ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Saturday, May 10, 2008

ಚುನಾವಾಣಿ '08: ಜನ ವಾಣಿ

[ಕರ್ನಾಟಕ ರಾಜ್ಯಕ್ಕೆ ಇದು ಸಂಕ್ರಮಣ ಕಾಲ. ಯಾರಿಂದ ನಾವು ಮೋಸ ಹೋಗಬೇಕೆಂದು ನಿರ್ಧರಿಸ ಬೇಕಾದ ಕಾಲ. ಇಂತಹ ಸಂದರ್ಭದಲ್ಲಿ, ನಮ್ಮ ನಾಡು,ನುಡಿ, ರಾಜಕಾರಣಗಳ ಬಗೆಗೆ ನಮ್ಮ ಜನರ ನಾಡಿ ಹೇಗೆ ಮಿಡಿಯುತ್ತಿದೆ, ಅವರನ್ನು ಕಾಡುತ್ತಿರುವ ವಿಷಯಗಳೇನು ಎಂಬುದನ್ನು ಅವರ ಮಾತುಗಳಲ್ಲೇ ಇಲ್ಲಿ ಹಿಡಿದು ಕೊಡಲಾಗಿದೆ - ಸಂ.]

Labels: , ,

Wednesday, May 07, 2008

ಚುನಾವಾಣಿ '08: ಜಾಹಿರಾತು

Labels: , ,

Tuesday, May 06, 2008

ಚುನಾವಾಣಿ ೨೦೦೮: ಡೀಲಕ್ಸ್ ಮತಗಟ್ಟೆಗಳಲ್ಲಿ ಉಗುರುಗಳಿಗೆ ಬಣ್ಣ

ದೇಶದಲ್ಲಿಯೇ ಪ್ರಥಮ ಬಾರಿಗೆ ಫೈವ್ ಸ್ಟಾರ್ ಮತಗಟ್ಟೆ!

ಬೆಂಗಳೂರು ಮೇ ೧೨: ಸಿರಿವಂತ ಮತದಾರರನ್ನು ಆಕರ್ಷಿಸಲು ಇದೇ ಪ್ರಥಮ ಬಾರಿಗೆ ಡೀಲಕ್ಸ್ ಮತಗಟ್ಟೆಗಳನ್ನು ಚುನಾವಣ ಆಯೋಗ ಲಭ್ಯಗೊಳಿಸಿದೆ.

ಈ ವಿಷಯದ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಮುಖ್ಯ ಚುನಾವಣಾ ಕಮೀಷನರ್ ಎನ್.ಗೋಪಾಲಸ್ವಾಮಿಯವರು, ಇಂತಹ ಮತಗಟ್ಟೆಗಳು ಜಗತ್ತಿನಲ್ಲೇ ಪ್ರಥಮಬಾರಿಗೆ ಬೆಂಗಳೂರಿನ ಗಣ್ಯ ಮತದಾರರಿಗೆ ಲಭ್ಯವಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ ಎಂದರು.

"ಚುನಾವಣೆಯಿಂದ ಚುನಾವಣೆಗೆ ಮತದಾರರ ಸಂಖ್ಯೆ ಹೆಚ್ಚುತ್ತಿದ್ದರೂ, ನಮ್ಮ ಆಯೋಗ ಸಿರಿವಂತ ಮತದಾರರನ್ನು ಆಕರ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಮುರುಕಲು ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆ, ಸಾಲುಗಟ್ಟಿ ನಿಲ್ಲುವ ಸಾಮಾನ್ಯ ಜನ, ಇದೆಲ್ಲಾ ಮಾಸ್ ಮತದಾರರಿಗೆ ಸರಿಹೊಂದಬಹುದಾದರೂ, ಕ್ಲಾಸ್ ಮತದಾರರಿಗೆ ಖಂಡಿತಾ ಇಷ್ಟವಾಗುತ್ತಿರಲಿಲ್ಲ. ಅದಕ್ಕಾಗಿ, ಇದೇ ಪ್ರಥಮ ಬಾರಿಗೆ ಬೆಂಗಳೂರಿನ ಲೀಲಾ ಪ್ಯಾಲೇಸ್ ಮತ್ತು ಟಾಜ್ ವೆಸ್ಟ್ ಎಂಡ್ ಹೋಟೆಲುಗಳಲ್ಲಿ ಫುಲ್ಲೀ ಏರ್ ಕಂಡೀಷನ್ಡ್ ಮತಗಟ್ಟೆಗಳನ್ನು ತೆರೆಯಲಾಗಿದೆ. ಈ ಮತಗಟ್ಟೆಗಳು ಕೇವಲ ಆಹ್ವಾನಿತ ಮತದಾರರಿಗೆ ಮಾತ್ರ ಲಭ್ಯವಿದ್ದು ಮತದಾನದ ಅನುಭವವನ್ನು ಸುಖೀಕರಿಸಲು ಸಂಪೂರ್ಣವಾಗಿ ಸಜ್ಜಾಗಿವೆ" ಎಂದ ಗೋಪಾಲಸ್ವಾಮಿಯವರು, "ಈ ಸೂಪರ್ ಡೀಲಕ್ಸ್ ಮತಗಟ್ಟೆಗಳಲ್ಲಿ ಪ್ಯಾರಿಸ್‌ನಿಂದ ಆಮದು ಮಾಡಿಕೊಂಡಿರುವ ನೇಯ್ಲ್ ಪಾಲಿಶ್‌ ಅನ್ನು ಉಗುರುಗಳಿಗೆ ಹಚ್ಚಲಾಗುವುದು. ಬೆರಳ ಮೇಲೆ ಕಪ್ಪು ಇಂಕಿನ ಅಸಹ್ಯಕರ ಕಲೆಯ ಭಯ ಇಲ್ಲಿಲ್ಲ. ಪ್ರಸಾದ್ ಬಿದ್ದಪ್ಪ ಅಂತಹ ಗಣ್ಯರು ಸಹ ಯಾವುದೇ ಹಿಂಜರಿಕೆ ಇಲ್ಲದೆ ಇನ್ನು ಮುಂದೆ ಇಲ್ಲಿ ಮತ ಚಲಾಯಿಸಬಹುದು" ಎಂದರು.

Labels: ,

Monday, May 05, 2008

ಚುನಾವಾಣಿ ೨೦೦೮: ಜಾಹಿರಾತು

Labels: , , ,

Thursday, April 03, 2008

ಮಜಾವಾಣಿ: ಅಗ್ರ ರಾಷ್ಟ್ರೀಯ ಸುದ್ದಿ

ಮದ್ರಾಸಿನಲ್ಲಿ ಮೈಸೂರು ಪಾಕಿಗೆ ಬಹಿಷ್ಕಾರ!

ಚನ್ನೈ, ಏಪ್ರಿಲ್ ೩೧: ಕಾವೇರಿ ಜಲ ವಿವಾದ ಇತ್ಯರ್ಥವಾಗುವವರೆಗೂ, ತಮಿಳು ನಾಡಿನಲ್ಲಿ ಮೈಸೂರು ಪಾಕ್ ಮಾರಾಟ ಮತ್ತು ಸೇವನೆಯನ್ನು ಬಹಿಷ್ಕರಿಸುವಂತೆ ತಮಿಳು ಪರ ಸಂಘಟನೆಗಳು ಕರೆ ನೀಡಿವೆ.

"ಕರ್ನಾಟಕದಲ್ಲಿ ತಮಿಳು ಟಿ.ವಿ.ಚಾನಲ್ ಮತ್ತು ಚಲನಚಿತ್ರಗಳ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ, ಕನ್ನಡ ಚಾನಲ್ಲುಗಳೂ ಇಲ್ಲ, ಕನ್ನಡ ಸಿನೆಮಾಗಳಂತೂ ರಿಲೀಸ್ ಆಗೋದೇ ಇಲ್ಲ. ಆದ್ದರಿಂದ ಮೈಸೂರು ಪಾಕನ್ನು ಬಹಿಷ್ಕರಿಸುವ ತುರ್ತು ನಮಗೆದುರಾಗಿದೆ" ಎಂದಿರುವ ನಾಡೋಡಿ ತಮಿಳ್ ಮಕ್ಕಳ್ ಸಂಗಂ ಅಧ್ಯಕ್ಷ ಗೌಂಡಮಿಣಿ ತಿಯಾಗರಾಜನ್ ಅವರು, "ವಸಾಹತುಷಾಹಿಯ ಪ್ರತೀಕವಾದ ಮೈಸೂರು ಪಾಕನ್ನು ಬಹಿಷ್ಕರಿಸಬೇಕು. ಮೈಸೂರು ಪಾಕ್ ತಯಾರಿಕೆ, ಮಾರಾಟ ಮತ್ತು ಸೇವನೆಯನ್ನು ತಕ್ಷಣವೇ ನಿಲ್ಲಿಸಬೇಕು. ಇದು ಪ್ರತಿಯೊಬ್ಬ ತಮಿಳನ ಕರ್ತವ್ಯ" ಎಂದು ಕರೆ ನೀಡಿದ್ದಾರೆ.

ಪುರುಚ್ಚಿ ಪಾಕ್??: ಮಾಜಿ ಮುಖ್ಯಮಂತ್ರಿ ಕುಮಾರಿ ಜಯಲಲಿತಾರವರಂತೆ, ಮೈಸೂರು ಪಾಕ್ ಸಹ ಮದ್ರಾಸಿಗಳ ಮನದಲ್ಲಿ ಮನೆ ಮಾಡಿದ್ದು, ಅದರ ಬಹಿಷ್ಕಾರದ ಬಗೆಗೆ ಅಲ್ಲಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಆಡ್ಯಾರ್ ಆನಂತ ಭವನ್ ಒಳಗೊಂಡಂತೆ ಹಲವಾರು ಸಿಹಿ ಅಂಗಡಿಗಳ ಮಾಲೀಕರು, ಮೈಸೂರು ಪಾಕನ್ನು ಸಂಪೂರ್ಣವಾಗಿ ಬಹಿಷ್ಕರಿಸುವ ಬದಲು ಅದಕ್ಕೆ ಬೇರೊಂದು ಹೆಸರಿಟ್ಟರೆ ಸಾಕು ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಅದಕ್ಕೆ ಪೂರಕವೆಂಬಂತೆ, ತಮಿಳು ನಾಡಿನ ವಿಧಾನ ಸೌಧದ ಕ್ಯಾಂಟೀನಿನಲ್ಲಿ ಮೈಸೂರು ಪಾಕನ್ನು "ಪುರುಚ್ಚಿ ಪಾಕ್" (ಕ್ರಾಂತಿಕಾರಿ ಪಾಕು) ಎಂಬ ಹೆಸರಿನಲ್ಲಿ ಮಾರುತ್ತಿರುವುದು ಕಂಡು ಬಂತು.
(P.T.Hi.)

Labels:

Monday, March 31, 2008

ಮಜಾವಾಣಿ: ರಾಜಕೀಯ ಸುದ್ದಿ

ಎಸ್.ಎಂ.ಕೃಷ್ಣ ಹೃದಯಕ್ಕೆ ಪ್ರತ್ಯೇಕ ಪೋಸ್ಟಲ್ ಕೋಡ್ ನೀಡುವಂತೆ ಆಗ್ರಹ
ಬೆಂಗಳೂರು, ಏಪ್ರಿಲ್ ೧: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಿಯೋಗವೊಂದು ನಗರದ ಪೋಸ್ಟ್ ಮಾಸ್ಟರ ಜನರಲ್ ಅವರನ್ನು ಭೇಟಿ ಮಾಡಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಹೃದಯಕ್ಕೆ ಪ್ರತ್ಯೇಕ ಪೋಸ್ಟಲ್ ಕೋಡ್ ನೀಡುವಂತೆ ಆಗ್ರಹಿಸಿತು.

ತಮ್ಮ ಬೇಡಿಕೆಯನ್ನು ಮಂಡಿಸಿದ ನಂತರ ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಡಿ.ಕೆ.ಶಿ.ಯವರು, "ಜನರೇ ಇಲ್ಲದ ಎಂತೆಂತಹ ಸಣ್ಣ ಸಣ್ಣ ಹಳ್ಳಿಗಳಿಗೂ ಈಗ ಪ್ರತ್ಯೇಕ ಪೋಸ್ಟಲ್ ಕೋಡ್ ಇದೆ. ಹಾಗಿರುವಾಗ ಇಡೀ ಕರ್ನಾಟಕದ ಜನತೆಯನ್ನೇ ತಮ್ಮೆದೆಯಲ್ಲಿ ತುಂಬಿಸಿಕೊಂಡಿರುವ ಕೃಷ್ಣರವರ ವಿಶಾಲ ಹೃದಯಕ್ಕೆ ತನ್ನದೇ ಆದ ಪೋಸ್ಟಲ್ ಕೋಡ್ ಇಲ್ಲದಿರುವುದು ಖಂಡನೀಯ" ಎಂದರು.

Labels:

ಮಜಾವಾಣಿ: ತನಿಖಾ ವರದಿ

ತಮಿಳರ ಕಾವೇರಿ ಆಸೆಯ ಕಾರಣ ಪತ್ತೆ!

ತಲಕಾವೇರಿ, ಏಪ್ರಿಲ್ ೧: ನದಿ ಮೂಲ, ಋಷಿ ಮೂಲ ತಿಳಿಯುವುದು ಹೇಗೆ ಕಷ್ಟವೋ ಹಾಗೆಯೇ ತಮಿಳರ ಕಾವೇರಿ ಮೇಲಿನ ಆಸೆಯ ಮೂಲವನ್ನು ತಿಳಿಯುವುದೂ ಕಷ್ಟ. ತಮಿಳು ನಾಡು-ಕರ್ನಾಟಕದ ನಡುವಿನ ವಿವಾದ ಸುಪ್ರೀಂ ಕೋರ್ಟಿನ ಕಟ್ಟೆ ಹತ್ತಿದ್ದರೂ, ತಮಿಳು ನಾಡಿನವರಿಗೆ ಕಾವೇರಿಯ ಮೇಲೆ ಏಕೆ ಇಷ್ಟೊಂದು ಪ್ರೇಮ ಎನ್ನುವ ಪ್ರಶ್ನೆ ಮಾತ್ರ ಇಂದಿನ ವರೆಗೆ ಪ್ರಶ್ನೆಯಾಗಿಯೇ ಉಳಿದಿತ್ತು.

ಆದರೆ ಇಂದು ನಮ್ಮ ಪತ್ರಿಕೆಯ ಖ್ಯಾತ ತನಿಖಾ ವರದಿಗಾರ ಶ್ರೀನಿಧಿ ಹಂದೆಯವರು, ತಮ್ಮ ಸಚಿತ್ರ ವರದಿಯ ಮೂಲಕ ಈ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಈ ರಹಸ್ಯವನ್ನು ಭೇದಿಸಲು, ಮಹಾನ್ ಸಾಹಸದಿಂದ ಅತ್ಯಂತ ದುರ್ಗಮ ರಸ್ತೆಗಳಲ್ಲಿ ಪ್ರಯಾಣಿಸಿದ ನಮ್ಮ ವರದಿಗಾರರು ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿಯನ್ನು ತಲುಪಿದಾಗ, ಅಲ್ಲಿ, ಕಾವೇರಿಯ ಪವಿತ್ರ ತೀರ್ಥವನ್ನು "ಒರಿಜಿನಲ್ ಚಾಯ್ಸ್" ವಿಸ್ಕಿ ಬಾಟಲಿಗಳಲ್ಲಿ ದೊರಕುತ್ತಿರುವುದು ಪತ್ತೆಯಾಯಿತು. ಇದು ತಮಿಳು ನಾಡಿನ ಕೆಲ ರಾಜಕಾರಣಿಗಳನ್ನು ಕನ್‌ಫ್ಯೂಸ್ ಮಾಡಿದೆ ಎನ್ನಲಾಗಿದೆ. ಇದರಿಂದಾಗಿ, ಕಾವೇರಿ ನದಿಯ ನೀರು ವಿಶೇಷವಾದ "ತೀರ್ಥ" ಸಮಾನವೆಂಬ ಭಾವನೆ ಈ ರಾಜಕಾರಣಿಗಳಲ್ಲಿ ಮನೆ ಮಾಡಿದ್ದು, ಅವರು ಕಾವೇರಿ ನೀರಿನ ವ್ಯಸನಕ್ಕೆ ಒಳಗಾಗಿದ್ದಾರೆಂಬ ವಿಚಾರ ಹೊರ ಬಿದ್ದಿದೆ.
[ಶ್ರೀನಿಧಿ ಹ೦ದೆಯವರು ನಮ್ಮ ಪತ್ರಿಕೆಯ ತನಿಖಾ ವರದಿಗಾರರು ಮಾತ್ರವಲ್ಲದೆ, ವಾಹನ-ಮನರಂಜನಾ ವಿಜ್ಞಾನದಲ್ಲಿ ಅಪಾರ ಪರಿಣಿತಿಯನ್ನೂ ಪಡೆದಿದ್ದಾರೆ. ಇವರ ಹಲವಾರು ಲೇಖನಗಳು ಮತ್ತು ಛಾಯಾಚಿತ್ರಗಳು "ಇ-ನಿಧಿ ಸ್ಪೀಕ್ಸ್" ಅಂತರ್ಜಾಲ ತಾಣದಲ್ಲಿ ಲಭ್ಯವಿದೆ. ಚಿತ್ರಗಳ ಆಧಾರ ಸಹಿತ ಹಾರ್ಡ್ ಹಿಟ್ಟಿಂಗ್ ತನಿಖಾ ವರದಿ ನೀಡಿರುವ ಶ್ರೀ ಹಂದೆಯವರಿಗೆ ನಮ್ಮ ಕೃತಜ್ಞತೆಗಳು.]

Labels: ,

Wednesday, March 12, 2008

ಮಜಾವಾಣಿ: ರಾಜಕೀಯ ಸುದ್ದಿ

"ಯಡ್ಡಿಯಿಂದ ಅಂತಹ ತೊಂದರೆ ಏನೂ ಇಲ್ಲ" - ವಿ.ಸೌ. ನೌಕರ

ಬೆಂಗಳೂರು, ಮಾರ್ಚ್ ೨೧: ಮಾಜಿ ಮುಖ್ಯ ಮಂತ್ರಿ ಯೆಡ್ಯೂರಪ್ಪನವರಿಂದ ತಮಗೆ ಅಂತಹ ತೊಂದರೆ ಏನೂ ಆಗುತ್ತಿಲ್ಲವೆಂದು ವಿಧಾನ ಸೌಧ ನೌಕರರು ಹೇಳಿದ್ದಾರೆ.

ಮುಖ್ಯ ಮಂತ್ರಿ ಪದವಿಗೆ ರಾಜಿನಾಮೆ ನೀಡಿದ ನಂತರವೂ ಯೆಡ್ಯೂರಪ್ಪನವರು ವಿಧಾನ ಸೌಧದಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ಕಛೇರಿಗೆ ಪ್ರತಿದಿನ ಭೇಟಿ ನೀಡುತ್ತಿರುವುದು ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಪಕ್ಷಗಳ ನೇತಾರರ ಕೆಂಗಣ್ಣಿಗೆ ಕಾರಣವಾಗಿರುವುದು ನಿಜವಾದರೂ, ಕಛೇರಿಯಲ್ಲಿ ಕೆಲಸ ಮಾಡುವವರಿಗಂತೂ ಯಾವುದೇ ರೀತಿಯ ಅಭ್ಯಂತರವಿದ್ದಂತಿಲ್ಲ.

ಈ ವಿಚಾರದ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಮುಖ್ಯ ಗುಮಾಸ್ತೆ ಪರಮೇಶಪ್ಪ, ಯೆಡ್ಯೂರಪ್ಪನವರು ರಾಜೀನಾಮೆ ನೀಡಿದ ನಂತರವೂ ಕಛೇರಿಗೆ ಬರುತ್ತಿರುವುದರಿಂದ ಮೊದ ಮೊದಲು ತಮಗೆ ಕಸಿವಿಸಿಯಾಯಿತೆಂದು ಒಪ್ಪಿಕೊಂಡರಾದರೂ, ಅದರಿಂದ ತಮ್ಮ ಕೆಲಸ ಕಾರ್ಯಗಳಿಗೆ ಅಡಚಣೆ ಏನೂ ಆಗಿಲ್ಲ ಎಂದರು.

"ರಾಜೀನಾಮೆ ನೀಡಿದ ಮಾರನೆ ದಿನ ಅವರು ಕಛೇರಿಗೆ ಬಂದಾಗ, ಕನ್ನಡಕನೋ, ಕರ್ಚೀಫೋ ಮರೆತಿರಬಹುದು ಅದಕ್ಕೇ ಬಂದಿದ್ದಾರೆ ಅಂದು ಕೊಂಡೆ, ಆದರೆ ಅದರ ನೆಕ್ಸ್ಟ್ ಡೇ ಕೂಡಾ ಬಂದರು. ಅದರ ನೆಕ್ಸ್ಟ್ ಡೇ.. ಅದರ ನೆಕ್ಸ್ಟ್ ಡೇ.. ಹೀಗೆ ಪ್ರತಿ ದಿನ ತಪ್ಪದೇ ಬರ್ತಾ ಇದ್ದಾರೆ. ಮೊದ ಮೊದಲು ಕೊಂಚ ಕಸಿವಿಸಿ ಆಯ್ತು. ಆದರೆ, ಈಗ ಪೂರ್ತಿ ಅಭ್ಯಾಸ ಆಗಿ ಬಿಟ್ಟಿದೆ. ಪಾಪ, ಅವರು ಯಾರಿಗೂ ಏನೂ ತೊಂದರೆ ಕೊಡಲ್ಲ. ಅವರ ಪಾಡಿಗೆ ಅವರು ಬರ್ತಾರೆ, ಪ್ರತಿ ದಿನ ಸಿ.ಎಂ. ಚೇರ್ ಧೂಳು ಹೊಡೆದು, ಒರೆಸಿ, ಅದನ್ನು ಸವರುತ್ತಾ ನಿಲ್ಲುತ್ತಾರೆ" ಎಂದು ಪರಮೇಶಪ್ಪ ನುಡಿದರೆ, ಅದಕ್ಕೆ ದನಿಗೂಡಿಸಿದ ಅಟೆಂಡರ್ ರಾಮಣ್ಣ "'ಸಾರ್, ಚೇರ್‌ನ ನಾನು ಕ್ಲೀನ್ ಮಾಡ್ತೀನಿ ಬಿಡಿ. ನೀವು ಮನೆಗೆ ಹೋಗಿ ಆರಾಮ್ ತೊಗೊಳ್ಳಿ' ಅಂದೆ, ಆದ್ರೆ, ಆ ಸೀಟಿಗಾಗಿ ನೊಂದ ಜೀವ, ಪಾಪ, ಎಲ್ಲಿ ಕೇಳುತ್ತೆ? ಅವ್ರೇ ಒರೆಸಿ, ಕ್ಲೀನ್ ಮಾಡಿದ್ರೇನೇ ತೃಪ್ತಿ. ಒಂದು ಸಲ ಫೈಲುಗಳನ್ನು ಜೋಡಿಸಿಕೊಂಡು ಹೋಗ್ತಾ ಇರುವಾಗ ಅಡ್ಡ ಬಂದರು. ಫೈಲುಗಳೆಲ್ಲಾ ನೆಲಕ್ಕೆ ಬಿದ್ದವು. 'ಸಾರ್, ಸ್ವಲ್ಪ ಸೈಡ್‌ಗೆ ಹೋಗ್ತೀರಾ' ಅಂದೆ, ಅವತ್ತಿಂದ ಸೈಡಲ್ಲೇ ನಿಂತುಕೊಂಡು ಅವರ ಕೆಲಸ ಮಾಡಿಕೊಳ್ಳುತ್ತಾರೆ." ಎನ್ನುತ್ತಾರೆ.

(ಚಿತ್ರ ಕೃಪೆ: ಚುರುಮುರಿ)

Labels: