಇದೆ" ಎಂದು ತೋರಿಸಲು ತಮಿಳು ನಾಡಿನವರು ಮಾಡಿರುವ ಸಂಚಿರಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಪೋಲೀಸರ ಕ್ಷಿಪ್ರಾಚರಣೆಯಿಂದ ಬೆಂಗಳೂರಿನ ಜನತೆ ಈಗ ನೆಮ್ಮದಿಯ ನಿಟ್ಟುಸಿರನ್ನು ಬಿಡುವಂತಾಗಿದೆ.

ನಿರಾಕರಣೆ: ಪೋಲೀಸರ ಬಂಧನಕ್ಕೆ ಒಳಗಾಗಿದ್ದು ತಾವೇ ಎಂಬುದನ್ನು ಮಜಾವಾಣಿ ಸಂಪಾದಕರು ನಿರಾಕರಿಸಿದ್ದಾರೆ. ತಮ್ಮ ಈಜುಡುಗೆಯ ಕುರಿತು ಮಾತನಾಡಲು ಇಚ್ಛಿಸದ ಅವರು, "ಇಂಡಿಬ್ಲಾಗೀಸ್ ಪ್ರಶಸ್ತಿಯ ಆಯೋಜಕರಾಗಲೀ, ಕಳೆದ ಬಾರಿಯ ಪ್ರಶಸ್ತಿ ವಿಜೇತ ಕನ್ನಡವೇ ನಿತ್ಯ ಬ್ಲಾಗಿನ ಎಂ.ಎಸ್.ಶ್ರೀರಾಂ ಆಗಲಿ, ಕೊನೆಗೆ ಸಂಪದದ ನಾಡಿಗರಾಗಲೀ, ಈ ಸ್ಪರ್ಧೆಯಲ್ಲಿ ಸ್ವಿಮ್ ಸ್ಯೂಟ್ ರೌಂಡ್ ಇಲ್ಲ ಎಂದು ಎಲ್ಲೂ ತಿಳಿಸಿಲ್ಲ. ಇದು ನಮ್ಮ ಪತ್ರಿಕೆಯ ಘನತೆಗೆ ಕುಂದು ತರಲು ನಮ್ಮನ್ನು ನೋಡಿ ನಗುವ ಜನರು ಮಾಡಿರುವ ವ್ಯವಸ್ಥಿತ ಸಂಚು!" ಎಂದು ಆವೇಶಭರಿತರಾಗಿ ನುಡಿದರು.
["ಓದುಗರ ಮೆಚ್ಚಿಕೆಗಿಂತ ಹೆಚ್ಚಿನ ಪ್ರಶಸ್ತಿ ಇಲ್ಲ" ಎಂಬ ಮಾತು ನಿಜವಾದರೂ, ಇಂಡಿಬ್ಲಾಗೀಸ್ ಪುರಸ್ಕಾರ ಸಂತೋಷ ತಂದಿದೆ ಎಂಬುದೂ ನಿಜ. ನನ್ನ ಬ್ಲಾಗನ್ನು ಮೆಚ್ಚಿ ಮತ ಹಾಕಿದ ಎಲ್ಲರಿಗೂ ನನ್ನ ಧನ್ಯವಾದಗಳು. - ಶೇಷಾದ್ರಿ]

Labels:

Monday, February 19, 2007

ಮಜಾವಾಣಿ: ರಾಷ್ಟ್ರೀಯ ವಾರ್ತೆ


ಅಮಿತಾಬ್ ಎತ್ತರವನ್ನು ರಾಷ್ಟ್ರೀಯ ಎತ್ತರವಾಗಿ ಘೋಷಣೆ!
ನವ ದೆಹಲಿ, ಫೆಬ್. ೨೦: ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ, ರಾಷ್ಟ್ರ ಪಕ್ಷಿ, ರಾಷ್ಟ್ರೀಯ ಕ್ರೀಡೆ... ಈಗ ಈ ಪಟ್ಟಿಗೆ ರಾಷ್ಟ್ರೀಯ ಎತ್ತರ ಸಹ ಸೇರಿದೆ!


ಇಂದು ಸಂಜೆ ನವ ದೆಹಲಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಅರ್ಜುನ್ ಸಿಂಗ್ ಅವರು ಖ್ಯಾತ ಹಿಂದಿ ನಟ ಅಮಿತಾಬ್ ಬಚನ್ ಎತ್ತರವನ್ನು ರಾಷ್ಟ್ರೀಯ ಎತ್ತರವಾಗಿ ಘೋಷಿಸಿದರು. "ಬಚನ್‌ಜೀಯವರ ಎತ್ತರ ಇಡೀ ರಾಷ್ಟ್ರಕ್ಕೇ ಒಂದು ಮಾದರಿಯಾಗಿದ್ದು, ಭಾರತದಲ್ಲಿ ಬೆಳೆಯುತ್ತಿರುವ ಮಕ್ಕಳೆಲ್ಲರೂ ಈ ಎತ್ತರಕ್ಕೆ ಬೆಳೆಯುವಂತೆ ತಂದೆ-ತಾಯಿಯರು, ಶಿಕ್ಷಕ-ಶಿಕ್ಷಕಿಯರು ಮಾತ್ರವಲ್ಲ ಇಡೀ ಸಮಾಜವೇ ಪ್ರೋತ್ಸಾಹಿಸಬೇಕು" ಎಂದರು.


ಪ್ರತಿಯೊಂದು ರಂಗದಲ್ಲಿಯೂ ರಾಷ್ಟ್ರೀಯ ಮಾದರಿಯನ್ನು ಗುರುತಿಸಿ ಆ ದಿಕ್ಕಿನೆಡೆಗೆ ಇಡೀ ಭಾರತೀಯ ಸಮಾಜವನ್ನು ಕೊಂಡೊಯ್ಯಲು ರಾಷ್ಟ್ರೀಯ ಮಾದರಿ ಆಯೋಗವನ್ನು ಈಗಾಗಲೇ ಕೇಂದ್ರ ಸರ್ಕಾರ ನಿಯೋಜಿಸಿರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.


ಸ್ಪರ್ಧೆಯಲ್ಲಿ ಅಂಬಿ, ರಜನಿ? - ಸದ್ಯದಲ್ಲಿಯೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ "ರಾಷ್ಟ್ರೀಯ ನಡಿಗೆ"ಯನ್ನು ಘೋಷಿಸಲಿದ್ದು, ಮಂಡ್ಯದ ಗಂಡು ಅಂಬರೀಶ್ ಅವರ ನಡಿಗೆ ಸಹ ಕೇಂದ್ರ ರಾಷ್ಟ್ರೀಯ ಮಾದರಿ ಆಯೋಗದ ನಡಿಗೆ ಸಬ್ ಕಮಿಟಿ ತಯಾರಿಸಿರುವ ಅಂತಿಮ ಪಟ್ಟಿಯಲ್ಲಿದೆ ಎಂದು ತಿಳಿದು ಬಂದಿದೆ. ಆದರೆ, ನವ ದೆಹಲಿಯ ಕೇಂದ್ರ ನಡಿಗೆ ವೀಕ್ಷಣಾಲಯದ ತಜ್ಞರ ಮಾತನ್ನು ನಂಬುವುದಾದರೆ, ರಾಷ್ಟ್ರೀಯ ನಡಿಗೆ ಮಾದರಿಗಾಗಿ ಅಂಬಿ ಮತ್ತು ದಕ್ಷಿಣ ಭಾರತದ ಖ್ಯಾತ ತಾರೆ ರಜನಿಕಾಂತ್ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಇದೊಂದು ಅಂತರರಾಜ್ಯ ವಿವಾದವಾಗುವ ಸಂಭವ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಒಂದು ರಾಜೀ ಸೂತ್ರದ ತಯಾರಿಯಲ್ಲಿದ್ದು ಅಂಬಿಯವರ ಎಡ ಹೆಜ್ಜೆ ಮತ್ತು ರಜನಿಕಾಂತ್ ಅವರ ಬಲ ಹೆಜ್ಜೆಯನ್ನು ಸೇರಿಸಿ "ರಾಷ್ಟ್ರೀಯ ನಡಿಗೆ" ಘೋಷಿಸುವ ಸಂಭವ ಸಹ ಇದೆ.

Labels: ,

Monday, February 05, 2007

ಮಜಾವಾಣಿ: ತಮಿಳು ಸಂಚಿಕೆ

ಮಜಾವಾಣಿಗೆ ಪುರಸ್ಕಾರ!

ಬೆಂಗಳೂರು ಫೆಬ್ರುವರಿ ೬, ೨೦೦೬: ಕರ್ನಾಟಕ ಮತ್ತು ತಮಿಳು ನಾಡಿನ ನಡುವಿನ ಕಾವೇರಿ ವಿವಾದದ ನಡುವೆಯೇ, ಕನ್ನಡದ (ಆಗೊಂದು ಈಗೊಂದು) ದಿನಪತ್ರಿಕೆ ಮಜಾವಾಣಿ ಇಡೀ ಒಂದು ಸಂಚಿಕೆಯನ್ನೇ ತಮಿಳು ಲಿಪಿಯಲ್ಲಿ ಪ್ರಕಟಿಸಿ "ತಮಿಳು ಲಿಪಿಯಲ್ಲಿ ಪ್ರಕಟಿಸಿದ ಪ್ರಪ್ರಥಮ ಕನ್ನಡ ಸುದ್ದಿ ಪತ್ರಿಕೆ" ಎಂಬ ಪುರಸ್ಕಾರಕ್ಕೆ ಪಾತ್ರವಾಗಿದೆ.

ಈ ಕುರಿತು ನಮ್ಮ ಪತ್ರಿಕೆಗೆ ಆತ್ಮ-ಸಂದರ್ಶನ ನೀಡಿದ ಮಜಾವಾಣಿ ಸಂಪಾದಕರು, "ಈ ಗೌರವ ನಮ್ಮ ಪತ್ರಿಕೆಗೆ ಮಾತ್ರ ಸಂದ ಗೌರವ ಅಲ್ಲ, ಇಡೀ ಕನ್ನಡ ಪತ್ರಿಕೋದ್ಯಮಕ್ಕೇ ಸಂದ ಗೌರವ. ಇದು ಅತ್ಯಂತ ಹೆಮ್ಮೆಯ ವಿಷಯ. ತಮಿಳಿನಲ್ಲಿ ಕನ್ನಡವೆನೆ ಕುಣಿದಾಡುವುದೆನ್ನೆದೆ, ಕನ್ನಡವೆನೆ ಕಿವಿ ನಿಮಿರುವುದು ಎಂದು ತಮಿಳರಿಗೆ ಶುಭ ಹಾರೈಸಿ, ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿದ್ದೇವೆ" ಎಂದರು. "ಅದಲ್ಲದೆ, ಕನ್ನಡ ಪತ್ರಿಕೋದ್ಯಮದ ಹಿರಿಯಕ್ಕನಾಗಿ, ಇಂಗ್ಲೀಷ್ ಸುದ್ದಿಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಾ ಹಾಲು-ಹೆಜ್ಜೆಯನ್ನಿಡುತ್ತಿರುವ ಕನ್ನಡ ಪತ್ರಿಕೋದ್ಯಮ ಹಸುಗೂಸಾದ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಗೆ ಮುಂದಿನ ಹೆಜ್ಜೆಯನ್ನು ತೋರುವ ಜವಬ್ದಾರಿ ಸಹ ನಮ್ಮ ಪತ್ರಿಕೆಯ ಮೇಲಿದೆ" ಎಂದೂ ಸಹ ನುಡಿದರು.

Labels:

மஜாவாணி: தமிளினல்லி

கன்னடவெனெ குணிதாடுவுதென்னெதெ!
கன்னடவெனெ கிவி னிமிருவுது!!

ಮಜಾವಾಣಿ: ಸರ್ಕಾರಿ ಪ್ರಕಟಣೆ

ಕರನಾಟಕ ಸರ್ಕಾರ
ಅಧಿಸೂಚನೆ
ಕರ್ನಾಟಕದ ಹಲವಾರು ಸ್ಥಳಗಳಲ್ಲಿ -- ಬೆಂಗಳೂರನ್ನು ಹೊರತುಪಡಿಸಿ -- ಊರಿನ ಮೂರ್ಖ/ಮುಠ್ಠಾಳ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಹಲವಾರು ಊಹಾಪೋಹಗಳಿಗೆ ಮತ್ತು ವದಂತಿಗಳಿಗೆ ಕಾರಣವಾಗಿದೆ. ಒಂದೇ ಬಾರಿಗೆ ಕರ್ನಾಟಕದ ಹಲವಾರು ಊರುಗಳಿಂದ ಮೂರ್ಖರೂ, ಮುಠ್ಠಾಳರು ಒಟ್ಟಿಗೆ ನಾಪತ್ತೆಯಾಗಿರುವುದು ಆಶ್ಚರ್ಯದ ಮತ್ತು ಆಸಕ್ತಿಕರ ವಿಷಯವಾದರೂ, ಆನಂದ/ಆತಂಕ ಪಡಬೇಕಾದ ವಿಚಾರವಲ್ಲ.

ಇದೊಂದು ಕೇವಲ ಅಲ್ಪಕಾಲಿಕ ಪರಿಸ್ಥಿತಿ ಮಾತ್ರ. ಸಾರ್ವಜನಿಕರು ಈ ವಿಷಯದ ಕುರಿತು ಹೆಚ್ಚಿನ ಆನಂದ/ಆತಂಕ ವ್ಯಕ್ತಪಡಿಸುವುದನ್ನು ಈ ಮೂಲಕ ನಿಷೇಧಿಸಲಾಗಿದೆ.

ನೆನಪಿಡಿ: ಇದೊಂದು ತಾತ್ಕಾಲಿಕ ಪರಿಸ್ಥಿತಿ ಮಾತ್ರ. ಜನವರಿ ೨೫ರಿಂದ ಪ್ರಾರಂಭವಾದ ವಿಧಾನ ಮಂಡಲದ ಅಧಿವೇಶನ ಮುಗಿಯುತ್ತಿದ್ದಂತೆಯೇ ಪರಿಸ್ಥಿತಿ ಯಥಾಸ್ಥಿತಿಗೆ ಮರಳಲಿದೆ.
ಕ.ರಾ.ಸ.ಅ.ಸೂ. ೦೫/೦೨/೨೦೦೭-೪೨೦

Labels:

Saturday, February 03, 2007

ಮಜಾವಾಣಿ: ತಾರಾ ತಮ್ಯ

"ವರ್ಣಭೇದದ ವಿರುದ್ಧ ಸಿಡಿದೇಳಿ" - ಶಿಲ್ಪಾ ಶೆಟ್ಟಿ
ಲಂಡನ್, ಫೆಬ್ರುವರಿ ೩, ೨೦೦೬: "ವರ್ಣತಾರತಮ್ಯ ಜಗತ್ತಿನಲ್ಲಿ ಇನ್ನೂ ಇದೆ. ಅದರ ನಿರ್ಮೂಲನೆಗೆ ಒಟ್ಟಾಗಿ ಕಾರ್ಯನಿರ್ವಹಿಸಲೇಬೇಕಿದೆ" ಎಂದು ಸಂದರ್ಶನವೊಂದರಲ್ಲಿ ಬಿಗ್ ಬಾದರ್ ತಾರೆ ಶಿಲ್ಪಾ ಶೆಟ್ಟಿ ನುಡಿದಿದ್ದಾರೆ ಎಂದು ನಮ್ಮ ಪ್ರತಿಸ್ಪರ್ಧಿ ಪತ್ರಿಕೆಯಾದ ಕನ್ನಡ ಪ್ರಭ ವರದಿಮಾಡಿದೆ.

ಈ ವರದಿಯ ಪ್ರಕಾರ, ತನಗೆ ಜನಾಂಗೀಯ ಅವಹೇಳನವಾಗಿದೆಯೆಂದು ಬೊಬ್ಬೆ ಹೊಡೆದು, ನಂತರ ಏನೂ ಆಗಿಲ್ಲ, ನಡೆದಿದ್ದನ್ನು ಮರೆತುಬಿಡಿ ಎಂದು ಹೇಳಿದ್ದ ಶೆಟ್ಟಿ, ಈಗ ಮತ್ತೆ ಈ ವಿವಾದ ಪ್ರಸ್ತಾಪಿಸಿ, ವರ್ಣಭೇದದ ವಿರುದ್ಧ ವಿಶ್ವಾದ್ಯಂತ "ಸಿಡಿದೇಳುವಂತೆ" ತಮ್ಮ ಅಭಿಮಾನಿಗಳಿಗೆ ಕರೆಕೊಟ್ಟಿದ್ದಾರೆ.

"ವರ್ಣತಾರತಮ್ಯ ನಿರ್ಮೂಲನೆಗೆ, ಗಾಂಧೀಜಿಯವರ ನಾಡಿನವರಾದ ನಾವು ಅಹಿಂಸಾತ್ಮಕ ಹೋರಾಟ ನಡೆಸಬೇಕು. ಇದಕ್ಕೆ ಫೇರ್ N ಲವ್ಲೀಗಿಂತ ಉತ್ತಮ ಆಯುಧವಿಲ್ಲ. ಭಾರತೀಯರು ಮಾತ್ರವಲ್ಲ, ಇಡೀ ಜಗತ್ತಿನ ಕಪ್ಪು ಜನರು ಇದರ ಬಳಕೆಯನ್ನು ಮಾಡಬೇಕು" ಎಂದಿದ್ದಾರೆ.

Labels:

Thursday, February 01, 2007

ಮಜಾವಾಣಿ: ಚಿಂತನ-ಮಂಥನ

ಪುರಾಣ, ತತ್ವಶಾಸ್ತ್ರ, ದಾರ್ಶನಿಕ ಗ್ರಂಥಗಳನ್ನೋದುತ್ತಿರುವಾಗ ದೇವರೇಕೆ ಎಂದೂ ಹಿತ್ತಲಿಗೆ ಹೋಗುವುದಿಲ್ಲ ಎಂಬ ಪ್ರಶ್ನೆ ಒಮ್ಮೊಮ್ಮೆ ನನ್ನನ್ನು ಕಾಡತೊಡಗುತ್ತದೆ. ಹಾಗಾದಾಗೆಲ್ಲಾ, ನಾನೀಗ ಏಳು ವರ್ಷದ ಬಾಲಕನಲ್ಲ ಎಂಬುದು ತಟ್ಟನೆ ನೆನಪಾಗಿ ನೆಮ್ಮದಿಯ ನಿಟ್ಟುಸಿರುಬಿಟ್ಟು ಸುಮ್ಮನಾಗುತ್ತೇನೆ.

Labels:

Wednesday, January 31, 2007

ಮಜಾವಾಣಿ: ವಿದೇಶ ಸುದ್ದಿ




ಇರಾಕಿನಲ್ಲಿ ಗಾಂಧಿ ಸ್ಮರಣೆ
ಬಾಗ್ದಾದ್, ಜನವರಿ ೩೦, ೨೦೦೬: ಶಾಂತಿ ದೂತ ಗಾಂಧೀಜಿಯವರ ೫೯ನೆಯ ಪುಣ್ಯ ತಿಥಿಯನ್ನು ಇರಾಕಿನಾದ್ಯಂತ ಇಂದು ಆಚರಿಸಲಾಯಿತು. ಪರಸ್ಪರ ಹೊಡೆದಾಡುತ್ತಿರುವ ಸುನ್ನಿ, ಷಿಯಾ ಮತ್ತು ಅಮೆರಿಕನ್ ಪಡೆಗಳು ಈ ದಿನ ಸಂಜೆ ೫:೧೭ಕ್ಕೆ ೨ ನಿಮಿಷದ ಮೌನ ಆಚರಿಸಿ ಮತ್ತೆ ಕೂಗಾಡುತ್ತಾ ತಮ್ಮ ಹೊಡೆದಾಟ ಮುಂದುವರೆಸಿದವು.

Labels:

Monday, January 29, 2007

ಮಜಾವಾಣಿ: ತನಿಖಾ ವರದಿ

ಅರುಂಧತಿ ರಾಯ್ ಐಶ್ವರ್ಯ ರೈ ಅಕ್ಕ ಅಲ್ಲ!
ಮುಂಬೈ, ಜನವರಿ ೨೯, ೨೦೦೬: ಖ್ಯಾತ ಸಾಹಿತಿ ಮತ್ತು ರೂಪದರ್ಶಿ ಅರುಂಧತಿ ರಾಯ್ ಮತ್ತು ಖ್ಯಾತ ನಟಿ, ಕನ್ನಡ(ಬಾರ)ದ ಕುವರಿ ಐಶ್ವರ್ಯ ರೈ ಒಡಹುಟ್ಟಿದ ಸಹೋದರಿಯರಲ್ಲ.

ಈ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆದರೂ, ಅಭಿಷೇಕ್-ಐಶ್ವರ್ಯ ವಿವಾಹದ ಸಂದರ್ಭದಲ್ಲಿ ಇಂತಹ ಯಾವುದೇ ಅನುಮಾನಗಳಿಗೆ ಆಸ್ಪದ ಇರಬಾರದೆಂದು ನಮ್ಮ ಪತ್ರಿಕೆ ಈ ವರದಿಯನ್ನು ಪ್ರಕಟಿಸಿದೆ. ಜೊತೆಗೆ, ಇತರೆ ಪತ್ರಿಕೆಗಳು ಐಶ್ವರ್ಯ ಅವರ ಸೋದರನ ಹೆಂಡತಿಯ ಅಜ್ಜಿಯಿಂದ ಹಿಡಿದು ಆಕೆಯ ಮುದ್ದಿನ ನಾಯಿಯ ಸೋದರಿಯ ಪಶು ವೈದ್ಯನವರೆಗೆ ಎಲ್ಲ ಸಂಬಂಧಿಕರ ವಿವರಗಳನ್ನು ಈಗಾಗಲೇ ನೀಡಿರುವುದರಿಂದ ನಮ್ಮ ಪತ್ರಿಕೆಗೆ ಉಳಿದಿದ್ದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Labels:

ಮಜವಾಣಿ: ಪರಿಸರ ಸುದ್ದಿ

"ನಾವು ಪ್ರಪಂಚವನ್ನು ಬಿಸಿ ಮಾಡಿಲ್ಲ" - ಮೂರ್ತಿ, ಪ್ರೇಮ್‌ಜಿ, ಮಿತ್ತಲ್
ಡಾವೋಸ್, ಜನವರಿ ೩೦, ೨೦೦೬: ಗ್ಲೋಬಲ್ ವಾರ್ಮಿಂಗ್ ವಿಷಯದಲ್ಲಿ ತಾವು ತಪ್ಪಿಸ್ಥರಲ್ಲವೆಂದಿರುವ ನಾರಾಯಣ ಮೂರ್ತಿ, ಪ್ರೇಮ್‌ಜಿ ಮತ್ತು ಲಕ್ಷ್ಮಿ ಮಿತ್ತಲ್ ಅವರು, "ನಾವು ಪ್ರಪಂಚವನ್ನು ಬಿಸಿ ಮಾಡಿಯೇ ಇಲ್ಲ" ಎಂದಿದ್ದಾರೆ.
ಡಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಮಾತನಾಡುತ್ತಿದ್ದ ಇವರು, ಮಿತ್ತಲ್ ಅವರ ಮನೆಯಲ್ಲಿ ಒಂದು ಅತ್ಯಾಧುನಿಕ, ಬೃಹತ್ ಒಲೆ ಇರುವುದನ್ನು ಒಪ್ಪಿಕೊಂಡರಾದರೂ, ಅದರಿಂದ ಇಡೀ ಜಗತ್ತಿನ ತಾಪ ಹೆಚ್ಚಾಗುವ ಸಂಭವ ಅತಿ ಕಡಿಮೆ ಎಂದರು.

ನಂತರ, ನಮ್ಮ ವರದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಪ್ರೇಮ್‌ಜಿಯವರು, "ನಾನು ಪ್ರಪಂಚ ತಣ್ಣಗೆ ಮಾಡೋಕ್ಕೆ ತುಂಬಾ ಟ್ರೈ ಮಾಡ್ತಾ ಇದ್ದೀನಿ. ಬೆಂಗಳೂರಿಂದ ಕಾರಲ್ಲಿ ದೂರ ಹೋದಾಗೆಲ್ಲಾ ಎ.ಸಿ. ಹಾಕಿದ್ರೂ ಕಿಟಕಿ ತೆಗಿ ಅಂತ ಡ್ರೈವರ್‌ಗೆ ಹೇಳ್ತೀನಿ. ಬೆಂಗಳೂರಲ್ಲಿ ತುಂಬಾ ಡಸ್ಟ್ ಇರತ್ತೆ. ಇಲ್ದೆ ಇದ್ರೆ ಅಲ್ಲೂ ವಿಂಡೋಸ್ ಕೆಳಗಿಳಿಸಿ ಟೆಂಪರೇಚರ್ ಕಡಿಮೆ ಮಾಡಬಹುದಿತ್ತು" ಎಂದರು.

ಅಲ್ಲಿಯೇ ನಿಂತಿದ್ದ ನಾರಾಯಣ ಮೂರ್ತಿಯವರು, "ನಾನು ಕಾಫಿ ಕೂಡ ಬಿಸಿ ಮಾಡಲ್ಲ, ಪ್ರಪಂಚ ಬಿಸಿ ಮಾಡ್ತೀನಾ?!" ಎಂದು ಪ್ರಶ್ನಿಸಿದರು.
ವಾಸ್ತವ ಹೀಗಿದ್ದರೂ, ಅರುಂಧತಿ ರಾಯ್, ಮೇಧಾ ಪಾಟ್ಕರ್ ಅಂತಹವರು ಗ್ಲೋಬಲ್ ವಾರ್ಮಿಂಗ್ ವಿಚಾರದಲ್ಲಿ ಉದ್ಯಮಿಗಳ ಮೇಲೆ ಆರೋಪ ಹೊರಿಸುವುದನ್ನು ನೋಡಿದರೆ, ರಾಯ್, ಪಾಟ್ಕರ್ ಮುಂತಾದ ಪರಿಸರವಾದಿಗಳೇ ತಮ್ಮ ಬಿಡುವಿನ ಸಮಯದಲ್ಲಿ ಯಾರಿಗೂ ತಿಳಿಯದಂತೆ ಪ್ರಪಂಚವನ್ನು ಬಿಸಿ ಮಾಡುತ್ತಿರುವ ಸಾಧ್ಯತೆಗಳಿವೆ.

Labels:

Wednesday, January 24, 2007

ಮಜಾವಾಣಿ: ವಿವಾದ

ಅಡಿಗರ ಇಡ್ಲಿ ಪ್ರೇಮ ವಿವಾದ: "ಇರಲಿಲ್ಲ"-ಭೈರಪ್ಪ, "ಇತ್ತು"-ಕಾರ್ನಾಡ್
ಬೆಂಗಳೂರು ಜನವರಿ ೨೪, ೨೦೦೬: ಟಿಪ್ಪು ಸುಲ್ತಾನನ ಕನ್ನಡ ಪ್ರೇಮದ ಕುರಿತು ಕನ್ನಡ ಸಾಹಿತ್ಯರಂಗದ ದಿಗ್ಗಜರೆನ್ನಿಸಿಕೊಂಡಿರುವ ಎಸ್.ಎಲ್.ಭೈರಪ್ಪ ಮತ್ತು ಗಿರೀಶ್ ಕಾರ್ನಾಡ್ ನಡುವಿನ ಚರ್ಚೆಯ ಬಿಸಿ ಆರುವ ಮುಂಚೆಯೇ ಮತ್ತೊಂದು ವಿವಾದಾಸ್ಪದ ಸಂಗತಿಯ ಕುರಿತಾದ ಚರ್ಚೆಗೆ ಕಾವೇರಿದೆ.
ಟಿಪ್ಪು ಸುಲ್ತಾನನ ಕನ್ನಡ ಪ್ರೇಮವನ್ನು ಪ್ರಶ್ನಿಸಿ ಆ ಚರ್ಚೆಗೆ ಕಾರಣೀಭೂತರಾಗಿದ್ದ ಸಚಿವ ಶಂಕರಮೂರ್ತಿಯವರೇ ಅಡಿಗರ ಇಡ್ಲಿ ಪ್ರೇಮವನ್ನು ಪ್ರಶ್ನಿಸಿ ಈ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ಬೆಂಗಳೂರಿನಲ್ಲಿ ಅಡಿಗಡಿಗೂ ಕಾಣಬರುವ ಉಪಹಾರಗೃಹಗಳಿಗೆ "ಅಡಿಗಾಸ್" ಎಂದು ಹೆಸರಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಚಿವರು, "ಗೋಪಾಲಕೃಷ್ಣ ಅಡಿಗರಿಗೆ ಇಡ್ಲಿಯ ಮೇಲೆ ಪ್ರೇಮವಿತ್ತೆನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ" ಎಂದಿರುವುದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.
ಸಚಿವರ ಮಾತನ್ನು ಬೆಂಬಲಿಸಿರುವ ಖ್ಯಾತ ಸಾಹಿತಿ ಎಸ್.ಎಲ್,ಭೈರಪ್ಪನವರು, ಅಡಿಗರ ಪ್ರತಿಯೊಂದು ಬರಹವನ್ನೂ ತಾವು ಆಳವಾಗಿ ಅಭ್ಯಾಸ ಮಾಡಿದ್ದು, ಅಡಿಗರ ಇಡ್ಲಿ ಪ್ರೇಮ ತಮಗೆಲ್ಲೂ ಕಾಣಬರಲಿಲ್ಲ ಎಂದಿದ್ದಾರೆ. "ಚಿಂತಾಮಣಿಯಲ್ಲಿ ಮುಖ ಕಂಡ ಅಡಿಗರು ತಟ್ಟೆಯಲ್ಲಿನ ಇಡ್ಲಿ ಕಾಣಲಿಲ್ಲ" ಎಂದು ವಿಷಾದಿಸಿರುವ ಅವರು, ಈಗ ರೆಸ್ಟಾರಂಟುಗಳಿಗೆ ಅಡಿಗರ ಹೆಸರು ಇಡುತ್ತಿರುವುದು "ಇತಿಹಾಸವನ್ನು ತಿರುಚುವ ಪ್ರಯತ್ನ" ಎಂದು ಖಂಡಿಸಿದ್ದಾರೆ.
ಭೈರಪ್ಪನವರ ಮಾತನ್ನು ತಿರಸ್ಕರಿಸಿರುವ ಜ್ಞಾನಪೀಠ ವಿಜೇತ ಸಾಹಿತಿ ಗಿರೀಶ್ ಕಾರ್ನಾಡ್, "ಅಡಿಗರಿಗೆ ಇಡ್ಲಿಯ ವಿಚಾರದಲ್ಲಿ ಅಪಾರ ವಿಶ್ವಾಸ ಇತ್ತು. ಕೊಂಚ್ ಇಮ್ಯಾಜಿನೇಷನ್ ಉಪಯೋಗಿಸಿದರೆ ಅವರ ಯಾವ ಮೋಹನ್ ಮುರಲಿ... ಗೀತೆ ಇಡ್ಲಿಯ ಬಗೆಗೆ ಎಂದು ತಿಳಿದು ಬರುತ್ತದೆ." ಎಂದಿದ್ದಾರೆ. ಮುಂದುವರೆದ ಕಾರ್ನಾಡರು, "ಭೈರಪ್ಪನವರ ವಂಶವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೆ ನನಗೇನೂ ಲೈಕ್ ಆಗ್ಲಿಲ್ಲ. ಸುಮ್ನೆ ಅವಾರ್ಡ್ ಬರ್ಲಿ ಅಂತ ಫಿಲಂ ತೆಗ್ದೆ" ಎಂದಿದ್ದಾರೆ.

Labels:

Monday, January 22, 2007

ಮಜಾವಾಣಿ: ತಿದ್ದುಪುಡಿ

ಪ್ರಜಾವಾಣಿ ತಿದ್ದುಪಡಿ

ಕನ್ನಡದ ಖ್ಯಾತ ಸುದ್ದಿಪತ್ರಿಕೆ ಪ್ರಜಾವಾಣಿ ಶಿಲ್ಪಾ ಶೆಟ್ಟಿಯವರ ರಿಯಾಲಿಟಿ ಷೋ ಕುರಿತು ಒಂದು ಸಂಪಾದಕೀಯವನ್ನು ಪ್ರಕಟಿಸಿತ್ತು. ಮುದ್ರಣ ದೋಷದಿಂದಾಗಿ ಆ ಸಂಪಾದಕೀಯದಲ್ಲಿ ಹಲವಾರು ತಪ್ಪುಗಳಿದ್ದು ಪ್ರಜಾವಾಣಿ ಪತ್ರಿಕೆ ಓದುಗರ ನಗೆಪಾಟಲಿಗೀಡಾಗಿದ್ದಷ್ಟೇ ಅಲ್ಲದೇ ಮರುದಿನ ತಿದ್ದುಪಡಿಯೊಂದನ್ನು ಪ್ರಕಟಿಸಬೇಕಾಯಿತು. ಆದನ್ನು ಯಥಾವತ್ತಾಗಿಡಲಾಗಿದೆ:

  • ಶಿಲ್ಪಾ ಶೆಟ್ಟಿ ಭಾಗವಹಿಸಿದ ಟಿ.ವಿ. ಕಾರ್ಯಕ್ರಮದ ಹೆಸರು ಬಿಗ್ ಬ್ರದರ್; ಬಿಗ್ ಬಾದರ್ ಅಲ್ಲ.
  • ಶಿಲ್ಪಾ ಶೆಟ್ಟಿಯನ್ನು ನಿಂದಿಸಿದವಳು ಜೇಡ್ ಗೂಡಿ; ಜೇನು ಗೂಡಿಯಲ್ಲ.
  • ಜೇಡ್ ಗೂಡಿಯ ನಿಂದನೆಯಿಂದ ನೋವು ಉಂಟಾಗಿದ್ದು ಭಾರತೀಯ ಜನಾಂಗಕ್ಕೆ; ಭಾರತೀಯ
    ಜನನಾಂಗಕ್ಕಲ್ಲ.
  • ಜೇಡ್ ಗೂಡಿಯನ್ನು ಭಾರತಕ್ಕೆ ಆಹ್ವಾನಿಸಿರುವುದು ಭಾರತೀಯ ಪ್ರವಾಸೋದ್ಯಮ ಇಲಾಖೆ; ಪ್ರಸವೋದ್ಯಮ ಇಲಾಖೆಯಲ್ಲ.
  • ಕಡೆಯದಾಗಿ ಆಕೆಯನ್ನು ಆಹ್ವಾನಿಸಿರುವುದು ಭಾರತೀಯ ಜನಾಂಗದ ಹಿರಿಮೆಯನ್ನು ಸ್ವತಃ
    ಅರಿತುಕೊಳ್ಳಲು; ಭಾರತೀಯ ಜನನಾಂಗದ ಹಿರಿಮೆಯನ್ನು ಅರಿತುಕೊಳ್ಳಲು ಅಲ್ಲ.


ತಿದ್ದಿದ ತಿದ್ದುಪಡಿ: ಮುದ್ರಣ ದೋಷದಿಂದಾಗಿ "ಮಜಾವಾಣಿ" ಎಂದಿರಬೇಕಾದ್ದು "ಪ್ರಜಾವಾಣಿ" ಎಂದು ಮುದ್ರಿತವಾಗಿದೆ. ಪ್ರಜಾವಾಣಿ ದಿನಪತ್ರಿಕೆಯ ಸಂಪಾದಕೀಯದಲ್ಲಿ ಯಾವುದೇ ಮುದ್ರಣ ದೋಷವಿರಲಿಲ್ಲ ಜೊತೆಗೆ ಅದು ಮೇಲಿನ ತಿದ್ದುಪಡಿಯನ್ನೂ ಪ್ರಕಟಿಸಿಲ್ಲ.ಇನ್ನೊಂದು ಪತ್ರಿಕೆಯಲ್ಲಿ ಇಲ್ಲದ ಮುದ್ರಣ ದೋಷವನ್ನು ಕಲ್ಪಿಸಿ ಅದನ್ನು ತಿದ್ದಲು ಬೇಡದ ತಿದ್ದುಪಡಿಯನ್ನು ಸೃಷ್ಟಿಸುವ ಸ್ವಾತಂತ್ರ್ಯ ಇರುವುದು ನಮ್ಮಂತಹ ಪತ್ರಿಕೆಗಳಿಗೆ ಮಾತ್ರ. ದುರುದ್ದೇಶರಹಿತವಾಗಿ ಪ್ರಜಾವಾಣಿಯಲ್ಲಿಲ್ಲದ ತಿದ್ದುಪುಡಿಯನ್ನು ಪ್ರಕಟಿಸಿದ್ದಕ್ಕಾಗಿ ವಿಷಾದಿಸುತ್ತೇವೆ.

Labels:

Saturday, September 23, 2006

ಮಜಾವಾಣಿ: ವಾಣಿಜ್ಯ - ಉದ್ದಿಮೆ

JPM Pvt Ltdಗೆ ISO 9001 ಮಾನ್ಯತೆ

ಬೆಂಗಳೂರು, ಜೂನ್ ೧೧, ೨೦೦೭: ಬೆಂಗಳೂರಿನ ಜನಶಕ್ತಿ ಪ್ರೊಟೆಸ್ಟ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ (JPM) ಸಂಸ್ಥೆ ಇತ್ತೀಚೆಗೆ ಪ್ರತಿಷ್ಠಿತ ಐ.ಎಸ್.ಓ. ೯೦೦೧ ಸರ್ಟಿಫಿಕೇಟ್ ಪಡೆದಿದೆ. JPM ಸಂಸ್ಥೆಯ ಸಿ.ಇ.ಓ. ನಾಗರಾಜ್ ವಾಟಾಳ್ ಅವರು ಈ ವಿಷಯವನ್ನು ನಮ್ಮ ಪತ್ರಿಕೆಗೆ ತಿಳಿಸಿದರು.

ಪ್ರತಿಭಟನಾ ನಿರ್ವಹಣಾ ಸಂಸ್ಥೆಗಳಲ್ಲಿ ಜೆ.ಎಸ್.ಎಸ್. ಐ.ಎಸ್.ಓ. ೯೦೦೧ ಸರ್‍ಟಿಫಿಕೇಟ್ ಪಡೆದ ಮೊದಲ ಸಂಸ್ಥೆಯಾಗಿದ್ದು ಹಲವು ದಶಕಗಳ ಬಂದ್, ಪ್ರತಿಭಟನೆ, ಪ್ರದರ್ಶನ, ಉಪವಾಸಗಳ ನಿರ್ವಹಣೆಯ ಅನುಭವ ಪಡೆದಿದೆ.

ಐ.ಎಸ್.ಓ. ೯೦೦೧ ಸರ್ಟಿಫಿಕೇಟ್ ಪಡೆದಿರುವ ಹಿನ್ನೆಲೆಯಲ್ಲಿ, ತಮ್ಮ ಸಂಸ್ಥೆಯ ವಿವಿಧ ಸೇವೆಗಳ ಕುರಿತು ಮಾಹಿತಿ ನೀಡಿದ ವಾಟಾಳ್ ಅವರು, "ಜಾಗತೀಕರಣದ ಇಂದಿನ ಸಂದರ್ಭದಲ್ಲಿ, ಜನರಿಗೆ ಪ್ರತಿಭಟನೆ ನಡೆಸಲೂ ಸಮಯ ಇಲ್ಲ. ಆದ್ದರಿಂದ ಜೆ.ಪಿ.ಎಂ.ನಂತಹ Protest Management ಸಂಸ್ಥೆಗಳು ಅನಿವಾರ್ಯವಾಗಿವೆ. 'Your Cause - Our Mass' ನಮ್ಮ ಸಂಸ್ಥೆಯ ಮೋಟೊ ಆಗಿದ್ದು, ಯಾವುದೇ ಕಾರಣಕ್ಕೆ ಯಾವುದೇ ಗಾತ್ರದ ಪ್ರತಿಭಟನೆಯನ್ನು ಅತ್ಯಂತ ಸುಲಭದರದಲ್ಲಿ ಅಚ್ಚುಕಟ್ಟಾಗಿ ನಡೆಸಲು ನಮ್ಮ ಸಂಸ್ಥೆ ಸಿದ್ಧವಿದೆ. ಗಾಂಧಿ ಪ್ರತಿಮೆಯ ಮುಂದೆ ಒಬ್ಬ ವ್ಯಕ್ತಿ ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕುಳಿತುಕೊಳ್ಳುವ ಸ್ಟಾಂಡರ್ಡ್ ಗಾಂಧಿ ಪ್ಯಾಕೇಜಿನಿಂದ, ಕಲ್ಲು-ತೂರಾಟ, ಎಫಿಜಿ ಬರ್ನಿಂಗ್, ಕತ್ತೆ ಮೆರವಣಿಗೆ, ಚಪ್ಪಲಿ ಹಾರ, ಸಂಪೂರ್ಣ ಬಂದ್ ಒಳಗೊಂಡ ಕ್ಯಾಲ್ಕಟಾ ಕಮೋಷನ್ ವರೆಗೆ ಹಲವಾರು ಪ್ಯಾಕೇಜುಗಳು ನಮ್ಮಲ್ಲಿ ಲಭ್ಯವಿದ್ದು, ಪ್ರತಿಭಟನೆಗೆ ಬೇಕಾದ ಸಕಲ ಸಲಕರಣೆಗಳನ್ನೂ ನಾವೇ ಒದಗಿಸುತ್ತೇವೆ" ಎಂದರು.

ಎನ್ವಿರಾನ್‌ಮೆಂಟಲಿ ಸೇಫ್ ಎಫಿಜಿಗಳು ನಮ್ಮ ಸಂಸ್ಥೆಯ ವೈಶಿಷ್ಟ್ಯವಾಗಿದ್ದು, ನಮ್ಮ ಎಫಿಜಿಗಳ ಬಗೆಗೆ ಅರುಂಧತಿ ರಾಯ್ ಸಹ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಎಫಿಜಿಗಳು ಇತರೆ ಎಫಿಜಿಗಳಿಗಿಂತ ೭೭% ನಿಧಾನವಾಗಿ ಉರಿಯುವುದಲ್ಲದೆ, ಅದರ ಹೊಗೆ ವಾತಾವರಣವನ್ನು ಕಲುಷಿತಗೊಳಿಸುವ ಯಾವುದೇ ಕೆಮಿಕಲ್ಸ್ ಹೊಂದಿಲ್ಲ. ತಾಲೂಕ್ ಮಟ್ಟದಿಂದ ಜಾಗತಿಕ ಮಟ್ಟದವರೆಗೆ ಎಲ್ಲಾ ನಾಯಕರ ಎಫಿಜಿಗಳು ನಮ್ಮಲ್ಲಿ ಲಭ್ಯವಿದ್ದು, ಜಾಗತಿಕ ಮಟ್ಟದಲ್ಲಿ ಅತಿ ಬೇಡಿಕೆ ಇರುವ ಬುಷ್ ಮತ್ತು ಇದ್ದಕ್ಕಿದ್ದಂತೆ ಬೇಡಿಕೆ ಏರಿಸಿಕೊಂಡಿರುವ ಪೋಪ್ ಎಫಿಜಿಗಳೂ ಸಹ ನಮ್ಮಲ್ಲಿ ದೊರೆಯುತ್ತಿವೆ." ಎಂದ ವಾಟಾಳರು, "ಸದ್ಯಕ್ಕೆ ಎಫಿಜಿ ಸೇಲ್ ನಡೆಯುತ್ತಿದ್ದು, ಎರಡು ಬುಶ್ ಎಫಿಜಿ ಕೊಂಡವರಿಗೆ ಒಂದು ದಲೈ ಲಾಮ ಅಥವಾ ನೆಲ್ಸನ್ ಮಂಡೇಲಾ ಎಫಿಜಿ ಉಚಿತವಾಗಿ ನೀಡುತ್ತಿದ್ದೇವೆ. ಸ್ಟಾಕ್ ಇರುವವರೆಗೆ ಮಾತ್ರ ಈ ಸೇಲ್ ನಡೆಯಲಿದೆ" ಎಂದರು.

JPM ಸಂಸ್ಥೆಯ ಸೇವಾ ಸೌಲಭ್ಯಗಳು ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದ್ದು, ವೈಯುಕ್ತಿಕ ಬಳಕೆದಾರನಿಂದ ಹಿಡಿದು ಬಹುರಾಷ್ಟ್ರೀಯ ಸಂಸ್ಥೆಗಳವರೆಗೆ ಎಲ್ಲರೂ ಉಪಯೋಗಿಸಿಕೊಳ್ಳಬಹುದಾಗಿದೆ. ಬಳಕೆದಾರರು ಕ್ಯಾಶ್ ಅಥವಾ ಕ್ರೆಡಿಟ್ ಕಾರ್ಡಿನ ಮೂಲಕ ಹಣ ಪಾವತಿ ಮಾಡುವ ಸೌಲಭ್ಯ ಇದ್ದು, ಕೆಲವು ಪ್ಯಾಕೇಜುಗಳಿಗೆ ಇ.ಎಮ್.ಐ. ಸೌಲಭ್ಯ ಸಹ ಇದೆ.


ಮಜಾವಾಣಿ ಕ್ಲಾಸಿಫೈಡ್ಸ್

ಬೇಕಾಗಿದ್ದಾರೆ

ಪ್ರತಿಷ್ಠಿತ ಪ್ರೊಟೆಸ್ಟ್‌ ಮ್ಯಾನೇಜ್‌ಮೆಂಟ್ ಸಂಸ್ಥೆಯೊಂದಕ್ಕೆ ಆಮರಣಾಂತ ಉಪವಾಸ ಪ್ರವೀಣರು, ಮತ್ತು ಅನುಭವಿ ಆತ್ಮಾಹುತಿ ನಿಪುಣರು ಬೇಕಾಗಿದ್ದಾರೆ. ಅತ್ಯುತ್ತಮ ಸಂಬಳ ಮತ್ತು ಬೋನಸ್. ಆಸಕ್ತಿಯುಳ್ಳ ಅಭ್ಯರ್ಥಿಗಳು ೧೩ ಪಾಸಪೋರ್ಟ್ ಫೋಟೋಗಳು ಮತ್ತು ಪೋಲೀಸ್ ಸರ್ಟಿಫಿಕೇಟ್ ಒಂದಿಗೆ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳಿಸಬೇಕು.

ಅ.ಉ./ಆ.ನಿ. ವಿಭಾಗ,
ಜೆ.ಪಿ.ಎಂ. ಪ್ರೈವೇಟ್ ಲಿಮಿಟೆಡ್
ನಂ. ೧೩, ಹರಿಶ್ಚಂದ್ರ ಘಾಟ್ ರಸ್ತೆ,
ಬೆಂಗಳೂರು-೧೩

Labels: ,

Thursday, September 14, 2006

ಮಜವಾಣಿ ತನಿಖಾ ವರದಿ: ಶಬರಿಮಲೈ ವಿವಾದ

ಪತ್ತೆಯಾದ ಪತ್ರ; ವಿವಾದಕ್ಕೆ ತೆರೆ!

ಬೆಂಗಳೂರು, ಸೆಪ್ಟೆಂಬರ್ ೧೬, ೨೦೦೬: ಶಬರಿ ಮಲೈ ವಿವಾದಕ್ಕೆ ಕೊನೆಗೂ ತೆರೆಬಿದ್ದಿದೆ! ಅಯ್ಯಪ್ಪನ ಪಾದಸ್ಪರ್ಶ ಮಾಡಿದ್ದಾಗಿ ಕನ್ನಡದ ಖ್ಯಾತ ನಟಿ ಜಯಮಾಲ ಶಬರಿಮಲೈ ದೇವಸ್ತಾನದ ಮುಖ್ಯ ತಂತ್ರಿಗಳಿಗೆ ಪತ್ರ ಬರೆದಿದ್ದುದು ಅತ್ಯಂತ ವಿವಾದಕ್ಕೆ ಗುರಿಯಾಗಿತ್ತು. ಅಯ್ಯಪ್ಪನ ಪಾದಸ್ಪರ್ಶದಿಂದ ದೇವಸ್ತಾನದ ಪಾವಿತ್ರ್ಯತೆಗೆ ಭಂಗ ತಂದ ಆರೋಪಕ್ಕೆ ಜಯಮಾಲರವರು ಗುರಿಯಾಗಿದ್ದರು. ಅಷ್ಟೇ ಅಲ್ಲ, ಕೇರಳ ಸರ್ಕಾರ ಜಯಮಾಲರವರನ್ನು ಕೋರ್ಟಿನ ಕಟಕಟೆಗೇರಿಸುವ ಆಲೋಚನೆ ಸಹ ಮಾಡಿದ್ದರು.

ಈ ವಿವಾದದ ಕುರಿತು ನಮ್ಮ ಪತ್ರಿಕೆ ಹಲವು ತಿಂಗಳಿಂದ ತನಿಖೆ ನಡೆಸಿದ್ದು, ಇಂದು ವಾಸ್ತವ ಹೊರಬಿದ್ದಿದೆ.

ಜಯಮಾಲರವರ ಪತ್ರದ ಬಗೆಗೆ ಹಲವು ಪತ್ರಿಕೆಗಳು ಈಗಾಗಲೇ ಹಲವಾರು ಬಾರಿ ವರದಿ ಮಾಡಿದ್ದಾರಾದರೂ, ಇಂದಿನ ವರೆಗೆ ಆ ಪತ್ರವನ್ನು ಕಣ್ಣಾರೆ ಕಂಡಿರಲಿಲ್ಲ. ಇಂದು ಆ ಪತ್ರ ನಮ್ಮ ತನಿಖಾ ವರದಿಗಾರ ಜನಾರ್ಧನ ರೆಡ್ಡಿಯವರ ಬಳಿ ಇದೆ.
(ಶಬರಿಮಾಲಿನ ಮುಖ್ಯ ಭಜಂತ್ರಿಯವರಿಗೆ ಜಯಮಾಲ ಬರೆದಿದ್ದೆನ್ನಲಾದ ಪತ್ರದ ಮೂಲ ಪ್ರತಿ)



ಕನ್ನಡ ಬರದ ಕೇರಳಿಗರು!:
ಈ ಪತ್ರವನ್ನು ಓದಿದಾಗ ಒಂದು ಅಂಶ ನಿಸ್ಸಂಶಯವಾಗಿ ಸ್ಪಷ್ಟವಾಗುತ್ತದೆ: ಕೇರಳಿಗರಿಗೆ ಕನ್ನಡ ಬರುವುದಿಲ್ಲ. ಜಯಮಾಲರವರು "ಆಯಪ್ಪನ ಪಾದಸ್ಪರ್ಶ" ಎಂದು ಬರೆದಿರುವುದನ್ನು "ಅಯ್ಯಪ್ಪನ ಪಾದಸ್ಪರ್ಶ" ಎಂದು ಓದಿಕೊಂಡು ಇಷ್ಟೆಲ್ಲಾ ವಿವಾದ ಎಬ್ಬಿಸಿರುವ ಕೇರಳಿಗರ ಕನ್ನಡ ಜ್ಞಾನವನ್ನು ಆ ಗುರುವಾಯೂರಪ್ಪನೇ ಮೆಚ್ಚಬೇಕು!

ಮುಂದೊಮ್ಮೆ ಜಯಮಾಲರವರು ತಿರುಪತಿ ತಿಮ್ಮಪ್ಪನ ದೇವಸ್ತಾನದ ಮುಖ್ಯ ಅರ್ಚಕರಿಗೋ, ಕಾಶಿ ವಿಶ್ವನಾಥ ಮಂದಿರದ ಪಾರುಪತ್ತೆದಾರರಿಗೋ, ಕೊನೆಗೆ ವ್ಯಾಟಿಕನ್ನಿನ ಪೋಪರಿಗೋ ಪತ್ರ ಬರೆಯುವ ಸಂಭವ ಇದ್ದು, ಇಂತಹ ವಿವಾದಗಳು ಮತ್ತೆ ಮರುಕಳಿಸದಂತೆ ತಡೆಯಲು, ದೇಶದ ಪ್ರತಿಯೊಂದು ರಾಜ್ಯ ಮಾತ್ರ ಅಲ್ಲ, ಜಗತ್ತಿನ ಎಲ್ಲಾ ದೇಶಗಳಲ್ಲೂ ಕನ್ನಡದ ಕಲಿಕೆ ಕಡ್ಡಾಯ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಕಾರ್ಪೋರೇಷನ್ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

Labels:

Tuesday, September 12, 2006

ಮಜಾವಾಣಿ ವಾಣಿಜ್ಯ - ಧರ್ಮ

Apple - AOL ಸಹಯೋಗದಲ್ಲಿ iGod ಮಾರುಕಟ್ಟೆಗೆ
ಸ್ಯಾನ್ ಹೋಸೆ (ಕ್ಯಾಲಿಫೋರ್ನಿಯ), ಸೆಪ್ಟೆಂಬರ್ ೧೫, ೨೦೦೬: ಶರವೇಗದಲ್ಲಿ ಬೆಳೆಯುತ್ತಿರುವ ಧಾರ್ಮಿಕ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಲು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆ (AOL) ಅಮೆರಿಕದ ಪ್ರಖ್ಯಾತ ಕಂಪ್ಯೂಟರ್ ಮತ್ತು ಇಲೆಕ್ಟ್ರಾನಿಕ್ ಉಪಕರಣಗಳ ತಯಾರಕರಾದ Apple ಸಂಸ್ಥೆಯೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದ ಫಲಿತವಾದಲ್ಲಿ ಮುಂದಿನ ಕ್ರಿಸ್‌ಮಸ್ ವೇಳೆಗೆ ಅಮೆರಿಕನ್ ಮಾರುಕಟ್ಟೆಯಲ್ಲಿ iGod ಲಭ್ಯವಾಗಲಿದೆ.

ಆರ್ಟ್ ಆಫ್ ಲಿವಿಂಗ್ ತಂತ್ರಜ್ಞಾನ ಮತ್ತು ಆಪಲ್ ಸಂಸ್ಥೆಯ ವಿನ್ಯಾಸದಿಂದ ಹೊರಬರಲಿರುವ iGod, ಹಲವಾರು ಬಣ್ಣ, ರೂಪ ಮತ್ತು ಗಾತ್ರಗಳಲ್ಲಿ ಲಭ್ಯವಾಗಲಿದ್ದು ಧಾರ್ಮಿಕ ಮಾರುಕಟ್ಟೆಯಲ್ಲಿ ಒಂದು ಹೊಸ ಕ್ರಾಂತಿಯನ್ನು ಉಂಟುಮಾಡುವ ನಿರೀಕ್ಷೆ ಇದೆ.
ಒಪ್ಪಂದ ಸಹಿ ಹಾಕಿದ ನಂತರ ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಶ್ರೀ ಶ್ರೀ ರವಿಶಂಕರ್ ಮತ್ತು ಆಪಲ್ ಸಂಸ್ಥೆಯ ಮುಖ್ಯಸ್ಥ ಸ್ಟೀವ್ ಜಾಬ್ಸ್, " ಪೂರ್ವದ ತಂತ್ರಜ್ಞಾನ ಮತ್ತು ಪಶ್ಚಿಮದ ವಿನ್ಯಾಸಗಳ ಅಪೂರ್ವ ಮಿಲನವಾಗಿರುವ iGod, ಇಂದಿನ iPod ಜನಾಂಗಕ್ಕೆ ಅಧ್ಯಾತ್ಮಿಕ ಅನುಭವವನ್ನು ಆಕರ್ಷಕ ಬೆಲೆಗೆ ದೊರಕಿಸುವುದರಲ್ಲಿ ಸಂದೇಹವೇ ಇಲ್ಲ" ಎಂದರು.

NASDAQನತ್ತ AOL?: "ಭಾರತೀಯ ಧಾರ್ಮಿಕ ಮಾರುಕಟ್ಟೆ ಇನ್ನೂ ಅಷ್ಟೊಂದು ಮೆಚ್ಯೂರ್ ಆಗಿಲ್ಲ. ಇಂಡಿಯನ್ ಆಧ್ಯಾತ್ಮಿಕ ಬಳಕೆದಾರ ತನ್ನ ನೀಡ್ಸ್‌ಗೆ ಇನ್ನೂ ಬಹಳ ಮಟ್ಟಿಗೆ ಲೋಕಲ್ ಸರಬರಾಜುದಾರರ ಮೊರೆ ಹೋಗುತ್ತಿದ್ದಾನೆ. ಮುಂದಿನ ವರ್ಷದ ದೀಪಾವಳಿ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ iGod release ಮಾಡುವ ಆಲೋಚನೆ ಇದೆಯಾದರೂ, ಅದನ್ನು ಸದ್ಯಕ್ಕೆ ಎಕ್ಸ್‌ಕ್ಲೂಸಿವ್ ಲೈಫ್‌ಸ್ಟೈಲ್ ಶಿಬಿರಗಳಲ್ಲಿ ಆಯ್ದ ವ್ಯಕ್ತಿಗಳಿಗೆ ಮಾತ್ರ ಮಾರಲಾಗುವುದು. Coolness factor ಕಾಪಾಡಿಕೊಳ್ಳುವುದು ಅತ್ಯವಶ್ಯಕ" ಎಂದು ರವಿಶಂಕರ್ ನುಡಿದರು.

ಭಾರತೀಯ ಮಾರುಕಟ್ಟೆಯನ್ನು ಕ್ಯಾಪ್ಚರ್ ಮಾಡಲು AOL ಸಂಸ್ಥೆ ಬೇರೊಂದು ತಂತ್ರವನ್ನು ನಿರೂಪಿಸಿದೆ ಎನ್ನಲಾಗಿದ್ದು, ಆ ಯೋಜನೆಯ ಪ್ರಕಾರ ಪ್ರತಿಯೊಂದು ನಗರದಲ್ಲೂ ಧಾರ್ಮಿಕ mallಗಳನ್ನು ತೆರೆಯಲಿದೆ. ಈ mallಗಳಲ್ಲಿ ವಿವಿಧ ದೇವಾಲಯ/ಪ್ರಾರ್ಥನಾ ಮಂದಿರಗಳಿಗೆ ವಿವಿಧ ಗಾತ್ರದ ಮಳಿಗೆಗಳು ಬಾಡಿಗೆಗೆ ದೊರೆಯಲಿದ್ದು, ಭಕ್ತಾದಿಗಳು ತಮ್ಮ ಇಷ್ಟ ದೇವರುಗಳನ್ನು ಒಂದೆಡೆಯೇ ದರ್ಶಿಸುವ ಸೌಲಭ್ಯವಿದೆ. ಏರ್ ಕಂಡೀಷನ್ ವ್ಯವಸ್ಥೆ, ಸೆಕ್ಯೂರಿಟಿ, ಪಾರ್ಕಿಂಗ್ ಸೌಲಭ್ಯ, multi cuisine fast food ಪ್ರಸಾದ ಮಾತ್ರವಲ್ಲದೇ, ಹಬ್ಬ ಹರಿದಿನಗಳಲ್ಲಿ ಹಾಲಿಡೇ-ಸೇಲ್ (ಶಿವನಿಗೆ ಎರಡು ಅಭಿಷೇಕ ಮಾಡಿಸಿದರೆ ಒಂದು ಗಣೇಶ ಅರ್ಚನೆ ಉಚಿತ, ಇತ್ಯಾದಿ) ವ್ಯವಸ್ಥೆಗೆ ಬೇಕಾದ ಕಂಪ್ಯೂಟರ್ ಪರಿಣಿತಿಯನ್ನೂ ಸಂಸ್ಥೆ ಒದಗಿಸಲಿದೆ. ಪ್ರತಿ ಮಾಲಿನಲ್ಲಿಯೂ ಒಂದು ಪ್ರೀಮಿಯಂ ಡ್ರೈವ್-ಇನ್ ದೇವಾಲಯವಿದ್ದು, Fast God ದರ್ಶನದ ವ್ಯವಸ್ಥೆ ಮಾಡುವ ಆಲೋಚನೆ ಇದೆ.

ಈ ಯೋಜನೆಗಳಿಗೆ ಬೇಕಾದ ಕ್ಯಾಪಿಟಲ್ ಅನ್ನು ಸಂಗ್ರಹಿಸಲು, ಆರ್ಟ್ ಆಫ್ ಲಿವಿಂಗ್ ಸಂಸ್ಥೆ Nasdaq ಷೇರು ಮಾರುಕಟ್ಟೆಯಲ್ಲಿ ಸದ್ಯದಲ್ಲಿಯೇ ನಮೂದಾಗಲಿದೆ ಎನ್ನಲಾಗಿದೆ.

Labels:

ಮಜಾವಾಣಿ: ಕನ್ನಡ ಕಾಳಜಿ

"ಮಿತಿಮೀರಿದ ಬಳಕೆಯಿಂದ ವಿನಾಶ ಖಚಿತ" - ಡುಂಡಿರಾಜ್
ಬೆಂಗಳೂರು ಸೆಪ್ಟೆಂಬರ್ ೧೦, ೨೦೦೬: ಯಾವುದೇ ವಸ್ತುವನ್ನೂ ವಿಪರೀತವಾಗಿ ಬಳಸಿದಲ್ಲಿ ಅದು ವಿನಾಶವಾಗುವುದು ಖಂಡಿತ. ಭಾಷೆ ಸಹ ಇದರಿಂದ ಹೊರತಲ್ಲ. ಮಿತಿಮೀರಿದ ಬಳಕೆಯಿಂದ ಇಂದು ಕನ್ನಡ ವಿನಾಶದಂಚಿನಲ್ಲಿದೆ. ಹೇಳಬೇಕೆಂದಿರುವುದನ್ನು ಅತಿ ಕಡಿಮೆ ಪದ/ಅಕ್ಷರಗಳಲ್ಲಿ ವ್ಯಕ್ತಪಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ" ಎಂದು ಖ್ಯಾತ ಕವಿ ಡುಂಡಿರಾಜ್ ಇಡೀ ಕನ್ನಡ ಕಾವ್ಯ ಜಗತ್ತಿಗೆ ಕರೆಯಿತ್ತಿದ್ದಾರೆ.
ಭಾಷೆಯನ್ನು ತಾವು ಮಿತವಾಗಿ ಬಳಸಿ ಕನ್ನಡವನ್ನು ಮುಂದಿನ ಪೀಳಿಗೆಗೆ ಉಳಿಸಲು ಪ್ರಯತ್ನಿಸುತ್ತಿರುವಾಗ, ಇತರೆ ಕವಿಗಳು ನೀಳ್ಗವನದ ಹೂಗಳ ಕುರಿತು ಹೊಂಗನಸುಗಳನ್ನು ಕಾಣುತ್ತಿರುವುದು ಅತ್ಯಂತ ವಿಷಾದಕರ ಎಂದಿದ್ದಾರೆ.

ಬಿ.ಆರ್.ಎಲ್. ಮನವಿ: ಡುಂಡಿರಾಜರ ಕರೆಗೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದಿರುವ ಖ್ಯಾತ ಕವಿ ಬಿ.ಆರ್.ಲಕ್ಷ್ಮಣ ರಾವ್, "ಕನ್ನಡ ಪದಗಳ ಮಿತ ಬಳಕೆಯೊಂದಿಗೇ, ಕನ್ನಡದ ಕವಿಗಳು ಹೆಚ್ಚು ಹೆಚ್ಚು ಇಂಗ್ಲೀಷ್ ಪದಗಳನ್ನೂ ಬಳಸುವುದೂ ಇಂದಿನ ಸಂದರ್ಭದಲ್ಲಿ ಅನಿವಾರ್ಯವಾಗಿದೆ" ಅಭಿಪ್ರಾಯ ಪಟ್ಟಿದ್ದಾರೆ.

ಈ ಆಘಾತಕಾರಿ ವಿಷಯದ ಕುರಿತು ನಮ್ಮ ಪತ್ರಿಕೆ ವಿಖ್ಯಾತ ಪದಬೇಧಿ ನಿವಾರಣಾ ತಜ್ಞ ಡಾ.ಗೋಪಾಲಕೃಷ್ಣರವರನ್ನು ಸಂದರ್ಶಿಸಿದಾಗ, ಅವರು, "ಕನ್ನಡ ಈಗಾಗಲೇ ಕ್ಯಾಪಿಟಲ್ ಲೆಟರ್‍ಸ್ ಕೊರತೆಯನ್ನು ಅನುಭವಿಸುತ್ತಿದ್ದು, ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಸಮರೋಪಾದಿಯಲ್ಲಿ ಕನ್ನಡ ಭಾಷೆಗೆ ಕ್ಯಾಪಿಟಲ್ ಅಕ್ಷರಗಳನ್ನು ಅಳವಡಿಸುವುದು ಮಾತ್ರವಲ್ಲದೇ, ಕ್ಯಾಪಿಟಲ್ ಲೆಟರುಗಳನ್ನು ಬರಹದೊಂದಿಗೇ ಉಚ್ಚಾರಣೆಯಲ್ಲೂ ಬಳಕೆಗೆ ತಂದರೆ, ಕನ್ನಡದ ಉಳಿವು ಮಾತ್ರವಲ್ಲ ಇಂಗ್ಲೀಷಿನ ಮೇಲೆ ಗೆಲುವನ್ನೂ ಸಾಧಿಸಬಹುದು" ಎಂದಿದ್ದಾರೆ.

ಕನ್ನಡದ ಗೆಲುವಿಗಾಗಿ ಪರಿಶ್ರಮಿಸುತ್ತಿರುವ ಹಲವಾರು ರಾಜಕಾರಣಿಗಳು, ಚಿತ್ರ ತಾರೆಯರು, ಬೇಕೆಂದೇ ಇಂಗ್ಲೀಷಿನಲ್ಲಿ ಮಾತನಾಡಿ ಆ ಭಾಷೆಯ ಕೊಲೆ ಮಾಡಲು ಪ್ರಯತ್ನಿಸುತ್ತಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

(ಚಿತ್ರ ಕೃಪೆ: ದಟ್ಸ್ ಕನ್ನಡ ಮತ್ತು ವಿಚಿತ್ರಾನ್ನ ದಾನಿಗಳಿಂದ)

Wednesday, September 06, 2006

ಮಜಾವಾಣಿ ಸೆನ್ಸೇಷನಲ್ ಸುದ್ದಿ!!!!!



ಮುಂಬೈನಲ್ಲಿ ಕಾಲಯಂತ್ರ: ಭವಿಷ್ಯತ್ತಿನಿಂದ ಬಂದಿಳಿದ ಸುಂದರಾಂಗಿಯರು!

ಮುಂಬೈ, ಸೆಪ್ಟೆಂಬರ್ ೫: ಆಶ್ಚರ್ಯ! ಅದ್ಭುತ!! ನಂಬಲಾಗದ ಸುದ್ದಿ!!! ಇಂದು ಸಂಜೆ ನಗರದ ಜುಹು ಬೀಚಿನಲ್ಲಿ ಕಾಲಯಂತ್ರವೊಂದು ಕಾಲಿಟ್ಟಿರುವ ಸಂಗತಿ ನಾಳಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಯಾಗಲಿದೆ!!!!

ನಮ್ಮ ಪತ್ರಿಕೆಯ ಗುಣ ಮಟ್ಟದ ಬಗೆಗೆ ಅಪಾರ ಅಭಿಮಾನ ಮತ್ತು ಗೌರವ ಹೊಂದಿರುವ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಈ ಸೆನ್ಸೇಷನಲ್ ಸುದ್ದಿಯನ್ನು ಎಕ್ಸ್‌ಕ್ಲೂಸಿವ್ ಆಗಿ ಇಟ್ಟುಕೊಳ್ಳದೆ ನಮ್ಮ ಪತ್ರಿಕೆಯೊಂದಿಗೆ ಹಂಚಿಕೊಂಡು ಪತ್ರಿಕಾಸೋದರತೆಯನ್ನು ಎತ್ತಿ ತೋರಿದೆ.

ಟೈಮ್ಸ್ ಆಫ್ ಇಂಡಿಯಾ ವಿಶೇಷ ವರದಿಗಾರ ಜನಾರ್ಧನ ರೆಡ್ಡಿಯವರು ಈ ಕಾಲಯಂತ್ರವನ್ನು ಕಣ್ಣಾರೆ ಕಂಡಿದ್ದು, ಆ ಕಾಲಯಂತ್ರದ ಪ್ರಯಾಣಿಕರನ್ನು ಸಂದರ್ಶನ ಸಹ ಮಾಡಿದ್ದಾರೆ.

ಈ ವಿಷಯದ ಕುರಿತು ರೆಡ್ಡಿಯವರು ನಮಗೆ ಕೊಟ್ಟಿರುವ ಮಾಹಿತಿಯ ಪ್ರಕಾರ, ಆ ಯಂತ್ರದಲ್ಲಿನ ಪ್ರಯಾಣಿಕರು ಕ್ರಿ.ಶ. ೩೧ನೆಯ ಶತಮಾನದಿಂದ ಬಂದಿಳಿದಿದ್ದು, ಇಂದಿನ ಖ್ಯಾತ ಬಾಲಿವುಡ್ ತಾರೆಯರಾದ ಐಶ್ವರ್ಯ ರೈ, ಮಲ್ಲಿಕಾ ಶರಾವತ್ ಮತ್ತು ಪ್ರಿಯಾಂಕ ಚೋಪ್ರಾರವರ ವಂಶಸ್ತರಾಗಿದ್ದಾರೆ. ಪ್ರಯಾಣಿಕರು ಈ ತಾರೆಯರ ತದ್ರೂಪಿಗಳಾಗಿದ್ದು, ಒಂದು ವಿಷಯದಲ್ಲಿ ಮಾತ್ರ ವಿಭಿನ್ನರಾಗಿದ್ದಾರೆ; ನಾಭಿಯಿರಬೇಕಾದ ಜಾಗದಲ್ಲಿ ನಯನವಿದೆ!

ಈ ವೈಶಿಷ್ಟ್ಯದ ಕುರಿತು ರೆಡ್ಡಿಯವರು ಪ್ರಯಾಣಿಕರನ್ನು ಪ್ರಶ್ನಿಸಿದಾಗ, ಆ ಕಾಲಯಾನಿಗಳು, "೨೦ನೆಯ ಶತಮಾನದ ಅಂತ್ಯ ಮತ್ತು ೨೦ನೆಯ ಶತಮಾನದ ಆದಿಯಲ್ಲಿ, ಹೊಕ್ಕಳು ಪ್ರದರ್ಶನ ಫ್ಯಾಷನ್ ಸ್ಟೇಟ್‌ಮೆಂಟ್ ಆಯಿತು. ಅದೇ ಸಮಯದಲ್ಲಿ ಮಹಿಳಾ ವಿಮೋಚನಾ ಚಳುವಳಿಯೂ ನಡೆದಿತ್ತು. ಇವೆರಡೂ ಜೊತೆಗೂಡಿ, ಎವೆಲ್ಯೂಷನರಿ ಮಾರ್ಪಾಡುಗಳಿಂದ ಹೊಕ್ಕಳಿರಬೇಕಾದ ಜಾಗದಲ್ಲಿ ನಮಗೆ ಮೂರನೆಯ ಕಣ್ಣು ಬಂದಿದೆ. ಈಗ ಪುರುಷರು ನಮ್ಮೆಡೆ ನೋಡುವಾಗ, ನಾವು ದಿಟ್ಟತನದಿಂದ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಬಹುದು" ಎಂದಿದ್ದಾರೆ.
(ಹಲವು ವರ್ಷಗಳ ಹಿಂದಿನ ಎಸ್.ಎನ್.ಎಲ್. ಪ್ರಸಂಗವೊಂದರಿಂದ ಕದ್ದದ್ದು)

Thursday, June 29, 2006

ಮಜಾವಾಣಿ ವಿಷಾದಾಂಕ: ನಕಲಿ ಗೊಬ್ಬರ ತಿನ್ನಿಸುವ ಪ್ರಯತ್ನ ವಿಫಲ

ಮಣ್ಣಿನ ಮಕ್ಕಳಿಗೆ ನಕಲಿಗೊಬ್ಬರ ತಿನ್ನಿಸೋ ಪ್ರಯತ್ನ ವಿಫಲ!

ಬೆಂಗಳೂರು ಜೂನ್ ೨೮, ೨೦೦೬: ಮಣ್ಣಿನ ಮಕ್ಕಳಿಗೆ ನಕಲಿಗೊಬ್ಬರ ತಿನ್ನಿಸುವ ಪ್ರಯತ್ನದ ವಿಚಾರ ದಟ್ಸ್ ಕನ್ನಡ ಇಂಟರ್‌ನೆಟ್ ಪತ್ರಿಕೆಯಲ್ಲಿ ಓದಿ ನಮ್ಮ ಪತ್ರಿಕೆಗೆ ವಿಷಾದವಾಗಿದೆಯೆಂದು ತಿಳಿಸಲು ವಿಷಾದಿಸುತ್ತೇವೆ. ಈ ವಿಷಾದಕರ ಪ್ರಸಂಗದ ಕುರಿತಾದ ವರದಿಯ ಜೊತೆಗೆ ಮಣ್ಣಿನ ಮಗನ ಅಥವಾ ಮಣ್ಣಿನ ಮೊಮ್ಮಗನ ಚಿತ್ರ ಪ್ರಕಟಿಸದಿರುವ ಆ ಪತ್ರಿಕೆಯ ಸಂಪಾದಕರ ನಿರ್ಧಾರ ನಿಜಕ್ಕೂ ವಿಷಾದಕರ.

ಮಣ್ಣಿನ ಮಗನಿಗೆ ಅಸಲೀ ಗೊಬ್ಬರ ತಿನ್ನಿಸುವ ಪ್ರಯತ್ನ ಸಫಲವಾದಲ್ಲಿ ಮಾತ್ರ ಮಣ್ಣಿನ ಮಗನ ಚಿತ್ರ ಪ್ರಕಟಿಸಬೇಕೆಂಬ ಧೋರಣೆ ಆ ಸಂಪಾದಕರಿಗೆ ಇದ್ದಂತಿದೆ. ವರದಿಯ ಜೊತೆಗೆ ಪ್ರಕಟಿಸುವ ಚಿತ್ರಗಳು ವರದಿಗೆ ಸಂಬಂಧ ಪಟ್ಟೇ ಇರಬೇಕೆಂಬ ಸಂಪಾದಕರ ನಿರ್ಣಯ ನಿಜಕ್ಕೂ ವಿಷಾದನೀಯ.

ವರದಿಗಳು ಮಾತ್ರ ಯಾವುದೇ ವಿಷಯದಲ್ಲಿರಬಹುದು ಆದರೆ ಚಿತ್ರಗಳು ಮಾತ್ರ ವರದಿಗೆ ಸಂಬಂಧಪಟ್ಟಂತೆಯೇ ಇರಬೇಕೆಂಬ ಸಂಪಾದಕರ ಮಾತಿನ ಹಿಂದೆ ಚಿತ್ರ-ಸ್ವಾತಂತ್ರ್ಯ ವಿರೋಧಿ ಮನೋಭಾವ ಎದ್ದು ಕಾಣುತ್ತಿದೆ. ಪತ್ರಿಕಾಸ್ವಾತಂತ್ರ್ಯದ ಕುರಿತು ಮಾತನಾಡುವ ಪತ್ರಕರ್ತರೇ ಚಿತ್ರ-ಸ್ವಾತಂತ್ರ್ಯವನ್ನು ಹರಣಮಾಡಿರುವುದು ವಿಷಾದಕರ ಸಂಗತಿ.

ವರದಿಗಳ ದಬ್ಬಾಳಿಕೆ ಇದೇ ರೀತಿ ಮುಂದುವರೆದಲ್ಲಿ, ವರದಿಯ ಶೀರ್ಷಿಕೆ ಮತ್ತು ವರದಿಯಲ್ಲಿನ ವಿಚಾರಗಳೂ ಸಹ ವರದಿಗೆ ಸಂಬಂಧಪಟ್ಟಂತೆಯೇ ಇರಬೇಕೆಂಬ ಅಪಾಯಕಾರಿ ಒತ್ತಾಯ ಕೇಳಿ ಬಂದರೆ ಆಶ್ಚರ್ಯವೇನೂ ಇಲ್ಲ.

Thursday, June 22, 2006

ಮಜಾವಾಣಿ: ಪರಿಸರ ಸುದ್ದಿ


ವಿಧಾನ ಸೌಧದ ಬಳಿಯ ದುರ್ಗಂಧದ ಕಾರಣ ಪತ್ತೆ!

ಜೂನ್ ೨೨, ೨೦೦೬, ಬೆಂಗಳೂರು: ಹಲವು ವರ್ಷಗಳಿಂದ ವಿಧಾನ ಸೌಧದಿಂದ ಹೊರ ಬರುತ್ತಿದ್ದ ದುರ್ಗಂಧ ಬೆಂಗಳೂರಿನ ಏಕೆ, ಇಡೀ ಕರ್ನಾಟಕದ ಜನತೆಗೇ ತಿಳಿದಿರುವ ಸಂಗತಿ. ಕೆಲ ವರ್ಷಗಳಿಂದ ಈ ದುರ್ನಾತ ಮಿತಿ ಮೀರಿದ್ದು, ಆ ಪ್ರದೇಶದ ಸುತ್ತ ಓಡಾಡುವರನ್ನು ರಕ್ಷಿಸಲು, ವಿಧಾನ ಸೌಧದ ಸುತ್ತ ಬೇಲಿ ಹಾಕಿರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ಇಂದು, ಆ ದುರ್ನಾತದ ಹಿಂದಿನ ರಹಸ್ಯ ಕೊನೆಗೂ ಹೊರ ಬಿದ್ದಿದೆ. " 'ನೈಸ್' ಕಾರಿಡಾರ್ ರಸ್ತೆಯಲ್ಲಿ ಗಲೀಜು ಮಾಡಿದವರು ಯಾರು?" ವಿಷಯದ ಕುರಿತು ವಿಧಾನ ಮಂಡಲದ ಚರ್ಚೆಯಲ್ಲಿ ಭಾಗವಹಿಸುತ್ತಿದ್ದ ಮಾಜಿ ವಿಧಾನ ಸಭಾಧ್ಯಕ್ಷ ಮತ್ತು ಹಾಲಿ ಶಾಸಕ ರಮೇಶ್ ಕುಮಾರ ಅವರು, "ಕೊಳಕು ಸಮುದ್ರದಲ್ಲಿ ನಾವೆಲ್ಲರೂ ಈಜಾಡುತ್ತಿದ್ದೇವೆ" ಎಂದು ಹೇಳಿ ಕರ್ನಾಟಕದ ಜನರಿಗೆ ಹಲವು ವರ್ಷಗಳಿಂದ ಕಾಡುತ್ತಿದ್ದ ಈ ರಹಸ್ಯವನ್ನು ಹೊರಗೆಡವಿದ್ದಾರೆ.

ಒಟ್ಟಿನಲ್ಲಿ, ಕರ್ನಾಟಕದ ಜನತೆ ವಿಧಾನ ಸೌಧದ ಬಳಿ ಸುಳಿಯುವಾಗ ಮೂಗು ಮುಚ್ಚಿಕೊಳ್ಳಬೇಕಾದ್ದು ತಪ್ಪಿಲ್ಲವಾದರೂ, ಇನ್ನು ಮುಂದೆ ಈ ವಿಚಾರಕ್ಕೆ ತಲೆ ಕೆಡಿಸಿಕೊಳ್ಳ ಬೇಕಿಲ್ಲ.
(ಪಿ.ಟಿ.ಹೈ.)

Tuesday, June 20, 2006

ಮಜಾವಾಣಿ: ಮೀಡಿಯಾ ಸುದ್ದಿ

ಸಂಪಾದಕರ ಪ್ರಜ್ಞೆ ತಪ್ಪಿದ್ದರಿಂದ ಮಹತ್ವದ ಸುದ್ದಿ ಮೂಲೆಗೆ!
ಬೆಂಗಳೂರು, ಜೂನ್ ೨೦, ೨೦೦೬: ಟೈಮ್ಸ್ ಆಫ್ ಇಂಡಿಯಾ ಕನ್ನಡದ ನಂಬರ್ ೧ ದಿನಪತ್ರಿಕೆಯಾದ ವಿಜಯ ಕರ್ನಾಟಕ ಕೊಂಡುಕೊಂಡ ಸುದ್ದಿಯ ಬೆನ್ನಲ್ಲೇ, ಕನ್ನಡ ಪತ್ರಿಕೋದ್ಯಮದ ಅಡಿಪಾಯವನ್ನೇ ಅಲುಗಾಡಿಸುವಂತಹ ಮಹತ್ವದ ವಿಷಯವೊಂದು ಬೆಳಕಿಗೆ ಬಂದಿದೆ.

ಈ ಆಘಾತಕರ ವಿಷಯವನ್ನು ಬಹಿರಂಗಗೊಳಿಸುವಲ್ಲಿ, ಪಾತರ ಹಾಕುವವಳ ಪಕ್ಕದಲ್ಲಿಯೇ ಸದಾ ಇರಬಯಸುವ ನಮ್ಮ ಓದುಗ ಮಿತ್ರರಾದ ಶಿವ್ ಅವರ ಪಾತ್ರ ಅತ್ಯಂತ ಹಿರಿದು. ನಮ್ಮ ಪತ್ರಿಕೆಯ ಪುಸ್ತಕ ವಿಮರ್ಶೆಗೆ ಪ್ರತಿಕ್ರಿಯಿಸುತ್ತಿದ್ದ ಅವರು, ಕನ್ನಡದ ಖ್ಯಾತ ಕೋಡರ್‍ ದ್ವಯರಾದ ದೇವೇ ಮತ್ತು ಸಿಡ್‌ ಚಲನಚಿತ್ರಗಳಲ್ಲಿ ನಟಿಸುತ್ತಿರುವ ವಿಷಯವನ್ನು ಪ್ರಸ್ತಾಪಿಸಿದರು. ಈ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ನಮ್ಮ ಪತ್ರಿಕೆಯ ಸ್ಪೆಷಲ್ ಕರೆಸ್ಪಾಂಡೆಂಟ್ longಊಲಾಚಾರ್ಯರು, ದೇವೇ ನಟಿಸುವ ವಿಚಾರ ಹೊಸದಲ್ಲ, ಉತ್ತಮ ನಟನೆಗಾಗಿರುವ ಆಸ್ಕರ್ ಪ್ರಶಸ್ತಿಗೆ ಅವರ ಹೆಸರನ್ನು ಸೂಚಿಸಿರುವ ವಿಚಾರ ಈಗಾಗಲೆ ವಿಶ್ವ ಕರ್ನಾಟಕದಲ್ಲಿ ವರದಿಯಾಗಿದೆ ಎಂದರು. ಮುಂದುವರೆದು, ಇಂತಹ ಮಹತ್ತರ ವಿಚಾರವನ್ನು ಹಾಸ್ಯ ವಿಭಾಗದಲ್ಲಿ ಪ್ರಕಟಿಸಿದ ಸಂಪಾದಕರ ನಿರ್ಧಾರವನ್ನು "ದಾರಿ ತಪ್ಪಿದ ಹಾಸ್ಯಪ್ರಜ್ಞೆ" ಎಂದು ಖಂಡಿಸಿದರು.

ಇಂಟರ್ನೆಟ್ಟಿನಲ್ಲಿ ಯುದ್ಧದ ಕಾರ್ಮೋಡ - ಕನ್ನಡ ಪತ್ರಿಕೆಗಳ ಪ್ರೈಸ್ ವಾರ್!
ಬೆಂಗಳೂರು, ಜೂನ್ ೨೦, ೨೦೦೬: ವಿಜಯ ಕರ್ನಾಟಕ ಪತ್ರಿಕೆಯನ್ನು ಟೈಮ್ಸ್ ಆಫ್ ಇಂಡಿಯಾ ಕೊಂಡ ನಂತರ ಕನ್ನಡ ಪತ್ರಿಕೆಗಳ ನಡುವಿನ ಸಮರದ ಬಿಸಿ ಇಂಟರ್‌ನೆಟ್ಟಿಗೂ ತಟ್ಟಿದೆ. ಈಗಾಗಲೇ ತಮ್ಮ ಪುಟಗಳಲ್ಲಿ ಒಂದರತ್ತ ಇನ್ನೊಂದು ಕೈ ತೋರಿಸಿ, ನಗಪಾಟಲಿಗೀಡಾಗಿರುವ ಎರಡು ಕನ್ನಡ ಪತ್ರಿಕೆಗಳು, ಈಗ ಇಂಟರ್‍ನೆಟ್ಟಿನಲ್ಲಿ ಪ್ರೈಸ್ ವಾರ್ ನಡೆಸಲು ಸಿದ್ಧವಾಗಿರುವ ಸಂಗತಿ ಹೊರಬಿದ್ದಿದೆ.

ಈ ವಿಚಾರದ ಕುರಿತು ನಮ್ಮ ವರದಿಗಾರರು ಮಜಾವಾಣಿ ಸಂಪಾದಕರನ್ನು ಸಂದರ್ಶಿಸಿದಾಗ, ಮೊದಲಿಗೆ "ಪ್ರೈಸ್ ವಾರ್ ಏನೂ ಇಲ್ಲ" ಎಂದ ಅವರು, ಅನಂತರ ಸರ್ಕ್ಯುಲೇಶನ್ ಜಾಸ್ತಿ ಮಾಡಲು, ಮಜಾವಾಣಿಯನ್ನು ಕಡಿಮೆ ಉಚಿತ ಬೆಲೆಗೆ ಕೊಡುತ್ತಿರುವ ವಿಚಾರವನ್ನು ಒಪ್ಪಿಕೊಂಡರು. ಆದರೆ, ಮೀಡಿಯಾ/ವ್ಯಾಪಾರ ವಿಶ್ಲೇಷಕರ ಪ್ರಕಾರ, ಮಜಾವಾಣಿಯ ಈ ತಂತ್ರ ಯಶಸ್ವಿಯಾಗುವುದು ಸಂದೇಹಾಸ್ಪದ. ಈ ವಿಶ್ಲೇಷಕರ ಪ್ರಕಾರ, ಉಚಿತವಾಗಿ ದೊರಕುವ ಮಜಾವಾಣಿ ಬೆಲೆ ಕಡಿಮೆಯಾದಷ್ಟೂ, ಬೊಗಳೆ ರಗಳೆ ಪತ್ರಿಕೆ ತನ್ನ ಬೆಲೆಯನ್ನು ಇನ್ನಷ್ಟು ಹೆಚ್ಚು ಕಡಿಮೆ-ಉಚಿತ ಮಾಡುವುದು ಖಚಿತ. ನಂಬಲರ್ಹ ಮೂಲಗಳ ಪ್ರಕಾರ ಮರಣಾನಂದ ರೋಡ್‌ವೇಸ್ ಲಿಮಿಟೆಡ್‌ನ ಆಳ ಜೇಬುಗಳು ಬೊ.ರ. ಪತ್ರಿಕೆಯ ಬೆಂಬಲಕ್ಕಿರುವುದರಿಂದ, ಮಜಾವಾಣಿಗೆ ಈಗ ಉಳಿದಿರುವುದು ಒಂದೇ ಮಾರ್ಗ: ಹಿಂದುಳಿದ ಪತ್ರಿಕೆ ಕೋಟಾ.

Friday, June 16, 2006

ಮಜಾವಾಣಿ ಪುಸ್ತಕ ವಿಮರ್ಶೆ

"ಮಧ್ಯರಾತ್ರಿ. ಅಮಾವಾಸ್ಯೆಯ ಘೋರಾಂಧಕಾರ. ಭೋರ್ಗೆರೆಯುತ್ತಿರುವ ಮಳೆ. ವಿಧಾನ ಸೌಧದ ಕಲ್ಲಿನ ಅಡಿಪಾಯವನ್ನೇ ಅಲುಗಾಡಿಸುವಂತಹ ಸಿಡಿಲು, ಮಿಂಚು, ಗುಡುಗು. ಇಂತಹ ಕರಾಳ ರಾತ್ರಿಯಲ್ಲಿ ವಿಧಾನ ಸೌಧದ ನೆಲ ಮಾಳಿಗೆಯಲ್ಲಿ, ಮಹಿಳೆಯೋರ್ವಳ ಸತ್ತ ಹೆಣ ಪತ್ತೆಯಾಯಿತು. ಸತ್ತಿದ್ದವಳು ಕು.ಪ್ರಜಾ ಸತ್ತೆ, ವಿಧಾನ ಸೌಧದ ಅಸಲೀ ವಾರಸುದಾರಳು."

"ದ ಬೋ ಫೋರ್ಸ್ ಗನ್ಸ್"ನಿಂದ ಅಪಾರ ಹೆಸರು ಮತ್ತು ಹಣ ಗಳಿಸಿರುವ ಕ್ವಾರ್ಟರ್ ಚೀಚೀಯವರ ಹೊಸ ಕೃತಿ "ದಿ ದೇವೇ N ಸಿ ಕೋಡ್" ಆರಂಭವಾಗುವುದು ಹೀಗೆ. ಮೊದಲನೆಯ ಪುಟದ ಮೊದಲ ಸಾಲಿನಿಂದ, ಕಡೆಯ ಪುಟದ ಕಡೆಯ ಸಾಲಿನವರೆಗೆ ಕಣ್ಣೆವೆಯಿಕ್ಕದೆ ಒಂದೇ ಸಮನೆ ಓದಿಸಿಕೊಂಡು ಹೋಗುವ ಈ ಪುಸ್ತಕ ಎರಡು ಮಜಲುಗಳಲ್ಲಿ ಕೆಲಸ ಮಾಡುತ್ತದೆ. ಒಂದು, ಇಂಟ್ರೀಗ್- ಕಾನ್ಸ್ಪಿರಸಿ ತುಂಬಿದ ಮೈನವಿರೇಳಿಸುವ ಪತ್ತೇದಾರಿ ಕೃತಿಯಾಗಿ; ಇನ್ನೊಂದು, ಈ ಕೃತಿಯ ಪ್ರೋಟಾಗನಿಸ್ಟ್‌ಗಳಾದ ದೇವೇ ಮತ್ತು ಸಿಡ್‍ಗಳ ನಡುವಿನ ಊರ್ಧ್ವಮುಖಿ ಪೈಪೋಟಿಯ ಅನಿವಾರ್ಯತೆ ಕುಮಾರಿ ಸತ್ತೆಯ ಸಾವಿಗೆ ಕಾರಣವಾಗುವ ಸಂಕೀರ್ಣ ಮತ್ತು ಎಕ್ಸಿಸ್ಟೆಂಷಿಯಲ್ ಪ್ರಶ್ನೆಗಳನ್ನು ಹಾಕುವ ಮಹತ್ವದ ಕೃತಿಯಾಗಿ.

ನೈಜ ಸನ್ನಿವೇಶಗಳಿಗೆ ಕಲ್ಪನೆಯನ್ನು ಸೇರಿಸಿ ಒಂದು ಅದ್ಭುತ ಕತೆಯನ್ನು ನೇಯ್ದು ಓದುಗರನ್ನು ಬೇರೊಂದು ಲೋಕಕ್ಕೇ ಒಯ್ಯುವ ಕತೆಗಾರನ ಪರಿಣಿತಿ, ಜಾಣತನ ಇಲ್ಲಿ ಎದ್ದು ಕಾಣುತ್ತದೆ. ಉದಾಹರಣೆಗೆ, ಕು.ಪ್ರಜಾ ಸತ್ತೆಯ ಕೈಹಿಡಿದು, ಆ ಮೂಲಕ ವಿಧಾನ ಸೌಧದ ಮಾಲೀಕರಾಗುವ ಪೈಪೋಟಿಯಲ್ಲಿರುವ ದೇವೇ ಮತ್ತು ಸಿಡ್ ನಡುವಿನ ಸಂಭಾಷಣೆಯನ್ನು ಗಮನಿಸಿ.

ಸಿಡ್: ದೇವೇ, ಪ್ರಜಾ ಆಸೆ ಬಿಟ್ಟು ಬಿಡು. ಅವಳಿಗಾಗಿ ನಾನು ನನ್ನ ಜೀವ ಕೊಡಲೂ ಸಿದ್ಧ. ಜೊತೆಗೆ, ನಿನಗೀಗಲೇ ವಯಸ್ಸಾಗಿದೆ.
ದೇವೇ: ಸಿಡ್, ನೀನೊಬ್ಬ ಮೂರ್ಖ. ನಾನು ಪ್ರಜಾಗಾಗಿ ಆಸೆ ಪಡುವುದು ನನಗೋಸ್ಕರ ಅಲ್ಲ. ನನ್ನ ಮಗನಿಗೋಸ್ಕರ.
ಸಿಡ್: ನಾನು ಮೂರ್ಖ ಆದರೆ, ನೀನು ಕುಂಭಕರ್ಣ. ನನ್ನನ್ನು ಮದುವೆಯಾದರೆ, ಮಧುಚಂದ್ರಕ್ಕೆ ಚಂದ್ರಗ್ರಹಕ್ಕೆ ಹೋಗೋಣ ಅಂತ ಅವಳಿಗೆ ನಾನಾಗಲೇ ಹೇಳಿಯಾಗಿದೆ.
ದೇವೇ: ಚಂದ್ರಗ್ರಹಾನಾ?! ಮಣ್ಣೆತ್ತೋ ಟ್ರ್ಯಾಕ್ಟರ್ ಓಡ್ಸಕ್ಕೆ ಬರೋದಿಲ್ಲ, ರಾಕೆಟ್ಟೋಡಿಸಿಕೊಂಡು ಹೋಗ್ತೀಯಾ?!
ಸಿಡ್: ಬೇಡಾ, ಬೇಡಾ. ಆ ವಿಷ್ಯಾ ತೆಗೀ ಬೇಡಾ. ನನಗೆ ತುಂಬಾ ಕೋಪ ಬರುತ್ತೆ.
ದೇವೇ: ಬಂದ್ರೇ ಏನ್ಮಾಡ್ತೀಯಾ?
ಸಿಡ್: ಏನ್ಮಾಡ್ತೀನಾ?! ರೋಮ್ ರಮಣೀಗೆ ಹೇಳ್ತೀನಿ.
ದೇವೇ: ಅದಕ್ಕೇ ನಿನ್ನ ಮೂರ್ಖ ಅಂದಿದ್ದು. ರೋಮ್ ರಮಣಿ ನಿನ್ನ ಮಾತು ಕೇಳ್ತಾಳೆ ಅಂದುಕೊಂಡ್ಯಾ? ಮಣ್ಣೆತ್ತೋ ಟ್ರ್ಯಾಕ್ಟರ್ ಲೀವರ್ ಹಾಳ್ಮಾಡಿಸಿದ್ದು ಯಾರು ಅಂದುಕೊಂಡೆ?!

ಸಿಡ್‍ಗೆ ಯೋಚನೆ ಶುರು ಆಯಿತು. 'ರೋಮ್ ರಮಣಿ ನನ್ನ ಬೆನ್ನಿಗೇ ಬರೆ ಹಾಕೋ ಒಳ ಸಂಚು ಮಾಡ್ತಿರಬಹುದಾ' ಅನ್ನೋ ಸಂಶಯದ ದುಂಬಿ ಅವನ ಮನದ ತೋಟದಲ್ಲಿ ಗುನುಗುನಿಸಲು ಆರಂಭಿಸಿತು.
ಚೀಚೀಯವರ ಅದ್ಭುತ ಕಲ್ಪನಾ ಶಕ್ತಿಯಿಂದ, ವಾಸ್ತವದಲ್ಲಿ ಕೇವಲ ಉಪ ಗ್ರಹವಾದ ಚಂದ್ರ, ಸಿಡ್ ಮತ್ತು ದೇವೇ ಸಂಭಾಷಣೆಯಲ್ಲಿ ಒಂದು 'ಗ್ರಹ'ವಾಗಿ ಮಾರ್ಪಾಡಾಗುತ್ತೆ. ಹಾಗೆಯೇ, ಒಂದು ಸಣ್ಣ ಎಕ್ಸ್‌ಕವೇಟರ್ ಆಕಸ್ಮಿಕ, ಚೀಚೀಯವರ ಕಲ್ಪನಾ ಲಹರಿಗೆ ಸಿಕ್ಕಿ ಒಂದು ನಿಗೂಢ ಕಾನ್ಸ್ಪಿರಸಿಯಾಗಿ ತಯಾರಾಗುತ್ತೆ. ದುಂಬಿಯೊಂದು ತೋಟದಲ್ಲಿ ಗುನುಗುನಿಸುವ ಅತ್ಯದ್ಭುತ ಪ್ರತಿಮೆಗೆ ಕಾರಣವಾಗುತ್ತೆ.

ಇದಿಷ್ಟೇ ಆಗಿದ್ದಿದ್ದರೆ, "ದ ದೇವೇ N ಸಿ ಕೋಡ್", ಕೇವಲ ಒಂದು ಮಹಾನ್ ಪತ್ತೇದಾರಿ ಕತೆಯಾಗಿ ಉಳಿದು ಬಿಡುತ್ತಿತ್ತು. ಆದರೆ, ಕ್ವಾರ್ಟರ್ ಚೀಚೀಯಂತಹ ನುರಿತ ಕತೆಗಾರ ಮತ್ತು ಮಹಾನ್ ಚಿಂತಕನ ಕುಂಚಕ್ಕೆ ಸಿಕ್ಕಿ, ಒಂದು ಸಣ್ಣ ಪತ್ತೇದಾರಿ ಕತೆ, ಇಂದಿನ ಜಾಗತೀಕರಣ-ಉದಾರೀಕರಣ ಸಂದರ್ಭದಲ್ಲಿ ಪ್ರಜಾ ಸತ್ತೆಯ ಉಳಿವು-ಅಳಿವು, ಮನುಷ್ಯನ ಲಿವರ್ ಅನ್ನು ಯಂತ್ರಕ್ಕೆ ಅಳವಡಿಸಬಹುದೇ? ಮುಂತಾದ ಸಂಕೀರ್ಣ ಪ್ರಶ್ನೆಗಳನ್ನೆತ್ತುವ ಒಂದು ಮೊರಾಲಿಟಿ ಪ್ಲೇ ಆಗಿ ಮಾರ್ಪಾಡಾಗಿದೆ.

ಹಾಗೆ ನೋಡಿದರೆ, 'ದೇವೇ ಎನ್ ಸಿ ಕೋಡ್' ಕಥಾ ಹಂದರ ಬಹಳ ಸರಳ. ಬೆಂಗಳೂರಿನ ಕಂಪ್ಯೂಟರ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಕೋಡ್ ಬರೆಯುವ ದೇವೇ ಮತ್ತು ಸಿಡ್ ಇಬ್ಬರಿಗೂ ವಿಧಾನ ಸೌಧದ ಅಸಲೀ ವಾರಸುದಾರಳಾದ ಕು.ಪ್ರಜಾ ಸತ್ತೆಯ ಕೈಹಿಡಿದು, ಆ ಮೂಲಕ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಟ್ಟಿರ ಬಹುದಾದ ಕೋಟ್ಯಾಂತರ ಲಕ್ಷ ರೂಪಾಯಿ ಲಾಟರಿ ಹಣವನ್ನು ಲಪಟಾಯಿಸುವ ಆಸೆ. ದೇವೇ, ಸಿಡ್ ಮತ್ತು ಪ್ರಜಾ ನಡುವಿನ ತ್ರಿಕೋಣದ ಮಧ್ಯದಲ್ಲಿ ರೋಮ್ ರಮಣಿ ಸೆಂಟರ್ ಆಫ್ ಗ್ರಾವಿಟಿಯಾಗಿ ಬರುತ್ತಾಳೆ. ಪ್ರಜಾ ಸತ್ತೆ ಸಾವನ್ನಪ್ಪುತ್ತಾಳೆ. ಲಾಟರಿ ಹಣ ನಾಪತ್ತೆಯಾಗುತ್ತೆ. ಸರ್ಕಾರದ ಚೆಕ್ಕುಗಳು ಬೌನ್ಸ್ ಆಗುತ್ತೆ. ಅದಕ್ಕೆ ಕಾರಣ ಕಂಪ್ಯೂಟರ್ ಸಾಫ್ಟ್‌ವೇರ್ ಎನ್ನಲಾಗುತ್ತೆ. ಆ ಕೋಡ್ ಬರೆದ ದೇವೇ ಮತ್ತು ಸಿಡ್ ಮುಖ್ಯ ಆರೋಪಿಗಳಾಗುತ್ತಾರೆ. ಪ್ರಜಾ ಸತ್ತೆಯ ಹಂತಕರು ಯಾರು? ಲಾಟರಿ ಹಣ ಏನಾಯಿತು? ಈ ಪ್ರಶ್ನೆಗಳಿಗೆ ಉತ್ತರ ದೇವೇ N ಸಿಡ್ ಬರೆದಿರುವ ಸಾಫ್ಟ್‌ವೇರ್ ಕೋಡಿನಲ್ಲಿ ಇರುತ್ತದೆ.

ಈ ಮೂಲ ಕಥಾ ಹಂದರಕ್ಕೆ ಚೀಚೀಯವರು ಅತ್ಯದ್ಭುತ ಸನ್ನಿವೇಶ, ಪಾತ್ರಗಳನ್ನು ಸೃಷ್ಟಿಸಿ ನವಿರಾಗಿ ನೇಯುತ್ತಾರೆ. ಉದಾಹರಣೆಗೆ, ದೇವೇಯ ಮೇಲಿನ ಆರೋಪದ ವಿಚಾರಣೆಗೆ ಸಬ್‌ಇನ್ಸ್‌ಪೆಕ್ಟರ್ ಕುಮಾರ್ ಮತ್ತು ಹೆಡ್‌ಕಾನ್ಸ್‌ಟೇಬಲ್ ಯಡ್ಡಿ ನೇಮಕಗೊಳ್ಳುವ ಸನ್ನಿವೇಶದಲ್ಲಿ, ಕುಮಾರ್, ದೇವೇಯ ಮಗನೇ ಆಗಿರುವುದು, ಗ್ರೀಕ್ ಟ್ರ್ಯಾಜೆಡಿಗಳನ್ನು ಅಥವಾ ಬಾಲಿವುಡ್ ಸಿನೆಮಾಗಳನ್ನು ನೆನಪಿಗೆ ತರುತ್ತದೆ. ಕುಮಾರ್, ಯಡ್ಡಿ ಸಂಭಾಷಣೆ ಓದಿ:

ಕುಮಾರ್: ಯಡ್ಡಿ, ನಮ್ಮಪ್ಪ ಅಂತಹವರಲ್ಲ. ತುಂಬಾ ಒಳ್ಳೆ ಕೋಡರ್
ಯಡ್ಡಿ: ಗೊತ್ತು ಸಾ. ಇಲ್ದಿದ್ರೆ, ಕಂಪ್ನಿ ಮೇಲಧಿಕಾರಿ ಆಗಿದ್ದವರು, ವಾಪ್ಸು ಕೋಡ್ ಮಾಡಕ್ಕೆ ಯಾಕೆ ಬರ್ತಿದ್ರು?!
ಕುಮಾರ್: ಇದ್ ಯಾರ್ದೋ ಬೇರೆಯವರ ಕಿತಾಪತಿ ಅನ್ಸುತ್ತೆ. ಕೋಡಲ್ಲ್ಲಿ ಹುಳ ಹಾಕವ್ರೆ.
ಯಡ್ಡಿ: ಕೊಡದಲ್ಲಿ ಹುಳಾನಾ? ಎಲ್ಲಾ ಆ ಅನಂತನ ಅವಾಂತರ ಅಂತೀರಾ?
ಕುಮಾರ್: ಕೊಡದಲ್ಲಿ ಹುಳ ಅಲ್ಲ. ಕೋಡಲ್ಲಿ ಬಗ್ಸು.
ಯಡ್ಡಿ: ಅಂದ್ರೇ.. ಗುಮ್ಮು ಅಂತೀರಾ?
ಕುಮಾರ್: ಯಾರ್ನಾದ್ರೂ ಗುಮ್ಮಕ್ಕೆ ಕಾದಿರ್ತೀಯ. ಹೋಗ್ಲಿ, ಎದುರಗಡೆ ನೋಡು. ಏನ್ ಕಾಣ್ತಿದೆ?
ಯಡ್ಡಿ: ಬಾಂಬೇ ಡೈಯಿಂಗ್ ಷೋ ರೂಮ್ ಸಾ.
ಕುಮಾರ್: ಅದಲ್ಲ. ಅದರ ಮುಂದೆ ನಿಂತಿರೋದು.
ಯಡ್ಡಿ: ನಮ್ಮ ಜೀಪು ಸಾ. ಸಾ..., ಸಾ..., ನಮ್ಮ ಜೀಪ್ನಾ ಯಾವ್ನೋ ನಮ್ಮುಂದೇನೇ ಹೊಡ್ಕೊಂಡೊಯ್ತವ್ನಲ್ಲಾ ಸಾ...!
ಕುಮಾರ್: ಆಟೋ...ಆಟೋ..
ಹೀಗೆ ಪ್ರಾರಂಭವಾಗುವ ಜೀಪ್ ಚೇಸ್, ಕಲಾಸಿ ಪಾಳ್ಯ, ಸಿಟಿ ಮಾರ್ಕೆಟ್, ಶಿವಾಜಿ ನಗರ ಮುಂತಾದ ಬೆಂಗಳೂರಿನ ರಮಣೀಯ ಸ್ಥಳಗಳಲ್ಲಿ ಮುಂದುವರೆಯುತ್ತದೆ. ಉದ್ಯಾನ ನಗರಿಯ ಈ ಪ್ರದೇಶಗಳನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುವ ಚೀಚೀಯವರ ವರ್ಣನಾ ಶಕ್ತಿ ಬಣ್ಣಿಸಲಸದಳ. ಉದಾಹ
ರಣೆಗೆ, ಮಳೆ ಬಿದ್ದ ನಂತರ ಕಲಾಸಿ ಪಾಳ್ಯ, ಸಿಟಿ ಮಾರ್ಕೆಟ್ಟಿನಲ್ಲಿ ಕಾಣಸಿಗುವ ಸೌಂದರ್ಯವನ್ನು ನನಗೆ ತಿಳಿದಂತೆ ಬೇರಾರೂ ಚೀಚೀಯವರಷ್ಟು ಉತ್ಸಾಹದಿಂದ ಬಣ್ಣಿಸಿದಂತಿಲ್ಲ.

ಈ ಕೃತಿಯ ಮತ್ತೊಂದು ಗಮನಾರ್ಹ ಅಂಶವೆಂದರೆ, ರೋಮನ್ ರಮಣಿ ವ್ಯಕ್ತಿತ್ವ. ಈ ಕೃತಿಯ ಪ್ರತಿ ಪಾತ್ರದ ಮೇಲೂ ಪ್ರಭಾವ ಹೊಂದಿರುವ ಈಕೆ, ಇಡೀ ಕೃತಿಯಲ್ಲಿ ಒಮ್ಮೆಯೂ ಕಾಣಿಸಿಕೊಳ್ಳದೆ ನಿಗೂಢವಾಗಿಯೇ ಉಳಿಯುತ್ತಾಳೆ. ಕ್ವಾರ್ಟರ್ ಚೀಚೀಯವರ ಸಮಗ್ರ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿರುವ ಪ್ರೊ.ವರುಣ್ ಡೌರಿಯವರ ಪ್ರಕಾರ, ರೋಮನ್ ರಮಣಿಯ ಪಾತ್ರ ಬೇಕಿರಲಿ, ಬೇಡದಿರಲಿ ನಮ್ಮೆಲ್ಲರ ಜೀವನದ ಮೇಲೆ ಗಾಢ ಪ್ರಭಾವ ಇರುವ 'ವಿಧಿ'ಯನ್ನು ಬಿಂಬಿಸುತ್ತದೆ. ಅಷ್ಟೇ ಅಲ್ಲದೆ, ವಿಧಿಯನ್ನು ಪ್ರಪ್ರಥಮ ಬಾರಿಗೆ ಹೆಣ್ಣಾಗಿ ಚಿತ್ರಿಸಿ ಚೀಚೀಯವರು ತಮ್ಮ ಫೆಮಿನಿಸ್ಟ್ ತತ್ವವನ್ನು ಅಭೂತಪೂರ್ವಕವಾಗಿ ಪ್ರತಿಪಾದಿಸುತ್ತಾರೆ.

ಒಟ್ಟಿನಲ್ಲಿ, ದ ದೇವೇ'Nಸಿ ಕೋಡ್ ಸಾಹಿತ್ಯಾಸಕ್ತರು ಓದಿ, ಅಭ್ಯಾಸ ಮಾಡಲೇ ಬೇಕಾದ ಮಹತ್ವಾಕಾಂಕ್ಷೆಯುಳ್ಳ ಮಹತ್ವದ ಕೃತಿ.

Labels: ,

Thursday, June 15, 2006

ಮಜಾವಾಣಿ ವಿಷಾದಾಂಕ

"ಮೀಸಲಾತಿ ಬೇಕು" - ಮಜಾವಾಣಿ
ಜೂನ್ ೧೫, ೨೦೦೬: ಒಂದು ಕಾಲದಲ್ಲಿ ವಿಶ್ವಾದ್ಯಂತ ಮೂರೂವರೆ ಓದುಗರನ್ನು ಹೊಂದಿ, "ಸಮಸ್ತ ಕನ್ನಡಿಗರ ಎಮ್ಮೆಯ ಪತ್ರಿಕೆ" ಆಗುವ ಆಕಾಂಕ್ಷೆ ಹೊಂದಿದ್ದ ಮಜಾವಾಣಿ ಪತ್ರಿಕೆ ಇಂದು ತನಗಿಂತ ಉತ್ತಮ ಗುಣಮಟ್ಟ ಮತ್ತು ಜನಪ್ರಿಯತೆ ಹೊಂದಿರುವ "ಬೊಗಳೆ ರಗಳೆ" ಪತ್ರಿಕೆಯ ಹೊಡೆತಕ್ಕೆ ತತ್ತರಿಸುತ್ತಿರುವ ಸಂಗತಿ ವರದಿಯಾಗಿದೆ.

ನಮ್ಮ ಪತ್ರಿಕೆಯ ವರದಿಗಾರರು ಮಜಾವಾಣಿಯ ಸಂಪಾದಕರನ್ನು ಸಂದರ್ಶಿಸಿದಾಗ, ಮಜಾವಾಣಿ ಹಿಂದೆ ಬೀಳುತ್ತಿದೆ ಎಂಬುದನ್ನ್ನು ಅವರು ಮೊದಲಿಗೆ ಒಪ್ಪಲಿಲ್ಲ. "ಮಜಾವಾಣಿಯ ಧ್ಯೇಯೋದ್ದೇಶವೇ ಬೇರೆ, ಬೊಗಳೆ ರಗಳೆಯ ಗುರಿಯೇ ಬೇರೆ. ಗಾಂಧಿಯಂತಹ ಮಹಾ ಪುರುಷನನ್ನೇ ಹಾದಿ ತಪ್ಪಿಸಿದ ಸತ್ಯವೆನ್ನುವ ಅಪಾಯಕಾರಿ ಮೌಲ್ಯದ ವಿರುದ್ಧ ಸೆಣೆಸುವುದು ನಮ್ಮ ಪತ್ರಿಕೆಯ ಗುರಿ. ಆದರೆ, ಬೊ.ರ.ದ ಗುರಿ ಅದಲ್ಲ, ಅಸತ್ಯವನ್ನು ಹುಡುಕುವುದು." ಎಂದೆಲ್ಲಾ ತಡಬಡಾಯಿಸುತ್ತಿದ್ದ ಅವರು, ಸಂದರ್ಶನದ ಕೊನೆಯ ವೇಳೆಗೆ, "ನಮ್ಮ ಪತ್ರಿಕೆ ಹಿಂದುಳಿದಿರುವುದು ನಿಜ. ಮಜಾವಾಣಿಯನ್ನು ಹಿಂದುಳಿದ ಪತ್ರಿಕೆ ಎಂದು ಘೋಷಿಸಿ, ೨೭% ಮೀಸಲಾತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ" ಎಂದರು.

"ಇಂಟರ್ನೆಟ್ ಪತ್ರಿಕೆಗೆ ಮೀಸಲಾತಿಯೇ? ಇದು ವಾಸ್ತವದಲ್ಲಿ ಸಾಧ್ಯವೇ?" ಎಂದು ನಾವು ಪ್ರಶ್ನಿಸಿದಾಗ ಕ್ಷೋಭೆಗೆ ಒಳಗಾದ ಅವರು, "ವಾಸ್ತ್ವವ ನಮ್ಮ ಪತ್ರಿಕೆಯ ವಿರುದ್ಧ ಕೆಲಸ ಮಾಡುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ, ಬಹು ಸಂಖ್ಯಾತ ಹಿಟಾಸಕ್ತಿಗಳು ವಾಸ್ತವದೊಂದಿಗೆ ಸೇರಿ ನಮ್ಮ ಪತ್ರಿಕೆಯ ವಿರುದ್ಧ ಬಹಿರಂಗವಾಗಿ ಒಳ ಸಂಚು ನಡೆಸುತ್ತಿರುವುದು ವಿಷಾದಕರ ಸಂಗತಿ" ಎಂದರು.

Monday, June 12, 2006

ಮಜಾವಾಣಿ ಕಾರ್ಟೂನ್

(ನ್ಯೂಯಾರ್ಕರ್ ಪತ್ರಿಕೆಯಲ್ಲಿ ನೋಡಿದ್ದ ವ್ಯಂಗ್ಯ ಚಿತ್ರದಿಂದ ಪ್ರೇರಿತ)

Friday, May 05, 2006

ಮಜಾವಾಣಿಗೆ ರಜಾ!


ಪ್ರಿಯ ಓದುಗರೇ,

ಮಜಾವಾಣಿ ಪತ್ರಿಕೆಯ ಕಾರ್ಯಾಲಯವನ್ನು ಹದಿನಾರು ವರ್ಷಗಳ ನಂತರ ಅಮೆರಿಕದಿಂದ ಬೆಂಗಳೂರಿಗೆ ಸ್ಥಳಾಂತರಿಸುವ ಕಾರ್ಯ ಚಟುವಟಿಕೆಗಳು ನಾಳೆಯಿಂದ ಪ್ರಾರಂಭವಾಗಲಿವೆ. ಹೀಗಾಗಿ ನಮ್ಮ ಪತ್ರಿಕೆಗೆ ಅನಿರ್ದಿಷ್ಟ ಕಾಲ ರಜೆ ಘೋಷಿಸಬೇಕಾದಂತ ಅನಿವಾರ್ಯತೆ ಎದುರಾಗಿದೆ.

ವಿಶ್ವಾದ್ಯಂತ ಇರುವ ನಮ್ಮ ಮೂರುವರೆ ಮಂದಿ ಓದುಗರು, ಇಲ್ಲಿಯವರೆಗೆ ನಮಗೆ ನೀಡಿರುವ ಪ್ರೋತ್ಸಾಹಕ್ಕೆ ನಾನು ಅವರಿಗೆ ಚಿರ ಋಣಿ. ಈ ಪ್ರೋತ್ಸಾಹ ಮುಂದೆಯೂ ಹೀಗೆಯೆ ಮುಂದುವರೆಸಬೇಕೆಂದು ಪ್ರಾರ್ಥಿಸುತ್ತೇನೆ.

ಈ ಸಂದರ್ಭದಲ್ಲಿ ರಾ.ಶಿ.ಯವರು ಕೊರವಂಜಿ ಪತ್ರಿಕೆಯನ್ನು ಮುಚ್ಚುವಾಗ ಹೇಳಿದ್ದರೆನ್ನಲಾದ ಮಾತುಗಳು ನೆನಪಿಗೆ ಬರುತ್ತಿವೆ: "ಹೋಗ್‍ಬರ್ತೀನಿ ಅಂದ್ಯೇನೆ ಕೊರವಂಜೀ..? ನೀನಿದ್ದಿದ್ದಿದ್ದೇ ಗೊತ್ತಾಗ್ಲಿಲ್ವಲ್ಲೇ!" ಈ ಮಾತುಗಳು ಕೊರವಂಜಿಗಿಂತ ಮಜಾವಾಣಿಗೆ ಹೆಚ್ಚು ಸೂಕ್ತವೆಂದು ನನ್ನ ಅಭಿಪ್ರಾಯ.

ಕಳಚಿಕೊಳ್ಳುವ ಮುನ್ನ ಹೇಳಲೇ ಬೇಕಾದ ಮಾತು: ಕನ್ನಡದ ಖ್ಯಾತ ವ್ಯಂಗ್ಯ ಚಿತ್ರಕಾರರಾದ "ಹರಿಣಿ"ಯವರ ಚಿತ್ರಗಳು ಈಗ ಇಂಟರ್‍ನೆಟ್‍ನಲ್ಲಿ ಲಭ್ಯ. ಅವುಗಳನ್ನು ನೀವು ಇಲ್ಲಿ ನೋಡಬಹುದು.

ವಂದನೆಗಳೊಂದಿಗೆ,

ಶೇಷಾದ್ರಿ ("ವಿ.ವಿ.")

Labels:

Tuesday, May 02, 2006

ಮಜಾವಾಣಿ ಸಂಪಾದಕೀಯ: ವೆಲ್‍ಡನ್ ಯುಕ್ತಾ ಮೂಖಿ!

ವೆಲ್‍ಡನ್ ಯುಕ್ತಾ ಮೂಖಿ!

ಇಂದಿನ ನಮ್ಮ ಬಹುಪಾಲು ಸುದ್ದಿ ಮಾಧ್ಯಮಗಳು ಅಲ್ಪ ಸಂಖ್ಯಾತರ ವಿರೋಧಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಉದಾಹರಣೆಗೆ, ನಮ್ಮ ಸಮಾಜದಲ್ಲಿ ಅಲ್ಪ ಸಂಖ್ಯೆಯಲ್ಲಿ ಇರುವ ರಾಜಕಾರಣಿಗಳು, ಶ್ರೀಮಂತರು, ಗಣ್ಯವ್ಯಕ್ತಿಗಳು ಮಾಡುವ ಭ್ರಷ್ಟಾಚಾರ, ಕೊಲೆ, ವಂಚನೆಗಳಂತಹ ಸಣ್ಣ ಪುಟ್ಟ ವಿಷಯಗಳನ್ನು ಆಗಾಗ್ಗೆ ಪ್ರಥಮ ಪುಟದಲ್ಲಿ ವರದಿಮಾಡುವ ನಮ್ಮ ಮಾಧ್ಯಮಗಳು, ಇದೇ ಅಲ್ಪ ಸಂಖ್ಯಾತರು ಒಳ್ಳೆಯ ಕೆಲಸ ಮಾಡಿದಾಗ "ವೆಲ್‍ಡನ್" ಎಂದು ಒಮ್ಮೆಯೂ ಬೆನ್ನು ತಟ್ಟುವುದಿಲ್ಲ.

ಆದರೆ, ಮಜಾವಾಣಿ ಹಾಗಲ್ಲ. ಈಗಾಗಲೇ ನಮ್ಮ ಪತ್ರಿಕೆ ಧರಂ ಸಿಂಗ್ ಮತ್ತು ಮಹಾರಾಷ್ಟ್ರ ಶಾಸಕರಿಗೆ ವೆಲ್‍ಡನ್ ಎಂದಿದೆ. ಇಂದು ನಮ್ಮಿಂದ "ವೆಲ್‍ಡನ್" ಎನ್ನಿಸಿಕೊಂಡು ಬೆನ್ನು ಮುಟ್ಟಿಸಿಕೊಳ್ಳುವ ಸರದಿ ಚಲನ ಚಿತ್ರ ತಾರೆ, ಮಾಜಿ ವಿಶ್ವ ಸುಂದರಿ ಯುಕ್ತಾ ಮೂಖಿಯದಾಗಿದೆ.

"ಬಡತನ ಮತ್ತು ಸಿರಿತನ ಎಂಬುದು ನಮ್ಮ ಮನಸ್ಸಿನ ಪರಿಕಲ್ಪನೆ" ಎಂದಿರುವ ಯುಕ್ತಾ ಮೂಖಿಯವರು, ಬಡವರಿಗೆ ಬಡತನವಿರುವುದು ಕಲ್ಪನಾಶಕ್ತಿಯಲ್ಲಿ ಎಂಬ ಗಮನಾರ್ಹ ವಿಷಯವನ್ನು ಹೊರಗೆಡವಿದ್ದಾರೆ. ("ಆತ್ಮಾಭಿವೃದ್ಧಿಗೆ ಮಾನಸಿಕ ಬಡತನ ಪೂರಕ" ಎಂಬ ತತ್ವವನ್ನು ಚೆನ್ನೈನ ಕನ್ನಡ ಜಟಕಾ ಸಾಬಿ ಸಾರುತ್ತಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.)

ದುಡಿಯಲು ಉದ್ಯೋಗವಿಲ್ಲವೇ? ಹೊಟ್ಟೆಗೆ ಹಿಟ್ಟಿಲ್ಲವೇ? ಮೈ ಮುಚ್ಚಲು ಬಟ್ಟೆಯಿಲ್ಲವೇ? ಕೊನೆಗೆ ಕುಡಿಯಲು ತೊಟ್ಟೂ ನೀರಿಲ್ಲವೇ? ಅದೆಲ್ಲಾ ನಿಮ್ಮ ಪರಿಕಲ್ಪನೆಗಳಷ್ಟೇ. ನಿಮಗಿರುವ ನಿಜವಾದ ಬಡತನವೆಂದರೆ "poverty of phantasy".

ಯುಕ್ತಾ ಮೂಖಿ,ಐಶ್ವರ್ಯ ರೈ, ಸುಷ್ಮಿತ ಸೆನ್ ಜೊತೆ, ಸ್ವಿಟ್ಜರ್ ಲ್ಯಾಂಡಿನ ಬೀಚಿನಲ್ಲಿ ಕುಳಿತು, ಬಾದಾಮಿ, ಕೇಸರಿ ತುಂಬಿದ ಕಾಶ್ಮೀರಿ ಷಾಹಿ ಬಿರಿಯಾನಿ ತಿನ್ನುತ್ತಾ, ದ್ರಾಕ್ಷಾರಸ ಸೇವಿಸುತ್ತಿರುವ ಬಿಲ್ ಗೇಟ್ಸ್ ನೀವೇ ಎಂದು ಭಾವಿಸಿಕೊಳ್ಳುವುದರ ಬದಲು ಬಡತನದ ಬಗ್ಗೆ ಬೊಬ್ಬಿಡುವ ನಿಮಗೆ ನಾಚಿಕೆಯಾಗಬೇಕು. ನಿಮ್ಮ ಕಲ್ಪನಾ ಶಕ್ತಿ ಕುಂಠಿತವಾಗಿರುವುದನ್ನು ಮನಗಣಾದೆ, ನಿಮಗಿರುವ ಅರೆಕಾಸಿನ ಭಾರವನ್ನೂ ಬಲವಂತವಾಗಿ ಕಡಿಮೆ ಮಾಡುವ ಅಲ್ಪಸಂಖ್ಯಾತ ಶ್ರೀಮಂತರ ಬಗೆಗೆ ಕೆಂಡಕಾರುವ ನಿಮಗೆ ಧಿಕ್ಕಾರವಿರಲಿ.

ಅಮಾರ್ತ್ಯ್ ಸೆನ್ ಅಂತಹ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞರು ಹಲವು ಪುಸ್ತಕಗಳನ್ನು ಬರೆದೂ ತಡಪಾಯಿಸುತ್ತಿದ್ದರೆ, ಬಡಜನರ ಬಡತನದ ಮೂಲವನ್ನು ಒಂದೇ ವಾಕ್ಯದಲ್ಲಿ ಪೂರ್ಣವಾಗಿ ವಿವರಿಸಿರುವ ಯುಕ್ತಾ ಮೂಖಿಯವರಿಗೆ ನಾವು ಹೇಳುವುದಿಷ್ಟೇ: "ವೆಲ್‍ ಡನ್!"

ಬ್ರೇ-ಕಿಂಗ್ ನ್ಯೂಸ್!


ಆತ್ಮ ಸೌಂದರ್ಯ ಸ್ಪರ್ಧೆ?

ಬೆಂಗಳೂರು, ಮೇ ೨, ೨೦೦೬: ಭಾರತೀಯರು ಆತ್ಮ ಸೌಂದರ್ಯವನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಮಾಜಿ ರೈಲ್ವೇ-ಸಚಿವ ಸಿ.ಕೆ.ಜಾಫರ್ ಷರೀಫ್ ಅವರು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲೇ, ಆತ್ಮ ಸೌಂದರ್ಯ ವರ್ಧಕ ಪ್ರಸಾಧನಗಳ ತಯಾರಕರಾದ ದೀಪಕ್ ಚೋಪ್ರಾ, ಶ್ರೀ ಶ್ರೀ ರವಿ ಶಂಕರ್ ಮುಂತಾದವರು ವಿಶ್ವ ಆತ್ಮ-ಸೌಂದರ್ಯ ಸ್ಪರ್ಧೆ ಏರ್ಪಡಿಸಲು ಯೋಜಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

"ಡಾ."ವಿಜಯ್ ಮಲ್ಯರವರ ಯು.ಬಿ. ಗುಂಪಿನ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಜಗತ್ತಿನ ಎಲ್ಲ ದೇಶಗಳಿಂದ ಆತ್ಮ ಸುಂದರಿಯರು ಭಾಗವಹಿಸಲಿದ್ದು, ವಿಜಯೀ ಮಹಿಳೆಗೆ "ಪರಮಾತ್ಮ ಸುಂದರಿ" ಪ್ರಶಸ್ತಿ ನೀಡಲಾಗುವುದು. ಇದೇ ಪ್ರಥಮ ಬಾರಿಗೆ ಸೌಂದರ್ಯ ಸ್ಪರ್ಧೆಯೊಂದರಲ್ಲಿ, ಸೌದಿ ಅರೇಬಿಯ, ಇರಾನ್, ಪಾಕಿಸ್ತಾನಗಳಂತಹ ಇಸ್ಲಾಮಿಕ್ ದೇಶಗಳಿಂದಲೂ ಸ್ಪರ್ಧಿಗಳು ಭಾಗವಹಿಸಲಿರುವುದು ಈ ಸ್ಪ್ರರ್ಧೆಯ ವೈಶಿಷ್ಟ್ಯ.

ಆರ್.ಎಸ್.ಎಸ್., ಶಿವ ಸೇನೆ ಖಂಡನೆ: ಇಂತಹ ಸೌಂದರ್ಯ ಸ್ಪರ್ಧೆಗಳು ಭಾರತೀಯ ಸನಾತನ ಸಂಸ್ಕೃತಿಗೆ ಅಪಮಾನ ಎಂದು ಬಣ್ಣಿಸಿರುವ ಹಿಂದೂ ಪರಿವಾರದ ಸಂಸ್ಥೆಗಳು, ಆತ್ಮಗಳಿಗೆ ಈಜುಡುಗೆ ತೊಡಿಸುವುದನ್ನು ತಾವು ತೀವ್ರವಾಗಿ ಪ್ರತಿಭಟಿಸುತ್ತೇವೆ ಎಂದಿವೆ.

ಮುಸ್ಲಿಂ ಲೀಗ್ ಬೆಂಬಲ: ಹಿಂದೂ ಸಂಘಟನೆಗಳು ಆತ್ಮ-ಸೌಂದರ್ಯ ಸ್ಪರ್ಧೆಯನ್ನು ವಿರೋಧಿಸಲು ನಿರ್ಧರಿಸಿದ್ದರೆ, ಮುಸ್ಲಿಂ ಲೀಗ್ ಈ ಸ್ಪರ್ಧೆಗೆ ತನ್ನ ಬೆಂಬಲ ಸೂಚಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಆತ್ಮ ಸುಂದರಿಯರು ತಮ್ಮ ಆತ್ಮಕ್ಕೆ ಈಜುಡುಗೆ ತೊಡಿಸಿದ ನಂತರ ಅದರ ಮೇಲೆ ಬುರ್ಖಾ ಧರಿಸಬೇಕೆಂದು ಅದು ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಚಿಂತನ - ಮಂಥನ

ಬಡತನ
ಬಡತನ ನಮ್ಮ ಆತ್ಮಕ್ಕೆ ಒಳ್ಳೆಯದೆಂದು ನನ್ನ ಧೃಡ ನಂಬಿಕೆ. ನಾವು ಬಡವರಾಗಿದ್ದಾಗ, ಯಾರಾದರೂ ಬಂದು, "ಸ್ವಾಮಿ ನಾನು ಬಡವ, ಕೊಂಚ ಸಹಾಯ ಮಾಡಿ" ಎಂದರೆ, "ಆಗುವುದಿಲ್ಲ, ನನ್ನ ಬಳಿ ಹಣವಿಲ್ಲ" ಎಂದು ಆತ್ಮ ವಂಚನೆಯಿಲ್ಲದೆ ಹೇಳಬಹುದು.

Labels:

Monday, May 01, 2006

ಬಕ್ ಅಪ್ ನಾನ್-ಬ್ಯಾಂಗ್ಲೋರಿಯನ್ಸ್!

ಸಂಜೆವಾಣಿಯಿಂದ ಹೊರಗಿನವರಿಗೆ ಪ್ರೋತ್ಸಾಹ?!

ಬೆಂಗಳೂರು, ಮೇ ೧, ೨೦೦೬: ಕರ್ನಾಟಕದ ಇತರ ಸ್ಥಳಗಳು ಹಿಂದೆ ಬಿದ್ದಿರುವಾಗ, ಬೆಂಗಳೂರು ಮತ್ತು ಬೆಂಗಳೂರಿಗರು ಮಾತ್ರ ಮುಂದುವರೆಯುತ್ತಿರುವುದು ಶೋಚನೀಯ ಸಂಗತಿ. ಸರ್ಕಾರ ಇದನ್ನು ಅಷ್ಟಾಗಿ ಗಮನಿಸಿದಂತಿಲ್ಲ. ಇಂತಹ ಸಂದರ್ಭಗಳಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಮುಖ್ಯ.

ಈ ನಿಟ್ಟಿನಲ್ಲಿ ಪ್ರಜಾವಾಣಿ, ವಿಜಯ ಕರ್ನಾಟಕ, ಕನ್ನಡ ಪ್ರಭಗಳಂತಹ ಹೆಸರಾಂತ ಪತ್ರಿಕೆಗಳು ಯಾವುದೇ ಉತ್ಸಾಹ ತೋರದಿರುವಾಗ, ಸಂಜೆವಾಣಿಯಂತಹ ಸಣ್ಣ ಪತ್ರಿಕೆ ಮುಂದಾಗಿರುವುದು ಗಮನಾರ್ಹ.

ಬೆಂಗಳೂರುವಾಸಿಗಳೇ ಮುನ್ನಡೆ ಸಾಧಿಸಿರುವುದನ್ನು "ವಿಷಾದನೀಯ" ಎಂದಿರುವ ಸಂಜೆವಾಣಿ, ಈ ವಿಷಯದಲ್ಲಿ ಹೊರಗಿನವರನ್ನು ಪ್ರೋತ್ಸಾಹಿಸುವುದೋ ಎಂದು ಕಾದು ನೋಡಬೇಕಾಗಿದೆ.

ಏಪ್ರಿಲ್ ೨೪, ೨೦೦೬ ಸಂಜೆವಾಣಿ ಸಂಚಿಕೆಯಿಂದ:

Saturday, April 29, 2006

ಬಾಲ ಗ್ರಹ - ಕಿರಿಯರ ಅಂಕಣ

[ನಮ್ಮ ಪತ್ರಿಕೆಗೆ ಮಕ್ಕಳ ಬಗ್ಗೆ ಕಾಳಜಿ ಮೊದಲಿನಿಂದಲೂ ಇದ್ದೇ ಇದೆ. -- ಆದರೆ ಮಕ್ಕಳ ಮಕ್ಕಳ ಮೇಲಿಲ್ಲ, ಏಕೆಂದರೆ ಮಕ್ಕಳಿಗೆ ಮಕ್ಕಳಾಗುವುದು ಸೂಕ್ತವಲ್ಲ -- ಆದರೂ ಸಹ ಇಂದಿನ ವರೆಗೆ ನಮ್ಮ ಪತ್ರಿಕೆಯಲ್ಲಿ ಮಕ್ಕಳಿಗಾಗಿಯೇ ಒಂದು ಅಂಕಣವಿರಲಿಲ್ಲ. ಆ ಕೊರತೆಯನ್ನು ನಿವಾರಿಸಲು, "ಬಾಲ ಗ್ರಹ" ಅಂಕಣವನ್ನು ಪ್ರಾರಂಭಿಸುತ್ತಿದ್ದೇವೆ. ಈ ಅಂಕಣದಿಂದ ವಿಶ್ವಾದ್ಯಂತ ಇರುವ ನಮ್ಮ ಓದುಗರ ಸಂಖ್ಯೆ ಮೂರರಿಂದ ಮೂರೂವರೆಗೆ ಏರುವ ನಂಬಿಕೆ ನಮಗಿದೆ. -ಸಂಪಾದಕ]



ಡೈನೋಸಾರ್
ಗೋಪಾಲ ಕೃಷ್ಣ, ಹತ್ತನೆಯ ತರಗತಿ, ಸಿ-ಸೆಕ್ಶನ್, ಬಿಷಪ್ ಕಾಟನ್ ಜೂನಿಯರ್ ಕಾಲೇಜ್
[ಮಜಾವಾಣಿ ವೈಜ್ಞಾನಿಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳಿಸಿದ ಲೇಖನ]

ನನ್ನ ಪ್ರಬಂಧದ ಕಥಾವಸ್ತು "ಡೈನೋಸಾರ್". ಇದೊಂದು ಕ್ರೂರ ಪ್ರಾಣಿಯಾಗಿದ್ದು ಅಸುರರ ಕಾಲದಲ್ಲಿ ಇದ್ದುದರಿಂದ "ಡೈನಾಸುರ" ಎಂಬ ನಾಮಧೇಯ ಪಡೆಯಿತು.

ನನಗೆ ಡೈನೋಸಾರ್ ವಿಷಯ ಹೆಚ್ಚು ತಿಳಿದಿಲ್ಲ. ಆದ್ದರಿಂದ ನಾನು ಬೇರೊಂದು ಪ್ರಾಣಿಯನ್ನು ಆಯ್ಕೆ ಮಾಡಲು ಆಯ್ದು ಕೊಳ್ಳುತ್ತೇನೆ. ಆ ಪ್ರಾಣಿಯ ಹೆಸರು, ಹಸು. ಹೆಣ್ಣು ಹಸು ಒಂದು ಸಸ್ತನಿ. ಹಸುವಿಗೆ ಆರು ಪಕ್ಕೆಗಳಿದ್ದು, ಅವು ಮೇಲೆ, ಕೆಳಗೆ, ಎಡ ಮತ್ತು ಬಲ ಎಂಬುದಾಗಿವೆ. ಅದರ ಹಿಂದೆ ಒಂದು ಬಾಲವಿದ್ದು ಬಾಲದ ತುದಿಯಲ್ಲಿ ಒಂದು ಬ್ರಶ್ ಇರುತ್ತದೆ. ಹಾಲು ಕರೆಯುವಾಗ ನೊಣಗಳು ಬಕೆಟ್ಟಿನಲ್ಲಿ ಬೀಳದಂತೆ ತಡೆಯುವುದೇ ಆ ಬಾಲದ ಕೆಲಸವಾಗಿದೆ.

ಹುಟ್ಟಿನಿಂದಲೇ ಬಾಲವಿರುವ ಹಸುವಿನ ಮಕ್ಕಳಿಗೆ "ಕರು" ಎನ್ನುತ್ತಾರೆ. ಆದರೆ, ಹುಟ್ಟಿದಾಗ ಬಾಲವಿಲ್ಲದ ಮನುಷ್ಯರ ಮಕ್ಕಳಿಗೆ "ಬಾಲಕರು" ಎನ್ನುತ್ತಾರೆ. ಇದೊಂದು ವಿರುದ್ದಾರ್ಥಕ ಪದ.

ಹಸುವಿಗೆ ಒಂದು ತಲೆಯಿದ್ದು, ಅದರ ಕೆಲಸ ಕೊಂಬುಗಳಿಗೆ ಜಾಗ ಏರ್ಪಡಿಸುವುದಾಗಿದೆ. ಹಸುವಿನ ಕೊಂಬುಗಳು comma ಆಕಾರದಲ್ಲಿದ್ದು, ನಮ್ಮ ಪುರಾತನ ವಂಶಸ್ತರು ಅದನ್ನು "ಕಾಮಧೇನು" ಎಂದು ಈಗಲೂ ಪೂಜಿಸುತ್ತಾರೆ ಮತ್ತು "ಕಾಮ ಶಾಸ್ತ್ರ" ಎಂಬ ವ್ಯಾಕರಣ ಗ್ರಂಥದ ರಚನೆಗೆ ಇದು ಕಾರಣವಾಗಿದೆ.

ಹಸುವಿನ ತಲೆಯ ಕೆಳಗೆ ಮುಖವಿದ್ದು, ಮುಖದ ಕೆಲಸ ಬಾಯಿಗೆ ಜಾಗ ಕೊಡುವುದಾಗಿದೆ. ಬಾಯಿಯ ಕೆಲಸ ಹಸಿವೆಯಾದಾಗ "ಅಂಬಾ.." ಎನ್ನುವುದು. ಹಸು ಏನೇ ತಿಂದರೂ ಅದನ್ನು ಎರಡು ಬಾರಿ ತಿನ್ನುತ್ತದೆ ಆದ್ದರಿಂದ ಅದಕ್ಕೆ ಬೇಕಾದಷ್ಟು ಆಹಾರ ದೊರಕುತ್ತದೆ. ಆಹಾರ ಸಾಲದಾದಾಗ ಅದು "ಅಂಬಾ.." ಎನ್ನುತ್ತದೆ. "ಅಂಬಾ.." ಎನ್ನದಿದ್ದರೆ, ಅದರ ಹೊಟ್ಟೆಯ ತುಂಬಾ ಹುಲ್ಲು ತುಂಬಿದೆ ಎಂದೇ ಅರ್ಥ.

ಹಸುವಿನ ವಾಸನಾ ಶಕ್ತಿ ಶಕ್ತಿಯುತವಾಗಿರುತ್ತದೆ ಆದ್ದರಿಂದ ಬಹಳ ದೂರದಿಂದಲೇ ಅದು ವಾಸಿಸುತ್ತಿರುವ ಸ್ಥಳದ ಸುಳಿವು ನಮಗೆ ಸಿಗುತ್ತದೆ.

ಹೆಂಗಸು ಹಸುವಿಗೆ, ಹಸು ಎನ್ನುತ್ತಾರೆ. ಆದರೆ, ಮನುಷ್ಯ ಹಸುವಿಗೆ "ಎತ್ತು" ಎನ್ನುತ್ತಾರೆ. "ಎತ್ತು" ಪದಕ್ಕೆ ಇನ್ನೊಂದು ಅರ್ಥ ಇರುವುದರಿಂದ ಅದೊಂದು ಸಮಾನಾರ್ಥಕ ಪದ. ಗಂಡಸು ಹಸು ಸಸ್ತನಿಯಲ್ಲ.

ಹೆಂಗಸು ಹಸುವಿನ ಕೆಳಗೆ ಹಾಲು ಜೋತಾಡುತ್ತಿರುತ್ತದೆ. ಇದು ಅಲ್ಲಿರಲು ಮುಖ್ಯ ಕಾರಣವೆಂದರೆ, ಬಕೆಟ್ಟಿನಲ್ಲಿ ಹಾಲು ಕರೆಯಲು ಕೆಳಗಡೆಯೇ ಸೂಕ್ತವಾದ ಜಾಗವಾಗಿದೆ. ಹಾಲನ್ನು ಕರೆದಷ್ಟೂ ಅದು ಬರುತ್ತಲೇ ಇರುತ್ತದೆ. ನಮ್ಮ ಮನೆಗೆ ಹಾಲನ್ನು ಹಾಕುವವನ ಕ್ಯಾನಿನಲ್ಲಿ ಕೆಲವೊಮ್ಮೆ ಹಾಲು ಖಾಲಿಯಾಗಿರುತ್ತದೆ. ಆದರೆ, ಹಸುವಿನಲ್ಲಿ ಮಾತ್ರ ಹಾಲು ಯಾವಾಗಲೂ ಇರುತ್ತದೆ. ಇದೊಂದು ವೈಜ್ಞಾನಿಕ ವಿಚಾರವಾಗಿದ್ದು ನನಗಿನ್ನೂ ಅಷ್ಟಾಗಿ ತಿಳಿದಿಲ್ಲ.

ಹಾಲು ಕೊಡದಿದ್ದರೂ ಸಹ ಒಳ್ಳೆಯ ಮನುಷ್ಯರಿಗೆ "ಹಸುವಿನಂತಹ ವ್ಯಕ್ತಿ" ಎನ್ನುತ್ತಾರಾದ್ದರಿಂದ ನಾವೆಲ್ಲರೂ ಒಳ್ಳೆಯವರಾಗಲು ಪ್ರಯತ್ನಿಸಬೇಕು.

[This piece is largely inspired by something I read in Steven Pinker's introduction to The Best American Science and Nature Writing. While I am not a 19 year old girl studying in Harvard with a $500,000 book contract, I still don't want to come back at a later time and admit that "I internalized" things written in that book!]

Thursday, April 20, 2006

ಸಿನೆಮಜಾವಾಣಿ

ಸಲ್ಮಾನ್ ಖಾನ್ ಅಮೆರಿಕಕ್ಕೆ?!

ಮುಂಬೈ, ಏಪ್ರಿಲ್ ೨೧, ೨೦೦೬: ಕೃಷ್ಣ ಮೃಗವೊಂದನ್ನು ಕೊಂದ ಆರೋಪದ ಮೇಲೆ ಜೈಲು ಶಿಕ್ಷೆಗೆ ಗುರಿಯಾಗಿ ಜಾಮೀನು ಪಡೆದು ಹೊರ ಬಂದಿರುವ ನಟ ಸಲ್ಮಾನ್ ಖಾನ್ ಅಮೆರಿಕ ಪ್ರವಾಸಕ್ಕೆ ಸಿದ್ಧತೆ ನಡೆಸುತ್ತಿದ್ದಾರೆಂಬ ಸುದ್ದಿ ಹೊರ ಬಂದಿದೆ. ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿರುವ ಅವರು ದೇಶದಿಂದ ಹೊರ ಹೋಗುವುದು ನಿಷಿದ್ದವಾದರೂ, ಸಲ್ಮಾನ್ ಖಾನ್ ವಿಚಾರದಲ್ಲಿ ಅಮೆರಿಕದ ಅತೀವ ಒತ್ತಡದಿಂದ ಕೇಂದ್ರ ಸರ್ಕಾರ ಉದಾರ ನೀತಿ ತೋರಲಿದೆಯೆಂದು ನಂಬಲರ್ಹ ಮೂಲಗಳು ತಿಳಿಸಿವೆ.

ಅಮೆರಿಕದ ಉಪಾಧ್ಯಕ್ಷ ಡಿಕ್ ಚೇನಿಯವರೊಂದಿಗೆ ಬೇಟೆಗೆ ಹೋಗಲು, ಅಮೆರಿಕದ ಒಬ್ಬ ವ್ಯಕ್ತಿಯೂ ಸಿದ್ಧನಿಲ್ಲದಿರುವುದರಿಂದ, ವ್ಯಕ್ತಿತ್ವದ ಕೊರತೆ ಇಲ್ಲದ ಭಾರತದಿಂದ ವ್ಯಕ್ತಿಗಳನ್ನು ಸರಬರಾಜು ಮಾಡುವಂತೆ ಅಮೆರಿಕದ ಅಧ್ಯಕ್ಷ ಬುಶ್, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಒಂದಿಗೆ ಮ್ಯಾನ್ ಪವರ್ ಒಪ್ಪಂದ ಮಾಡಿಕೊಂಡಿರುವುದನ್ನು ಇಲ್ಲಿ ನೆನೆಯ ಬಹುದು. ಸಲ್ಮಾನ್ ಖಾನ್ ರಫ್ತು ಯಶಸ್ವಿಯಾದಲ್ಲಿ, ಪಟೌಡಿಯವರನ್ನೂ ಡಿಕ್ ಚೇನಿಯ ಬೇಟೆ-ಸಂಗಡಿನಾಗಿ ಕಳುಹಿಸುವ ಯೋಚನೆ ಸರ್ಕಾರಕ್ಕಿದೆ ಎಂದು ತಿಳಿದು ಬಂದಿದೆ.

ಸಲ್ಮಾನ್ ಸಂತಸ: "ಅಮೆರಿಕಾ ಬೆಸ್ಟು." ಎಂದಿರುವ ಸಲ್ಮಾನ್ ಖಾನ್ "ಅಲ್ಲಿಗೆ ಹೋಗಲು ನಾನು ಸದಾ ಸಿದ್ಧ" ಎಂದಿದ್ದಾರೆ. ಮಜಾವಾಣಿ ಸಿನೆಮಾ ವರದಿಗಾರ್ತಿಯೊಂದಿಗೆ ಮಾತನಾಡಿದ ಖಾನ್, "ಅಮೆರಿಕದಲ್ಲಿ, ಡಿಕ್ ಚೇನಿಯಿಂದ ಗುಂಡೇಟು ತಿಂದ ವ್ಯಕ್ತಿ ತಾನೇ ಕ್ಷಮಾಪಣೆ ಕೇಳಿದರೆ, ಇಲ್ಲಿ ಆ ಕಪ್ಪು ಜಿಂಕೆಯನ್ನು ಕ್ಷಮಿಸುವುದು ಬಿಟ್ಟು ನನ್ನನ್ನು ಜೈಲಿಗೆ ಕಳುಹಿಸುತ್ತಿದ್ದಾರೆ. ನೀವೇ ಹೇಳಿ ಯಾವುದು ಉತ್ತಮ?" ಎಂದು ಕೇಳಿದರು.

ಕೃಷ್ಣ ಮೃಗ ಕೊಲೆ ವಿಚಾರದಲ್ಲಿ ತಮ್ಮ ಯಾವುದೇ ತಪ್ಪಿಲ್ಲವೆಂದು ಪರಿ ಪರಿ ವಿಧದಲ್ಲಿ ಬೇಡಿಕೊಂಡರೂ, ಜೈಲು ಶಿಕ್ಷೆ ವಿಧಿಸಿದ ನ್ಯಾಯಾಧೀಶರ ವಿರುದ್ಧ ಕೆಂಡ ಕಾರಿದ ಅವರು, "ತಿಮಿಂಗಿಲ, ಡಾಲ್ಫಿನ್‌ಗಳೂ ಸೇರಿದಂತೆ ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ವೈಜ್ಞಾನಿಕ ಸತ್ಯ. ಈ ಕುರಿತು ಡಿಸ್ಕವರಿ ಚಾನಲ್ಲಿನ ಟಿ.ವಿ. ಕಾರ್ಯಕ್ರಮ ನೋಡಲು ಒಪ್ಪದ ನ್ಯಾಯಾಧೀಶರು ನನ್ನ ಪರವಿರುವ ಸಾಕ್ಷ್ಯಾಧಾರಗಳೆಲ್ಲವನ್ನೂ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ" ಎಂದರು.

ಕೃಷ್ಣ ಮೃಗವನ್ನು "Endangered Species" ಪಟ್ಟಿಯಲ್ಲಿ ಸೇರಿಸಿರುವುದನ್ನು ನೆನಪಿಸಿದಾಗ, "ಅದು ನನಗೆ ತಿಳಿದಿರಲಿಲ್ಲ" ಎಂದ ಖಾನ್, "ಆದರೆ, ನೋಡಲು ಅಂತಹ ಡೇಂಜರಸ್ಸಾಗಿ ಕಾಣಲಿಲ್ಲ" ಎಂದರು.

Wednesday, April 12, 2006

ಆರೋಗ್ಯ ಭಾಗ್ಯ

ಪ್ರಾಣಿಕ್ ಸ್ಟೀಲಿಂಗ್

ಪ್ರಾಣಿಕ್ ಸ್ಟೀಲಿಂಗ್. ಬಹಳಷ್ಟು ಜನ ಈ ಚಿಕಿತ್ಸೆಯ ಹೆಸರು ಕೇಳಿರಲಿಕ್ಕಿಲ್ಲ. ಹಾಗಿದ್ದರೆ ಇದೆಂಥ ಚಿಕಿತ್ಸೆ ಎಂದು ಕುತೂಹಲ ಮೂಡುವುದು ಸಹಜ. ಮನುಷ್ಯ ಕೇವಲ ಮೂಳೆ, ಮಾಂಸ ಮಾಡಲ್ಪಟ್ಟ ಭೌತಿಕ ಶರೀರವಲ್ಲ. ಆತನ ಒಳಗೆ ಮತ್ತು ದೇಹದ ಸುತ್ತ ವ್ಯಾಪಿಸಿರುವ ಪ್ರಾಣ ತುಂಬಿದ ಸೂಕ್ಷ್ಮ ಶರೀರವೊಂದಿದೆ. ಈ ಶರೀರವೇ ಪ್ರಾಣಮಯ ಶರೀರ.

"ನಾನು ಹತಾಶ", "ನಾನು ಮುಗ್ಧ" ಅಥವಾ "ನಾನು ಪೆದ್ದ" ಎಂದು ಸಾರಿ-ಸಾರಿ ಹೇಳುವ ಈ ಪ್ರಾಣ ಶಕ್ತಿಯನ್ನು ಗುರುತಿಸಿ ಚೌರ್ಯ ಮಾಡುವ ವಿಧಾನವೇ "ಪ್ರಾಣಿಕ್ ಸ್ಟೀಲಿಂಗ್". ೪೦ಕ್ಕೂ ಹೆಚ್ಚು ದೇಶಗಳಲ್ಲಿ ಚಾಲ್ತಿಯಲ್ಲಿರುವ ಈ ಪದ್ಧತಿಯನ್ನು ಕಂಡು ಹಿಡಿದವನು ಫಿಲಿಪ್ಪೀನ್ಸ್‌ನ ಚೋಅ(ರ) ಕ್ರೂಕ್ ಸೂಯಿ.

ಪ್ರಾಣಿಕ್ ಸ್ಟೀಲಿಂಗ್ ಹೇಗೆ ಸಾಧ್ಯ?

ಮಿದುಳು ದೇಹದಲ್ಲಿದ್ದರೂ ಮಾನವನಿಗೆ ಅದನ್ನು ಸರಿಯಾಗಿ ಉಪಯೋಗಿಸುವುದು ತಿಳಿದಿಲ್ಲ. ದಿನ ನಿತ್ಯದ ಏರುಪೇರುಗಳು, ಮಾನಸಿಕ ಅಥವಾ ಭಾವನಾತ್ಮಕ ಒತ್ತಡಗಳು, ಕ್ರಿಮಿ ಕೀಟಗಳು, ಮೂರ್ಖತನ, ಪರಿಸರ ಮಾಲಿನ್ಯದಿಂದ ಮಿದುಳಿನ ಬಳಕೆ ಕುಂದುತ್ತದೆ. ಅಂತಹ ಸಂದರ್ಭದಲ್ಲಿ ಪ್ರಾಣಿಕ್ ಸ್ಟೀಲಿಂಗಿಗೆ ಒಳಪಡಲು ಮನಸ್ಸು ತಹತಹಿಸುತ್ತದೆ. ವಿಶೇಷವೆಂದರೆ, ಇತರ ಕೆಲ ಚಿಕಿತ್ಸಾ ವಿಧಾನಗಳಂತೆ ಇಲ್ಲಿ ರೋಗಿಯ ಮೈಮುಟ್ಟಿ ಚಿಕಿತ್ಸೆ ಮಾಡಲಾಗುವುದಿಲ್ಲ; ರೋಗಿಯ ಕಿಸೆಗೆ ಮಾತ್ರ ಕೈ ಹಾಕಲಾಗುತ್ತದೆ.

ಎಂಥೆಂಥ ಸಮಸ್ಯೆಗಳಿಗೆ ಪ್ರಾಣ ಚಿಕಿತ್ಸೆ?


ತಲೆನೋವು, ಜ್ವರ, ನೆಗಡಿ, ಕೆಮ್ಮಿನಿಂದ ಹಿಡಿದು ಕ್ಯಾನ್ಸರ್‌ನಂಥ ಮಾರಕ ರೋಗಗಳಿಂದ ಬಳಲುತ್ತಿರುವವರೂ ಪ್ರಾಣಿಕ್ ಸ್ಟೀಲಿಂಗಿನ ಮೊರೆ ಹೋಗಿದ್ದಾರೆ. ಹತಾಶೆ ಹೆಚ್ಚಿದ್ದಷ್ಟೂ ಪ್ರಾಣಿಕ್ ಸ್ಟೀಲಿಂಗ್ ಕಾರ್ಯ ಸಿದ್ಧಿ ಹೆಚ್ಚು. ಆದರೆ ಒಂದು ಮಾತು, ಪ್ರಾಣಿಕ್ ಸ್ಟೀಲಿಂಗ್ ಯಾವುದೇ ಇತರೆ ಸ್ಟೀಲಿಂಗ್ ಪದ್ಧತಿಗಳಿಗೂ ಪರ್ಯಾಯ ವಿಧಾನವಲ್ಲ. ಹತಾಶರಾದವರು ನ್ಯೂಮರಾಲಜಿ, ಹೋಮ, ಹವನ, ಶಾಂತಿ, ಬಾಬಾ-ಸ್ವಾಮಿಗಳ ಕಾಲ್ಸೇವೆ ಇತ್ಯಾದಿ ಸ್ಟೀಲಿಂಗ್ ಪದ್ದತಿಗಳನ್ನು ಮುಂದುವರೆಸಬಹುದು.

ಉದಾಹರಣೆಗೆ ಬೆನ್ನು ನೋವಿನಿಂದ ಬಳಲುತ್ತಿರುವ ವ್ಯಕ್ತಿ ಪ್ರಾಣಿಕ್ ಸ್ಟೀಲಿಂಗ್ ಮೊರೆ ಹೊಕ್ಕರೆ ಆತನ ಕಿಸೆಯ ಭಾರ ಕಡಿಮೆಯಾಗಿ, ಆತ ಯಾವುದಾದರೂ ಔಷಧ ತೆಗೆದುಕೊಳ್ಳುತ್ತಿದ್ದರೆ ಅದರ ಸೇವನೆಯ ಪ್ರಮಾಣ ದಿನದಿಂದ ದಿನಕ್ಕೆ ತಗ್ಗಿಸ ಬೇಕಾಗುತ್ತದೆ. ಪ್ರಾಣಿಕ್ ಸ್ಟೀಲಿಂಗ್ ಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿ ರೋಗಿಯ ಕಿಸೆ ಪೂರ್ತಿ ಖಾಲಿಯದರಂತೂ, ಔಷಧ ತೆಗೆದುಕೊಳ್ಳ್ಳುವುದೇ ಬೇಡವೆನ್ನಿಸಬಹುದು. ಏಕೆಂದರೆ, ಪ್ರಾಣಿಕ್ ಸ್ಟೀಲಿಂಗ್ ಚಿಕಿತ್ಸೆಯಿಂದ ರೋಗಿಯ ರೋಗ ಸಹಿಷ್ಣು ಸಾಮರ್ಥ್ಯ ಹೆಚ್ಚುತ್ತದೆ.

ಪ್ರಾಣಿಕ್ ಸ್ಟೀಲಿಂಗ್ ಉಪಯೋಗವೇನು?


"ಪ್ರಾಣಿಕ್ ಸ್ಟೀಲಿಂಗ್ ಚಿಕಿತ್ಸೆಯಿಂದ ವಿವಿಧ ಉಪಯೋಗವಾಗುತ್ತದೆ. ಹತಾಶರಿಗೆ ಪೊಳ್ಳು ಭರವಸೆ ನೀಡುವುದರಿಂದ ಕೆಲವೊಮ್ಮೆ ಉಂಟಾಗುವ ಅಂತಃಸ್ಸಾಕ್ಷಿಯ ಅಳುಕನ್ನು ಬಿಟ್ಟರೆ, ಇತರೆ ಸ್ಟೀಲಿಂಗ್ ಪದ್ಧತಿಗಳಂತೆ ಪೋಲಿಸ್, ಕೋರ್ಟ್, ಸೆರೆಮನೆ ಇತ್ಯಾದಿ ಯಾವ ಅಡ್ಡ ಪರಿಣಾಮವನ್ನೂ ಚಿಕಿತ್ಸಕರು ಅನುಭವಿಸಬೇಕಿಲ್ಲ. ಚಿಕಿತ್ಸಕರ ಆರ್ಥಿಕ ಆರೋಗ್ಯದಲ್ಲಿ ಸುಧಾರಣೆಯಾಗುವುದು ನಿಶ್ಚಿತ." ಎನ್ನುತ್ತಾರೆ ಕರ್ನಾಟಕ ಭೋಗವಿದ್ಯಾ ಪ್ರಾಣಿಕ್ ಸ್ಟೀಲಿಂಗ್ ಫೌಂಡೇಷನ್‍ನ ಟ್ರಸ್ಟಿ ಜೈಲ್‍ಲಕ್ಷ್ಮಿ ಮತ್ತು ಮುಖ್ಯ ಟ್ರೇನರ್ ಸರ್ವಸ್ವ ದೋಚತಿ. ಪ್ರಾಣಿಕ್ ಸ್ಟೀಲಿಂಗಿನಿಂದ ಹಣದ ಭಾರ ಕಡಿಮೆಯಾಗುವುದರಿಂದ ಈ ಚಿಕಿತ್ಸೆ ಅಧ್ಯಾತ್ಮಿಕ ಬೆಳವಣಿಗೆಗೆ ಪೂರಕವಾಗುತ್ತದೆ.

"ಪ್ರಾಣಿಕ್ ಸ್ಟೀಲಿಂಗ್ ಚಿಕಿತ್ಸಾ ವಿಧಾನ", "ಗ್ರಾಮ್ಯ ಪ್ರದೇಶಗಳಲ್ಲಿ ಅದರ ಉಪಲಬ್ಧತೆ " ಮತ್ತು "ಬಡವರಿಗೆ/ವಿದ್ಯಾರ್ಥಿಗಳಿಗೆ ರಿಯಾಯ್ತಿ ಪ್ಯಾಕೇಜ್" ವಿಷಯಗಳಿಗೆ ಆಸಕ್ತಿ ಉಳ್ಳವರು ಕನ್ನಡ ಪ್ರಭದ ಈ ಲೇಖನವನ್ನು ಓದಬಹುದು.

ಇತ್ತೀಚಿನ ಅಪ್‍ಡೇಟ್: "ಪ್ರಾಣಿಕ್ ಸ್ಟೀಲಿಂಗ್" ಓದಿದ ಬೇಸರದಿಂದ ತೃಪ್ತರಾಗದವರು ಇನ್ನೂ ಹೆಚ್ಚಿನ ಬೇಸರಕ್ಕಾಗಿ "ನೂರೆಂಟು ಸುಳ್ಳು" ಬ್ಲಾಗಿನ ಈ ಲೇಖನ ಓದಬಹುದು.

ರಾಜಕುಮಾರ್



Tuesday, April 11, 2006

ಸಿನೆಮಜಾವಾಣಿ

ವಿವಾದಕ್ಕೆ ತೆರೆ; ಮಾಸ್ಟರ್ ಲಂಕೇಶ್ ವಿ.ಆರ್ ಎಸ್.ಗೆ ನಿವೃತ್ತಿ!

"ಮೊನಾಲಿಸಾ ಒಂದು ರೀ-ಮೇಕ್ ಚಿತ್ರ, ಅದಕ್ಕೆ ಕರ್ನಾಟಕ ಸರ್ಕಾರದ ಪ್ರಶಸ್ತಿ ನೀಡುವುದು ತಪ್ಪು" ಎಂದು ಗಿರೀಶ್ ಕಾಸರವಳ್ಳಿಯವರು ನೀಡಿರುವ ಹೇಳಿಕೆಯಿಂದ ಮನ ನೊಂದ ಮಾಸ್ಟರ್ ಲಂಕೇಶ್ ಚಿತ್ರರಂಗದಿಂದ ವಿ.ಆರ್.ಎಸ್. ಪಡೆಯುವ ಆಲೋಚನೆ ಮಾಡುತ್ತಿರುವ ವಿಚಾರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಇತ್ತೀಚೆಗೆ ವರದಿಯಾಗಿತ್ತು.

ಮಕ್ಕಳ ದಿನಾಚರಣೆಗೆ ಕೇವಲ ಕೆಲವೇ ತಿಂಗಳುಗಳಿರುವಾಗ ಹಾಲು ಗಲ್ಲದ ಹಸುಳೆ ಮಾಸ್ಟರ್ ಲಂಕೇಶ್ ಒಂದು ವಾರ ಕಾಲ ನಿದ್ದೆ ಗೆಡುವುದೂ, ನೋವಿನ ಇಂಚಿಂಚನ್ನೂ ಹೊಗೆಯಾಡಿಸುವುದೂ ನಮಗೆ ಇಷ್ಟವಾಗಲಿಲ್ಲ. ನಮ್ಮ ಪತ್ರಿಕೆಯ ವಿಶೇಷ ಸಿನೆಮಾ-ವಿವಾದ-ವಿಚಾರಕ ಪಿ.ಕಲ್ಯಾಣ್ ರವರು ಈ ಕುರಿತು ಸುಳಿವು ನೀಡಿದ ಕೂಡಲೇ, ಬಾಲ ನಿರ್ದೇಶಕ ಲಂಕೇಶ್‍ರವರನ್ನು ಸಂದರ್ಶಿಸಿ, ಸಂತೈಸಲು ನಮ್ಮ ಪತ್ರಿಕೆಯ ಸಿನೆಮಾ ವರದಿಗಾರರನ್ನು ಕಳುಹಿಸಿದಾಗ ಕಂಡಿದ್ದೇನು?! ಮಾಸ್ಟರ್ ಲಂಕೇಶ್ ಮತ್ತು ಮಿಸ್ಟರ್ ವೈಶಾಲಿ ಇಬ್ಬರೂ ಕೈ-ಕೈ ಹಿಡಿದುಕೊಂಡು "ನಾನೂ.. ನೀನೂ.. ಒಂದಾದ ಮೇಲೆ" ಎಂದು ಹಾಡುತ್ತಿದ್ದಾರೆ!!
ಕನ್ನಡ ಚಿತ್ರರಂಗದ ದಿಗ್ಗಜ ಮತ್ತು ಮೃದುಗಜಗಳು ಕೈ-ಕೈ ಮಿಲಾಯಿಸುವ ಬದಲು ಹೀಗೆ ಕೈ-ಕೈ ಹಿಡಿದಿರುವುದನ್ನು ನೋಡಿ ಕಂಗೆಟ್ಟ ನಮ್ಮ ವರದಿಗಾರ ಮತ್ತಷ್ಟು ವಿಚಾರಿಸಿದಾಗ ತಿಳಿದು ಬಂದ ವಿಷಯ ಇದು: